Tuesday, December 29, 2009

ಗಾನ ಗಾರುಡಿಗನಿಗೊಂದು ನುಡಿ ನಮನ


ಹೈ ಸ್ಕೂಲ್ ಓದುತ್ತಿದ್ದಾಗ ಮೊದಲಬಾರಿ ಕೇಳಿದ್ದು. ಒಂದನೇ ಬಾರಿ ಕೇಳಿದಾಗಲೇ ಎಂದೂ ಮರೆಯಲಾಗದಷ್ಟು ಸಂತಸ ನೀಡಿದ ಹಾಡಾಗಿತ್ತು ಅದು. "ಕೋಡಗನ ಕೋಳಿ ನುಂಗಿತ್ತಾ...". ಆ ವಯಸ್ಸಿಗೆ ಸಾಹಿತ್ಯ ನಿಲುಕದಾಗಿತ್ತು. ಕೇವಲ ಹಾಡುಗಾರಿಕೆಯಿಂದಲೇ ಆ ಪದ್ಯ ಮನಸ್ಸಿಗೆ ಅಷ್ಟೊಂದು ಹತ್ತಿರವಾಗಿಬಿಟ್ಟಿತ್ತು. ನಂತರದ ದಿನಗಳಲ್ಲಿ ನನ್ನ ಜೀವನದಲ್ಲಿ ಆ ಗಾರುಡಿಗನ ಮೋಡಿ ನಿಲ್ಲದೇ ಸಾಗತೊಡಗಿತ್ತು. ಸುಗಮ ಸಂಗೀತದ ಬಹುದೊಡ್ಡ ಪ್ರಪಂಚಕ್ಕೆ ನನ್ನ ಕೈ ಹಿಡಿದು ಕೊಂಡೊಯ್ದಿತ್ತು. ಶಿಶುನಾಳರ ಬೇಂದ್ರೆಯವರ ಗೀತೆಗಳ ಅಧ್ಯಾತ್ಮವಾದ, ಕುವೆಂಪುರವರ ಕಾವ್ಯಸೊಗಡು, ಕೆ. ಎಸ್. ಎನ್. ರ ಪ್ರೇಮಮಯಿ ಸಂವೇದನೆ, ಲಕ್ಷ್ಮಣ್ ರಾವ್ ಅವರ ಹಾಸ್ಯಭರಿತ ಗೀತೆಗಳು ಎಲ್ಲವುದರ ಹಿಂದೆ ಆ ಮೋಡಿಗಾರನೇ ಕುಳಿತಿದ್ದ. ಇನ್ನೂ ಎಷ್ಟೋ. ಲೆಕ್ಕಕ್ಕೆ ಸಿಗದಷ್ಟು ಕೊಡುಗೆಗಳು, ಕನ್ನಡಕ್ಕೆ, ಆ ಗಂಧರ್ವ ಕಂಠದಿಂದ ಹೊರಹೊಮ್ಮಿತ್ತು. ಆದರೆ ಈ ಪಯಣದಲ್ಲಿ ಇನ್ನು ನಮ್ಮ ಕೈ ಹಿಡಿದು ಮುನ್ನೆಡೆಸುವವರಾರು? ಎಲ್ಲವೂ ಒಮ್ಮೆಯೇ ಇಲ್ಲವಾಯಿತೇ? ಈ ಪಯಣ ನಿಂತುಹೋಯಿತೇ? ನಮ್ಮ ಕಿವಿಗಳಿಗೆ ಆ ಮಧುರ ದನಿಯ ಆಸ್ವಾದನೆಯ ಯೋಗ ತೀರಿಹೋಯಿತೇ?

