Thursday, December 27, 2007

ಬಸ್ಸು ಸಾಗಲಿ ಮುಂದೆ ಹೋಗಲಿ


ಬೆಂಗಳೂರಿನಿಂದ ಶಿರಸಿಗೆ ಪ್ರಯಾಣ ಬೆಳೆಸಿದ್ದು ಇದೇ ಮೊದಲಬಾರಿಯೇನಲ್ಲ. ಪ್ರತಿಬಾರಿಯೂ ಹೊಸ ಹೊಸ ಅನುಭವಗಳು ಆದರೂ ಒಂದೆರಡು ಅನುಭವಗಳು ಪ್ರತೀಬಾರಿಯೂ ಆಗುತ್ತವೆ. ಮನೆ ತಲುಪಲು ಆಗುವ ವಿಳಂಬ ಮತ್ತು ಬೆನ್ನು ನೋವು. ಈ ಅನುಭವಗಳನ್ನು ಪಡೆದು, ’ದೋಣಿ ಸಾಗಲಿ’ ಗೀತೆಯಿಂದ ಪ್ರೇರಿತನಾಗಿ ಅದರ ಈಗಿನ version ಹೊರಬಿಟ್ಟಿದ್ದೇನೆ.

ರಾಷ್ಟ್ರಕವಿ ಕುವೆಂಪುರವರ ಕ್ಷಮೆಕೋರಿ,

ಬಸ್ಸು ಸಾಗಲಿ ಮುಂದೆ ಹೋಗಲಿ
ಶಿರಸಿ ನಗರವ ಸೇರಲಿ
ಹೊಂಡ ಗುಂಡಿಗೆ ಇಳಿಯುತೇಳುತ
ಸಿಕ್ಕ ಸಿಕ್ಕೆಡೆ ಹಾಯಲಿ

ಕುಣಿದು ಕುಣಿದು ಹಾರಿ ಹಾರಿ ಹಳ್ಳ ದಿಣ್ಣೆಯ ದಾಟಲಿ
ಎಗರಿ ಎಗರಿ ಬೀಳುವೆಮ್ಮೆಯ ಬೆನ್ನ ಮಾಲಿಶ್ ಮಾಡಲಿ
ಬೆಟ್ಟ ಗುಡ್ಡವ ಏರಲೆಳೆಸುವ ದೃಢ ಮನಸ್ಥಿತಿ ದೊರಕಲಿ
ನಡೆದು ಹೋಗುವ ಪಾದಚಾರಿಯ ದಾಟಿ ಮುಂದಕೆ ಹೋಗಲಿ

ಗಾಜು ಒಡೆದಿಹ ಬಸ್ಸ ಕಿಟಕಿಯ ನಡುವೆ ಗಾಳಿಯು ತೂರಲಿ
ಕುಣಿವ ಭರದಲಿ ಬಾರದೆಂದಿಹ ನಿದಿರೆ ಕರುಣೆಯ ತೋರಲಿ
ಜನರ ಕೆಳಗಿಹ ಕುರ್ಚಿಯಡಿಗಿಹ ಹಲ್ಲಿ ಎಚ್ಚರಗೊಂಡಿರೆ
ರಕ್ತ ಹೀರಿ ಕೊಬ್ಬಿಕೊಂಡಿಹ ತಿಗಣೆಗಳ ತಿನ್ನುತಲಿರೆ

ಬಾನಿನಂಗಳ ಬೆಳಗುತಿಹುದು ಮೂಡಣದ ರವಿ ಹಿಮತೊರೆ
ಹೊತ್ತು ಹತ್ತಾಗಿದ್ದರಿಂದಿಗು ಬಾರದೂ ದಾವಣಗೆರೆ
ಒಮ್ಮೆ ಪಂಕ್ಚರ್ ಆಗಿ ಹೋಗಿದೆ ಇನ್ನು ಆಗದೆ ಸಾಗಲಿ
ಇಂದಿಗಂತೂ ಮುಟ್ಟಲೊಲ್ಲದು ನಾಳೆಯಾದರು ಮುಟ್ಟಲಿ

Thursday, December 13, 2007

ವೀಕೆಂಡ್‌ಗೆ ಎನ್ ಗುರು ವಿಶೇಷ?

