
ನಾವಿರುವುದು ಲಕ್ಚರರ್ಸ್ ಕಾಲನಿಯಲ್ಲಿ. ಕಾಲೇಜು ಮ್ಯಾನೇಜುಮೆಂಟಿನವರು ಕಟ್ಟಿಸಿಕೊಟ್ಟ ಮನೆಗಳಲ್ಲ ಅವು. ಕಲೇಜಿನ ಏಳೆಂಟು ಲಕ್ಚರರ್ಸ್, ಗೆಳೆಯರು ಎಂದೇ ಹೇಳಬೇಕು, ಒಟ್ಟಾಗಿ ಜಾಗ ಕೊಂಡು ಮನೆ ಕಟ್ಟಿಸಿಕೊಂಡ ಜಾಗ ಅದು. ಆದ್ದರಿಂದ ಸುತ್ತಮುತ್ತಲೂ ಎಲ್ಲರೂ ಕಾಲೇಜ್ ಲಕ್ಚರರ್ಸ್. ಆದರೆ ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಕ್ಕದ ಮನೆಯವರು ಯಾರಾದರೇನು? ಅವರಂತೂ ನಮಗೆ ಕಲಿಸಲು ಬರುತ್ತಿದ್ದ ಟೀಚರ್ ಅಲ್ಲವಲ್ಲಾ. ಎಲ್ಲರ ಮನೆಯ ಕಂಪೌಂಡುಗಳೂ ನಮಗೆ ಆಟದ ಮೈದಾನವೇ. ಅದರಲ್ಲೂ ನನ್ನ ಪಕ್ಕದ ಮನೆಯವರದೆಂದರೆ ತುಂಬಾ ಖುಷಿ. ಎಲ್ಲರ ಮನೆಯ ಹಿತ್ತಲಲ್ಲೂ ಐದಾರು ತೆಂಗಿನ ಮರಗಳು, ಮಾವು, ಸಪೋಟ, ದಾಳಿಂಬೆ, ಗುಲಾಬಿ, ತುಳಸಿ ಗಿಡಗಳಷ್ಟೇ ತುಂಬಿಕೊಂಡಿದ್ದರೆ, ಅವರ ಮನೆಯಲ್ಲಿ ಚಿತ್ರವಿಚಿತ್ರವಾದ ಹೂಗಿಡಗಳು ಓರಣವಾಗಿ ನೆಟ್ಟಿದ್ದರು. ಕೆಲಸಕ್ಕೆ ಬಾರದ ಹುಲ್ಲುಕಡ್ದಿಗಳನ್ನು ಹುಡುಕಿದರೂ ಸಿಗುತ್ತಿರಲಿಲ್ಲ. ಬಹಳ ಚೊಕ್ಕಟವಾಗಿತ್ತು. ಅವರು ಕಾಲೇಜಿನಲ್ಲಿ Maths ಕಲಿಸುತ್ತಿದ್ದರು. ನಮ್ಮ ಓಣಿಯ ಜನರೆಲ್ಲರೂ ಅವರನ್ನು ’ಮೇಡಮ್’ ಎಂದೇ ಕರೆಯುತ್ತಿದ್ದರು. ನಾವು ಬಹುಶಃ ಅದನ್ನೇ ಹೆಸರೆಂದು ಭಾವಿಸಿ ಮೇಡಮ್ ಆಂಟಿ ಎನ್ನುತ್ತಿದ್ದೆವು!