ಅಶ್ವಥ್‌ರನ್ನು ನೋಡುವ ಭಾಗ್ಯ ನನಗೆ ಒಮ್ಮೆಯೇ ಸಿಕ್ಕಿತ್ತು. ಅದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಯಾವುದೋ ಸಿನೆಮಾದ ಆಡಿಯೋ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಇವರೂ ಬಂದಿದ್ದರು. ನಾವು ನಮ್ಮ ನಾಟಕದ ರಿಹರ್ಸಲ್ ಎಲ್ಲಾ ಮುಗಿಸಿ ಹಾಗೆಯೇ ಕುತೂಹಲಕ್ಕೆ ಕಾರ್ಯಕ್ರಮಕ್ಕೆ ಇಣುಕಿದೆವು. ಕರ್ಯಕ್ರಮ ಕೊನೆಯ ಹಂತದಲ್ಲಿತ್ತು. ಬಂದವರೆಲ್ಲರದೂ ಒಂದೇ ಕೋರಿಕೆ. ಆಶ್ವಥ್ ಹಾಡಬೇಕು. ಎಲ್ಲರ ಕೋರಿಕೆಯನ್ನು ಆಶ್ವಥ್ ಈಡೇರಿಸದೆ ಇರಲಿಲ್ಲ. ಸಭೆಯಲ್ಲಿ ನಿಶ್ಶಬ್ಧ. ಕೇವಲ ಅಶ್ವಥ್‌ರವರ ಧ್ವನಿ ಕಾಲೇಜಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಪ್ರೇಕ್ಷಕರೆಲ್ಲರಿಗೂ ರೋಮಾಂಚನಗೊಳಿಸುವ ಸಂಗೀತದ ರಸದೌತಣ. ನಾನವರನ್ನು ಮುಖತಃ ಕಂಡಿದ್ದು ಅದೇ ಮೊದಲು ಅದೇ ಕೊನೆ. ಆದರೆ ಅವರನ್ನು ನೆನೆಯದ ದಿನ ಬಹುಷಃ ಒಂದೂ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಭಾವನೆಗಳೇ ಇಲ್ಲದ ದಿನವೊಂದನ್ನು ಊಹಿಸಲಾದರೂ ಸಾಧ್ಯವೆ? ಅದು ಇಲ್ಲವೆಂದಮೇಲೆ ಅಶ್ವಥ್‌ರನ್ನು ನೆನೆಯದ ದಿನವೂ ಒಂದೂ ಇಲ್ಲವೆನ್ನಬೇಕು. ಬೇಸರವಾದರೆ ಅವರ ಭಾವಗೀತೆ, ಸಂತಸವಾದರೂ ಅವರದೇ ಭಾವಗೀತೆ. ಉತ್ಸಾಹಗೊಂಡರೂ ಆಲಸ್ಯಗೊಂಡರೂ ಎಲ್ಲ ಭಾವಗಳಿಗೂ ಅವರದೇ ಭಾವಗೀತೆಗಳನ್ನು ಕೇಳುವ ಹವ್ಯಾಸ ನನ್ನದಾಗಿಬಿಟ್ಟಿದೆ. ಅವರು ನಮ್ಮನ್ನಗಲಿದ ಸುದ್ದಿ ಕೇಳಿದಾಗಲೂ ನಾನು ಕೇಳುತ್ತಲಿದ್ದುದು ಅವರದೇ ಗೀತೆ "ಮೌನ ತಬ್ಬಿತು ನೆಲವ ಚುಂಬಿನಿ ಪುಳಕಗೊಂಡಿತು ಧಾಮಿನಿ". ದೈಹಿಕವಾಗಿ ನಮ್ಮನ್ನಗಲಿದರೂ ನಮ್ಮೆಲ್ಲರ ಮನಗಳಲ್ಲಿ ನಿಮ್ಮ ಪ್ರತಿಷ್ಠಾಪನೆ ಎಂದೋ ಆಗಿಹೋಗದೆ. ನಿಮ್ಮ ಧ್ವನಿ ನಿಮ್ಮ ಗೀತೆಗಳು ಅಜರಾಮರ. ಶಿಶುನಾಳರ ಗೀತೆಗಳನ್ನು ಜನರಿಗೆ ತಲುಪಿಸಲೆಂದೇ ಅವರತಿರಿಸಿದ್ದಿರೆಂದೆನಿಸುವ ನಿಮಗೆ ನಾವು ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ನಮ್ಮ ಇನ್ನೊಂದೇ ಒಂದು ಕೋರಿಕೆಯನ್ನು ಈಡೇರಿಸಿಕೊಡಿ. ಮತ್ತೆ ಹುಟ್ಟಿ ಬನ್ನಿ.

Monday, December 21, 2009

ಪುರಷ್ - ಒಂದು ಸ್ತ್ರೀ ಕಥೆ!


