Thursday, July 25, 2013

ಕೌರವರ ಮನೆಯ ಲಾಜಿಸ್ಟಿಕ್ ಪ್ರಾಬ್ಲಮ್ಸ್

ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ! ನೀವು ಯಾವುದಾದರೊಂದು ಸಿನೆಮಾ ನೋಡಿದಾಗ, ಕಥೆ/ಕಾದಂಬರಿ ಓದಿದಾಗ ಎಷ್ಟೊಂದು ಪ್ರಶ್ನೆಗಳು ಏಳುತ್ತವೆ. ಆದರೆ ಕೆಲವೊಂದನ್ನು ನಾವು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವನು ಯಾಕೆ ಹಾಗೆ ಮಾಡಿದಾ... ಇವಳು ಯಾಕೆ ಹೀಗೆ ಮಾಡಿದಳು..? ಮೆಗಾ ಸೀರಿಯಲ್‌ಗಳನ್ನು ನೋಡಬೇಕಾದರಂತೂ ಒಂದೇ ಪ್ರಶ್ನೆ! ’ಇವರು ಯಾವಾಗ ಕಥೆ ಮುಂದುವರಿಸುತ್ತಾರೆ ?’. ಆಶ್ಚರ್ಯ ಎಂದರೆ ಕಾಲೇಜಿನಲ್ಲಿ ಪಾಠ ಕೇಳುವಾಗ ಮಾತ್ರ ಇಂತಹ ಸಮಸ್ಯೆಗಳು ಬರಲೇ ಇಲ್ಲಾ. ನಮ್ಮ ಲಕ್ಚರರ್‌ಗಳಿಗೇ ಇದರ ಕ್ರೆಡಿಟ್ ಸಲ್ಲಬೇಕು. ಇಂಜಿನಿಯರಿಂಗ್‌ನಲ್ಲಂತೂ ಪ್ರಶ್ನೆಗಳು ಉಧ್ಬವಿಸುವುದು ಹೋಗಲಿ ಪರೀಕ್ಷೆಯಲ್ಲಿ ಕುಳಿತಾಗ ಪ್ರಶ್ನೆಗಳಿಗೆ ಉತ್ತರಗಳೂ ಉದ್ಭವಿಸುತ್ತಿರಲಿಲ್ಲ. ಇದಕ್ಕೂ ಕ್ರೆಡಿಟ್ ಲಕ್ಚರರ್‌ಗಳಿಗೇ ಹೋಗಬೇಕಾದರೂ ನಮ್ಮ ಪಾಲೂ ಕೊಂಚ ಇದೆ.

ಚಿಕ್ಕಂದಿನಿಂದಲೂ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮದಲ್ಲ. ಕೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಲೇ ಬೆಳೆದಿರುವುದು ನಾವು. ಆದರೂ ಇತ್ತೀಚೆಗೆ ಜೀವನದ ಕೆಲವು ಬಗೆಹರಿಸಲಾಗದ ಸಮಸ್ಯೆಗಳು ಕಣ್ಣೆದುರಿಗೆ ಬಂದು ನಿಂತಾಗ ಅದರ ಬಗೆಗೆ ಯೋಚಿಸತೊಡಗುತ್ತೇವೆ. ಪ್ರಶ್ನೆಗಳು ಮೂಡುತ್ತವೆ. ಬೆಂಗಳೂರಿನಲ್ಲಿ ಬಹು ಅಪರೂಪಕ್ಕೆ ಮಳೆಗಾಲದಲ್ಲಿ ಮಳೆ. ಮನೆ ಎನ್ನುವುದು ಧೋಬಿಘಾಟ್ ಆಗಿ ಹೋಗಿದೆ. ಬಟ್ಟೆ ಹೊರಗೆ ಒಣಗಿಸುವಂತಿಲ್ಲ. ಒಳಗೆ ಒಣಗಿಸಿದರೆ ನಾಲ್ಕು ದಿನವಾದರೂ ಒಣಗುವುದಿಲ್ಲ. ಪ್ಯಾಂಟು ಶರ್ಟು, ಮನೆಯಲ್ಲಿ ಬರ್ಮುಡಾ ಧರಿಸುತ್ತಿರುವ ನಮಗೇ ಇಷ್ಟು ಸಮಸ್ಯೆಯಾದರೆ ಮಹಾಭಾರತದ ಕಾಲದಲ್ಲಿ ಕೌರವರ ಮನೆಯಲ್ಲಿ, ಗಂಡ ಹೆಂಡತಿ ಹಾಗೂ ನೂರಾಒಂದು ಮಕ್ಕಳಿದ್ದ ಆ ಮನೆಯಲ್ಲಿ ಇನ್ನೆಷ್ಟು ಸಮಸ್ಯೆ ಆಗಿರಲಿಕ್ಕೆ ಸಾಕು? ಮನೆಯಲ್ಲಿ ಬಟ್ಟೆ ಒಣಗಿಸಲಿಕ್ಕೆ ಜಾಗ ಹುಡುಕುವವರೇ ಎರಡು ಜನರಿದ್ದಿರಬೇಕು! ಬಹುಷಃ ಪ್ರತಿಯೊಬ್ಬರ ರೂಮಿನಲ್ಲಿ, ಮಧ್ಯ ಕಾರಿಡಾರ್‌ನಲ್ಲಿ, ಕೊನೆಗೆ ರಾಜಸಭೆಯಲ್ಲೂ ಸೀರೆ, ಪಂಚೆ ಒಣಗಿಸುತ್ತಿದ್ದರೇನೋ... ವ್ಯಾಸರಿಗೇ ಗೊತ್ತು.