ಅವರು ಲಲಿತಾ ಹೆಬ್ಬಾರ್. ಐವತ್ತರ ವಯಸ್ಸಿನ ಸಾಧಾರಣ ಎತ್ತರದ ಹದವಾದ ಮೈಕಟ್ಟಿನ ಮಹಿಳೆ. ಮದುವೆ ಆಗಿಲ್ಲ. ಯಾರೋ ನಿನ್ನನ್ನ ಮದುವೆ ಮಾಡ್ಕೋತೀನಿ ಎಂದು ಮುಂದೆ ಬಂದಾಗ, ನನ್ನ ಸಾಕುವ ತಾಕತ್ತು ನಿನ್ನಲ್ಲಿದೆಯೇನೋ ಎಂದು ಹೇಳಿ ಓಡಿಸಿಬಿಟ್ಟಿದ್ದರಂತೆ! ಅವರದ್ದು ಬಹಳ ಶಿಸ್ತುಬದ್ಧ ಜೀವನ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರೂ ಯಾವ ವಸ್ತುಗಳೂ ಎಂದೂ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ನೋಡಿರಲಿಲ್ಲ. ಅಡುಗೆಯಲ್ಲಂತೂ ಎತ್ತಿದ ಕೈ. ಹೊಸ ಹೊಸ ರೀತಿಯ ಕಜ್ಜಾಯಗಳನ್ನು ಮಾಡಿ ನಮ್ಮನೆಗೆ ತಂದು ಕೊಡುತ್ತಿದ್ದರು. ಅದನ್ನು ತಿಂದುದು ಸಾಕಾಗದೆ ಅವರ ಮನೆಗೇ ನುಗ್ಗಿ ಬೇಡಿ ತಿನ್ನುತ್ತಿದ್ದೆ. ಆದರೂ ಅವರನ್ನು ನೋಡಿದಾಗಲೆಲ್ಲ ನನ್ನ ಅರಿವಿಗೇ ಬಾರದಂತೆ ಅವರ ಬಗ್ಗೆ ಏನೋ ಒಂದು ರೀತಿಯ ಭಯ ಶ್ರದ್ಧೆಗಳು ಹುಟ್ಟಿಬಿಡುತ್ತಿದ್ದವು. ಅವರು ಕಾಲೇಜಿನಲ್ಲಿ ಸಿಕ್ಕಪಟ್ಟೆ ಸ್ಟ್ರಿಕ್ಟ್ ಅಂತೆ ಎಂದು ಕೇಳಿದ್ದ ಮಾತುಗಳೂ ಅದಕ್ಕೆ ಪೋಷಣೆಯನ್ನು ನೀಡಿದ್ದವು. ಅಪರೂಪಕ್ಕೆ ಅವರೂ ಕೆಲವು ಹಾಡುಗಳನ್ನು ಕೇಳುತ್ತಿದ್ದರು. ಮನೆಯಲ್ಲಿ ಕಿಶೋರ್, ಮುಖೇಶ್ರ ಹಾಡುಗಳ ನೂರಾರು ಕೆಸೆಟ್ಗಳು ಬಿದ್ದಿದ್ದವು. ಕೆಲವುಸಲವಂತೂ ಅವುಗಳನ್ನು ಎಷ್ಟು ಗಟ್ಟಿಯಾಗಿ ಹಾಕುತ್ತಿದ್ದರೆಂದರೆ, ನಮ್ಮ ಮನೆಯಲ್ಲೇ ಕುಳಿತು ಎಲ್ಲ ಹಾಡುಗಳನ್ನು ಕೇಳಬಹುದಿತ್ತು. ಮನೆಯ ತುಂಬಾ ಪುಸ್ತಕಗಳು. ಹೊಸತು ಹಳತು ಎಲ್ಲಾ ಸೇರಿ ಮನೆಯಲ್ಲಿದ್ದ ಎಲ್ಲಾ ಬೀರುಗಳನ್ನೂ ತುಂಬಿ ಬಿಟ್ಟಿದ್ದವು. ಅವರು ಹೆಚ್ಚಾಗಿ ಓದುತ್ತಿದ್ದುದು ಇಂಗ್ಲೀಷ್ ಪುಸ್ತಕಗಳೇ.
ಹೈಸ್ಕೂಲ್ ಮುಗಿಸಿ ಕಾಲೇಜ್ ಸೇರಿದ ಮೇಲೆ ಅವರ ಬಗೆಗಿದ್ದ ಭಯ ಇನ್ನೂ ಜಾಸ್ತಿಯಾಯಿತು ಎಂದೇ ಹೇಳಬೇಕು. ನಮಗೆ Maths ಹೇಳಿಕೊಡಲು ಒಟ್ಟೂ ಮೂರು ಅಧ್ಯಾಪಕರುಗಳಿದ್ದರು. ಅವರಲ್ಲಿ ಇವರೂ ಒಬ್ಬರು. ಇವರು ಆಗ Maths ಡಿಪರ್ಟ್ಮೆಂಟಿನ Head ಕೂಡಾ ಆಗಿದ್ದರು. ಅವರ ಕಲಿಸುವ ಶೈಲಿಯಂತೂ ಎಲ್ಲರಿಗಿಂತಲೂ ಭಿನ್ನ. ಇಂಗ್ಲೀಷ್ ಭಾಷೆಯನ್ನು ಮಾತೃಭಾಷೆಯಷ್ಟೇ ಸುಲಭವಾಗಿ ಆಡಿಬಿಡುತ್ತಿದ್ದರು. ಕನ್ನಡ ಮಾಧ್ಯಮದಲ್ಲೇ ಕಲಿತು ಬಂದ ನಮ್ಮಂಥವರಿಗೆ ಒಂದೆರಡುಸಲ ಅವರು ಪ್ರಶ್ನೆ ಕೇಳಿದಾಗ ಪೀಕಲಾಟಕ್ಕೆ ಬಂದರೂ ನಾವಾಡುತ್ತಿದ್ದ ಹರಕು ಮುರುಕು ಇಂಗ್ಲೀಷಿಗೆ ಅಲ್ಲಿ ನಗುವವರು ಯಾರೂ ಇರುತ್ತಿರಲಿಲ್ಲ. ನಕ್ಕರೆ ಕ್ಲಾಸಿನಿಂದ ಹೊರಹಾಕಿಬಿಟ್ಟರೆ! ಸಮಯ ಪ್ರಜ್ಞೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ತಡವಾಗಿ ಕ್ಲಾಸಿಗೆ ಬಂದವರನ್ನು ಹೊರಹಾಕುತ್ತಿರಲಿಲ್ಲವಾದರೂ ಅವರಂತೂ ತಡವಾಗಿ ಬಂದದ್ದನ್ನು ನಾನು ಎಂದೂ ನೋಡೇ ಇಲ್ಲ. ಇವರ ಸಮಯಪ್ರಜ್ಞೆಯನ್ನು ನಮ್ಮ ಮನೆಯಲ್ಲಿ ಹೇಳಿದಾಗ ನನ್ನ ತಾಯಿ ಅವರು ಚಿಕ್ಕವರಿದ್ದಾಗ ನೆಡೆದ ಘಟನೆಯೊಂದನ್ನು ಹೇಳಿದರು. ಚಿಕ್ಕಂದಿನಲ್ಲಿ ಅವರು ಭರತನಾಟ್ಯದ ಕ್ಲಾಸಿಗೆ ಹೋಗುತ್ತಿದ್ದರಂತೆ. ಭರತನಾಟ್ಯದ ಗುರು ಮನೆಯ ಪಕ್ಕದಲ್ಲೇ ಒಂದು ಶಾಲೆಯಲ್ಲಿ ಪಾಠ ಹೇಳುತ್ತಿದ್ದನಂತೆ. ಇವರು ಮೊದಲು ಎಲ್ಲೋ ಬೇರೆ ಗುರುಗಳಲ್ಲಿ ಅಭ್ಯಾಸ ಮಾಡುತ್ತಿದ್ದವರು ಈಗ ಇವರಲ್ಲಿ ಬಂದಿದ್ದರಂತೆ. ಪಾಠ ನಾಳೆಯಿಂದ ೧೦ಕ್ಕೆ ಶುರುವಾಗುತ್ತದೆ ಎಂದು ಹೇಳಿಹೋದ ಗುರು ಮಾರನೇ ದಿನ ೧೦:೩೦ ಆದರೂ ಬರಲಿಲ್ಲವಂತೆ. ಹೀಗೇ ಮತ್ತೊಂದು ದಿನ ಕಳೆದಾದ ಮೇಲೆ, ಮೂರನೇ ದಿನ ೧೦:೩೦ ಆದರೂ ಗುರುಗಳು ಬಾರದುದನ್ನು ನೋಡಿ ಮನೆಗೆ ಹಿಂತಿರುಗಿದವರು ಮತ್ತೆ ಆಕಡೆ ತಲೆ ಹಾಕಲಿಲ್ಲವಂತೆ. ಈ ಘಟನೆ ನೆಡೆದಾಗ ಅವರು ಓದುತ್ತಿದ್ದುದು ಎಂಟನೇ ತರಗತಿ.
