Wednesday, January 23, 2008

ಬದುಕೆಂಬ ಗಣಿತವನ್ನು ಬಿಡಿಸಿದವರು


ನಾವಿರುವುದು ಲಕ್ಚರರ್ಸ್ ಕಾಲನಿಯಲ್ಲಿ. ಕಾಲೇಜು ಮ್ಯಾನೇಜುಮೆಂಟಿನವರು ಕಟ್ಟಿಸಿಕೊಟ್ಟ ಮನೆಗಳಲ್ಲ ಅವು. ಕಲೇಜಿನ ಏಳೆಂಟು ಲಕ್ಚರರ್ಸ್, ಗೆಳೆಯರು ಎಂದೇ ಹೇಳಬೇಕು, ಒಟ್ಟಾಗಿ ಜಾಗ ಕೊಂಡು ಮನೆ ಕಟ್ಟಿಸಿಕೊಂಡ ಜಾಗ ಅದು. ಆದ್ದರಿಂದ ಸುತ್ತಮುತ್ತಲೂ ಎಲ್ಲರೂ ಕಾಲೇಜ್ ಲಕ್ಚರರ್ಸ್. ಆದರೆ ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಕ್ಕದ ಮನೆಯವರು ಯಾರಾದರೇನು? ಅವರಂತೂ ನಮಗೆ ಕಲಿಸಲು ಬರುತ್ತಿದ್ದ ಟೀಚರ್ ಅಲ್ಲವಲ್ಲಾ. ಎಲ್ಲರ ಮನೆಯ ಕಂಪೌಂಡುಗಳೂ ನಮಗೆ ಆಟದ ಮೈದಾನವೇ. ಅದರಲ್ಲೂ ನನ್ನ ಪಕ್ಕದ ಮನೆಯವರದೆಂದರೆ ತುಂಬಾ ಖುಷಿ. ಎಲ್ಲರ ಮನೆಯ ಹಿತ್ತಲಲ್ಲೂ ಐದಾರು ತೆಂಗಿನ ಮರಗಳು, ಮಾವು, ಸಪೋಟ, ದಾಳಿಂಬೆ, ಗುಲಾಬಿ, ತುಳಸಿ ಗಿಡಗಳಷ್ಟೇ ತುಂಬಿಕೊಂಡಿದ್ದರೆ, ಅವರ ಮನೆಯಲ್ಲಿ ಚಿತ್ರವಿಚಿತ್ರವಾದ ಹೂಗಿಡಗಳು ಓರಣವಾಗಿ ನೆಟ್ಟಿದ್ದರು. ಕೆಲಸಕ್ಕೆ ಬಾರದ ಹುಲ್ಲುಕಡ್ದಿಗಳನ್ನು ಹುಡುಕಿದರೂ ಸಿಗುತ್ತಿರಲಿಲ್ಲ. ಬಹಳ ಚೊಕ್ಕಟವಾಗಿತ್ತು. ಅವರು ಕಾಲೇಜಿನಲ್ಲಿ Maths ಕಲಿಸುತ್ತಿದ್ದರು. ನಮ್ಮ ಓಣಿಯ ಜನರೆಲ್ಲರೂ ಅವರನ್ನು ’ಮೇಡಮ್’ ಎಂದೇ ಕರೆಯುತ್ತಿದ್ದರು. ನಾವು ಬಹುಶಃ ಅದನ್ನೇ ಹೆಸರೆಂದು ಭಾವಿಸಿ ಮೇಡಮ್ ಆಂಟಿ ಎನ್ನುತ್ತಿದ್ದೆವು!


ಅವರು ಲಲಿತಾ ಹೆಬ್ಬಾರ್. ಐವತ್ತರ ವಯಸ್ಸಿನ ಸಾಧಾರಣ ಎತ್ತರದ ಹದವಾದ ಮೈಕಟ್ಟಿನ ಮಹಿಳೆ. ಮದುವೆ ಆಗಿಲ್ಲ. ಯಾರೋ ನಿನ್ನನ್ನ ಮದುವೆ ಮಾಡ್ಕೋತೀನಿ ಎಂದು ಮುಂದೆ ಬಂದಾಗ, ನನ್ನ ಸಾಕುವ ತಾಕತ್ತು ನಿನ್ನಲ್ಲಿದೆಯೇನೋ ಎಂದು ಹೇಳಿ ಓಡಿಸಿಬಿಟ್ಟಿದ್ದರಂತೆ! ಅವರದ್ದು ಬಹಳ ಶಿಸ್ತುಬದ್ಧ ಜೀವನ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರೂ ಯಾವ ವಸ್ತುಗಳೂ ಎಂದೂ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ನೋಡಿರಲಿಲ್ಲ. ಅಡುಗೆಯಲ್ಲಂತೂ ಎತ್ತಿದ ಕೈ. ಹೊಸ ಹೊಸ ರೀತಿಯ ಕಜ್ಜಾಯಗಳನ್ನು ಮಾಡಿ ನಮ್ಮನೆಗೆ ತಂದು ಕೊಡುತ್ತಿದ್ದರು. ಅದನ್ನು ತಿಂದುದು ಸಾಕಾಗದೆ ಅವರ ಮನೆಗೇ ನುಗ್ಗಿ ಬೇಡಿ ತಿನ್ನುತ್ತಿದ್ದೆ. ಆದರೂ ಅವರನ್ನು ನೋಡಿದಾಗಲೆಲ್ಲ ನನ್ನ ಅರಿವಿಗೇ ಬಾರದಂತೆ ಅವರ ಬಗ್ಗೆ ಏನೋ ಒಂದು ರೀತಿಯ ಭಯ ಶ್ರದ್ಧೆಗಳು ಹುಟ್ಟಿಬಿಡುತ್ತಿದ್ದವು. ಅವರು ಕಾಲೇಜಿನಲ್ಲಿ ಸಿಕ್ಕಪಟ್ಟೆ ಸ್ಟ್ರಿಕ್ಟ್ ಅಂತೆ ಎಂದು ಕೇಳಿದ್ದ ಮಾತುಗಳೂ ಅದಕ್ಕೆ ಪೋಷಣೆಯನ್ನು ನೀಡಿದ್ದವು. ಅಪರೂಪಕ್ಕೆ ಅವರೂ ಕೆಲವು ಹಾಡುಗಳನ್ನು ಕೇಳುತ್ತಿದ್ದರು. ಮನೆಯಲ್ಲಿ ಕಿಶೋರ್, ಮುಖೇಶ್‌ರ ಹಾಡುಗಳ ನೂರಾರು ಕೆಸೆಟ್‌ಗಳು ಬಿದ್ದಿದ್ದವು. ಕೆಲವುಸಲವಂತೂ ಅವುಗಳನ್ನು ಎಷ್ಟು ಗಟ್ಟಿಯಾಗಿ ಹಾಕುತ್ತಿದ್ದರೆಂದರೆ, ನಮ್ಮ ಮನೆಯಲ್ಲೇ ಕುಳಿತು ಎಲ್ಲ ಹಾಡುಗಳನ್ನು ಕೇಳಬಹುದಿತ್ತು. ಮನೆಯ ತುಂಬಾ ಪುಸ್ತಕಗಳು. ಹೊಸತು ಹಳತು ಎಲ್ಲಾ ಸೇರಿ ಮನೆಯಲ್ಲಿದ್ದ ಎಲ್ಲಾ ಬೀರುಗಳನ್ನೂ ತುಂಬಿ ಬಿಟ್ಟಿದ್ದವು. ಅವರು ಹೆಚ್ಚಾಗಿ ಓದುತ್ತಿದ್ದುದು ಇಂಗ್ಲೀಷ್ ಪುಸ್ತಕಗಳೇ.