ನನ್ನನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಇದಲ್ಲಾ. ನಾನು, ಕೆಲವು ಸಲ ನನ್ನ ತಮ್ಮ, ಊರಿಗೆ ಹೋದಾಗ ಅಪ್ಪನನ್ನು ಸೇರಿಸಿ ಮನೆಯಲ್ಲಿರುವವರು ಮೂರೇ ಜನ ಗಂಡಸರು. ಆದರೂ ಎಷ್ಟೋ ಬಾರಿ ಒಳ ಉಡುಪುಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಾಗಿವೆ. ಈಗಂತೂ ನನ್ನ ಬ್ರಾಂಡ್ ಇದೇ ಕಾರಣಕ್ಕೋಸ್ಕರ ಬದಲಾಯಿಸಿಕೊಂಡುಬಿಟ್ಟಿದ್ದೇನೆ! ನಿಕ್ಕರ್ ಹೇಗೋ ಕಂಡುಹಿಡಿದುಬಿಡಬಹುದು. ಈ ಬನಿಯನ್‌ಗಳದ್ದೇ ತಾಪತ್ರಯ. ಎಷ್ಟು ಬಾರಿ ಬೇರೆಯವರದ್ದನ್ನು ಧರಿಸಿದ್ದೇನೋ ಗೊತ್ತಿಲ್ಲ. ಇದನ್ನು ನೆನೆದುಕೊಂಡಾಗೆಲ್ಲಾ ನನಗೆ ಕಾಡುವ ಪ್ರಶ್ನೆ, ಮಹಾಭಾರತದ ಕಾಲದಲ್ಲಿ, ಕೌರವರ ಮನೆಯಲ್ಲಿನ ಪರಿಸ್ಥಿತಿ ಹೀಗಿದ್ದೀತು? ಆಗ ಚಡ್ಡಿ ಬಳಸುತ್ತಿದ್ದರೋ ಅಥವಾ ಲಂಗೋಟಿಯೋ? ಏನೇ ಆಗಲಿ... ನೂರಾಒಂದು ಜನ! ಎಲ್ಲರ ಲಂಗೋಟಿಗಳನ್ನಂತೂ ದಿನನಿತ್ಯವೂ ತೊಳೆಯಲೇ ಬೇಕು. ನೂರಾಒಂದು ಲಂಗೋಟಿಗಳನ್ನು ಎಲ್ಲಿ ಒಣಗಿಸುತ್ತಿದ್ದರು? ಒಂದೇ ಕಡೆ ಒಣಗಿಸಿಬಿಟ್ಟರೆ ಮುಗಿಯಿತು. ದಿನನಿತ್ಯವೂ ಬೇರೆ ಬೇರೆಯವರದ್ದೇ ಲಂಗೋಟಿಗಳು. ಎಲ್ಲರೂ ತಮ್ಮ ತಮ್ಮ ಬಚ್ಚಲಿನಲ್ಲೇ ಒಣಗಿಸಿಕೊಳ್ಳುತ್ತಿದ್ದರೂ ಎಂದಿಟ್ಟುಕೊಂಡರೆ, ಮನೆಯಲ್ಲಿ ಕನಿಷ್ಟ ಎಂದರೂ ನೂರಾಒಂದು ರೂಮುಗಳು.. ವಿಥ್ ಅಟ್ಯಾಚಡ್ ಬಾಥ್! ನಮ್ಮ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆಯಂತೆ! ಬರಗೆಟ್ಟ ಸ್ಥಿತಿಯಲ್ಲೂ ರಾಷ್ಟ್ರಪತಿಗೆ ಇಷ್ಟೊಂದು ಐಶಾರಾಮೀ ಜೀವನ ಇರಬೇಕಾದರೆ, ರಾಜರ ಕಾಲದಲ್ಲಿ, ಕೌರವೇಶ್ವರನಿಗೆ ಇಷ್ಟೂ ಇಲ್ಲದಿದ್ದರೆ ಹೇಗೆ? ಆದರೂ ಕನ್‌ಫ್ಯೂಜನ್ ಬೇಡಾ ಎಂದು ಲಂಗೋಟಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ಹೊಲಿಸಿಬಿಡುತ್ತಿದ್ದರು ಎಂಬುದೇ ನನ್ನ ಊಹೆ.