ಅವರಿಗೆ ಕಲಿಸುವಲ್ಲಿದ್ದ ಶ್ರದ್ಧೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಮ್ಮ ಪಿಯುಸಿ ಕ್ಲಾಸ್ಗಳು ಪ್ರಾರಂಭವಾದ ಮೊದಲನೇ ದಿನದಿಂದಲೇ ಅವರ ಎಕ್ಸ್ಟ್ರಾ ಕ್ಲಾಸ್ಗಳೂ ಪ್ರಾರಂಭವಾಗಿಬಿಡುತ್ತಿದ್ದವು. ಕಾಲೇಜಿನ ಬೇರೆ ಪ್ರೊಫೆಸರ್ಗಳೆಲ್ಲಾ ವಾರಕ್ಕೆ 20ರಿಂದ 25 ಗಂಟೆ ಪಾಠ ಹೇಳಿದರೆ ಇವರು ಕಮ್ಮಿಯೆಂದರೂ 35ಗಂಟೆಗಳ ಕಾಲ ಪಾಠ ಹೇಳುತ್ತಿದ್ದರು. ಎಕ್ಸ್ಟ್ರಾ ಕ್ಲಾಸುಗಳನ್ನು ಸೇರಿಸಿ. ನಮ್ಮ ಪಠ್ಯಕ್ರಮದಲ್ಲಿ set theory ಅನ್ನೋ ಒಂದು ಅಧ್ಯಾಯಕ್ಕೆ ಎರಡು ತಾಸುಗಳ ಅವಧಿಯನ್ನು PU Boardನವರು ನಿಶ್ಚಯಿಸಿದ್ದರು. ಆದರೆ ನಮಗೆ ಇವರು ತೆಗೆದುಕೊಂಡ ಅವಧಿಗಳು ಒಟ್ಟೂ 32. ಯಾವುದೇ ಅತಿಯಾದರೂ ಸರಿಯೆಲ್ಲವೆಂದಿಟ್ಟುಕೊಂಡರೂ ಇವರ ಕಲಿಸುವಿಕೆಯಲ್ಲಿ ಅತಿಯಾದುದು ಏನೂ ಇರಲಿಲ್ಲ. ಉಳಿದ ಅಧ್ಯಾಪಕರುಗಳು 3-4 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರೆ, ಇವರು 30-40 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರು. ಮತ್ತೆ ಅವಾವುದೂ ಸಿಲೇಬಸ್ ಬಿಟ್ಟು ಬೇರೆಯವುಗಳಲ್ಲ. ಇವರ ಇಂತಹ ಧೋರಣೆಯಿಂದಲೇ 100ಕ್ಕೆ 90ರಷ್ಟು ಹುಡುಗರು ಕ್ಲಾಸಿಗೇ ಬರುತ್ತಿರಲಿಲ್ಲ. ಅದೂ ಅಲ್ಲದೆ ಟ್ಯೂಷನ್ಗೆ ಹೋಗದ ಹುಡುಗನೇ ಇರದ ಈ ಕಾಲದಲ್ಲಿ, ಕಾಲೇಜಿಗೆ ಹೋಗುವ ಅವಷ್ಯಕತೆಯಾದರೂ ಏನು?