ಹೈಸ್ಕೂಲ್ ಮುಗಿಸಿ ಕಾಲೇಜ್ ಸೇರಿದ ಮೇಲೆ ಅವರ ಬಗೆಗಿದ್ದ ಭಯ ಇನ್ನೂ ಜಾಸ್ತಿಯಾಯಿತು ಎಂದೇ ಹೇಳಬೇಕು. ನಮಗೆ Maths ಹೇಳಿಕೊಡಲು ಒಟ್ಟೂ ಮೂರು ಅಧ್ಯಾಪಕರುಗಳಿದ್ದರು. ಅವರಲ್ಲಿ ಇವರೂ ಒಬ್ಬರು. ಇವರು ಆಗ Maths ಡಿಪರ್ಟ್‌ಮೆಂಟಿನ Head ಕೂಡಾ ಆಗಿದ್ದರು. ಅವರ ಕಲಿಸುವ ಶೈಲಿಯಂತೂ ಎಲ್ಲರಿಗಿಂತಲೂ ಭಿನ್ನ. ಇಂಗ್ಲೀಷ್ ಭಾಷೆಯನ್ನು ಮಾತೃಭಾಷೆಯಷ್ಟೇ ಸುಲಭವಾಗಿ ಆಡಿಬಿಡುತ್ತಿದ್ದರು. ಕನ್ನಡ ಮಾಧ್ಯಮದಲ್ಲೇ ಕಲಿತು ಬಂದ ನಮ್ಮಂಥವರಿಗೆ ಒಂದೆರಡುಸಲ ಅವರು ಪ್ರಶ್ನೆ ಕೇಳಿದಾಗ ಪೀಕಲಾಟಕ್ಕೆ ಬಂದರೂ ನಾವಾಡುತ್ತಿದ್ದ ಹರಕು ಮುರುಕು ಇಂಗ್ಲೀಷಿಗೆ ಅಲ್ಲಿ ನಗುವವರು ಯಾರೂ ಇರುತ್ತಿರಲಿಲ್ಲ. ನಕ್ಕರೆ ಕ್ಲಾಸಿನಿಂದ ಹೊರಹಾಕಿಬಿಟ್ಟರೆ! ಸಮಯ ಪ್ರಜ್ಞೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ತಡವಾಗಿ ಕ್ಲಾಸಿಗೆ ಬಂದವರನ್ನು ಹೊರಹಾಕುತ್ತಿರಲಿಲ್ಲವಾದರೂ ಅವರಂತೂ ತಡವಾಗಿ ಬಂದದ್ದನ್ನು ನಾನು ಎಂದೂ ನೋಡೇ ಇಲ್ಲ. ಇವರ ಸಮಯಪ್ರಜ್ಞೆಯನ್ನು ನಮ್ಮ ಮನೆಯಲ್ಲಿ ಹೇಳಿದಾಗ ನನ್ನ ತಾಯಿ ಅವರು ಚಿಕ್ಕವರಿದ್ದಾಗ ನೆಡೆದ ಘಟನೆಯೊಂದನ್ನು ಹೇಳಿದರು. ಚಿಕ್ಕಂದಿನಲ್ಲಿ ಅವರು ಭರತನಾಟ್ಯದ ಕ್ಲಾಸಿಗೆ ಹೋಗುತ್ತಿದ್ದರಂತೆ. ಭರತನಾಟ್ಯದ ಗುರು ಮನೆಯ ಪಕ್ಕದಲ್ಲೇ ಒಂದು ಶಾಲೆಯಲ್ಲಿ ಪಾಠ ಹೇಳುತ್ತಿದ್ದನಂತೆ. ಇವರು ಮೊದಲು ಎಲ್ಲೋ ಬೇರೆ ಗುರುಗಳಲ್ಲಿ ಅಭ್ಯಾಸ ಮಾಡುತ್ತಿದ್ದವರು ಈಗ ಇವರಲ್ಲಿ ಬಂದಿದ್ದರಂತೆ. ಪಾಠ ನಾಳೆಯಿಂದ ೧೦ಕ್ಕೆ ಶುರುವಾಗುತ್ತದೆ ಎಂದು ಹೇಳಿಹೋದ ಗುರು ಮಾರನೇ ದಿನ ೧೦:೩೦ ಆದರೂ ಬರಲಿಲ್ಲವಂತೆ. ಹೀಗೇ ಮತ್ತೊಂದು ದಿನ ಕಳೆದಾದ ಮೇಲೆ, ಮೂರನೇ ದಿನ ೧೦:೩೦ ಆದರೂ ಗುರುಗಳು ಬಾರದುದನ್ನು ನೋಡಿ ಮನೆಗೆ ಹಿಂತಿರುಗಿದವರು ಮತ್ತೆ ಆಕಡೆ ತಲೆ ಹಾಕಲಿಲ್ಲವಂತೆ. ಈ ಘಟನೆ ನೆಡೆದಾಗ ಅವರು ಓದುತ್ತಿದ್ದುದು ಎಂಟನೇ ತರಗತಿ.


ಅವರಿಗೆ ಕಲಿಸುವಲ್ಲಿದ್ದ ಶ್ರದ್ಧೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಮ್ಮ ಪಿಯುಸಿ ಕ್ಲಾಸ್‌ಗಳು ಪ್ರಾರಂಭವಾದ ಮೊದಲನೇ ದಿನದಿಂದಲೇ ಅವರ ಎಕ್ಸ್‌ಟ್ರಾ ಕ್ಲಾಸ್‌ಗಳೂ ಪ್ರಾರಂಭವಾಗಿಬಿಡುತ್ತಿದ್ದವು. ಕಾಲೇಜಿನ ಬೇರೆ ಪ್ರೊಫೆಸರ್‌ಗಳೆಲ್ಲಾ ವಾರಕ್ಕೆ 20ರಿಂದ 25 ಗಂಟೆ ಪಾಠ ಹೇಳಿದರೆ ಇವರು ಕಮ್ಮಿಯೆಂದರೂ 35ಗಂಟೆಗಳ ಕಾಲ ಪಾಠ ಹೇಳುತ್ತಿದ್ದರು. ಎಕ್ಸ್‌ಟ್ರಾ ಕ್ಲಾಸುಗಳನ್ನು ಸೇರಿಸಿ. ನಮ್ಮ ಪಠ್ಯಕ್ರಮದಲ್ಲಿ set theory ಅನ್ನೋ ಒಂದು ಅಧ್ಯಾಯಕ್ಕೆ ಎರಡು ತಾಸುಗಳ ಅವಧಿಯನ್ನು PU Boardನವರು ನಿಶ್ಚಯಿಸಿದ್ದರು. ಆದರೆ ನಮಗೆ ಇವರು ತೆಗೆದುಕೊಂಡ ಅವಧಿಗಳು ಒಟ್ಟೂ 32. ಯಾವುದೇ ಅತಿಯಾದರೂ ಸರಿಯೆಲ್ಲವೆಂದಿಟ್ಟುಕೊಂಡರೂ ಇವರ ಕಲಿಸುವಿಕೆಯಲ್ಲಿ ಅತಿಯಾದುದು ಏನೂ ಇರಲಿಲ್ಲ. ಉಳಿದ ಅಧ್ಯಾಪಕರುಗಳು 3-4 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರೆ, ಇವರು 30-40 ಬಗೆಯ ಸಮಸ್ಯೆಗಳನ್ನು ಬಿಡಿಸುತ್ತಿದ್ದರು. ಮತ್ತೆ ಅವಾವುದೂ ಸಿಲೇಬಸ್ ಬಿಟ್ಟು ಬೇರೆಯವುಗಳಲ್ಲ. ಇವರ ಇಂತಹ ಧೋರಣೆಯಿಂದಲೇ 100ಕ್ಕೆ 90ರಷ್ಟು ಹುಡುಗರು ಕ್ಲಾಸಿಗೇ ಬರುತ್ತಿರಲಿಲ್ಲ. ಅದೂ ಅಲ್ಲದೆ ಟ್ಯೂಷನ್‌ಗೆ ಹೋಗದ ಹುಡುಗನೇ ಇರದ ಈ ಕಾಲದಲ್ಲಿ, ಕಾಲೇಜಿಗೆ ಹೋಗುವ ಅವಷ್ಯಕತೆಯಾದರೂ ಏನು?


PUC ಎರಡನೇ ವರ್ಷದಲ್ಲಿ ನಾನು Mathsಗೆ ಟ್ಯೂಷನ್‌ಗೆ ಹೋಗುತ್ತಿದ್ದರೂ ಇವರಿಗೆ ಹೇಳಿರಲಿಲ್ಲ. ಇವರ ಕ್ಲಾಸ್‌ಗಳಿಗಂತೂ ತಪ್ಪದೇ ಹಾಜರಿರುತ್ತಿದ್ದೆ. ತಪ್ಪಿದ ದಿನ ನಮ್ಮ ಮನೆಗೇ ಬಂದು ಕಿವಿ ಹಿಂಡುತ್ತಿದ್ದರು! ಕೆಲವು ಹೊಸ ಹೊಸ ವಿದೇಶೀ ಲೇಖಕರ ಪುಸ್ತಕಗಳನ್ನು ತಂದು ಕೊಟ್ಟುಬಿಡುತ್ತಿದ್ದರು. ಅದರಲ್ಲಿನ ಪ್ರಾಬ್ಲಮ್‌ಗಳನ್ನು ಸಾಲ್ವ್ ಮಾಡಿ ಅವರಿಗೆ ತೋರಿಸಬೇಕಿತ್ತು. ಬಿಡಿಸಲು ಬಾರದ ಪ್ರಾಬ್ಲಮ್‌ಗಳನ್ನು ಅವರ ಹತ್ತಿರ ಕೂತು ತಿಳಿದುಕೊಳ್ಳಬೇಕಿತ್ತು. ನೂರರಲ್ಲಿ ಒಂದೋ ಎರಡೋ ಬಿಡಿಸುತ್ತಿದ್ದೆ! ಆದರೂ ಬೇಸರಿಸದೆ ಉಳಿದೆಲ್ಲವುಗಳನ್ನು ಹೇಳಿಕೊಡುತ್ತಿದ್ದರು. ಈ ವಿಷಯವನ್ನು ನನ್ನ ಕೆಲವು ಗೆಳೆಯರಿಗೂ ಹೇಳಿದ್ದೆ. ಒಮ್ಮೆ ನನ್ನ ಒಬ್ಬ ಗೆಳೆಯನಿಗೆ ಇವರು ಕ್ಲಾಸಿನಲ್ಲಿ ಬಿಡಿಸಿ ತೋರಿಸಿದ ಒಂದು ಸಮಸ್ಯೆ ಸರಿಬರಲಿಲ್ಲ. ಅವನು ಮನೆಯಲ್ಲಿ ಕುಳಿತು ಅದಕ್ಕೆ ಬೇರೆಯಾದ ಒಂದು ಉತ್ತರವನ್ನು ಕಂಡುಹಿಡಿದ. ಅದನ್ನು ಇವರಿಗೆ ಹೇಳಲು ಅವನಿಗೆ ಭಯ. ನನ್ನ ಹತ್ತಿರ ಬಂದು ಇದು ಹೀಗಲ್ಲ, ಹೀಗೆ ಎಂದು ತೋರಿಸಿದ. ನಾನು, ಇವತ್ತು ಅವರ ಮನೆಗೆ ಹೋಗೋಣ ಬಾ ಎಂದು ಅವನನ್ನು ಕರೆದುಕೊಂಡು ಹೋದೆ. ಅವರು ಈ ಸಮಸ್ಯೆಯನ್ನು ನನ್ನ ಗೆಳೆಯ ಬಿಡಿಸಿದುದನ್ನು ನೋಡಿ ಅದೂ ಅಲ್ಲದೆ ಅವರು ಮಾಡಿದ್ದ ತಪ್ಪನ್ನು ಇವನು ಗುರುತಿಸಿದ್ದುದನ್ನು ನೋಡಿ ಬಹಳವಾಗಿಯೇ ಸಂತಸಪಟ್ಟರು. ಸಿಟ್ಟು ಮಾಡಿಕೊಂಡುಬಿಡುವರೋ ಎಂಬುದು ಅವನ ಸಂಶಯವಾಗಿತ್ತು. ಅವನನ್ನು ಹೊಗಳಿ ಕಳಿಸಿಕೊಟ್ಟರು. ಮಾರನೇ ದಿನ ಕಾಲೇಜಿನಲ್ಲಿ ನಮಗೊಂದು ಆಷ್ಚರ್ಯ ಕಾದಿತ್ತು. BScಯಲ್ಲಿ ಓದುತ್ತಿದ್ದ ಎಲ್ಲಾ ತರಗತಿಯ ಹುಡುಗರೂ ನನ್ನ ಗೆಳೆಯನನ್ನು ಕೇಳಿಕೊಂಡು ಬರುತ್ತಿದ್ದರು. ನಮ್ಮ ಮೇಡಮ್ ಅವರಿಗೆಲ್ಲಾ ಹೋಗಿ, ನಾನು ನಿಮಗೆ PUC ಎರಡನೇ ವರ್ಷದಲ್ಲಿ ಒಂದು ಸಮಸ್ಯೆಯನ್ನು ತಪ್ಪಾಗಿ ಬಗೆಹರಿಸಿಬಿಟ್ಟಿದ್ದೆ. ಅದರ ಸರಿಯಾದ ಉತ್ತರ ಹೀಗಿದೆ. ಇದನ್ನು ನನಗೆ ತಿಳಿಸಿದವ ಇಂಥವನೊಬ್ಬ ಎಂದು ನನ್ನ ಗೆಳೆಯನ ಹೆಸರು ಹೇಳಿದ್ದರು. ಅಷ್ಟೇ ಅಲ್ಲದೆ ನಿಮಗೆ ನಿಮ್ಮ ಸೀನಿಯರ್‌ಗಳು ಸಿಕ್ಕರೆ ಅವರಿಗೂ ಈ ವಿಷಯವನ್ನು ಹೇಳಿ ಎಂದಿದ್ದರು! ತನ್ನ ಸೋಲಿನಲ್ಲಿ, ಶಿಷ್ಯನ ಗೆಲುವಿನಲ್ಲೇ ತನ್ನ ಗೆಲುವನ್ನು ಕಾಣುವ ಇಂಥ ಗುರು ಬಹಳ ದುರ್ಲಭ.


ಒಳ್ಳೆಯ ಹುಡುಗರಲ್ಲಿ ಎಷ್ಟು ಪ್ರೀತಿ ವಿಶ್ವಾಸಗಳನ್ನಿಟ್ಟಿದ್ದರೋ ಕೆಟ್ಟವರಲ್ಲಿ ಅಷ್ಟೇ ಅಸಡ್ಡೆಯಿತ್ತು. PUC ಮೊದಲನೇ ವರ್ಷದಲ್ಲಿ ನಪಾಸಾಗಿದ್ದ ಒಬ್ಬ highly influential ಹುಡುಗನೊಬ್ಬ ನಮ್ಮ ಪ್ರಿನ್ಸಿಪಾಲರಿಂದಲೇ ಪಾಸ್ ಮಾಡಿಸಲು ರೆಕಮೆಂಡೇಷನ್ ತಂದಿದ್ದ. ಖಡಾಖಂಡಿತವಾಗಿ ಪ್ರಿನ್ಸಿಪಾಲರಿಗೆ, ನಾನಿರುವ ತನಕ ಅವನು ಪಾಸಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದರು. ಮೇಲಕ್ಕೆ ಕಠೋರ ವ್ಯಕ್ತಿಯಂತೆ ಕಂಡರೂ ತುಂಬಾ ಸಹೃದಯಿ. ಅಷ್ಟೇ ಸರಳ ವ್ಯಕ್ತಿ. ಕೊನೆಕೊನೆಗೆ ಅತಿಯಾಗಿ ಹೇಳುತ್ತಾರೆಂಬ ಕಾರಣಕ್ಕೋ, ಇಂತಹ ಅಪಪ್ರಚಾರಗಳಿಗೆ ಬಲಿಯಾಗೋ ಅಥವಾ ಟ್ಯೂಷನ್‌ಗೆ ಹೋಗುತ್ತೇವೆಂಬ ಕಾರಣಕ್ಕೋ ಏನೊ ಅವರ ಕ್ಲಾಸಿಗೆ 20-30 ಜನರೂ ಕೂಡುತ್ತಿರಲಿಲ್ಲವಂತೆ. ವರ್ಷಗಟ್ಟಲೆ ಅಲುಗಾಡದಿದ್ದ ಅವರ ಧೃಢ ಮನಸ್ಥಿತಿ ಏತಕ್ಕಾದರೂ ಇಂತಹ ಹುಡುಗರಿಗೆ ಪಾಠ ಹೇಳಿಕೊಡಲಿ ಎಂದು ನೊಂದಿತೋ ಏನೊ, ಅವರೂ voluntary retirement ತೆಗೆದುಕೊಂಡುಬಿಟ್ಟರು. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ "ನಾನು ಭಾಷಣ ಮಾಡುವುದಿಲ್ಲ, ಹಾಗಾದರಷ್ಟೇ ಕಾರ್ಯಕ್ರಮಕ್ಕೆ ಬರುತ್ತೇನೆ. ಇಲ್ಲವಾದರೆ ಬರುವುದೇ ಇಲ್ಲ" ಎಂದು ಕರಾರು ಹಾಕಿದ್ದರಂತೆ. ಗಣಿತದ ಖಜಾನೆಯೇ ಆಗಿದ್ದ ಅವರು ಮುಂದಿನ ಪೀಳಿಗೆಯ ಹುಡುಗರಿಗೆ ನಿಲುಕದ ನಿಧಿಸಂಪತ್ತಿನಂತೆಯೇ ಉಳಿದುಬಿಟ್ಟಿದ್ದಾರೆ.