ಬಹಳ ದಿನಗಳಿಂದ ನಮ್ಮ ಡೈರೆಕ್ಟರ್ ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟಿದ್ರು. ಅಂತೂ ಇಂತೂ ಪುರುಸೊತ್ತು ಮಾಡ್ಕೊಂಡು ಮತ್ತೆ ನಾಟಕ ಶುರು ಮಾಡಿದಾರೆ!
ನಾಟಕ: ’ಪುರುಷ್’
ಮೂಲ: ಜಯವಂತ ದಳ್ವಿ
ಕನ್ನಡಕ್ಕೆ: ಎಚ್ ಕೆ ಕರ್ಕೇರ
ನಿರ್ದೇಶನ: ಪ್ರದೀಪ್

ಮರಾಠಿ ರಂಗಭೂಮಿಯಲ್ಲಿ "ಪುರುಷ್" ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿದೆ. ಜಯವಂತ ದಳ್ವಿಯವ ಬರಹ ಮೊದಲಿಗೆ ನಗಿಸುತ್ತದೆ. ನಗಿಸುತ್ತಲೇ ಕಟು ವಾಸ್ತವವನ್ನು ನಮ್ಮ ಮುಂದಿಡುತ್ತದೆ. "ಪುರುಷ್" ಅಂತಹುದೇ ಒಂದು ಪ್ರಯತ್ನ. ಹೆಣ್ಣಿನ ಮೇಲಿನ ದೌರ್ಜನ್ಯ, ಅವಳ ಮೇಲೆ ಪುರುಷ ಸಮಾಜ ಎಸಗುವ ಅತ್ಯಾಚಾರಗಳನ್ನು ಬಹಳಷ್ಟು ನಾಟಕಗಳು ಚಿತ್ರಿಸಲು ಪ್ರಯತ್ನ ಪಟ್ಟಿವೆ. ಆದರೆ "ಪುರುಷ್" ಅದನ್ನು ತೋರಿಸುವ ರೀತಿ ಅದ್ವಿತೀಯ. ಇದು ಕೇವಲ ದೌರ್ಜನ್ಯಕ್ಕೊಳಗಾಗುವ ಅಸಹಾಯಕ ದುರ್ಬಲ ಹೆಣ್ಣಿನ ಕಥೆಯಲ್ಲ. ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ.

ಜಯವಂತ ದಳ್ವಿಯವರು ಘಾಸಿಗೊಳಗಾದ ಸ್ತ್ರೀ ಹೃದಯದ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪುರುಷ ವಿಕೃತ ಮತ್ತು ಅಧಿಕಾರದ ವಿಡಂಬನೆಗಳನ್ನು ನ್ಯಾಯಯುತವಾಗಿ ಚಿತ್ರಿಸಿದ್ದಾರೆ. ಶೋಷಿತರ ಜೊತೆಗಿರುವುದು ಅವರ ಆತ್ಮಸ್ಠೈರ್ಯ ಅಷ್ಟೇ. ಸ್ವಂತಕ್ಕಾದ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸಂಗಾತಿ ಕೇವಲ ತಮ್ಮದೇ ಆತ್ಮಬಲ ಎನ್ನುವುದು ಸುಂದರವಾಗಿ ಬಿಂಬಿತವಾಗಿದೆ. ಎಚ್. ಕೆ. ಕರ್ಕೇರ ಅವರು ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ. ಹಾಸ್ಯ ಸರಸಗಳಿಂದ ಪ್ರಾರಂಭವಾಗುವ ನಾಟಕ ಬದುಕಿನ ಕರಾಳ ಸತ್ಯಗಳನ್ನು ಪ್ರೇಕ್ಷಕನ ಎದುರು ತಂದು ನಿಲ್ಲಿಸುತ್ತದೆ.

ಪ್ರದರ್ಶನ:
ಸ್ಥಳ: ಎಚ್ ಎನ್ ಕಲಾಕ್ಷೇತ್ರ
ದಿನಾಂಕ: 26-12-2009
ಸಮಯ: ಸಂಜೆ 7 ಕ್ಕೆ

ಬಿಡುವು ಮಾಡಿಕೊಂಡು, ದಂಪತಿ/ಸ್ನೇಹಿತ/ಸ್ನೇಹಿತೆಯರ ಜೊತೆಗೂಡಿ ಬಂದು ನಾಟಕ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.