PUC ಎರಡನೇ ವರ್ಷದಲ್ಲಿ ನಾನು Mathsಗೆ ಟ್ಯೂಷನ್ಗೆ ಹೋಗುತ್ತಿದ್ದರೂ ಇವರಿಗೆ ಹೇಳಿರಲಿಲ್ಲ. ಇವರ ಕ್ಲಾಸ್ಗಳಿಗಂತೂ ತಪ್ಪದೇ ಹಾಜರಿರುತ್ತಿದ್ದೆ. ತಪ್ಪಿದ ದಿನ ನಮ್ಮ ಮನೆಗೇ ಬಂದು ಕಿವಿ ಹಿಂಡುತ್ತಿದ್ದರು! ಕೆಲವು ಹೊಸ ಹೊಸ ವಿದೇಶೀ ಲೇಖಕರ ಪುಸ್ತಕಗಳನ್ನು ತಂದು ಕೊಟ್ಟುಬಿಡುತ್ತಿದ್ದರು. ಅದರಲ್ಲಿನ ಪ್ರಾಬ್ಲಮ್ಗಳನ್ನು ಸಾಲ್ವ್ ಮಾಡಿ ಅವರಿಗೆ ತೋರಿಸಬೇಕಿತ್ತು. ಬಿಡಿಸಲು ಬಾರದ ಪ್ರಾಬ್ಲಮ್ಗಳನ್ನು ಅವರ ಹತ್ತಿರ ಕೂತು ತಿಳಿದುಕೊಳ್ಳಬೇಕಿತ್ತು. ನೂರರಲ್ಲಿ ಒಂದೋ ಎರಡೋ ಬಿಡಿಸುತ್ತಿದ್ದೆ! ಆದರೂ ಬೇಸರಿಸದೆ ಉಳಿದೆಲ್ಲವುಗಳನ್ನು ಹೇಳಿಕೊಡುತ್ತಿದ್ದರು. ಈ ವಿಷಯವನ್ನು ನನ್ನ ಕೆಲವು ಗೆಳೆಯರಿಗೂ ಹೇಳಿದ್ದೆ. ಒಮ್ಮೆ ನನ್ನ ಒಬ್ಬ ಗೆಳೆಯನಿಗೆ ಇವರು ಕ್ಲಾಸಿನಲ್ಲಿ ಬಿಡಿಸಿ ತೋರಿಸಿದ ಒಂದು ಸಮಸ್ಯೆ ಸರಿಬರಲಿಲ್ಲ. ಅವನು ಮನೆಯಲ್ಲಿ ಕುಳಿತು ಅದಕ್ಕೆ ಬೇರೆಯಾದ ಒಂದು ಉತ್ತರವನ್ನು ಕಂಡುಹಿಡಿದ. ಅದನ್ನು ಇವರಿಗೆ ಹೇಳಲು ಅವನಿಗೆ ಭಯ. ನನ್ನ ಹತ್ತಿರ ಬಂದು ಇದು ಹೀಗಲ್ಲ, ಹೀಗೆ ಎಂದು ತೋರಿಸಿದ. ನಾನು, ಇವತ್ತು ಅವರ ಮನೆಗೆ ಹೋಗೋಣ ಬಾ ಎಂದು ಅವನನ್ನು ಕರೆದುಕೊಂಡು ಹೋದೆ. ಅವರು ಈ ಸಮಸ್ಯೆಯನ್ನು ನನ್ನ ಗೆಳೆಯ ಬಿಡಿಸಿದುದನ್ನು ನೋಡಿ ಅದೂ ಅಲ್ಲದೆ ಅವರು ಮಾಡಿದ್ದ ತಪ್ಪನ್ನು ಇವನು ಗುರುತಿಸಿದ್ದುದನ್ನು ನೋಡಿ ಬಹಳವಾಗಿಯೇ ಸಂತಸಪಟ್ಟರು. ಸಿಟ್ಟು ಮಾಡಿಕೊಂಡುಬಿಡುವರೋ ಎಂಬುದು ಅವನ ಸಂಶಯವಾಗಿತ್ತು. ಅವನನ್ನು ಹೊಗಳಿ ಕಳಿಸಿಕೊಟ್ಟರು. ಮಾರನೇ ದಿನ ಕಾಲೇಜಿನಲ್ಲಿ ನಮಗೊಂದು ಆಷ್ಚರ್ಯ ಕಾದಿತ್ತು. BScಯಲ್ಲಿ ಓದುತ್ತಿದ್ದ ಎಲ್ಲಾ ತರಗತಿಯ ಹುಡುಗರೂ ನನ್ನ ಗೆಳೆಯನನ್ನು ಕೇಳಿಕೊಂಡು ಬರುತ್ತಿದ್ದರು. ನಮ್ಮ ಮೇಡಮ್ ಅವರಿಗೆಲ್ಲಾ ಹೋಗಿ, ನಾನು ನಿಮಗೆ PUC ಎರಡನೇ ವರ್ಷದಲ್ಲಿ ಒಂದು ಸಮಸ್ಯೆಯನ್ನು ತಪ್ಪಾಗಿ ಬಗೆಹರಿಸಿಬಿಟ್ಟಿದ್ದೆ. ಅದರ ಸರಿಯಾದ ಉತ್ತರ ಹೀಗಿದೆ. ಇದನ್ನು ನನಗೆ ತಿಳಿಸಿದವ ಇಂಥವನೊಬ್ಬ ಎಂದು ನನ್ನ ಗೆಳೆಯನ ಹೆಸರು ಹೇಳಿದ್ದರು. ಅಷ್ಟೇ ಅಲ್ಲದೆ ನಿಮಗೆ ನಿಮ್ಮ ಸೀನಿಯರ್ಗಳು ಸಿಕ್ಕರೆ ಅವರಿಗೂ ಈ ವಿಷಯವನ್ನು ಹೇಳಿ ಎಂದಿದ್ದರು! ತನ್ನ ಸೋಲಿನಲ್ಲಿ, ಶಿಷ್ಯನ ಗೆಲುವಿನಲ್ಲೇ ತನ್ನ ಗೆಲುವನ್ನು ಕಾಣುವ ಇಂಥ ಗುರು ಬಹಳ ದುರ್ಲಭ.
ಒಳ್ಳೆಯ ಹುಡುಗರಲ್ಲಿ ಎಷ್ಟು ಪ್ರೀತಿ ವಿಶ್ವಾಸಗಳನ್ನಿಟ್ಟಿದ್ದರೋ ಕೆಟ್ಟವರಲ್ಲಿ ಅಷ್ಟೇ ಅಸಡ್ಡೆಯಿತ್ತು. PUC ಮೊದಲನೇ ವರ್ಷದಲ್ಲಿ ನಪಾಸಾಗಿದ್ದ ಒಬ್ಬ highly influential ಹುಡುಗನೊಬ್ಬ ನಮ್ಮ ಪ್ರಿನ್ಸಿಪಾಲರಿಂದಲೇ ಪಾಸ್ ಮಾಡಿಸಲು ರೆಕಮೆಂಡೇಷನ್ ತಂದಿದ್ದ. ಖಡಾಖಂಡಿತವಾಗಿ ಪ್ರಿನ್ಸಿಪಾಲರಿಗೆ, ನಾನಿರುವ ತನಕ ಅವನು ಪಾಸಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದರು. ಮೇಲಕ್ಕೆ ಕಠೋರ ವ್ಯಕ್ತಿಯಂತೆ ಕಂಡರೂ ತುಂಬಾ ಸಹೃದಯಿ. ಅಷ್ಟೇ ಸರಳ ವ್ಯಕ್ತಿ. ಕೊನೆಕೊನೆಗೆ ಅತಿಯಾಗಿ ಹೇಳುತ್ತಾರೆಂಬ ಕಾರಣಕ್ಕೋ, ಇಂತಹ ಅಪಪ್ರಚಾರಗಳಿಗೆ ಬಲಿಯಾಗೋ ಅಥವಾ ಟ್ಯೂಷನ್ಗೆ ಹೋಗುತ್ತೇವೆಂಬ ಕಾರಣಕ್ಕೋ ಏನೊ ಅವರ ಕ್ಲಾಸಿಗೆ 20-30 ಜನರೂ ಕೂಡುತ್ತಿರಲಿಲ್ಲವಂತೆ. ವರ್ಷಗಟ್ಟಲೆ ಅಲುಗಾಡದಿದ್ದ ಅವರ ಧೃಢ ಮನಸ್ಥಿತಿ ಏತಕ್ಕಾದರೂ ಇಂತಹ ಹುಡುಗರಿಗೆ ಪಾಠ ಹೇಳಿಕೊಡಲಿ ಎಂದು ನೊಂದಿತೋ ಏನೊ, ಅವರೂ voluntary retirement ತೆಗೆದುಕೊಂಡುಬಿಟ್ಟರು. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ "ನಾನು ಭಾಷಣ ಮಾಡುವುದಿಲ್ಲ, ಹಾಗಾದರಷ್ಟೇ ಕಾರ್ಯಕ್ರಮಕ್ಕೆ ಬರುತ್ತೇನೆ. ಇಲ್ಲವಾದರೆ ಬರುವುದೇ ಇಲ್ಲ" ಎಂದು ಕರಾರು ಹಾಕಿದ್ದರಂತೆ. ಗಣಿತದ ಖಜಾನೆಯೇ ಆಗಿದ್ದ ಅವರು ಮುಂದಿನ ಪೀಳಿಗೆಯ ಹುಡುಗರಿಗೆ ನಿಲುಕದ ನಿಧಿಸಂಪತ್ತಿನಂತೆಯೇ ಉಳಿದುಬಿಟ್ಟಿದ್ದಾರೆ.
ಈಗಂತೂ ಕೆಲಸವಿಲ್ಲವೆಂಬ ಕಾರಣಕ್ಕೇ ಇರಬೇಕು, ಅವರ ಹಿತ್ತಿಲಲ್ಲಿ ಇನ್ನೂ ಹೊಸ ಹೊಸ ಬಗೆಯ ಹೂಗಿಡಗಳು ರಾರಾಜಿಸುತ್ತಿವೆ. ನಮ್ಮನೆಗಂತೂ ಹೊಸ ಹೊಸ ಕಜ್ಜಾಯಗಳ ಸುರಿಮಳೆಯೇ ಆಗುತ್ತಿದೆ. ನಾನು ಮಾತ್ರ ಅದರ ಸವಿ ಸವಿಯಲಾರದವನಾಗಿ ಬೆಂಗಳೂರಿನಲ್ಲಿ ಕುಳಿತಿದ್ದೇನೆ.

2 comments:
ನಮಸ್ಕಾರ/\:)
ನಿನ್ನ ಗುರುಗಳ ಕಿರು ಪರಿಚಯವನ್ನು ಲೇಖನದ ಮುಖಾ೦ತರ ಮಾಡಿಕೊಟ್ಟ ಈ ಪ್ರಯತ್ನ ಶ್ಲಾಘನೀಯವಾದದ್ದು. ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯರ ಬಾ೦ಧವ್ಯ ಕಡಿಮೆಯಾಗುತ್ತಿರುವುದು ಎಲ್ಲೆಡೆ ಕ೦ಡು ಬರುತ್ತಿದೆ.ಈ ಸ೦ದರ್ಭದಲ್ಲಿ ಹೊರಹೊಮ್ಮಿದ ಈ ಲೇಖನ ಈ ಬಾ೦ಧವ್ಯಕ್ಕೆ ಹೊಸ ಆಯಾಮ ಕೊಡುವುದರಲ್ಲಿ ಆಶ್ಚರ್ಯವಿಲ್ಲ.
ಸೊಗಸಾದ ಅರ್ಥಪೂರ್ಣ ಲೇಖನ ಕೊಟ್ಟದ್ದಕ್ಕೆ ಧನ್ಯವಾದಗಳು.
ಇ೦ತಿ,
ದೀಪಕ
@ದೀಪಕ
ಅನಿಸಿಕೆಗಳಿಗೆ ಧನ್ಯವಾದಗಳು.
Post a Comment