ಈಗಂತೂ ಕೆಲಸವಿಲ್ಲವೆಂಬ ಕಾರಣಕ್ಕೇ ಇರಬೇಕು, ಅವರ ಹಿತ್ತಿಲಲ್ಲಿ ಇನ್ನೂ ಹೊಸ ಹೊಸ ಬಗೆಯ ಹೂಗಿಡಗಳು ರಾರಾಜಿಸುತ್ತಿವೆ. ನಮ್ಮನೆಗಂತೂ ಹೊಸ ಹೊಸ ಕಜ್ಜಾಯಗಳ ಸುರಿಮಳೆಯೇ ಆಗುತ್ತಿದೆ. ನಾನು ಮಾತ್ರ ಅದರ ಸವಿ ಸವಿಯಲಾರದವನಾಗಿ ಬೆಂಗಳೂರಿನಲ್ಲಿ ಕುಳಿತಿದ್ದೇನೆ.

Wednesday, January 16, 2008

ನಾವು ಕನ್ನdigaru - ೪

ಸಂದರ್ಭ: ದುಡ್ಡು ತೆಗೆಯಲು ನಮ್ಮ ಕಛೇರಿಯ ಹತ್ತಿರದಲ್ಲೇ ಇರುವ ICICI ATMಗೆ ಹೋಗಿದ್ದೆ. ಅಲ್ಲಿರುವುದು ಒಟ್ಟೂ 4 ATM ಮಶಿನ್‌ಗಳು. ಎಲ್ಲದರ ಮುಂದೂ ಹನುಮಂತನ ಬಾಲದಂತೆ ಜನರ ದೊಡ್ಡ ಸಾಲೇ ಇರುತ್ತದೆ. ನಾನೂ ನಿಂತುಕೊಂಡೆ. ದುರದೃಷ್ಟವಶಾತ್ ( ಆದರೆ ಯಾವಾಗಲೂ ಆಗುವಂತೆ ) ನಾನು ನಿಂತಿದ್ದ ATMಗೆ ಅದನ್ನು ಉಪಯೋಗಿಸಲು ಬಾರದ ಒಬ್ಬ ಏನೇನೋ ಪ್ರಯೋಗಗಳನ್ನು ಮಾಡುತ್ತಾ ನಿಂತಿದ್ದ. ನನ್ನ ಅದೃಷ್ಟವೋ ಅಥವಾ ಅವನದೋ ಒಟ್ಟಿನಲ್ಲಿ ಪಕ್ಕದ ಮಶಿನ್ ಖಾಲಿಯಾಯಿತು. ಅಲ್ಲಿಗೆ ಜಿಗಿದ. ಅಲ್ಲೂ ತನ್ನ ಪ್ರಯೋಗ ಮುಂದುವರಿಸಿದ್ದ. ನಾನು ದುಡ್ದು ತೆಗೆಯುತ್ತಿರುವಾಗ ನನ್ನ ಹತ್ತಿರ ಹೀಗೆಂದ:

ಆತ: ಸಾರ್... ಅಕೌಂಟ್ ಇದನಾಲದಾನ್ ಓಪನ್ ಪಣ್ಣಿಟ್ಟೆ. operate ಪಣ್ಣುಂ ವಾರಾದ್...
ನಾನು: ಇವತ್ತೇ access ಮಾಡಕೆ ಬರಲ್ಲ ಅನ್ಸತ್ತೆ ಸಾರ್... ನಾಳೆ try ಮಾಡಿ.
ಆತ: ಆಮಾ ಸಾರ್... ಅಕೌಂಟ್ ಒಪನ್ ಪಣ್ಣಿಟ್ಟೆ.
ನಾನು: Thats what sir... you try tomorrow.
ಆತ: ಸಾರ್... language ತಮಿಳ್ ಸಾರ್.
ನಾನು: But I dont know tamil!

ಅಷ್ಟರಲ್ಲಿ, ನನ್ನ ಸುತ್ತ ಮುತ್ತ ನಿಂತಿದ್ದ ನಾಲ್ಕಾರು ಮಂದಿ ಅವನನ್ನು ಮಾತನಾಡಿಸತೊಡಗಿದರು.
"ಸಾರ್... ಇಪ್ಪ ವಾಂಗ ಸಾರ್... ಎನ್ನ ಪ್ರಾಬ್ಲಮ್?"

ನನ್ನ ಸುತ್ತಮುತ್ತಲಿದ್ದ ಎಲ್ಲರೂ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು! ನಾನೊಬ್ಬನೇ ಪರಕೀಯನಂತೆ ನಿಂತಿದ್ದೆ!

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Thursday, January 10, 2008

ಕತ್ತಲೆಯ ಬೆಳಕು



"ಅಯ್ಯೋ... ಕರೆಂಟ್ ಹೋಯ್ತು!!!" ಈ ವಾಕ್ಯವನ್ನು ದಿನಕ್ಕೊಂದುಬಾರಿಯಾದರೂ ಕೇಳಿಯೇ ಇರುತ್ತೇವೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಕಡಿಮೆಯಿದ್ದರೂ ನಮ್ಮೂರಿನಲ್ಲಂತೂ ಸಧ್ಯದಲ್ಲೇ ಲೋಡ್ ಶೆಡ್ಡಿಂಗ್ ಶುರು ಆಗುತ್ತದಂತೆ. ಮಳೆಗಾಲ ಮುಗಿದು ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ನಮ್ಮ KEBಯವರಿಗೆ ಎಷ್ಟು ದುಡ್ಡುಕೊಡುತ್ತೇವೆಂದರೂ, ಕೆಲಸವಿಲ್ಲದ ಕಾರಣಕ್ಕೋ ಏನೊ, ಅಂತೂ ಕರೆಂಟನ್ನು ದಿನಕ್ಕೆ ಎರಡು ಗಂಟೆಯಾದರೂ ತೆಗೆಯದಿದ್ದರೆ ಅವರಿಗೆ ಸಮಾಧಾನವಿಲ್ಲ. ರಾಜ್ಯದ ಕೋಟಿಗಟ್ಟಲೆ ಮುತ್ತೈದೆಯರ ಶಾಪ ತಗುಲಿಯೂ KEBಯವರು ಇಂದಿಗೂ ಬದುಕುಳಿದು ಕೆಲಸ ಮಾಡುತ್ತಿರುವುದು ಅಚ್ಚರಿಯ ಸಂಗತಿ! ಬಹುಶಃ ಈಗಿನ ಮುತ್ತೈದೆಯರ power ಮೊದಲಿನವರ ಹಾಗೆ ಉಳಿದಿಲ್ಲ ಎನಿಸುತ್ತದೆ. ಎಲ್ಲರೂ ಕರೆಂಟು ಹೋದ ಕೂಡಲೇ KEBಯವರ ವಿರುದ್ಧ ವಾಗ್ಸಮರಕ್ಕೆ ಸಿದ್ಧವಾಗಿಬಿಡುತ್ತಾರೆ. ಅದರಲ್ಲೂ ಕ್ರಿಕೆಟ್ ಮ್ಯಾಚ್ ಬರುತ್ತಿದ್ದಾಗ ಹೋದರಂತೂ ಎಲ್ಲ ಗಂಡಸರಿಂದಲೂ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಅಡಿಗೆ ಮಾಡಲು ಮಿಕ್ಸರ್ ಹಾಕಿದಾಗ ಅಥವಾ ರಾತ್ರಿ ವರ್ಷಗಟ್ಟಲೆ ನೆಡೆಯುವ ಕಥೆಯೇ ಮುಂದುವರಿಯದ ಮೆಗಾ ಧಾರಾವಾಹಿಗಳ ಸಮಯದಲ್ಲಿ ಕರೆಂಟು ಹೋಗಿಬಿಟ್ಟರಂತೂ ಮುಗಿಯಿತು. ಗಂಡಂದಿರ ಮೇಲಿನ ಸಿಟ್ಟೂ ಸೇರಿ KEBಯವರಿಗೆ ಸಹಸ್ರನಾಮಾವಳಿ ಪೂಜೆಯೇ ನೆರವೇರಿಬಿಡುತ್ತದೆ. ಇಷ್ಟಕ್ಕೂ KEBಯವರು ಕರೆಂಟನ್ನು ಯಾಕೆ ತೆಗೆಯುತ್ತಾರೆ ಎಂದು ಯೋಚಿಸಿದ್ದೇವೆಯೆ ?

ಈ ಕರೆಂಟು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕರೆಂಟಿಲ್ಲ ಎಂದರೆ ಟಿವಿ ಇಲ್ಲ, ಫ್ರಿಡ್ಜ್ ಇಲ್ಲ, ಲೈಟ್ ಇಲ್ಲ, ಮಿಕ್ಸರ್ ಇಲ್ಲ, ವಾಷಿಂಗ್ ಮಷಿನ್ ಇಲ್ಲ, ಫ್ಯಾನ್ ಇಲ್ಲ, ಎಸಿ ಇಲ್ಲ ಒಟ್ಟಿನಲ್ಲಿ ಏನೂ ಇಲ್ಲ. ಆದರೂ ನಾವಿದ್ದೇವೆ. ನಮ್ಮ ಜೊತೆ ಅಗಾಧವಾದ ಕತ್ತಲೆಯಿದೆ. ಮನುಷ್ಯ ವಿದ್ಯುಚ್ಛಕ್ತಿಯ ಮೇಲೆ ಹೆಚ್ಚಾಗಿಯೇ ಅವಲಂಬಿಸಿಬಿಟ್ಟಿದ್ದಾನೆ. ಅದಿಲ್ಲದಿದ್ದರೆ ಎನೂ ಇಲ್ಲವೆಂಬ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣಗಳೂ ಕರೆಂಟಿಲ್ಲದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. ಈಗಂತೂ ಕಾರು ಬೈಕುಗಳೂ ಕೂಡಾ ವಿದ್ಯುಚ್ಛಕ್ತಿ ಚಾಲಿತವಾಗಿವೆ. ಕರೆಂಟಿಲ್ಲದೆ ಮೊದಲು ಜನ ಹೇಗೆ ಬದುಕುತ್ತಿದ್ದರಪ್ಪಾ ಎಂದು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿದೆ. ಹಿಂದೊಂದು ಕಾಲವಿತ್ತು, ನಿನ್ನೆ ಮಾಡಿದ ಅಡಿಗೆಯನ್ನು ಇವತ್ತು ತಿನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ದಿನನಿತ್ಯ ಅಡಿಗೆ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಹ್ಯಾಗಿದ್ದರೂ ಹಳಸಲು ಪೆಟ್ಟಿಗೆ (ಫ್ರಿಡ್ಜ್) ಇದೆಯಲ್ಲಾ. ಆದರೆ ಕರೆಂಟು ಹೋದರೆ ಮಾತ್ರ ಕೆಲಸ ಕೆಟ್ಟಿತು. ಅಡಿಗೆಯನ್ನಂತೂ ಹೊಸತಾಗಿ ಮಾಡಲೇಬೇಕು. ಅದೂ ಅಲ್ಲದೆ ಆ ಹಳಸಲು ಪೆಟ್ಟಿಗೆಯಲ್ಲಿ ಹಳಸಿಹೋದ ಪದಾರ್ಥಗಳ ದುರ್ಗಂಧ ಹೊರಹಾಕಲೂ ಒದ್ದಾಡಬೇಕು. ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕಪ್ಪಾ ಅವ್ರು ಕರೆಂಟ್ ತೆಗೀತಾರೆ?

ಹಿಂದೆ ಯಾವುದೋ personality development ಬಗ್ಗೆ ಪುಸ್ತಕ ಓದುತ್ತಿದ್ದ ನೆನಪು. ಶಿವ್ ಖೆರಾ ಅವರದ್ದು. ಬಹುತೇಕ ಕಡೆ be positive, be positive ಎಂದು ಹೀಳಿದ್ದರು. ನಾನೂ ಆಗ ಬಹಳಸ್ಟು ತಲೆ ಕೆಡಿಸಿಕೊಂಡಿದ್ದೆ. ಪೊಸಿಟಿವ್ ಆಗುವುದು ಎಂದರೇನು ಎಂದು. ಅಲ್ಲಿ ಕೆಲವು ಉದಾಹರಣೆಗಳೂ ಇದ್ದವು. ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರಿದ್ದರೆ, ಗ್ಲಾಸು ಅರ್ಧ ಖಾಲಿ ಇದೆ ಎನ್ನುವುದು ನೆಗೆಟಿವ್ ಥಿಂಕಿಂಗ್. ಗ್ಲಾಸು ಅರ್ಧ ತುಂಬಿದೆ ಎನ್ನುವುದು ಪೊಸಿಟಿವ್ ಥಿಂಕಿಂಗ್ ಎಂದು. ಆಗೆಲ್ಲಾ ನನಗನಿಸುತ್ತಿತ್ತು, ಎಲ್ಲದನ್ನೂ ಪೊಸಿಟಿವ್ ಆಗಿ ತಗೋಬೇಕು ಅಂತ ಹೇಳ್ತಿದಾರಲ್ಲಾ, ನೆಗೆಟಿವ್ ಥಿಂಕಿಂಗ್‌ಅನ್ನೂ ಪೊಸಿಟಿವ್ ಆಗಿ ಯಾಕೆ ತಗೊಳಲ್ಲಾ ಅಂತ. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅದು ಬೇರೆ ವಿಷಯ. ಆದರೆ ಈ ಕರೆಂಟು ಹೋಗುವುದನ್ನೂ ನಾವು ಪೊಸಿಟಿವ್ ಮಾರ್ಗದಲ್ಲಿ ವಿಚಾರ ಮಾಡಿದರೆ ನಮಗೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದೇನೊ. "ಯಾಕಾದ್ರೂ ಕರೆಂಟು ತೆಗೀತಾರೇನೊ?", "ಇದರಿಂದ ಇವರಿಗೇನು ಲಾಭ?" ಎಂದು ಯೋಚಿಸುವುದನ್ನು ಬಿಟ್ಟು "ಯಾಕೆ ಕರೆಂಟು ತೆಗೀತಾರೆ?" "ಇದರಿಂದ ನಮಗೇನು ಲಾಭ?" ಎಂದು ಯೋಚಿಸಬೇಕಾಗಿದೆ. ನಾನಂತೂ ಇದೇ ಮಾರ್ಗದಲ್ಲಿ ಯೋಚಿಸಲು ಪ್ರಾರಂಭಿಸಿದೆ. ಯಾಕೆಂದರೆ ನನ್ನ ಬ್ಲಡ್ ಗ್ರುಪ್ಪೇ ಹೇಳತ್ತೆ. B positive ! ಕೆಲವು ಪೊಸಿಟಿವ್ ಅಂಶಗಳು ಗಮನಕ್ಕೂ ಬಂದವು.

ಕರೆಂಟ್ ಹೋಗುವುದರಿಂದ ಏನಾಗುತ್ತದೆ? ಲೈಟ್ ಹತ್ತುವುದಿಲ್ಲ. ಎಲ್ಲ ಕಡೆ ಮೇಣದ ಬತ್ತಿಗಳನ್ನೋ ಚಿಮಣಿ ದೀಪಗಳನ್ನೋ ಹೊತ್ತಿಸುತ್ತೇವೆ. ಮನುಷ್ಯ ಬೆಂಕಿಯನ್ನು ಕಂಡು ಹಿಡಿಯುವ ಮೊದಲು ರಾತ್ರಿ ಪೂರ್ತಿ ಕತ್ತಲೆಯಲ್ಲೇ ಬದುಕುತ್ತಿದ್ದ. ಬೆಂಕಿಯನ್ನು ಕಂಡುಹಿಡಿದು ಕ್ರಂತಿಯನ್ನೇ ಮಾಡಿದ. ಆಗ ಆತನಿಗೆ ರಾತ್ರಿಯೂ ಬೆಳಕಾಯಿತು. ಅದೊಂದು ಕತ್ತಲೆಯಿಂದ ಬೆಳಕಿನೆಡೆಗೆ ಮನುಕುಲ ನೆಡೆದ ಕಾಲ. ಅಂಥ ಕಾಲವನ್ನು ನಮಗೆ ಈಗ ನಾವು ಹೊತ್ತಿಸಿದ ಮೇಣದಬತ್ತಿಗಳು, ಚಿಮಣಿ ದೀಪಗಳು ನೆನಪಿಸಿ ಕೊಡುತ್ತವೆ. ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದಂತೆ. ಆದ್ದರಿಂದ KEBಯವರಿಂದ ಮನುಷ್ಯ ನೆಡೆದು ಬಂದ ಹಾದಿಯನ್ನು ಪ್ರತಿಯೊಬ್ಬ ನಾಗರಿಕನಿಗೂ ನೆನಪು ಮಾಡಿಸುವ ಕಾರ್ಯ ಪ್ರತಿದಿನವೂ ನಡೆಯುತ್ತದೆ. ಎಂತಹ ಮಹಾನ್ ಧ್ಯೇಯ. ಕರೆಂಟು ಹೋದಾಗ A/C ಕೂಡಾ ಕೆಲಸ ಮಾಡುವುದಿಲ್ಲ. ಮನೆಯಲ್ಲೇ ಕುಳಿತುಕೊಂಡು A/C ಹಚ್ಚಿಕೊಂಡು ಮನೆಯ ತುಂಬಾ ಇಂಗಾಲದ ಡೈ ಆಕ್ಸೈಡ್ ತುಂಬಿದ್ದರೂ ಅದನ್ನೇ ಮತ್ತೆ ಮತ್ತೆ ಉಸಿರಾಡುತ್ತಿರುವ ಜನ A/C ಕೆಲಸ ಮಾಡದೇ ಇದ್ದಾಗ ಮನೆಯಿಂದ ಹೊರಬರುತ್ತಾರೆ. ಹಿತವಾದ ಆಮ್ಲಜನಕಭರಿತ ತಣ್ಣನೆಯ ಗಾಳಿಯನ್ನು ಸೇವಿಸುತ್ತಾರೆ. ದೇಹದ ಎಲ್ಲ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ ನವಚೈತನ್ಯ ಬಂದಂತಾಗುತ್ತದೆ. ಮನುಷ್ಯ ಆರೋಗ್ಯವಂತನಾಗುತ್ತಾನೆ. ದಿನನಿತ್ಯವೂ ಒಂದೆರಡು ಗಂಟೆ ಹಿತಕರವಾದ ಹವಾಸೇವನೆಯಿಂದ ಮನುಷ್ಯರನ್ನು ಆರೋಗ್ಯವಂತರನ್ನಾಗಿಸುವ KEBಯವರ ಧ್ಯೇಯ ನಿಜಕ್ಕೂ ಮೆಚ್ಚುವಂಥದ್ದೆ.

