Wednesday, July 7, 2010

ಜೇನು ಕೊಂದ ವೀರ


ಅವತ್ತು ಬಾಗಲಕೋಟ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನೇತಾಜಿ ಬ್ಲಾಕ್‌ನ ಹುಡುಗರಲ್ಲೆಲ್ಲ ಭಾರೀ ಸುದ್ದಿ. ಅಲ್ಲೇ ಒಂದು ರೂಮಿನ ಕಿಟಕಿಗೆ ಕಟ್ಟಿದ್ದ ದೊಡ್ಡದಾದ ಒಂದು ಹೆಜ್ಜೇನಿನ ಗೂಡನ್ನು ಇವತ್ತು ರಾತ್ರಿ ಓಡಿಸುತ್ತಾರಂತೆ. ಅದಕ್ಕಾಗಿ ಒಂದು ಘಂಟೆ ಕರೆಂಟ್ ತೆಗೆಯುತ್ತಾರಂತೆ... ಆಗ ಎಲ್ಲರೂ ರೂಮಿನಲ್ಲಿ ಕೂತಿರಬೇಕಂತೆ... ಹಾಗಂತೆ ಹೀಗಂತೆ... ಕೆಲವರಿಗೆ ಯಾಕೆ ಎಂದು ಗೊತ್ತಿಲ್ಲದೆಯೇ ಉತ್ಸಾಹ ತುಂಬಿ ತುಳುಕುತ್ತಿತ್ತು. ಜೇನು ತೆಗೆದರೆ ಆ ರೂಮಿನವರು ನಿರ್ಭಯವಾಗಿರಬಹುದು ಎಂಬ ಉದಾತ್ತ ಧೋರಣೆಯಿಂದಲ್ಲ. ಒಂದು ಘಂಟೆ ಕರೆಂಟ್ ಹೋಗುತ್ತದಲ್ಲಾ ಎನ್ನುವ ಖುಷಿ. ಛೆ ಪಾಪ ಅದು ಅದರ ಪಾಡಿಗೆ ಗೂಡು ಕಟ್ಟಿಕೊಂಡಿದೆ. ಅದನ್ಯಾಕೆ ಓಡಿಸಬೇಕು? ಕೆಲಸ ಮುಗಿದ ಮೇಲೆ ಅದೇ ತಾನಾಗಿ ಹಾರಿ ಹೋಗುತ್ತದೆ ಎಂದು ಈ ಕಾರ್ಯಕ್ರಮಕ್ಕೆ ಕಪ್ಪು ಧ್ವಜ ತೋರಿಸುತ್ತಿದ್ದ ಜೇನುಪ್ರೇಮಿಗಳೂ ಇದ್ದರು. ಒಟ್ಟಿನಲ್ಲಿ ಅವತ್ತು ರಾತ್ರಿ ಎಲ್ಲರಿಗೂ ಭರ್ಜರಿ ಮೋಜಂತೂ ಕಾದಿತ್ತು. ಕರೆಂಟು ಹೋಗುತ್ತದೆ ಎಂದು ಮೊದಲೇ ತಿಳಿಸಿದರೆ ಎಲ್ಲರ ತಲೆಯಲ್ಲೂ ಒಂದೊಂದು ಕಾರ್ಯಕ್ರಮಗಳು ಮೂಡಿಬಂದಿರುತ್ತದೆ. ಬಹಳಷ್ಟು ಮಂದಿಯ ತಲೆಯಲ್ಲಿ ನಿದ್ರೆ ಮಾಡುವ ಕಾರ್ಯಕ್ರಮ ಬಂದರೆ ಅದು ನಮ್ಮ ಶೈಕ್ಷಣಿಕ ಪದ್ಧತಿಯ ಸೋಲು ಎಂದೇ ಎನ್ನಬೇಕು. ನಾವೂ ಬೇರೆ ಏನೂ ತೋಚದೆ ಸುಮ್ಮನೆ ಮಲಗಿದರಾಯಿತು ಎಂದುಕೊಂಡಿದ್ದೆವು.