ಶುಕ್ರವಾರ ಸಂಜೆ ಆಯಿತೆಂದರೆ ಸಾಕು. ಸಾಫ್ಟ್‌ವೇರ್ ಇಂಜಿನಿಯರುಗಳೆಲ್ಲರ ಮುಖಾರವಿಂದಗಳು ಅರಳಿಬಿಡುತ್ತವೆ. ಎರಡು ದಿನ ರಜೆ ಇದೆ, ಏನಾದರು ವಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದಲ್ಲ. ಇನ್ನೆರಡು ದಿನ ಆಫಿಸ್‌ಗೆ ಹೋಗಬೇಕಾಗಿಲ್ಲವಲ್ಲಾ ಎಂದು! ಎಲ್ಲರಿಗೂ ಈ ಸಾಫ್ಟ್‌ವೇರ್ ಉದ್ಯೋಗ ಎಷ್ಟು ಹಿಡಿಸಿದೆ ಎನ್ನುವುದಕ್ಕೆ ಬೇರಾವ ಪುರಾವೆಗಳೂ ಬೇಕಿಲ್ಲವಲ್ಲವೆ. ಬಹಳಸಲ ಹಾಗೇ ಆಗುತ್ತದೆ. ಹೊರಗೆ ಹೋಗುವ ಮನಸ್ಸಿಲ್ಲದಿದ್ದರೂ ರಜೆ ಇದೆಯಲ್ಲಾ ಎಂದು plan ಹಾಕಿಯೇಬಿಡುತ್ತೇವೆ. ಆ planಗಳು ಎಷ್ಟು ಫಲಕಾರಿಯಾಗುತ್ತವೆಯೋ ಶನಿವಾರ ಬೆಳಿಗ್ಗೆಯೇ ಗೊತ್ತಾಗಬೇಕು.

ಯಾಕೋ ಆ ಶನಿವಾರ ಬೆಳಿಗ್ಗೆ ಬಹಳ ಬೇಗನೇ ಎಚ್ಚರವಾಗಿಬಿಟ್ಟಿತು. ೮ ಗಂಟೆಗೆ! ಇವತ್ತು ವೀಕೆಂಡ್ ಎಂದು ನೆನಪಾದಮೇಲಂತೂ ನಿದ್ದೆ ಹಾರಿಯೇ ಹೋಯಿತು. ತಲೆಯಲ್ಲಿ ಐದಾರು ಗೆಳೆಯರ ಚಿತ್ರಗಳು ಯಕ್ಷಗಾನ ಮಾಡತೊಡಗಿದವು. ಅವನನ್ನು ಕಂಡು ಎಷ್ಟು ದಿನ ಅಯ್ತು. ಒಂದು ಫೋನ್ ಕೂಡಾ ಮಾಡ್ಲಿಲ್ಲ. ಈ ವೀಕೆಂಡ್ ಅವನ ಹತ್ರಾನೇ ಹೋಗೋಣ. ಆದರೆ ನಾನೇ ಯಾಕೆ ಫೋನ್ ಮಾಡ್ಬೇಕು? ಬೇಕಾದ್ರೆ ಅವನೇ ಮಾಡ್ತಾನೆ, ಎಂದುಕೊಳ್ಳುವಷ್ಟರಲ್ಲಿ ಒಂದು ಪಾತ್ರ ಕಡಿಮೆಯಾಯಿತು. ಇವನನ್ನ ಎರಡು ವಾರದ ಹಿಂದಷ್ಟೇ ಭೇಟಿಯಾದೆ. ಇವನಂತೂ ಯಾವಾಗ್ಲೂ chatನಲ್ಲಿ ಸಿಗ್ತಾನೆ. ಇವನಂತೂ onsiteನಲ್ಲಿದಾನೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಮೂರು ಪಾತ್ರಗಳು ನೇಪಥ್ಯಕ್ಕೆ ತಿರುಗಿದವು.

ಉಳಿದ ಎರಡೇ ಎರಡು ಪಾತ್ರಗಳಲ್ಲಿ ಒಂದು ಗಿರಿನಗರದಲ್ಲಿ ಕುಣಿಯುತ್ತಿದ್ದರೆ ಇನ್ನೊಂದು ವೈಟ್‌ಫೀಲ್ಡ್‌ನಲ್ಲಿ ಕುಣಿಯುತ್ತಿತ್ತು. ಹಾಸಿಗೆಯಲ್ಲೇ ಹೊರಳಾಡುತ್ತಾ ಪಕ್ಕದಲ್ಲೇ ಇದ್ದ ಲ್ಯಾಪ್‌ಟಾಪ್ on ಮಾಡಿ, ಇದ್ದು ಬಿದ್ದ playlistಗಳನ್ನೆಲ್ಲಾ winampಗೆ ತುಂಬಿ play ಮಾಡಿದೆ. ಗಿರಿನಗರದಲ್ಲಿ ಕುಣಿಯುತ್ತಿದ್ದ ಪಾತ್ರದ ಜೊತೆಗೇ ಕುಣಿದರಾಯಿತು ಎಂದಂದುಕೊಂಡು phone ಮಾಡಿದೆ. Not Reachable! ಯಾವ ಊರಿನ ಯಾವ ಕೊಂಪೆಯಲ್ಲಿ ಬಿದ್ದಿದ್ದಾನೊ ಎಂದಂದುಕೊಂಡು ಉಳಿದ ಒಂದೇ ಒಂದು ಪಾತ್ರಕ್ಕೆ ಕರೆ ಮಾಡಿದೆ. ನಾಲ್ಕೇ ನಾಲ್ಕು ಮಾತುಗಳಲ್ಲಿ ಪಾತ್ರ ಮುಗಿದು ಹೋಯಿತು.
"ಎಲ್ಲಿದೀಯೋ?"
"ಮನೇಲಿ"
"ವೀಕೆಂಡ್‌ಗೆ ಎನ್ ಗುರು ವಿಶೇಷ?"
"ನಾನು ಸಿರ್ಸಿ ಮನೇಲಿದೀನಿ ಕಣೋ"
"ಓ... ಸಿರ್ಸಿಲಿದೀಯಾ? ಸರಿ ಬಿಡು. ಬಂದ್‌ಮೇಲೆ ಕಾಲ್ ಮಾಡು"

ರಂಗಸ್ಥಳ ಖಾಲಿಯಾಯಿತು. ಗಂಟೆ ಇನ್ನೂ ಬೆಳಿಗ್ಗೆ ೯. ಕೆಲಸವಿಲ್ಲ ಕಾರ್ಯವಿಲ್ಲ. ಥತ್... ಬರೀ ಗಂಡು ಪಾತ್ರಗಳು. ಒಂದಾದರೂ ಸ್ತ್ರೀ ವೇಷ ಇದ್ದಿದ್ದರೆ ರಂಗಸ್ಥಳ ಹೀಗೆ ಬರಿದಾಗುತ್ತಿರಲಿಲ್ಲ ಎನಿಸಿತು. ಈ ಅನಿಸಿಕೆ ನಿದ್ರಾದೇವಿಗೆ ಕೇಳಿಹೋಯಿತೊ ಏನೊ. ಮತ್ತೆ ಬಂದು ಮುಸಿಕಿದಳು. ನಾನೂ ಮುಸುಕೆಳೆದುಕೊಂಡೆ.

winampನಲ್ಲಿ ಭಾವಗೀತೆಗಳು ಮುಗಿದು ಭಕ್ತಿಗೀತೆಗಳು ಪ್ರಾರಂಭವಾಗಿದ್ದವು. ದಾಸರ ಪದ ತನ್ನ ಇಂಪನ್ನು ಪಸರಿಸುತ್ತಿತ್ತು.
"ಹ್ಯಾಂಗೆ ಮಾಡಲಯ್ಯಾ ಕೃಷ್ಣ... ಹೋಗುತಿದೆ ಆಯುಷ್ಯ..."

Wednesday, December 12, 2007

ನಾವು ಕನ್ನdigaru - ೩

ಸಂದರ್ಭ: ಮಾರತ್‌ಹಳ್ಳಿ ಬಸ್ ನಿಲ್ದಾಣ. ಗದ್ದಲವೋ ಗದ್ದಲ. ಗೌಜಿಯೋ ಗೌಜಿ. ಆದರೆ ಎಲ್ಲೂ ಕನ್ನಡ ಮಾತ್ರ ಕೇಳಿಬರುವುದಿಲ್ಲ. ಇತ್ತ ಎನ್ನಡ ಅತ್ತ ಎಕ್ಕಡ. ಸೇಬುಹಣ್ಣು ಕೊಳ್ಳಲು ಹೋಗಿದ್ದೆ.

ನಾನು: ಒಂದು ಕಿಲೊ ಸೇಬು ಹಣ್ಣು ಹೇಗಪ್ಪಾ?
ವ್ಯಾಪಾರಿ: ಅಂಜು ರೂಬಾ...
ನಾನು: ಆಂ ???
ವ್ಯಾಪಾರಿ: Fifty rupees...

ಇಂಗ್ಲೀಷ್ ಕಲಿಯುತ್ತಾರೆ. ಕನ್ನಡ ಕಲಿಯಲು ಏನಪ್ಪಾ ತೊಂದರೆ ಎಂದುಕೊಳ್ಳುತ್ತಾ ಹೊರಬೀಳುತ್ತಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ನನ್ನನ್ನು ನೋಡಿ, "ಸಾರ್ ಮಲಯಾಲಮ್ಮಾ???" ಎಂದ. ಯಾವ ಮಲಯಾಳಿ ಚಿತ್ರದಲ್ಲಿ ನನ್ನಂಥವನನ್ನೇ ನೋಡಿದ್ದನೋ ಏನೋ. ನನಗಂತೂ ರೋಸಿ ಹೋಗಿತ್ತು. "ಕನ್ನಡ... ಕನ್ನಡ..." ಎಂದೆ. ಗಟ್ಟಿಯಾಗಿ. "ಓ.. ಹಿ.. ಹಿ.." ಎಂದು ಹಲ್ಲು ಕಿರಿದುಕೊಂಡು ಹೋದ.

ಇಷ್ಟೆಲ್ಲಾ ಮುಗಿಸಿ ಒಂದು ಸಂತೂರ್ ಸೋಪ್ ಕೊಳ್ಳಲು ಮನೆಯ ಹತ್ತಿರವೇ ಇದ್ದ ಒಂದು ಅಂಗಡಿಗೆ ಹೋದೆ.

ನಾನು: ಸಂತೂರ್ ಸೋಪ್
ಅಂಗಡಿಯವ: ತೆಲಗಾ ಸಾರ್?
ನಾನು: ( ಊಹೂಂ ಎಂಬಂತೆ ತಲೆಯಾಡಿಸಿದೆ )
ಅಂಗಡಿಯವ: ತಮಿಳಾ?
ನಾನು: ( ಮತ್ತೆ ತಲೆಯಾಡಿಸಿದೆ )
ಅಂಗಡಿಯವ: ಓ ಗನ್ನಡಾ???
ನಾನು: ( ಸುಮ್ಮನೆ ಮುಗುಳ್ನಕ್ಕೆ )
ಅಂಗಡಿಯವ ಸಂತೂರ್ ಸೋಪ್ ಕೊಟ್ಟು "ತೆಗೆದುಗೊಲ್ಲಿ" ಎಂದು ನಕ್ಕ.
ಒಬ್ಬನಾದರೂ ’ಗನ್ನಡ ಗಲಿಯುತ್ತಿದ್ದಾನಲ್ಲಾ’ ಎಂದು ಸಂತೋಷವಾಯಿತು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Thursday, December 6, 2007

ನಾವು ಕನ್ನdigaru - ೨

ಸಂದರ್ಭ: ಶುಕ್ರವಾರ ರಾತ್ರಿ ೧೦ ಘಂಟೆಯ ಶೋ ನೋಡಲು Innovative Multiplexಗೆ ಹೋಗಿದ್ದೆ. ಅಲ್ಲಿ ಒಂದಿಷ್ಟು ಜನರ ಗುಂಪುಗಳು ನಿಂತು ಸಮಯ ದೂಡಲು ಮಾತುಕತೆಯಲ್ಲಿ ಮುಳುಗಿದ್ದವು. ಆ ಗುಂಪುಗಳ ನಡುವೆ ನಡೆಯುತ್ತಿದ್ದ ಸಂಭಾಷಣೆಗಳು ಇಂತಿದ್ದವು.

ಒಂದನೆಯ ಗುಂಪು:
ಒಬ್ಬ: ಇಂದ ಪಡತ ನಾನ್ ಯೆರುಕಿನೇ ಪಾರ್ತಿಟ್ಟೇನ್. ಪದಮ್ ರೊಂಬ ನಲ್ಲ ಇರುಕು. ಅದನಾಲದಾನ್ ಇನ್ನೋರುವಟಿ ಪಾಕವಂದೇನ್.
ಇನ್ನೊಬ್ಬ: ಹೇ ಮಚ್ಚಾ, ಉನುಕು ತೆರಿಯಾಮಾ? ರಜನಿ ಸಾರ್ ಶಂಕರ ಉಡಿಯಾ ಪದಮ್ ಪನ್ರಾರು. ನಿಶ್ಚೈಮಾ ಪೆರಿಯಾ ಹಿಟ್ ಆವುಮ್.

ಎರಡನೆಯ ಗುಂಪು:
ಒಬ್ಬ: ಮಾಮಾ, ನೇನು ಇಪ್ಪುಡು Flextronicsಲೊ ಪಣಿ ಚೇಸ್ತಾವುನ್ನಾನು.
ಇನ್ನೊಬ್ಬ: ಅಲಗಾ? ಯೇಂತಾ ಜೀತಮ್ ಇಸ್ತುನ್ನಾರು ವಲು? ಚಾಲ ಇಶ್ಟಾರು ಅನುಕುಂಟಾ? ಇಪ್ಪುಡು ಚಾಲ ವರದಕ್ಷಿಣಮ್ ಕೂಡಾ ದೊರಕುತುಂದಿ. ಹಾ... ಹಾ... ಹಾ...

ಮೂರನೇ ಗುಂಪು:
ಆಕೆ: ಹೇ ಪುಟ್ಟಾ, Come here. ಬಾ ಇಲ್ಲಿ.
ಮಗು: Paapa... paapa... I want that. Paapa...
ಈತ: No ಪುಟ್ಟಾ, thats not good for health. Come ಶಾಲು, ಆಕಡೆ ಹೋಗೋಣ. Otherwise he will start crying now.
ಆಕೆ: Wait a second. Let ಮಾಲತಿ also come.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Tuesday, December 4, 2007

ನಾವು ಕನ್ನdigaru - ೧

ಸಂದರ್ಭ: ನನ್ನ ಬೈಕ್ ಸರ್ವಿಸ್ ಮಾಡಿಸಲು ಖಿವ್‍ರಾಜ್ ಮೋಟರ್ಸ್‌ಗೆ ಹೋಗಿದ್ದೆ. ಸರ್ವಿಸ್ ಮಾಡಲು ಇದ್ದ ಎರಡು ಯಂತ್ರಗಳಲ್ಲಿ ಒಂದು ಯಂತ್ರ ಕೆಟ್ಟುಹೋಗಿದ್ದ ಕಾರಣ ಕೇವಲ Free Serviceನವರಿಗೆ ಮಾತ್ರ ಪ್ರವೇಶ ಎಂದು 9 ಘಂಟೆಗೆ ಬಂದು ಬಾಗಿಲು ತೆಗೆದ ಅಂಗಡಿಯ ಸರ್ವಿಸ್ ಬಾಯ್ ಹೇಳಿದ. ಮುಂದಿನದನ್ನು ಅವರವರ ಮಾತುಗಳಲ್ಲೇ ಕೇಳಿ:

ಸ. ಬಾ. (ಸರ್ವಿಸ್ ಬಾಯ್) : ಒಂದು ಮಿಶಿನ್ ಕೆಟ್ಟುಬಿಟ್ಟಿದೆ ಸಾರ್. ಇವತ್ತು ಫ್ರೀ ಸರ್ವಿಸ್ ಅಸ್ಟೇ ಮಾಡೋದು.
ಆತ: ರೀ ಅದ್ ಹೇಗ್ರೀ ನೀವು ಹಾಗೆ ಹೇಳ್ತೀರಾ? ನಾವು ಇಷ್ಟು ಹೊತ್ತು ಕ್ಯೂದಲ್ಲಿ ನಿಂತಿಲ್ವಾ?
ಸ. ಬಾ. : ಏನೂ ಮಾಡಕಾಗಲ್ಲ ಸಾರ್. ಮಿಶಿನ್ ಕೆಟ್ಟೋಗಿದೆ. ನಾಳೆ ಬನ್ನಿ.
ಆತ: ಒಂದು ತಾಸು ಕ್ಯೂದಲ್ಲಿ ನಿಂತಿದೀವಿ. ಈಗ ಇವ್ರು ಹೀಗೆ ಹೇಳ್ತಾರಲ್ರೀ!
ಈತ: You are right sir. ನಾವು ಕ್ಯೂದಲ್ಲಿ ನಿಂತಾಗ್ಲೇ ಇವ್ರು ಬಂದು ಹೇಳ್ಬೇಕಿತ್ತು.
ಸ. ಬಾ. : ಹಾಗಲ್ಲ ಸಾರ್ ಅದು... ಮಿಶಿನ್ ಕೆಟ್ಟೋಗಿರೋದು ಈಗಸ್ಟೇ ಗೊತ್ತಾಯ್ತು.
ಆತ: ಏನು ಈಗ್ಲೇ ಕೆಟ್ಟೋಯ್ತ? ಒಂದೂ ಗಾಡಿ ಸೆರ್ವಿಸ್ ಮಾಡ್ಲಿಲ್ಲಾ.. ಕೆಟ್ಟೋಯ್ತಾ? what are you telling? we want service ಅಸ್ಟೆ.
ಸ. ಬಾ. : ಆಗಲ್ಲ ಸಾರ್.
ಈತ: Why ಆಗಲ್ಲ? Why ಆಗಲ್ಲ? We wait in queue for 1 hour & now you tell ಆಗಲ್ಲ. No no no no... We want service thats all.
ಆತ: Correct sir. We dont go without servicce. Call your manager. I speak. At any cost we want service

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.