ಬೆಳೆಯುವ ಮಕ್ಕಳಲ್ಲಿ ಎಷ್ಟೊಂದು ಕಾಂಪಿಟಿಷನ್! ತಮ್ಮ ಮಕ್ಕಳು ಪಕ್ಕದ ಮನೆಯವರಿಗಿಂತ ಹೆಚ್ಚು ಸ್ಕೋರ್ ಮಾಡಬೇಕು. ಸಂಬಂಧಿಕರ ಮಗುವಿಗಿಂತ ಹೆಚ್ಚು ಓದಬೇಕು ಎಂದು ಮಕ್ಕಳ ಮೇಲೆ ಹೇರುವ ತಂದೆ ತಾಯಿಗಳೆಷ್ಟು. ಇಂತಹ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಂದೆ ತಾಯಿ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಕರೆಂಟು ಹೋದರೆ ಅಭ್ಯಾಸಕ್ಕಂತೂ ಆಗುವುದಿಲ್ಲವಲ್ಲ. ಹೊರಗಡೆ ಎಲ್ಲಾ ಗೆಳೆಯರು ಸೇರಿ ಕತ್ತಲೆಯಲ್ಲೇ ಹರಟುತ್ತಾ ಕೂಡಬಹುದು. ಅಥವಾ ಬೇರೆ ಏನಾದರೂ ಆಟಗಳನ್ನು ಆಡಬಹುದು. ಒಟ್ಟಿನಲ್ಲಿ ಅಭ್ಯಾಸ, ಓದು ಎನ್ನುವ ದಿನನಿತ್ಯದ ಶೋಷಣೆಯಿಂದ ಮುಕ್ತಿ. ಮಕ್ಕಳಿಗೆ ತಮ್ಮ ಬಾಲ್ಯವನ್ನು ಹಿಂದಿರುಗಿಸುವ ಈ ಕತ್ತಲೆ ನಿಜಕ್ಕೂ KEBಯವರ ಕೊಡುಗೆಯಲ್ಲವೆ? ದಿನ ಪೂರ್ತಿ ಧಾರವಾಹಿಗಳನ್ನು ನೋಡುತ್ತಿದ್ದ ಅಥವಾ ಕಂಪ್ಯೂಟರನ್ನೇ ದಿಟ್ಟಿಸಿ ಆಯಾಸಗೊಂಡಿದ್ದ ಕಣ್ಣಿಗಂತೂ ಈ ಎರಡು ಗಂಟೆಗಳ ಕಾಲ ಸ್ವರ್ಗ ಸುಖವಿದ್ದಂತೆ. ಪ್ರತಿಯೊಬ್ಬರ ದೃಷ್ಟಿಯ ಬಗ್ಗೂ ಕಾಳಜಿವಹಿಸುವ ಈ ಕರೆಂಟು ತೆಗೆಯುವ ಕಾರ್ಯಕ್ರಮ ನಿಜಕ್ಕೂ ನೇತ್ರದಾನದಷ್ಟೇ ಶ್ರೇಷ್ಠವಾದುದಲ್ಲವೆ. ಕರೆಂಟು ಹೋದಾಗ ಮಾಡಲು ಕೆಲಸವಿಲ್ಲದೆ ಮನೆಯ ಹೆಂಗಸರು ಪಕ್ಕದ ಮನೆಯ ಸುಬ್ಬಮ್ಮನನ್ನೋ ಮುನಿಯಮ್ಮನನ್ನೋ ಕರೆದು ಹರಟುತ್ತಾ ಕೂತರೆ ಮಾತೆಯರಿಗೆ ಮಾತೆಯರೆಂಬ ಹೆಸರು ಸಾರ್ಥಕವಾದಂತಲ್ಲವೆ? ಹೆಂಗಸರಿಗೆ ಮರೆತುಹೋದ ತಮ್ಮ ಹುಟ್ಟುಗುಣವನ್ನು ಪುನಃ ನೆನಪಿಸುವ ಕಾರ್ಯ ನಿಜಕ್ಕೂ ಧರ್ಮಸ್ಥಾಪನೆಯ ಕಾರ್ಯವಲ್ಲವೆ?

"ಅಯ್ಯೋ..." ಕ್ಷಮಿಸಿ, "ಅರೆ ವ್ಹಾ... ಈ ಲೇಖನ ಬರೆಯುತ್ತಿರುವಾಗಲೇ ಮತ್ತೆ ಕರೆಂಟ್ ಹೋಯ್ತು". KEBಯವರು ನೂರು ವರ್ಷ ಸುಖವಾಗಿ ಬಾಳಲಿ. ನಾನು ಹೊರಗಡೆ ತಣ್ಣನೆಯ ಗಾಳಿ ಸೇವಿಸಿ ಆರೋಗ್ಯ ವರ್ಧಿಸಿಕೊಂಡು ಬರುತ್ತೇನೆ.

Thursday, January 3, 2008

"ಮತಾಂತರ" - ಒಂದು ಮಂಥನ

"ಮತಾಂತರ" ಇಂದು ಕೇವಲ ಕೆಲವೇ ಕೆಲವು ಅರ್. ಎಸ್. ಎಸ್. ಹಿನ್ನೆಲೆಯ ಸಂಘಟನೆಗಳು ಮತ್ತು ಕೆಲವು ಮಠಾಧೀಶರು ಚರ್ಚೆ ಮಾಡುವ ವಿಷಯವಾಗಿಬಿಟ್ಟಿದೆ. ಸಾಮಾನ್ಯ ನಾಗರಿಕನಿಗೆ ಇದರ ಅರಿವಿಲ್ಲವೋ ಅಥವಾ ಉದಾಸೀನವೋ ತಿಳಿಯದು. ನಮ್ಮ ಸುತ್ತಮುತ್ತಲೂ ಇಂಥ ಹಲವಾರು ಘಟನೆಗಳನ್ನು ನೋಡಿಯೂ ನಮಗರಿವಿಲ್ಲದಂತೆಯೇ ಇದ್ದುಬಿಡುತ್ತೇವೆ. ಒಬ್ಬ ಅಥವಾ ಇಬ್ಬರನ್ನು ಮತಾಂತರಿಸಿದರೆ ಆಗುವ ದುಷ್ಪರಿಣಾಮವಾದರೂ ಏನು ಎಂಬುದು ನಮ್ಮ ಭಾವನೆ. ಅಷ್ಟಕ್ಕೂ ಅವನು ಯಾವ ಮತದಲ್ಲಿದ್ದರೇನು? ಒಟ್ಟಿನಲ್ಲಿ ನಾವು ಅವರು ಎಲ್ಲರೂ ಚೆನ್ನಾಗಿದ್ದರೆ ಸಾಕು ಎನ್ನುವ ಉದಾತ್ತ ಮನೋಭಾವನೆ ಹಿಂದುಗಳದ್ದು. ಆದರೆ ಇದನ್ನು ಉದಾತ್ತ ಮನೋಭಾವನೆ ಎಂದರೆ ಸಧ್ಯದ ಪರಿಸ್ಥಿತಿಯಲ್ಲಿ ತಪ್ಪಾಗುತ್ತದೆ. ಇದನ್ನು ಸ್ವಧರ್ಮ ಪ್ರೇಮನಾಶದಿಂದ ಬಂದೊದಗಿದ ಆಲಸ್ಯ ಎನ್ನಬಹುದು. ನಾವೆಲ್ಲ ಅಂದುಕೊಂಡಂತೆ ಮತಾಂತರ ಒಂದು ಸಾಮಾನ್ಯ ವಿಷಯವಲ್ಲ. ಮತಾಂತರದ ಉದ್ದೇಶ ಮತ್ತು ಅದರಿಂದಾಗುವ ಪರಿಣಾಮಗಳನ್ನು ಅರಿತವನಿಗಂತೂ ಇದೊಂದು ಇಂದಿನ ಹಿಂದೂ ಸಮಾಜಕ್ಕೊದಗಿದ ಪೆಡಂಭೂತದಂತೆಯೇ ಗೋಚರಿಸಿದರೆ ತಪ್ಪಿಲ್ಲ.

ನವೆಂಬರ್ 12 2004 ಒಂಗೋಲ್, 15018 ಜನರನ್ನು ಒಂದೇ ದಿನದಲ್ಲಿ ಬ್ಯಾಪ್ಟೈಸ್ ಮಾಡಲಾಯಿತು. ಒಂದೇ ಒಂದು ವರ್ಷದೊಳಗೆ 10,000 ಚರ್ಚ್‌ಗಳ ಸ್ಥಾಪನೆಯ ಉದ್ದೇಶವನ್ನೂ ತಿಳಿಸಲಾಯಿತು. ಇಷ್ಟೆಲ್ಲ ನೆಡೆದಿದ್ದು ಕೇವಲ ಒಂದು ಕ್ರಿಶ್ಚಿಯನ್ ತಂಡದಿಂದ. ಸೆವೆಂತ್ ಡೇ ಅಡ್ವೆಂಟಿಸ್ಟ್. 1998ರಲ್ಲಿ 225,000 ಜನರನ್ನು ಹೊಂದಿದ್ದ ಸೆವೆಂತ್ ಅಡ್ವೆಂಟಿಸ್ಟ್ ಚರ್ಚ್ 2005ರ ಒಳಗೆ 825,000 ಜನರನ್ನು ಹೊಂದಿತ್ತು. ಇಂತಹಾ ನೂರಾರು
ತಂಡಗಳು, ಸಂಸ್ಥೆಗಳು ಭಾರತದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿವೆ. ಇದು ಕೇವಲ ಒಂದು ಉದಾಹರಣೆಯಷ್ಟೆ. 2001ರಲ್ಲಿ ಅಂಧ್ರಪ್ರದೇಶದ ಕ್ರೈಸ್ತರ ಜನಸಂಖ್ಯೆ 6.96%. 2005ರಲ್ಲಿ ಅದು 17% ಆಗಿದೆ. ಇದೇ ದರದಲ್ಲಿ ಮುಂದುವರಿದರೆ ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಆಂಧ್ರಪ್ರದೇಶ ಕಿರಿಸ್ತಾನವಾಗುತ್ತದೆ. ತಮಿಳು ನಾಡಿನ ಪರಿಸ್ಥಿತಿ ಇದಕ್ಕೆ ಹೊರತಾಗೇನಿಲ್ಲ. ಅಲ್ಲಿ ಈಗಲೇ ಜನಸಂಖ್ಯೆ 28%ಕ್ಕೆ ಮುಟ್ಟಿದೆ. ಆದರೆ ಈ ಅಂಕಿಅಂಶಗಳು ಹೊರಬರುತ್ತಿಲ್ಲ. ಏಕೆಂದರೆ ಇದರಿಂದ ಅಲ್ಪಮತೀಯರಿಗೆ ಸುಗುವ ರೆಸರ್ವೇಶನ್ ಮತ್ತಿತರೆ ಸವಲತ್ತುಗಳು ಸಿಗುವುದಿಲ್ಲವಾದ್ದರಿಂದ. ಇದರಿಂದಾದದುಶ್ಪರಿಣಾಮ ನಮ್ಮ ಕಣ್ಣಮುಂದೇ ಇದೆ. 1947ರಲ್ಲಿ ಸಂಪೂರ್ಣ ಹಿಂದೂರಾಜ್ಯಗಳಾಗಿದ್ದ ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ಈಗಿನ ಕ್ರೈಸ್ತರ ಜನಸಂಖ್ಯೆ 75% ದಿಂದ 95%ದ ವರೆಗೆ ಬೆಳೆದಿದೆ. ಕೇವಲ ಹಿಂದುಗಳ ಸಂಖ್ಯೆ ಇಳಿಮುಖವಾಗಿರುವುದು ಸಮಸ್ಯೆಯಲ್ಲ. ಈಗ ಆ ರಾಜ್ಯಗಳು ಭಾರತದಿಂದ ಬೇರ್ಪಡಲು ಹವಣಿಸುತ್ತಿವೆ!

ಮನುಷ್ಯ ಸಂಘಜೀವಿ. ಅವನು ಬಾಳಿ ಬದುಕಲು ಒಂದು ಸಮಾಜ ಬೇಕೇ ಬೇಕು. ಆ ಸಮಾಜವಿದ್ದಂತೆ ಅಲ್ಲಿಯ ಜನರ ಜೀವನ, ಭಾವನೆಗಳು, ಬೌದ್ಧಿಕ ವಿಕಸನಗಳು ಇರುತ್ತವೆ. ಒಂದು ಸಮಾಜಕ್ಕೆ ಸಂಸ್ಕೃತಿಯೆಂಬ ಗಟ್ಟಿಯಾದ ಹಿನ್ನೆಲೆ ದೊರೆತಾಗ ಮಾತ್ರ ಆ ಸಮಾಜದಿಂದ ವಿಶ್ವಕ್ಕೇ ಉತ್ತಮ ಕೊಡುಗೆಗಳನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಈಗಾಗಲೇ ನಶಿಸಿಹೋದ ಸಾವಿರಾರು ಜನಜೀವನಗಳಲ್ಲಿ ಅದೂ ಒಂದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. "ಹಿಂದೂ" ಎಂಬುದು ಒಂದು ಧರ್ಮವಷ್ಟೇ ಅಲ್ಲ. ಅದೊಂದು ಜೀವನ ಪದ್ಧತಿ. ಈ ಜೀವನ ಪದ್ಧತಿ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಲದ ಪ್ರವಾಹಕ್ಕೆ ಸಿಕ್ಕು ತರಗಲೆಗಳಂತೆ ಉದುರಿಹೋದ ಇತರೇ ಸಂಸ್ಕೃತಿಗಳಂತಲ್ಲದೆ, ಸಾವಿರಾರು
ಆಕ್ರಮಣಗಳಿಗೊಳಗಾದರೂ ಮರ್ಮಾಘಾತಸಮ ಕೊಡಲಿ ಏಟುಗಳನ್ನು ತಿಂದರೂ ಹಿಂದೂ ಸಂಸ್ಕೃತಿ ಅಲುಗಾಡದೇ ಬೃಹದ್ ವಟವೃಕ್ಷದಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಿಷ್ಟೆ. ಇದರ ಮೂಲದಲ್ಲಿ ದೋಷವಿರಲಿಲ್ಲ. ಕಲ್ಮಶ ಕಪಟಗಳು ಇದರೆಡೆಗೆ ಸುಳಿಯಲಿಲ್ಲ. ಇತರರನ್ನು ಬಲಾತ್ಕಾರವಾಗಿ ತನ್ನೆಡೆಗೆ ಸೆಳೆಯುವ ಕ್ರೂರತ್ವ ಇದರಲ್ಲಿರಲಿಲ್ಲ. "ವಸುಧೈವ ಕುಟುಂಬಕಂ", ಇಡೀ ವಿಶ್ವವೇ ಒಂದು ಕುಟುಂಬ ಎಂಬಂತಹ ಮಹತ್ತರವಾದ ಧೋರಣೆ ಈ ಧರ್ಮದ್ದಾಗಿದೆ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂದು ಹೀಳಿದ ಈ ಧರ್ಮದ ಉದಾತ್ತ ಮನೋಭಾವವೆಲ್ಲಿ; ಕೇವಲ ನಾನು ನಂಬಿರುವವನಷ್ಟೇ ದೇವರು, ಬೇರೆಯವರನ್ನು ನಂಬಿರುವವರೆಲ್ಲರೂ ಮಹಾನ್ ಪಾಪಿಗಳು ಎಂದು ಸಾರುವ ಮತಗಳೆಲ್ಲಿ?