61ನೇ ರೂಮಿನವರೆಲ್ಲರೂ ಅವತ್ತು ಸಂಜೆ 62ರಲ್ಲೇ ಠಿಕಾಣಿ ಹೂಡಿದ್ದರು. ಊಟ ಮುಗಿಸಿದ ಕೂಡಲೇ ಅಧ್ಯಯನಕ್ಕೆ ಯಾರಿಗಾದರೂ ಮನಸ್ಸು ಬರುತ್ತದೆಯೇ? ಆ ಲಕ್ಚರರ್ ಹೀಗೆ. ಈ ಲಕ್ಚರರ್ ಹಾಗೆ ಎನ್ನುವ ಮಾತುಗಳು ಬರತೊಡಗಿದ್ದವು. ಅವರು ನಮ್ಮನ್ನು ಅಳೆದು ಇಂಟರ್ನಲ್ ಪರೀಕ್ಷೆಯಲ್ಲಿ 25ಕ್ಕೆ ಒಂದಂಕಿ ಕೊಟ್ಟ ತಪ್ಪಿಗೆ ನಾವು ಅವರಿಗೆ ಶಿಕ್ಷೆ ವಿಧಿಸುತ್ತಿದ್ದೆವು. ಅಷ್ಟರಲ್ಲಿ ಶುರುವಾಯಿತು ಗದ್ದಲ. "ಇನ್ ಸೊಲ್ಪ್ ಹೊತ್ನ್ಯಾಗ ಲೈಟ್ ಆರಿಸ್ತಾರಂತ್ರಲೇ... ಎಲ್ಲರೂ ರೂಮ್‌ನಾಗ ಬಾಗ್ಲಾ ಹಾಕ್ಕೊಂಡ್ ಕೂತ್ಗೋರಿ..." ಯಾರೋ ಒಬ್ಬ ಸಮಾಜ ಸೇವಕ ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದ್ದ. ಜೇನು ಕಟ್ಟಿದ್ದ ಜಾಗ ನಮ್ಮ ರೂಮಿನಿಂದ ಬಹಳ ಹತ್ತಿರದಲ್ಲೇ ಇತ್ತು. 61ಕ್ಕೆ ಇನ್ನೂ ಹತ್ತಿರವಾಗುತ್ತಿದ್ದುದರಿಂದ, ಆ ರೂಮಿನ ಎಲ್ಲರೂ ನಮ್ಮ ರೂಮಿಗೇ ಬಂದು ಕುಳಿತಿದ್ದರು. ಎಲ್ಲರೂ ರೂಮಿನಲ್ಲೇ ಕುಳಿತುಕೊಳ್ಳಿ ಎನ್ನುವ ಕೂಗು ಕೇಳಿದೊಡನೆಯೇ ಎಲ್ಲರೂ ಹೊರಗೆ ಬಂದು ನೋಡತೊಡಗಿದರು. ಎಷ್ಟೆಂದರೂ ಈಗಿನ ಕಾಲದ ಯುವಕರಲ್ಲವೇ! ಮಾಡಬೇಡಿ ಎಂದಿದ್ದನ್ನು ಮಾಡಿಯೇ ತೀರುವವರು. ಆಕಡೆ ಈಕಡೆ ಎಲ್ಲರ ಮುಖ ಮುಖ ನೋಡಿಕೊಂಡು ಸುಮ್ಮನಾದರು. ಜೇನು ಬಿಡಿಸುವವರ ಸುಳಿವೇ ಇಲ್ಲ.