ನೂರಾಒಂದನೆಯದು ಹೆಣ್ಣಾದುದರಿಂದ ಅವಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದಿಟ್ಟುಕೊಂಡರೆ, ಕೌರವರ ಈ ನೂರು ಮಕ್ಕಳು, ಅವರ ಹೆಂಡಿರುಗಳು, ಅವರ ಮಕ್ಕಳುಗಳು, ಒಟ್ಟಾಗಿ, ಕನಿಷ್ಟಪಕ್ಷ, ಒಂದು ನಾನೂರು ಐನೂರು ಜನರಾದರೂ ಇದ್ದಾರು. ಇವರೆಲ್ಲರೂ ಬೆಳಿಗ್ಗೆ ಶೌಚಕ್ಕೆ ಹೋಗಬೇಕು ಎಂದರೆ ಒಟ್ಟೂ ಎಷ್ಟು ಪಾಯಖಾನೆಗಳನ್ನು ಕಟ್ಟಿಸಿಯಾರು? ನಮ್ಮ ಮನೆಯಲ್ಲಿ ಎರಡು ಪಾಯಿಖಾನೆ ಇದ್ದು ಆರು ಜನರಿದ್ದಾಗಲೇ ಎಷ್ಟೋ ಬಾರಿ ಟೈಮಿಂಗ್ ಕ್ಲಾಷ್ ಆಗುತ್ತಿತ್ತು. ಕೌರವರ ಮನೆಯಲ್ಲಿ ಆಗದೇ ಇದ್ದೀತೇ? ಎಲ್ಲರ ರೂಮಿನಲ್ಲಿ ಕೊಮೋಡ್‌ ಅಂತೂ ಇರಲಿಕ್ಕೆ ಸಾಧ್ಯವಿಲ್ಲ. ಯಾಕಂದರೆ ಅದು ಈಗಿನ ಪದ್ಧತಿ. ಎಲ್ಲರೂ ಬಯಲಿಗೆ ಹೋಗುತ್ತಿದ್ದರು ಎನ್ನುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ರಾಜಮನೆತನದವರು. ಬಯಲಿಗೆ ಹೋದರೆ ಜನಸಾಮಾನ್ಯರು ಏನು ಮಾಡಬೇಕು. ಬೆಳಿಗ್ಗೆಯಿಂದ ಪಾಯಿಖಾನೆಗೆ ಕ್ಯೂ ನಿಲ್ಲುತ್ತಿದ್ದರು ಎಂದಿಟ್ಟುಕೊಂಡರೆ ಕೆಲವರ ಸರದಿ ಬರುವಷ್ಟರಲ್ಲಿ ಮಾರನೇ ದಿನವೇ ಆಗಿಹೋಗುತ್ತಿತ್ತೋ ಏನೊ. ಸಾಲಾಗಿ ನಾನೂರು ಪಾಯಖಾನೆ ಕಟ್ಟಿಸಿಟ್ಟಿದ್ದರು ಎಂದಿಟ್ಟುಕೊಂಡರೆ ಅದರಲ್ಲಿ ಖಾಲಿ ಯಾವುದಿದೆ ಎಂದು ಕಂಡುಹಿಡಿಯುವುದಕ್ಕೆ ಏನಾದರೂ ಉಪಾಯ ಮಾಡಿರಲೇ ಬೇಕು. ಇಲ್ಲದಿದ್ದರೆ ಹುