Wednesday, May 14, 2008

ಬದುಕಿನ ಓಟದಲ್ಲಿ...


ಅಂದು ಯಾಕೋ ಬಹಳವಾಗಿಯೇ ಬೇಸರವಾಗುತ್ತಿತ್ತು. ಬೆಳಿಗ್ಗೆ ಆಫೀಸಿಗೆ ಹೋಗಿ ಮೇಲ್ ಚೆಕ್ ಮಾಡುವಷ್ಟರಲ್ಲೇ ತಿರುಗಿ ಮನೆಗೆ ಹೋಗಿಬಿಡಬೇಕೆಂದು ಮನಸ್ಸಾಗುತ್ತಿತ್ತು. ಟೀ ತೆಗೆದುಕೊಂಡುಬರಲು ಹೋದರೆ ದಾರಿಯಲ್ಲಿ ಸಿಕ್ಕವರೆಲ್ಲಾ ತೋರಿಸುವ ಅದೇ ಕೃತಕ ನಗೆ, ಟೀ ತಂದು ಕಂಪ್ಯೂಟರ್ ಮುಂದೆ ಕುಳಿತರೆ ಎದುರಿಗೆ ಅದೇ screen ಅದೇ code. ಮತ್ತೆ ನಿನ್ನೆ ಮಾಡಿದಂಥದೇ ಕೆಲಸ ಇವತ್ತೂ ಮಾಡಬೇಕಲ್ಲಪ್ಪಾ ಎಂದುಕೊಳ್ಳುತ್ತಿದ್ದೆ. ಅಷ್ಟಾಗಿಯೂ ನಾವು ಸಾಧಿಸುವುದಾದರೂ ಏನನ್ನು ಎನಿಸುತ್ತಿತ್ತು. ಊರಿನಲ್ಲಿ ಒಬ್ಬ ಶಿಕ್ಷಕನಿದ್ದರೆ ನಾಲ್ಕು ಜನ ವಿದ್ಯಾವಂತರಾಗುತ್ತಾರೆ, ಒಬ್ಬ ಡಾಕ್ಟರ್ ಇದ್ದರೆ ನಾಲ್ಕು ಜನ ರೋಗಮುಕ್ತರಾಗುತ್ತಾರೆ, ಒಬ್ಬ ರೈತನಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಊಟಮಾಡಿ ಹರಸುತ್ತಾರೆ. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಇದ್ದರೆ? ಇದ್ದರೆ? ಏನಾಗುತ್ತದೆ? ಏನೂ ಹೊಳೆಯಲಿಲ್ಲ. ಹಾಂ... ಊರಿನಲ್ಲಿ ಜಾಗದ ಬೆಲೆ ಹೆಚ್ಚಾಗುತ್ತದೆ. ಮನೆಗಳ ಬಾಡಿಗೆ ವಿಪರೀತ ಏರುತ್ತದೆ. ಆಟೋದವರು ಟ್ಯಾಕ್ಸಿಯವರು ಅಪ್ಪನ ರೇಟ್ ಹೇಳುತ್ತಾರೆ. ಹೊಟೆಲ್‌ಗೆ ಹೋದರೆ ಸಾವಿರದ ಕೆಳಗೆ ಊಟವೇ ಆಗುವುದಿಲ್ಲ. ಅಂತೂ ಏನಾದರೊಂದು ಹೆಚ್ಚಾಗುತ್ತಿದೆ. ಛೆ, ಎಂಥ ಕೆಲಸ ಆಗಿಹೋಯ್ತು, ಹೋಗಿ ಹೋಗಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿಬಿಟ್ಟೆನಲ್ಲಾ ಎನಿಸತೊಡಗಿತು.

ಟೀ ಕುಡಿದು ಮುಗಿಸಿ ಇನ್ನೇನು ಕೆಲಸ ಮಾಡಲು ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮೊಬೈಲ್‌ಗೆ ಯಾವುದೋ ನಂಬರ್‌ನಿಂದ ಕರೆ ಬಂತು. ಈ ಮೊಬೈಲ್ ಹಣೆಬರಹವೇ ಇಷ್ಟು. ಯಾವಾಗ ಕರೆ ಬರಲಿ ಎಂದು ಕಾಯುತ್ತಿರುತ್ತೇವೋ ಆಗ ಯಾವ ಕರೆಗಳೂ ಬರುವುದಿಲ್ಲ. ಏನಾದರೂ ಕೆಲಸ ಮಾಡಲು ಪ್ರಾರಂಭಿಸಿದ ಕೂಡಲೆ ಬಡಿದುಕೊಳ್ಳುತ್ತದೆ. ಯಾವುದೋ ಬ್ಯಾಂಕಿನಿಂದ, ನಿಮಗೆ ಲೈಫ್‌ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಕೊಡುತ್ತಿದ್ದೇವೆ. ದಯವಿಟ್ಟು ತೆಗೆದುಕೊಳ್ಳಿ ಎಂದು. ಬ್ಯಾಡಾ ಹೋಗಮ್ಮಾ... ಎಂದು ಕರೆ ಮುಗಿಸಿದೆ. ಈ ಬ್ಯಾಂಕಿನವರು ಸಾಫ್ಟ್‌ವೇರ್ ಇಂಜಿನಿಯರುಗಳಿಗೇ ಏಕೆ ಕರೆ ಮಾಡಿ ಕಾರ್ಡ್ ತಗೆದುಕೊಳ್ಳಿ ಎನ್ನುತ್ತಾರೆ? ಬೇರೆಯವರಿಗೂ ಮಾಡುತ್ತಾರೇನೊ. ನನಗಂತೂ ಗೊತ್ತಿಲ್ಲ. ಆದರೆ ಇಷ್ಟೊಂದು ಸಂಬಳವಿರುವ ಈ ಜನರಿಗೆ ಸಾಲದ ಅಗತ್ಯವಾದರೂ ಏನು? ಮನುಷ್ಯನ ಮನಸ್ಸೇ ಹಾಗೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಎಷ್ಟೇ ಸಿಗಲಿ ಇನ್ನೂ ಬೇಕು ಎನ್ನುತ್ತಲೇ ಇರುತ್ತದೆ. ಹೀಗೆ ಬೇಕುಗಳು ಹೆಚ್ಚಾಗಿ ಜೇಬು ಖಾಲಿಯಾದಾಗಲಲ್ಲವೆ ಈ ಕ್ರೆಡಿಟ್ ಕಾರ್ಡ್‌ಗಳ ಉಪಯೋಗ. ಇಲ್ಲದಿದ್ದರೆ ತಿಂಗಳಿಗೆ 50-60ಸಾವಿರ ಸಂಬಳವಿರುವವರಿಗೆ ಸಾಲದ ಅಗತ್ಯವಾದರೂ ಏನಿರುತ್ತಿತ್ತು? ಹೀಗೆ ಸಾಲಗಾರರು ಹೆಚ್ಚಾಗಿರುತ್ತಿರುವುದರಿಂದಲೇ, ಬ್ಯಾಂಕುಗಳು ಕಂಡ ಕಂಡವರಿಗೆ ಕೇಳಿದಷ್ಟು ಸಾಲ ಕೊಡುವ ಸಾಮಾಜಿಕ ಕೆಲಸಕ್ಕೆ ಕೈಹಾಕಿರುವುದು. ಸಾಲದಲ್ಲೇ ಜೀವನ ಮಾಡುವುದಾದರೆ ಸಾಫ್ಟ್‌ವೇರ್ ಇಂಜಿನಿಯರ್ರೇ ಆಗಬೇಕಿತ್ತೆ? ಹೌದು. ಇಲ್ಲದಿದ್ದರೆ ಸಾಲ ಕೊಡುವವರೂ ಗತಿ ಇಲ್ಲ!

ಹಾಗೂ ಹೀಗೂ ಮೂರ್ನಾಲ್ಕು ಗಂಟೆ ಕಂಪ್ಯೂಟರ್ ಮುಂದೆ ತಪಸ್ಸು ಮಾಡಿದ ಮೇಲೆ ಊಟಕ್ಕೆ ಹೋದೆ. ಇದನ್ನು ಊಟ ಎನ್ನುವುದಕ್ಕಿಂತ ಸಂಜೆಯವರೆಗೂ ಬದುಕಿರಲು ಮಾಡಲೇಬೇಕಾದ ಕ್ರಿಯೆ ಎನ್ನುವುದು ಒಳಿತು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ಯಾವ ಪುಣ್ಯಾತ್ಮ ಹೇಳಿದನೊ. ನನಗಂತೂ ಮುಂದಾದರೂ ಏನಾದರು ಮಾಡಬೇಕಲ್ಲಾ ಎನ್ನುವುದಕ್ಕೋಸ್ಕರ ಹೊಟ್ಟೆಗೆ ಹಾಕಬೇಕಿದೆ. ತಿನ್ನುವ ಅನ್ನದ ಬಗ್ಗೆ ಕೆಟ್ಟ ಮಾತಾಡಬಾರದಂತೆ. ಹಾಗೆಂದುಕೊಂಡು ಸುಳ್ಳನ್ನು ಹೇಳಲು ಸತ್ಯಂ ವದ ಧರ್ಮಂ ಚರ ಎನ್ನುವ ಮಾತಿನ ಅಡ್ಡಿ. ಎಲ್ಲಿ ನೋಡಿದರೂ ಕಾಂಟ್ರಡಿಕ್ಷನ್‌ಗಳು. ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮುಗಿಸಿ ಮತ್ತೆ ಕೀಲಿಮಣೆ ಒತ್ತಲು ಶುರುಮಾಡಿದೆ. ಮೊಬೈಲ್‌ಗೆ ಈ ಬಾರಿ ಬಂದಿದ್ದು ಒಂದು SMS. "Life is very crazy... what u want, u dont get... what u get, u dont enjoy... what u enjoy, is not permanent... what is permanent is boring! thats life..." ಇಷ್ಟೆಲ್ಲಾ ಭಾಷಣ ಬಿಗಿದು ಬೋರ್ ಮಾಡಿದಮೇಲೆ Good Aftrnoon ಬೇರೆ. ಯಾವನಪ್ಪಾ ಇವ್ನು... ಇದನ್ನ ಇವತ್ತೇ ಕಳಿಸ್ಬೇಕಿತ್ತಾ ಎಂದುಕೊಂಡೆ. ಹೊಟ್ಟೆ ತುಂಬಿದುದರ ಪ್ರಭಾವವದಿಂದ ತೂಕಡಿಕೆ ಶುರುವಾಯಿತು. ಅರೆಬರೆ ನಿದ್ದೆ ಮಾಡುತ್ತಾ ಕೆಲಸ ಮಾಡುವುದರ ಮಜವೇ ಬೇರೆ. ಎಲ್ಲೀ ಕೆಲಸ ತೆಗ್ಯಪ್ಪಾ... ಸುಮ್ನೆ ಮಲ್ಗಿಬಿಡೋಣ ಅಂತ ಕೆಲವುಸಲ ಅನಿಸುತ್ತದೆ. ಮಲಗಿದ ಕೋಡಲೇ ಪಕ್ಕದಲ್ಲಿ ಯಾರದ್ದಾದರೂ ಸದ್ದಾದರೆ ಅವರೇನೆಂದುಕೊಂಡುಬಿಡುತ್ತಾರೋ ಎಂದು ಎಚ್ಚರಗೊಂಡು ಮತ್ತೆ ಕಂಪ್ಯೂಟರ್ ಗುರಾಯಿಸುವ ಕೆಲಸ ಶುರುಮಾಡುವುದು. ಥತ್... ಬರೀ ಬೇರೆಯವರ ಸಲುವಾಗಿಯೇ ಬದುಕಬೇಕಾಗಿದೆಯಲ್ಲಾ...

ಸಾಫ್ಟ್‌ವೇರ್ ಕಂಪನಿಗಳಲ್ಲಿ ಟೀ ಕಾಫಿ ಖರ್ಚಾಗುವಷ್ಟು ಬೇರೆಲ್ಲೂ ಆಗಲಿಕ್ಕಿಲ್ಲ. ಕೆಲಸ ಪ್ರಾರಂಭಿಸಿದ ಅರ್ಧಗಂಟೆಗೇ ತೂಕಡಿಕೆಯೂ ಪ್ರಾರಂಭ. ಅದನ್ನೋಡಿಸಲು ಒಂದು ಕಪ್ ಕಾಫಿ. ಇಲ್ಲದಿದ್ದರೆ ಬೇಜಾರು ಕಳೆಯಲು. ಅದೂ ಇಲ್ಲದಿದ್ದರೆ ಬೇರೆಯವರಿಗೆ ಕಾಂಪನಿಕೊಡಲು. ಒಟ್ಟಿನಲ್ಲಿ ಕಂಪ್ಯೂಟರ್‌ಗಳಿಗಿಂತ ಟೀ ಮಷಿನ್‌ಗಳಿಗೇ ಹೆಚ್ಚಿನ ಕೆಲಸ. ಟೀ ಕುಡಿಯುವಾಗ ಮನಸ್ಸಿಗೆ ನೂರಾರು ಯೋಚನೆಗಳು. ಮನುಷ್ಯ ದುಡಿಯುವುದು ಏತಕ್ಕೆ? ಕೇವಲ ಹೊಟ್ಟೆಗೆ ಬಟ್ಟೆಗೆ ಅನ್ನುವುದಂತೂ ಸುಳ್ಳು. ಕೇವಲ ಅವುಗಳಿಗಷ್ಟೇ ಆದರೆ ಇಷ್ಟೊಂದು ಸಂಬಳವಿದ್ದರೂ ಸಾಲಮಾಡುವ ಪರಿಸ್ಥಿತಿ ದೊರಕುತ್ತಿರಲಿಲ್ಲ. ಜನರೆಲ್ಲ ಕಾರಿನಲ್ಲಿ ಓಡಾಡುತ್ತಿರುವಾಗ ತಾನು ಬೈಕಿನಲ್ಲಿ ಓಡಾಡುವುದು ಎಷ್ಟು ಕಷ್ಟ. ನಾವು ಬೈಕು ಏರಿ ಹೊರಡುತ್ತಿರುವಾಗ ಪಕ್ಕದಮನೆಯವನು ಹೊಸತಾಗಿ ಖರೀದಿಸಿದ ಹೊಂಡಾ ಸಿಟಿಯಲ್ಲಿ ಕೂತು ನಕ್ಕರೆ ಆ ನಗುವೂ ಅಣಕದಂತೆ ತೋರುತ್ತದೆ. ಒಬ್ಬ ಕಾರು ಖರೀದಿಸಿದರೆ ಅವನಿಗೆ ಖುಷಿಯೇನೋ ಆಗುತ್ತದೆ. ಆದರೆ ಬೇರೆಯವರು ಅದನ್ನು ನೋಡಿ ಹೊಗಳಿದರೆ ಖರೀದಿಸಿದುದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ. ಹೊಸ ಬಟ್ಟೆ ತೊಟ್ಟು ಆಫೀಸಿಗೆ ಹೋದರೆ ಎಷ್ಟು ಸಂತೋಷವಾಗುತ್ತದೋ ಯಾರೂ ಅದನ್ನು ಗುರಿತಿಸಲೇ ಇಲ್ಲವಾದರೆ ಅದಕ್ಕಿಂತ ಹೆಚ್ಚು ದುಃಖವಾಗುತ್ತದೆ. ಆ ಹೊಸ ಬಟ್ಟೆಯ ಮೇಲೇ ತಾತ್ಸಾರವಾಗುತ್ತದೆ. ಹೊಸದುದರ ತರಹ ಕಾಣಿಸುತ್ತಿಲ್ಲವೇನೋ ಎನಿಸುತ್ತದೆ. ಹೀಗೇಕೆ? ಮನುಷ್ಯ ತನ್ನಲ್ಲಾಗುವ ಎಷ್ಟೊಂದು ಭಾವನೆಗಳಿಗೆ ಬೇರೆಯವರನ್ನವಲಂಬಿಸಿದ್ದಾನೆ!

ಸಂಜೆ ಮನೆಗೆ ಹೊರಟಾಗ ಬೆಳಗಿನಷ್ಟು ಬೇಸರ ಉಳಿದಿರಲಿಲ್ಲ. ಬೇಸರಕ್ಕೇ ನನ್ನನ್ನು ನೋಡಿ ಬೇಸರ ಮೂಡಿತೋ ಏನೊ. ಗಾಡಿಯಲ್ಲಿ ಪೆಟ್ರೋಲ್ ಆಗಿಹೋಗಿತ್ತು. 200 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡೆ. ಮನೆಗೆ ಹೊರಟಾಗ ದಾರಿಯಲ್ಲಿ ನೆನಪಾಯಿತು. ಮನೆಬಾಡಿಗೆ ಇನ್ನೂ ಕೊಟ್ಟಿರಲಿಲ್ಲ. ಕಿಸೆಯಲ್ಲಿ ದುಡ್ಡೂ ಇರಲಿಲ್ಲ. ATMಗೆ ಹೋಗಿ ದುಡ್ಡು ತೆಗೆಯುತ್ತಿದ್ದೆ. ಇಷ್ಟೊಂದು ಬಾಡಿಗೆ ತೆರುವ ಶಕ್ತಿ ಬಹುಶಃ ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವುದರಿಂದ ಮಾತ್ರ ಸಾಧ್ಯ ಎನಿಸುತ್ತಿತ್ತು. ತಮ್ಮನಿಂದ ಕರೆ ಬಂತು. ಅಕ್ಕಿ ಬೇಳೆ ಖಾಲಿಯಾಗಿದೆ. ಇನ್ನು ಅದನ್ನು ಬೇರೆ ತೆಗೆದುಕೊಂಡು ಹೋಗಬೇಕಲ್ಲಪ್ಪಾ ಎಂದುಕೊಂಡು ಅಲ್ಲೇ ಪಕ್ಕದ ಸುಪರ್‌ಮಾರ್ಕೆಟ್‌ಗೆ ಹೋದೆ. ಅಕ್ಕಿ ಬೇಳೆಗಳ ಬೆಲೆ ನೋಡಿದರೂ ಅದೇ ಹಳೆಯ ವಿಚಾರ. ಅಷ್ಟಕ್ಕೂ ನಮ್ಮೂರಲ್ಲೂ ಅಕ್ಕಿ ಬೆಲೆ ಏರಿದೆ. ಆ ಹಳ್ಳಿಯಲ್ಲಿ ಯಾವ ಸಾಫ್ಟ್‌ವೇರ್ ಕಂಪನಿಯೂ ಇಲ್ಲ. ಅಲ್ಲೂ ಜಾಗದ ಬೆಲೆ ಗಗನಕ್ಕೇರುತ್ತಿದೆ. ನಾನಂತೂ ಕಾರಣ ಅಲ್ಲ. ಹಾಗಿದ್ದರೆ ಬೇಂಗಳೂರಿನಲ್ಲಿ ಮಾತ್ರ ನಾನ್ಯಾಕೆ ಕಾರಣ? ಖಂಡಿತ ಅಲ್ಲ ಎಂದು ನಿರ್ಧರಿಸಿ ಪಾಪಪ್ರಜ್ಞೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೆ. ನನ್ನ ಅಪ್ಪ ಅಮ್ಮನ ಕಾಲದಲ್ಲಿ ತಿಂಗಳಿಗೆ ಸಾವಿರ ರೂಪಾಯಿ ಸಂಬಳ ಬಂದುಬಿಟ್ಟರೇ ಅವನು ದೊಡ್ಡ ಶ್ರೀಮಂತ. ಅದು ಈಗ ಲಕ್ಷಕ್ಕೇರಲು ಸಾಫ್ಟ್‌ವೇರ್ ಅಂತೂ ಕಾರಣ ಅಲ್ಲ. ಅದು ಬಂದಿರುವುದು ಮೊನ್ನೆ ಮೊನ್ನೆಯಷ್ಟೇ.

ಅಷ್ಟರಲ್ಲಿ ಬಿಲ್ ಮಾಡಿಸಿಕೊಳ್ಳಲು ನನ್ನ ಹಿಂದೆ ಕ್ಯೂ ನಿಂತಿದ್ದವನು "ಸಾರ್... ಏನು ಯೋಚಿಸ್ತಿದೀರಿ? ಮುಂದೆ ನೆಡೀರಿ" ಎಂದ. ನನ್ನ ಮುಂದಿದ್ದವ ಆಗಲೇ ಬಿಲ್ ಕೊಟ್ಟು ಹೋಗಿಯಾಗಿತ್ತು. ನನಗೂ ಹಾಗೇ ಅನಿಸಿತು. ಯೋಚಿಸುತ್ತಾ ಕುಳಿತರೆ ಮುಂದೆ ಹೋಗುವುದಕ್ಕಾಗುವುದಿಲ್ಲ. ಮುಂದೆ ಹೋಗಬೇಕು ಅಂದರೆ ಯೋಚಿಸುವುದನ್ನು ಬಿಡಲೇಬೇಕು!

Thursday, April 17, 2008

ಘಟ್ಟಿ ಕೂತ್ಗೋರಿ....

"ವಿದ್ಯಾಗಿರಿಗೆ ಬರ್ತೀರೇನ್ರಿ?"
"ನೂರು ರುಪಾಯಿ ಆಕ್ಕೇತಿ ನೋಡ್ರಿ"
ನೂರು ರೂಪಾಯಾ? ನಮ್ಮ ಹತ್ತಿರ ಇಪ್ಪತ್ತು ರೂಪಾಯಿಗೆ ಒಂದು ಪೈಸೆಯೂ ಹೆಚ್ಚು ಇರಲಿಲ್ಲ. ರಾತ್ರಿ ಹನ್ನೊಂದುವರೆ ಆಗಿಬಿಟ್ಟಿತ್ತು. ಬಾಗಲ್ಕೋಟ್ ಸಿಟಿಯಿಂದ ವಿದ್ಯಾಗಿರಿಗೆ ಹೋಗುವ ಕೊನೆಯ ಬಸ್ಸು ರಾತ್ರಿ ಹತ್ತು ಗಂಟೆಗಾಗಲೇ ಹೊರಟುಹೋಗಿತ್ತು. ರಾತ್ರಿ ಹೇಗಪ್ಪಾ ಮನೆಮುಟ್ಟುವುದು ಎಂದು ನಮ್ಮ ತಲೆಬಿಸಿ ನಮಗಾದರೆ, "ಅಪ್ಪನ ರೊಕ್ಕ ಕುಡ್ಯಾಕ್ ಖರ್ಚು ಮಾಡಾಕ್ ಬರ್ತೈತಿ... ಆಟೋಕ್ಕೆ ಕೊಡಾಕ್ ಬರಾಂಗಿಲ್ಲಾ?" ಎಂದು ಆ ಆಟೋ ಡ್ರೈವರ್ ಬೇರೆ ರೇಗಿಸುತ್ತಿದ್ದ. ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ. ಅಲ್ಲಿದ್ದವರು ನಾವಿಬ್ಬರು ಮತ್ತೆ ಆ ಆಟೋಡ್ರೈವರ್ ಅಷ್ಟೇ. ಸುತ್ತಮುತ್ತಲೂ ಒಂದು ನರಪಿಳ್ಳೆಯೂ ಓಡಾಡುತ್ತಿರಲಿಲ್ಲ. ಗುರುಸಿದ್ದೇಶ್ವರ ಚಿತ್ರಮಂದಿರದ ಎದುರಿದ್ದ ಸೋಡಿಯಂ ಲ್ಯಾಂಪೊಂದು ಆವರಿಸಿದ್ದ ಕತ್ತಲನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿತ್ತು. ಅಪರೂಪಕ್ಕೆ ಒಂದೊಂದು ಟ್ರಕ್ಕು ಆ ಮಾರ್ಗವಾಗಿ ಹೋಗುತ್ತಿದ್ದವು. ಎಲ್ಲ ಟ್ರಕ್ಕುಗಳಿಗೂ ಕೈ ಮಾಡಿ ಮಾಡಿ ಕೈಸೋತವೇ ಹೊರತೂ ಯಾವ ಟ್ರಕ್ಕೂ ನಿಲ್ಲಲಿಲ್ಲ.

ಆದಿನ ಸಂಜೆ ನಾಳೆಯ ನಾಟಕದ ಪ್ರದರ್ಶನಕ್ಕಾಗಿ ತಯಾರಿ ನೆಡೆದಿತ್ತು. ನಾಳೆ ಬೆಳಿಗ್ಗೆ ಆರು ಗಂಟೆಗೆ ಬೆಳಗಾವಿಗೆ ನಾಟಕದ ಕಾಂಪಿಟೇಷನ್‌ಗೆ ಹೋಗಬೇಕಿತ್ತು. ಸ್ಟೇಜ್ ಹಿಂದೆ ಹಾಕಲು ನೀಲಿ ಪರದೆ ಅಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎಂದು ಊಹಿಸಿದ್ದ ನಮ್ಮ ಡೈರೆಕ್ಟರ್ ನನ್ನ ಮತ್ತು ಪವನನನ್ನ ನೀಲಿ ಪರದೆ ಕೇಳಿಕೊಂಡು ತರಲು ಬಾಗಲ್ಕೋಟ್ ಸಿಟಿಯಲ್ಲಿದ್ದ ಅರ್.ಎಸ್.ಎಸ್ ಕಾರ್ಯಾಲಯಕ್ಕೆ ಕಳಿಸಿದ್ದರು. ನೀಲಿ ಪರದೆಯೇನೋ ಸಿಕ್ಕಿತು. ಆದರೆ ಅಲ್ಲಿಯ ಪರಿಚಿತರೊಂದಿಗೆ ಮಾತನಾಡುತ್ತಾ ಹೊತ್ತು ಹೋಗಿದ್ದೇ ಗೊತ್ತಾಗದೆ ನಮ್ಮ ಪವನ ಸಾಹೇಬ್ರು ವಾಪಸ್ ಹೊರಡುವುದನ್ನು ತುಂಬ ತಡಮಾಡಿಬಿಟ್ಟಿದ್ದರು. ವಿದ್ಯಾಗಿರಿಯಿಂದ ಬಾಗಲ್ಕೋಟೆ ಸಿಟಿಯಿರುವುದು ಕನಿಷ್ಟಪಕ್ಷ ಐದಾರು ಕಿಲೋಮೀಟರ್ ದೂರದಲ್ಲಿ. ದಾರಿಮಧ್ಯ ಸಿಮೆಂಟ್ ಫ್ಯಾಕ್ಟರಿ ಬಿಟ್ಟರೆ ಬೇರೆ ಏನೂ ಇಲ್ಲ. ನೆಡೆದುಕೊಂಡು ಹೋಗುವುದಕ್ಕೆ ಅದರಲ್ಲೂ ಮಧ್ಯರಾತ್ರಿಯಲ್ಲಿ, ನಮಗಂತೂ ಧೈರ್ಯವೇ ಇರಲಿಲ್ಲ. ಬಸ್ಟ್ಯಾಂಡಿಗೆ ಬರುವಷ್ಟರಲ್ಲೇ 10:45 ಆಗಿಬಿಟ್ಟಿತ್ತು. ಯಾವುದಾದರೂ ಗಾಡಿ ಸಿಗಬಹುದೇನೋ ಎಂದು ಕಾಯುತ್ತಾ ಒಂದು ಗಂಟೆಯಾದರೂ ಯಾವ ಗಾಡಿಯೂ ನಮ್ಮ ಕೈಹತ್ತಲಿಲ್ಲ. ಉಳಿದಿದ್ದ ಒಂದೇ ಒಂದು ಮಾರ್ಗವೆಂದರೆ ಆ ಆಟೋ ಹತ್ತಿ ಹೋಗುವುದು. ಅವನನ್ನು ಕೇಳಿದರೆ ನೂರು ರೂಪಾಯಿ ಹಾಗೆ ಹೀಗೆ ಅಂದುಬಿಟ್ಟ. ನಾವು ಅಷ್ಟೆಲ್ಲ ಆಗಲ್ಲಪ್ಪಾ ಎಂದಿದ್ದಕ್ಕೆ ಕುಡುಕರು ಗಿಡುಕರು ಎಂದು ನಮ್ಮ ಸ್ವಾಭಿಮಾನ ಬೇರೆ ಕೆರಳಿಸಿಬಿಟ್ಟ. ಏನೇ ಆಗಲಿ ಮತ್ತೆ ಅವನ ಹತ್ತಿರ ಮಾತ್ರ ಹೋಗುವುದು ಬೇಡ ಎಂದು ನಿರ್ಧರಿಸಿಬಿಟ್ಟೆವು.

"ಎಲ್ಲಾ ನಿಮ್ಮಿಂದಾನೇ..." ರಾಗ ಎಳೆದೆ.
"ಲೇ... ಅಪ್ರೂಪಕ್ಕೆ ಸಿಕ್ಯಾರ... ಬಿಟ್ ಬರಾಕ್ ಆಕ್ಕೇತೇನ್ಲೆ?" ಅವರ ಉತ್ತರ. ಮತ್ತೆ ಇಬ್ಬರೂ ಆಕಡೆಯ ರೋಡಿನ ತುದಿಗೆ ನೋಡಲು ಪ್ರಾರಂಭಿಸಿದೆವು. ಯಾವ ಗಾಡಿಯ ಸುಳಿವೂ ಇಲ್ಲ. ರಾತ್ರಿ ಹೋಗಿ ಇನ್ನೊಂದಿಷ್ಟು ಸ್ಟೇಜ್ ತಯಾರಿ ಬೇರೆ ಮಾಡಬೇಕಿತ್ತು. ಅದು ಹಾಳಾಗಿ ಹೋಗಲಿ, ಹೇಗೋ ಓಟ್ಟಿನಲ್ಲಿ ರೂಮು ತಲುಪಿದರೆ ಸಾಕಾಗಿತ್ತು. ಈ ಸ್ಮಶಾನ ಮೌನದ ನಡುವೆ ಒಂದು ಬೈಕಿನ ಶಬ್ದ ಕೇಳಿಸಿತು. ನಾವಿಬ್ಬರಿದ್ದುದರಿಂದ ಆ ಬೈಕ್‌ಮೇಲಂತೂ ಹೋಗಲಿಕ್ಕಾಗುವುದಿಲ್ಲ ಎಂದು ಸುಮ್ಮನೆ ನಿಂತೆವು. ಆ ಬೈಕ್ ಸವಾರನೋ ಅಂಗಿಯ ಗುಂಡಿಗಳನ್ನು ಅರ್ಧಕ್ಕರ್ಧ ಬಿಚ್ಚಿಕೊಂಡು ಆಕಡೆ ಈಕಡೆ ಒಂದು ಚೂರೂ ನೋಡದೆ ಸಿಕ್ಕಪಟ್ಟೆ ಸ್ಪೀಡಾಗಿ ಓಡಿಸುತ್ತಾ ನಮ್ಮ ಮುಂದೆಯೇ ಹಾದು ಹೋದ. ಮತ್ತೆ ಹತ್ತು ನಿಮಿಷಗಳ ಮೌನ. ಪುನಃ ಮತ್ತೊಂದು ಬೈಕಿನ ಶಬ್ದ ಕೇಳಿಸತೊಡಗಿತು. ಬೈಕ್ ಹತ್ತಿರ ಬಂದಾಗ ನೋಡಿದರೆ, ಹತ್ತು ನಿಮಿಷದ ಹಿಂದೆ ಯಾವ ಬೈಕ್ ನಮ್ಮೆದುರಿಗೆ ಹಾದು ಹೋಗಿತ್ತೋ ಅದೇ ಬೈಕ್. ಆ ಬೈಕ್ ಓಡಿಸುವವ ಮತ್ತದೇ ಪೊಸಿಶನ್‌ನಲ್ಲಿ ಅಂಗಿ ಗುಂಡಿಗಳನ್ನು ಬಿಚ್ಚಿಕೊಂಡು ಮತ್ತದೇ ವೇಗದಲ್ಲಿ ನಮ್ಮೆದುರಿಂದಲೇ ಹಾದುಹೋದ. ನಾವಿಬ್ಬರು ಮುಖ ಮುಖ ನೋಡಿಕೊಂಡೆವು.

ಇನ್ನೇನೂ ಮಾಡಲು ತೋಚದೆ ನಾವಿಬ್ಬರೂ ಗರುಡಗಂಬಗಳಂತೆ ರಸ್ತೆ ಬದಿಯಲ್ಲಿ ನಿಂತಿರುವಾಗ ಪರಿಚಯದವರೊಬ್ಬರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಅವರ ಕೆಲಸ ಅಲ್ಲಿನ ಪ್ರಾದೇಶಿಕ ಪತ್ರಿಕೆಯಲ್ಲಾದುದರಿಂದ ಬಹಳ ಹೊತ್ತು ಇರಬೇಕಾದ ಪರಿಸ್ಥಿತಿಯಿತ್ತು. ಅಂತೂ ಒಬ್ಬರಾದ್ರೂ ಸಿಕ್ರಲ್ಲ ಎಂದುಕೊಂಡು ಹೀಗಾಗಿಬಿಟ್ಟಿದೆ ನಮ್ಮ ಪರಿಸ್ಥಿತಿ ಎಂದು ಹೇಳಿಕೊಂಡೆವು. ಅವರಿಗೆ ಬೆಳಿಗ್ಗೆಯೇ ಅವರ ಗಾಡಿ ಬೇಕಿತ್ತಂತೆ. ಇಲ್ಲದಿದ್ದರೆ ನಿಮ್ಮಿಬ್ಬರಿಗೆ ಕೊಟ್ಟುಬಿಡುತ್ತಿದ್ದೆ. ನೀವು ನಾಳೆ ವಾಪಸ್ ತಂದು ಮುಟ್ಟಿಸಬಹುದಿತ್ತು ಎಂದರು. ಇನ್ನು ಬೇರೆ ಉಪಾಯ ಏನಿದೆ ಎಂದು ಯೋಚಿಸುತ್ತಿರುವಾಗಲೇ ಮತ್ತೆ ಬೈಕಿನ ಶಬ್ದವಾಯಿತು. ಮತ್ತೆ ಅದೇ ಬೈಕ್ ಅದೇ ಸ್ಪೀಡ್‌ನಲ್ಲಿ ಹತ್ತಿರ ಬರುತ್ತಿತ್ತು. ಇವರು "ತಡೀರಿ... ಒಂದ್ ಕೆಲ್ಸಾ ಮಾಡೂನು" ಎಂದನ್ನುತ್ತಾ ಆ ಬೈಕ್‌ನವನಿಗೆ ಕೈ ಮಾಡಿದರು. ಅವನಿದ್ದ ಸ್ಪೀಡಿಗೆ ಅವನು ನಮ್ಮಿಂದ ಅರ್ಧ ಕಿಲೋಮೀಟರ್ ದೂರ ಹೋಗಿ ನಿಂತ. ವಾಪಸ್ಸು ಬಂದು ಅವರಿಗೆ ನಮಸ್ಕಾರಾ ಸಾರ್ ಎಂದ. ಇವರಿಬ್ಬರನ್ನೂ ವಿದ್ಯಾಗಿರಿಗೆ ಬಿಟ್ಟುಕೊಡ್ತೀಯೇನಪ್ಪಾ ಎಂದು ಅವರು ಕೇಳಿದೊಡನೆಯೇ ಈತ ಅದಕ್ಕೇನು ಸಾರ್ ಎಂದು ಒಪ್ಪಿಗೆ ಸೂಚಿಸಿಬಿಟ್ಟ. ತಮ್ಮ ಕೆಲಸ ಮುಗಿಸಿದ್ದಕ್ಕೆ ಅವರು ನಮಗೆ ವಿದಾಯ ಹೇಳಿ ಹೊರಟುಬಿಟ್ಟರು.

ಬೈಕನ್ನೊಮ್ಮೆ ಜೋರಾಗಿ ಅಲ್ಲಾಡಿಸಿ ಟ್ಯಾಂಕಿನ ಹತ್ತಿರ ಕಿವಿ ಹಿಡಿದ. ಆಮೇಲೆ ತನ್ನಷ್ಟಕ್ಕೆ ತಾನೇ ತಲೆ ಅಲ್ಲಾಡಿಸಿ ನಮ್ಮ ಕಡೆ ನೋಡಿದ. "ವಿದ್ಯಾಗಿರೀಗೆ ಹೊಂಟೀರೇನ್ರಿ? ಬರ್ರಿ...". ನಾನು ಮಧ್ಯದಲ್ಲಿ ಕೂತೆ. ನನ್ನ ಹಿಂದೆ ಪವನ. ಅವನ ಕಟಾರಾ ಸುಜುಕಿ ಸಮುರೈನಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಶುರುವಾಯಿತು. "ನೋಡ್ರೀ... ನಾನು ಈಗss ಹೇಳಾಕತ್ತೀನಿ. ಘಟ್ಟಿ ಕೂತ್ಗೋರಿ. ನಾನು ನಶಾದಾಗದೀನಿ" ಎಂದುಬಿಟ್ಟ. ನನ್ನ ಜಂಘಾಬಲವೇ ಉಡುಗಿಹೋಯಿತು. ಕಣ್ಣು ಮುಚ್ಚಿ ರಾಮ ಕೃಷ್ಣ ಹೇಳಲು ಪ್ರಾರಂಭಿಸಿದೆ. ಕೆಲವೇ ಸೆಕಂಡುಗಳಲ್ಲಿ ಬೈಕು 60km/h ಸ್ಪೀಡಿಗೆ ಹೋಗಿ ಮುಟ್ಟುಬಿಟ್ಟಿತ್ತು. ಅಲ್ಲಿಯ ರೋಡಿನ ಪರಿಸ್ಥಿತಿಯೋ ಕೇಳುವುದು ಬೇಡ. ಆ ರೋಡಿನಲ್ಲಿ ಇವನ ಕಟಾರಾ ಬೈಕು ಆ ಸ್ಪೀಡಿನಲ್ಲಿ ತ್ರಿಬಲ್ ರೈಡಿಂಗ್ ಬೇರೆ. ಬೈಕಿನ ಶಾಕ್ ಅಬ್ಸಾರ್ಬರ್ಸ್ ಪೂರ್ತಿ ಅಕ್ಕಿಹೋಗಿತ್ತು. ಎಲ್ಲಾದರೂ ಹೊಂಡ ಹಾರಿಸಿದರೆ ಕಟಾರ್ ಎಂದು ಶಬ್ದ ಬೇರೆ ಬರುತ್ತಿತ್ತು. ಅವನಿಗಂತೂ ಇದೆಲ್ಲದರ ಪರಿವೆಯೇ ಇಲ್ಲವೇನೊ ಎಂಬಂತೆ ಓಡಿಸುತ್ತಿದ್ದ. ಅರ್ಧ ದಾರಿ ಸಾಗಿದ ಮೇಲೆ ಪ್ರಶ್ನೋತ್ತರಗಳನ್ನು ಶುರುಮಾಡಿದ.
"ಏನ್ ಮಾಡ್ಕೊಂಡದೀರಿ?"
"ಇಂಜಿನಿಯರಿಂಗ್ ಕಲ್ಯಾಕತ್ತೀವ್ರಿ"
"ಯಾವ ಬ್ರಾಂಚು?"
"ಕಂಪ್ಯೂಟರ್ ಸೈನ್ಸ್‌ರಿ"
"ಓಹ್... ಹಂಗಾರss ಅನಾಮಿ ಗೊತ್ತೇನ್ ನಿಮ್ಗ?"
ಯಲಾ ಇವ್ನಾ, ಹೋಗಿ ಹೋಗಿ ನಮ್ಮ HODಸುದ್ದೀಗೆ ಕೈ ಹಾಕಿದ್ನಲ್ಲಪ್ಪಾ ಎಂದುಕೊಳ್ಳುವಷ್ಟರಲ್ಲಿ ಅವನೇ ಮುಂದುವರಿಸಿದ.
"ಅವ ಮತ್ತ ನಾನು ಭಾರೀ ದೋಸ್ತ್... ನಿಮ್ಗೇನಾರ ಪ್ರಾಬ್ಲಮ್ ಆದ್ರ ನಂಗ್ ಹೇಳ್ರಿ. ನಾನು ಅನಾಮಿಗೆ ಹೇಳ್ತೀನಿ"
ಕೃತಾರ್ಥರಾದೆವು ತಂದೆ. ಮೊದಲು ದಯವಿಟ್ಟು ಮನೆಗೆ ತಲುಪಿಸಿಬಿಡು ಎಂದು ಬಾಯಿ ಬಿಟ್ಟು ಹೇಳುವುದೊಂದು ಬಾಕಿ ಇತ್ತು.
"ಅಂದಾಂಗ... ಈಗೀಗ ಬಾಗಲ್ಕೋಟ್ನಾಗ ಭಾಳ್ ಸೆಕಿ ಶುರು ಆಗ್ಬಿಟೈತಿ ನೋಡ್ರಿ. ಮನ್ಯಾಗ ಕುಂದ್ರಾಕಾಗಾಂಗಿಲ್ಲ. ಅದ್ಕss ಸೊಲ್ಪ ಹವಾ ಸೇವ್ಸೂನೂ ಅಂತ ಗಾಡಿ ಓಡ್ಸಾಕತ್ತೀನಿ" ಎಂದು ತನ್ನ ಸಮಸ್ಯೆಯನ್ನು ವಿವರಿಸಿದ. ನಾವು ಹುಂ ಹುಂ ಎಂದು ತಲೆ ಹಾಕಿದೆವು.

ಅಂತೂ ಕಾಲೇಜು ತಲುಪಿದಾಗ ಹೋದ ಜೀವ ಮತ್ತೆ ಬಂದಂತಾಗಿತ್ತು. ಇಲ್ಲೇ ಬಿಡಿ ಸಾಕು ಎಂದು ಎಷ್ಟು ಹೇಳಿದರೂ ಕೇಳದೆ ರೋಮಿಗೇ ತಂದು ಮುಟ್ಟಿಸಿದ. "ಏನಾರ ಹೆಲ್ಪ್ ಬೇಕಿದ್ರೆ ಕೇಳ್ರಿ... ನಾನು ನಿಮ್ಮ HODಗೆ ಹೇಳ್ತೀನಿ... ಗುಡ್ ನೈಟ್" ಎಂದು ಹೇಳಿ ಬೀಳ್ಕೊಟ್ಟ. ಎಚ್ಚರವಾಗಿದ್ದವ ದುಡ್ಡು ತೆಗೆದುಕೊಂಡೂ ಮಾಡದೇ ಇದ್ದ ಸಹಾಯವನ್ನ ನಿಶೆಯಲ್ಲಿದ್ದವ ಪ್ರತಿಫಲವನ್ನೇ ನಿರೀಕ್ಷಿಸದೆ ಮನಃಪೂರಕವಾಗಿ ಮಾಡಿಮುಗಿಸಿದ್ದ.

Tuesday, April 15, 2008

ಮಾಡರ್ನ್ ನಿಂಗಿ


ಸ್ವಲ್ಪ ದಿನದ ಹಿಂದೆ ಪ್ರತಾಪ್ ಸಿಂಹರ ಒಂದು ಲೇಖನದ ಬಗ್ಗೆ ಅಗೋಕನ್ನಡದಲ್ಲಿ ಸಿಕ್ಕಾಪಟ್ಟೆ ಚರ್ಚೆ ನೆಡೆಯುತ್ತಾ ಇತ್ತು. ಹುಡುಗಿಯರ ಮೇಲೆ ನೆಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಕೇವಲ ಹುಡುಗರಷ್ಟೇ ಕಾರಣರಲ್ಲ, ಕೆಲವು ಸಂದರ್ಭಗಳಲ್ಲಿ ಆ ಕಾಮುಕರ ಕಾಮ ಕೆರಳಿಸುವವರು ಹುಡುಗಿಯರೇ ಎನ್ನುವುದು ಕೆಲವರ ವಾದವಾಗಿದ್ದರೆ ಇನ್ನು ಕೆಲವರದ್ದು ಇದಕ್ಕೆ ವಿರೋಧವಿತ್ತು. ನಮಗ್ಯಾಕ್ರೀ ಈ ವಿಷಯ ಅದು ನಮಗೆ ಸಂಬಂಧ ಇಲ್ಲಾ ಎಂದು ತೆಗೆದು ಹಾಕುವುದೂ ಸರಿಯಲ್ಲ. ಇದು ಸಮಾಜದ ಸ್ವಸ್ಥ್ಯದ ಪ್ರಶ್ನೆ. ಹಾಗೆಂದುಕೊಂಡು ಕಡಿಮೆ ಬಟ್ಟೆ ಹಾಕಿಕೊಂಡು ಶೋಕಿ ಮಾಡುತ್ತಿರುವ ಹೆಣ್ಣುಮಕ್ಕಳೆಲ್ಲರಿಗೆ ಬಟ್ಟೆ ತೊಡಿಸಲು ಸಾಧ್ಯವೇ? ನಮ್ಮಂಥವರು ಹೆಚ್ಚು ಅಂದರೆ ಇಂತಹ ರೀಮಿಕ್ಸ್ ಗೀತೆಗಳನ್ನು ಬರೆಯಬಹುದು. ಹೂವು ಹಣ್ಣು ಚಿತ್ರದ ಸಿ ಅಶ್ವಥ್ ಹಾಡಿರುವ "ನಿಂಗಿ ನಿಂಗಿ ನಿಂಗಿ ನಿಂಗಿ" ಧಾಟಿಯಲ್ಲಿ....

ತಂಗಿ ತಂಗಿ ತಂಗಿ ತಂಗಿ
ಪ್ಯಾಟೀಗ್ ಹೊಂಟೀಯೇನ ತಂಗಿ
ತಂಗಿ ತಂಗಿ ತಂಗಿ ತಂಗಿ
ಟಸ್ ಪುಸ್ ಅಂತೀಯಲ್ಲೆ ತಂಗಿ

ನಿನ್ನ ನೋಡುತ್ತಾ
ಜನ್ರೆಲ್ಲ ಬೆಪ್ಪ
ಆಗ್ಯಾರ ನೋಡಲ್ಲಿ

ಟೈಟು ಜೀನ್ಸು ಶಾರ್ಟು ಟಾಪು
ಹಾಕಿಕೊಂಡ ನೀ ನಿಂತಿ
ಬಳಿ ಇಲ್ಲದೇ ಟಿಕಳಿ ಇಲ್ಲದೇ
ಬೆದರುಬೊಂಬೆ ಹಾಂಗ ಕಾಣತಿ

ಮುಖಕ್ಕೆ ಸುಣ್ಣ ಮೆತ್ತತಿ
ತುಟಿಗೆ ಬಣ್ಣ ಹಚ್ಚತಿ
ಜಡಿನ ಕತ್ತರಿಸುತಿ
ನಿನ್ನ ನೀನು ಮರೆಸುತಿ

ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ

ಕರೀಗ್ಲಾಸ ಹಾಕಿಕೊಂಡು
ಹುಡುಗರ್ ಮುಂದ ಪೋಸ್ ಕೊಡ್ತಿ
ಸುಮ್ ಸುಮ್ನೆ ನಗನಗತಾ
ಅವರ್ನ ಬುಟ್ಟಿಗ್ ಬೀಳಿಸ್ಕೊಳತಿ

ಅವಗ ಕೈ ನೀಡತಿ
ಇವನ ನೀ ನೋಡತಿ
ನಿನ್ನ ನೀನು ಮಾರತಿ
ಒಳ್ಳೆ ಬೆಲೆ ಬೇಡತಿ

ಮೂವ್ ಯುವರ್ ಬಾಡಿ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಶೇಕ್ ಇಟ್ ಶೇಕ್ ಇಟ್ ಶೇಕ್ ಇಟ್ ಬೇಬೆ
ಯೇ ಯೆ

ಮನದನಿ ಆಲಿಸಿದವರು