ಕರೆಂಟ್ ಹೋಯಿತು. ಗಾಢಾಂಧಕಾರ! ಈಗ ಎಲ್ಲರಿಗೂ ಗಡಿಬಿಡಿ ಶುರುವಾಯಿತು. ಆಗ ರೂಮಿನಿಂದ ಹೊರಗಡೆ ಧೈರ್ಯವಾಗಿ ಓಡಾಡುತ್ತಿದ್ದ ವೀರರು ಈಗ ಹಾಸ್ಟೆಲ್ಲಿನ ಗೋಡೆಯನ್ನೆಲ್ಲಾ ಸವರುತ್ತಾ ಬಾಗಿಲು ಎಲ್ಲಿದೆ ಎಂದು ಹುಡುಕಾಡತೊಡಗಿದರು. "ಥೂ ಇವನಾಪ್ನ... ಬಾಗ್ಲಾ ಎಲ್ಲೋತೋ?" ಎನ್ನುವ ಕೂಗೂ ಕೇಳಿಸತೊಡಗಿತ್ತು. ನಮ್ಮ ರೂಮಿನ ಬುದ್ಧಿವಂತರೆಲ್ಲರೂ ಹೊರಗೆ ಹೋಗದೆ ಬಾಗಿಲ ಸಂದಿಯಿಂದಲೇ ಹೊರಗಡೆ ನೋಡುತ್ತಿದ್ದುದರಿಂದ ಯಾವುದೇ ತೊಂದರೆಯಾಗದೆ ಒಳಗೆ ಬಂದು ಸೇರಿಕೊಂಡು ಬಾಗಿಲು ಹಾಕಿಕೊಂಡೆವು. ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಶಾಂತವಾಯಿತು. ಬಾಗಿಲ ಸಂದಿಯಿಂದ ಒಂದು ಟಾರ್ಚ್ ಬೆಳಕು ಇಣುಕುತ್ತಿತ್ತು. ಹಾಸ್ಟೆಲ್ ಮ್ಯಾನೇಜರ್ ಕೆಲವು ಜನರೊಟ್ಟಿಗೆ ಬರುತ್ತಿರಬೇಕು ಎಂದುಕೊಂಡೆವು. ಅಂತೂ ಆ ಜೇನುಗೂಡು ಕಟ್ಟಿದ್ದ ರೂಮಿನ ಕಡೆ ಆ ಜನರ ಕಾಲಿನ ಸದ್ದು ಹೊರಟಿತ್ತು. ಹತ್ತು ನಿಮಿಷ ಏನೋ ಸಣ್ಣ ಪುಟ್ಟ ಶಬ್ದಗಳು ಕೇಳಿಬಂದವು. ಮತ್ತೆ ಸ್ಮಶಾನ ಮೌನ. ನಮಗಂತೂ ಏನು ನೆಡೆಯುತ್ತಿದೆ ಎಂದು ಊಹಿಸುವುದೇ ಕಷ್ಟವಾಯಿತು. ಅತ್ತಕಡೆ ಜೇನುಗಳನ್ನು ಓಡಿಸಿಯಾಯಿತು ಎಂದೂ ತಿಳಿದುಕೊಳ್ಳುವಂತಿಲ್ಲ, ಇತ್ತಕಡೆ ಇನ್ನೂ ಎಷ್ಟು ಹೊತ್ತು ಹೀಗಿರಬೇಕು ಎನ್ನುವ ಚಿಂತೆ. ಸ್ವಲ್ಪ ಹೊತ್ತಿನಲ್ಲೇ ಜೇನುಗಳ ಗುಂಯ್‌ಗುಡುವ ಶಬ್ದ ಕೇಳಲು ಶುರುವಾಯಿತು. ನಮ್ಮಲ್ಲಿ ಯಾರೂ ಅಷ್ಟೊಂದು ಜೇನಿನ ಶಬ್ದವನ್ನು ಕೇಳೇ ಇರಲಿಲ್ಲ. ಮೊದಲು ಇದು ಎಂತಹ ಶಬ್ದ ಎಂಬುದೇ ತಿಳಿಯಲಿಲ್ಲ. ಆದರೆ ಅಲ್ಲಿದ್ದುದು ಒಂದೇ ಸಾಧ್ಯತೆ. ಆದ್ದರಿಂದ ಇದು ಅದೇ ಎಂದು ನಿಶ್ಚಯಿಸಿದೆವು.
ಸ್ವಲ್ಪ ಹೊತ್ತಿನ ನಂತರ ಮತ್ತೆ ಮೌನ.

ಈಗ ನಮ್ಮ ಕುತೂಹಲ ಮತ್ತೂ ಎರಡುಪಟ್ಟಾಯಿತು. ಜೇನೆಲ್ಲಾ ಓಡಿಹೋದವೇ ಅಥವಾ ಒಮ್ಮೆ ಆಕಡೆ ಈಕಡೆ ಹಾರಿ ಪುನಃ ಹೋಗಿ ಅಲ್ಲೇ ಕುಳಿತವೇ ಎಂದು. ಜಗತ್ತಿನಲ್ಲಿ ದೇವರು ಎಷ್ಟು ಜನ ಬುದ್ಧಿವಂತರನ್ನು ಸೃಷ್ಟಿಸಿದ್ದಾನೋ ಅಷ್ಟೇ ಜನ ಅತೀಬುದ್ಧಿವಂತರನ್ನೂ ಸೃಷ್ಟಿಸಿದ್ದಾನೆ. ಮತ್ತು ಅಷ್ಟೇ ಆತುರಗಾರರನ್ನೂ ಸೃಷ್ಟಿಸಿದ್ದಾನೆ. ಆದರೆ ಈ ಅಮಿತ್ ಇವೆರಡರದರ ಸಮ್ಮಿಶ್ರಣ! ಅತೀ ಆತುರದ ಅತೀ ಬುದ್ಧಿವಂತ! ರೂಮಿನ ವೆಂಟಿಲೇಷನ್ ಇಂದ ಜೇನು ಒಳಗೆಬಂದುಬಿಡಬಹುದು ಎಂದು ಗ್ರಹಿಸಿದ್ದ ಆತ, ಆಗಲೇ ಅದಕ್ಕೆ ರಟ್ಟನ್ನು ಮುಚ್ಚಿ ಗಮ್ ಟೇಪ್ ಹಚ್ಚಿಬಿಟ್ಟಿದ್ದ! ಆದರೆ ಈ ಸ್ಮಶಾನ ಮೌನ ಅವನಿಗೆ ಬಹಳಹೊತ್ತು ಸಹಿಸಲಸಾಧ್ಯವಾಗಿತ್ತು. ಅಲ್ಲೇ ಎಲ್ಲೋ ಕೈಹಾಕಿ ಮೇಣದಬತ್ತಿ ಹುಡುಕಿ, ಹೊತ್ತಿಸಿಬಿಟ್ಟ. ಸಿಗರೇಟ್ ಸೇದದಿದ್ದರೂ ಲೈಟರ್ ಇಟ್ಟುಕೊಳ್ಳುವ ಅಪರೂಪದ ಅಭ್ಯಾಸ ಆತನದು. ಎಲ್ಲರೂ ಮುಖ ನೋಡಿಕೊಂಡೆವು. ಮುಖ ಒಂದನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಎಲ್ಲರೂ ಚಾದರವನ್ನು ಮೇಲಿನಿಂದ ಸಂಪೂರ್ಣವಾಗಿ ಹೊದ್ದುಕೊಂಡು ಗ್ರೀಕ್ ಕಾಲದವರಂತೆ ತೋರುತ್ತಿದ್ದೆವು. ಒಂದೆರಡು ನಿಮಿಷ ಕಳೆದರೂ ನಮ್ಮ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ!

ಅಷ್ಟರಲ್ಲಿ ಕೆಲವು ಜೇನು ಹುಳುಗಳ ಶಬ್ದ. ಎಲ್ಲಿ ಎಂದು ಹುಡುಕುತ್ತಿರುವಾಗಲೇ ಇಲ್ಲೇ ಎಲ್ಲೋ ನಮ್ಮ ಮುಂದೆ ಹಾರಾಡುತ್ತಿರುವಂತೆ ಕಂಡಿತು. ಮೊದಲೇ ಹೆದರಿದ್ದ ಸಂತ್ಯಾ "ಅಯ್ಯೋ... ಈ ಮ್ಯಾಣದ್ ಬತ್ತಿಂದಾಲೇ ಅವು ಬರಾಕತ್ತಾವ್ ಲೇ..." ಎಂದು ಚೀರುತ್ತಾ ಟೇಬಲ್ ಮೇಲಿಟ್ಟಿದ್ದ ಮೇಣದಬತ್ತಿಯನ್ನು ಕೈಯಿಂದ ಜಾಡಿಸಿಬಿಟ್ಟ. ಈಗ ಬೆಳಕೂ ಇಲ್ಲ, ಮೇಣದಬತ್ತಿಯೋ ಎಲ್ಲಿ ಹೋಯಿತೋ ಯಾರಿಗೂ ಗೊತ್ತಿಲ್ಲ. ಜೇನು ಹುಳುಗಳ ಹಾರಾಟ ಮಾತ್ರ ಕೇಳುತ್ತಿದೆ! ಎಲ್ಲರಿಗೂ ಹೆದರಿಕೆ ಪ್ರಾರಂಭವಾಯಿತು. ಮುಖವನ್ನೂ ಬಿಡದೆ ಮುಸುಕು ಹಾಕಿಕೊಂಡು ಮಲಗೇ ಬಿಟ್ಟರು. ಅಷ್ಟರಲ್ಲಿ ಬುದ್ಧಿವಂತ ಮಿರ್ಜಿ "ಮೊದಲು ಕ್ಯಾಂಡಲ್ ಹುಡಕ್ರಲೇ... ಒಂದೋ ಎರಡೋ ಬಂದಾವು ಅಷ್ಟೇ... ಹೊಡದು ಬಿಡೂಣು.." ಎಂದ. ಅಮಿತ್ ತನ್ನಲ್ಲಿದ್ದ ಲೈಟರ್ ಹಚ್ಚಿದ. ಎಲ್ಲರೂ ತಮ್ಮ ತಮ್ಮ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಸಜ್ಜಾದರು. ಎದುರಿಗೇ ಹಾರಾಡುತ್ತಿದ್ದ ಒಂದು ಜೇನು ಅಮಿತನ ಕಣ್ಣಿಗೆ ಬಿತ್ತು. ಚಪ್ಪಲಿಯಿಂದ ಅದಕ್ಕೆ ಹೊಡೆದ. ಅದರ ರಭಸಕ್ಕೆ ಅವನ ಕೈಲಿದ್ದ ಲೈಟರ್ ಕೂಡಾ ಕೈಜಾರಿ ಎಲ್ಲೋ ಹೋಗಿ ಬಿತ್ತು. ಮತ್ತೆ ಗಾಡಾಂಧಕಾರ. ಕತ್ತಲಿನಲ್ಲೇ ಮಾತುಗಳು ತೇಲಿಬಂದವು.
"ಸಾಯ್ಸಿದಿಯೇನ್ಲೇ..?"
"ಹೊಡದ್ನಿ... ಆದ್ರ ಸತ್ತೋ ಇಲ್ಲೋ ಗೊತ್ತಿಲ್ಲ...!"
"ಥೂ ನಿಮ್ಮವ್ನ್... ಒಂದ್ ಕೆಲ್ಸಾನೂ ನೆಟ್ಟಗ್ ಮಾಡಾಂಗಿಲ್ಲಲೋ..."
ನಮ್ಮೆಲ್ಲರಿಗೂ ನಡುಕ ಶುರುವಾಗುವುದೊಂದು ಬಾಕಿ! ಈ ಅಮಿತ ಹೀರೋ ಆಗಲಿಕ್ಕೆ ಹೋಗಿ, ಎಲ್ಲರನ್ನೂ ಆಪತ್ತಿಗೆ ಸಿಕ್ಕಿಸಿದ್ನಲ್ಲಪ್ಪಾ ಅಂದುಕೊಂಡು ಮತ್ತೆ ಮುಸುಕು ಹಾಕಿಕೊಂಡು ಮೂಲೆ ಹಿಡಿದು ಕೂತುಬಿಟ್ಟೆವು.

ಹಾಸ್ಟೆಲ್‍ನವರು ಕರೆಂಟು ಕೊಡುವಹೊತ್ತಿಗೆ ಇಪ್ಪತ್ತು ನಿಮಿಷಗಳೇ ಕಳೆದುಹೋಗಿದ್ದವು. ಕೋಣೆಯತುಂಬಾ ಹುಡುಕಿದ ಮೇಲೆ ಒಂದು ಮೂಲೆಯಲ್ಲಿ ಪೆಟ್ಟುತಿಂದು ದಾರಿಕಾಣದೆ ಬಿದ್ದಿದ್ದ ಒಂದು ಜೇನು ಕಣ್ಣಿಗೆ ಬಿತ್ತು. ಹೊರಗಡೆ ಪರಿಸ್ಥಿತಿ ಏನಾಗಿದೆ ಎಂದು ನೋಡಿದರೆ, ಗೂಡಿನ ಕೆಳಗೆ ಹೊಗೆ ಹಾಕಿ ಜೇನನ್ನು ಓಡಿಸುವ ಬದಲು, ಪೂರ್ತಿ ಜೇನುಗೂಡಿಗೇ ಯಾವುದೋ ಪೌಡರ್ ಎರಚಿಬಿಟ್ಟಿದ್ದರು. ಬೋರಿಕ್ ಪೌಡರ್ ಇರಬೇಕೆಂದು ಊಹಿಸಿದೆವು. ಬಹಳಷ್ಟು ಜೇನುಗಳು ಸತ್ತೇ ಹೋಗಿದ್ದವು. ಇನ್ನುಳಿದಷ್ಟು ಹಾರಿ ಹೋಗಿದ್ದವು. ಕೆಲವು ಅಲ್ಲೇ ಕೆಳಗೆ ಬಿದ್ದು ಒದ್ದಾಡುತ್ತಿದ್ದವು. ಅದನ್ನೇ ನೋಡಲು ಬಂದ ಒಬ್ಬ "ಅಯ್ಯೋ ಇವು ಕಚ್ಚಾಂಗಿಲ್ಲಲೇ.. ಸುಮ್ನ ಸಾಯ್ಸಿದ್ರು ನೋಡು..." ಎಂದನ್ನುತ್ತಾ ಹೊರನೆಡೆದ. ತುಂಬಾ ಬೇಸರವಾಯಿತು. ಅವು ಇದುವರೆಗೆ ಒಬ್ಬನಿಗೂ ಕಚ್ಚಿರಲಿಲ್ಲ. ಅವುಗಳ ಪಾಡಿಗೆ ಗೂಡುಕಟ್ಟಿಕೊಂಡಿದ್ದವು. ಓಡಿಸಲೇ ಬೇಕು ಎಂದು ನಿರ್ಧಾರ ಮಾಡಿದರೂ ಓಡಿಸುವ ವಿಧಾನ ಗೊತ್ತಿರುವವರನ್ನು ಕರೆತಂದು ಪ್ರಾಣಹಾನಿಯಾಗದಂತೆ ಓಡಿಸಬಹುದಿತ್ತು. ಹೀಗೆ ಎಲ್ಲ ಹುಳುಗಳನ್ನು ಸಾಯಿಸುವ ಅಗತ್ಯವಿರಲಿಲ್ಲ. ಒಂದು ಮಾತಂತು ನಿಜ, ಮನುಷ್ಯನಿದ್ದಲ್ಲಿ ಬೇರೆಯವುಗಳಿಗೆ ಅವಕಾಶವಿಲ್ಲ! ಹತ್ತಾರು ಜನರ ಕಾರಣವಿಲ್ಲದ ಹೆದರಿಕೆಗೆ ನೂರಾರು ಜೇನುಗಳ ಮಾರಣಹೋಮ ನೆಡೆದುಹೋಗಿತ್ತು.

11 comments:

Hooli said...

Mast bardi le sidda..Nenapu taaza aytu nod le..

Vijay Bagalad said...

katarnak.. hehehe poora incident nenapharittu..

C.A.Gundapi said...

good one sidda .. I enjoyed reading it.

Ameet K said...

ಮಸ್ತ್ ಬರದಿ ಲೇ ಸಿದ್ದ ... ಟಾಲೆಮಿ ಅಜ್ಜ ಬಗ್ಗೆ ಬಹಳ ನೆನಪು ಬಂತು ....

ದೀಪಕ said...

ಲೇಖನ/ಅನುಭವ ಚೆನ್ನಾಗಿದೆ. ಮನುಷ್ಯನಷ್ಟು ಕೆಟ್ಟ ಜೀವಿ ಇನ್ನೊ೦ದಿಲ್ಲ ಅನ್ನೋದು ಈ ರೀತಿಯಾದ ಪ್ರಸ೦ಗಗಳಿ೦ದ ಸ್ಪಷ್ಟವಾಗುತ್ತದೆ.
ಹೀಗೇ ಬ್ಲಾಗಿಸುತ್ತಿರು..

- ದೀಪಕ

Basu said...

Bahala chennagi baridi le....

aa incident mattomme nenapu madisidi..

adannau oduvag, nanu nijvagalu hinde nadeda samayakke hoda hage anubhava aytu..

sheetal Kumar said...

Bahal Chennagi baredidiri......
Basu Thanks for Sharing

ಸಿದ್ಧಾರ್ಥ said...

ಎಲ್ರಿಗೂ ತುಂಬು ಹೃದಯದ ಧನ್ಯವಾದಗಳು...

Karna Natikar said...

Sidda bareyo style mast ittu humor with heart , heege barita iru

ಸಿದ್ಧಾರ್ಥ said...

ಥ್ಯಾಂಕ್ಸ್ ರೀ... ಹೀಂಗ ಬಂದ್ ಹೋಗ್ತಾ ಇರ್ರಿ...

Durga Das said...

chalo bardidiri, ond tara suspense create maadiri :)

konege olle vishiyanu tilisidri :)
hostel jeevana yestu traasudaayakavo aste mooju daayaka .. :)