ಮತಾಂತರದ ಪರಿಣಾಮದ ವ್ಯಾಪ್ತಿ ಕೇವಲ ಮನುಷ್ಯನ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ. ಮತಾಂತರದಿಂದ ರಾಷ್ಟ್ರಾಂತರವಾಗುತ್ತದೆ. ಅಯೋಧ್ಯೆ ದ್ವಾರಕೆಗಳು ಪವಿತ್ರಭೂಮಿಗಳಾಗಿದ್ದ ವ್ಯಕ್ತಿಗೆ ಇನ್ನು ಮುಂದೆ ಅವು ಕೇವಲ ಇತರ ನಗರಗಳಂತಾಗಿ, ರೋಮ್ ಬೆತ್ಲಹೇಮ್‌ಗಳು ಪವಿತ್ರಭೂಮಿಗಳಾಗುತ್ತವೆ. ತುಳಿಯುತ್ತಿರುವ ನೆಲ ಕೇವಲ ಮಣ್ಣಾಗಿ ಉಳಿಯುತ್ತದೆಯೇ ಹೊರತು ಯೋಗಭೂಮಿಯಾಗಿ, ಭಾರತಮಾತೆಯಾಗಿ ಕಾಣಿಸುವುದಿಲ್ಲ. ಇನ್ನು ಅವಳಬಗ್ಗೆ ಪ್ರೀತಿ ಎಲ್ಲಿಂದ ಹುಟ್ಟಬೇಕು? ಗಂಗೆ ಪತಿತಪಾವನೆಯಾಗದೆ ಕೇವಲ ನೀರಾಗುತ್ತಾಳೆ. ಹಿಮಾಲಯ ಸಾಧು ಸಂತರ ಆಧ್ಯಾತ್ಮ ತಾಣವಾಗದೆ ಕೇವಲ ಕೆಲಸಕ್ಕೆ ಬಾರದ ಹಿಮಾವ್ರತ ಬಂಜರು ಭೂಮಿಯಾಗುತ್ತದೆ. ದೇಶದ ಆದರ್ಶಪುರುಷರುಗಳಾದ ರಾಮ, ಕೃಷ್ಣ, ವೇದವ್ಯಾಸ, ಅಗಸ್ತ್ಯ, ವಾಲ್ಮೀಕಿ, ಚಾಣಕ್ಯರುಗಳೆಲ್ಲ ಕಾಲ್ಪನಿಕ ಪಾತ್ರಗಳಾಗುತ್ತಾರೆ. ಧರ್ಮೋಧ್ಧಾರಕರಾದ ಶಂಕರ, ಮಾಧ್ವ, ರಾಮಾನುಜ, ಸಮರ್ಥ ರಾಮದಾಸ, ವಿದ್ಯಾರಣ್ಯ, ರಾಮಕೃಷ್ಣ, ವಿವೇಕಾನಂದರು ಪಾಪಿಗಳಾಗುತ್ತಾರೆ. ದೇಶದ ಒಳಿತಿಗೆ ಜೀವನವನ್ನೇ ಮುಡಿಪಾಗಿಟ್ಟ ಶಿವಾಜಿ, ರಣಾ ಪ್ರತಾಪ್, ಪ್ರಥ್ವಿರಾಜ, ಝಾನ್ಸಿ ರಾಣಿ, ಚಂದ್ರಗುಪ್ತ, ವಿಕ್ರಮಾದಿತ್ಯರು ನಗೆಪಾಟಲಾಗುತ್ತಾರೆ. ಒಟ್ಟಿನಲ್ಲಿ ದೇಶದಮೇಲಿನ ಶ್ರದ್ಧೆ ಭಕ್ತಿ ಗೌರವಗಳು ಮಾಯವಾಗಿ ಇದೇ ಭಕ್ತಿ ಶ್ರದ್ಧೆಗಳು ಇನ್ನೊಂದು ದೇಶದ ಪಾಲಾಗುತ್ತದೆ.

ಇಷ್ಟಕ್ಕೂ ಪರಮತಸಹಿಷ್ಣುತೆ ಕೇವಲ ಹಿಂದುಗಳೇಕೆ ಅನುಸರಿಸಬೇಕು? ಒಂದು ಕಾನೂನು ಅಥವಾ ನಿಯಮ ಫಲಕಾರಿಯಾಗುವುದು ಪ್ರತಿಯೊಬ್ಬನೂ ಅದನ್ನು ಪಾಲಿಸಿದಾಗ ಮಾತ್ರ. ಅಲ್ಪಸಂಖ್ಯಾತರು ಧರ್ಮಪ್ರಚಾರ ಪರಧರ್ಮನಿಂದನೆ ಮಾಡಿದರೆ ಅದು ಜಾತ್ಯಾತೀತತೆ, ಬಹುಸಂಖ್ಯಾತರು ಇದನ್ನು ಪ್ರತಿಭಟಿಸಿದರೇ ಅದು ಕೋಮುವಾದ ಎಂದು ಅರ್ಥೈಸುತ್ತಿರುವ ಇಂದಿನ ರಾಜಕಾರಣಿಗಳು ಮತ್ತು ತಥಾಕಥಿತ ಬುದ್ಧಿಜೀವಿಗಳಿಗೆ ಬುದ್ಧಿಬ್ರಮಣೆಯಾಗಿದೆಯೆನ್ನಬೇಕಲ್ಲವೆ. ಧರ್ಮನಾಶವಾಗುತ್ತಿರಬೇಕಾದರೆ ಕೈ ಕಟ್ಟಿ ಕುಳಿತುಕೊಳ್ಳುವುದು
ಹಿಂದುವಿನ ಸ್ವಭಾವವಲ್ಲ. ಅಂದು ಮಹಾಭಾರತದಲ್ಲಿ ಕುರುವಂಶದರಿಂದ ಧರ್ಮನಾಶವಾದಾಗ ಕೃಷ್ಣ ಪಾಂಡವರಿಗೆ ಕೈ ಕಟ್ಟಿ ಕೂತಿರಿ ಎಂದು ಹೇಳಲಿಲ್ಲ. ಸ್ವಜನರ ಹತ್ಯೆ ನನ್ನಿಂದಾಗದು ಎಂದು ಅರ್ಜುನ ಬಿಲ್ಲು ಬಿಸುಟಿ ಕುಳಿತಿದ್ದಾಗ ಗೀತೋಪದೇಶ ನೀಡಿ "ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದುಚ್ಛರಿಸಿದಾಗಲೇ ಧರ್ಮ ಕೇವಲ ಶಾಸ್ತ್ರವಿಚಾರಗಳಿಂದ ಕೂಡಿರುವುದಷ್ಟೇ ಅಲ್ಲ, ಶಸ್ತ್ರವನ್ನೂ ಹಿಡಿದು ಯುದ್ಧಮಾಡುವುದೂ ಇದಕ್ಕೆ ಗೊತ್ತಿರಬೇಕು ಎಂದು ಆ ಜಗದ್ಗುರುವು ಸಾರಿದ. ಇಂತಹ ಮತಾಂತರಗಳ ಮೂಲವನ್ನರಿತುದಕ್ಕೇ ಇರಬೇಕು ಸ್ವಾಮಿ ವಿವೇಕಾನಂದರು "ಒಬ್ಬ ಹಿಂದು ಮತಾಂತರಗೊಂಡರೆ, ಒಬ್ಬ ಹಿಂದು ಕಡಿಮೆಯಾದುದಷ್ಟೇ ಅಲ್ಲ ಒಬ್ಬ ವೈರಿ ಹೆಚ್ಚಾದಂತೆ" ಎಂದು ಹೇಳಿದುದು. ಆದರೆ ಕೇವಲ ಅವರ ಮಾತುಗಳನ್ನು ಕೇಳಿ ಈಗಿನ ಜನತೆಗೆ ಬುದ್ಧಿಬರುವುದು ಕಷ್ಟವೇ ಇದೆ. ಬಹುಶಃ ಭಾರತವನ್ನು ಭಾರತವಾಗೇ ಇರಿಸಲು ವಿವೇಕಾನಂದರು ಮತ್ತೊಮ್ಮೆ ಹುಟ್ಟಿ ಬರಬೇಕೋ ಏನೊ?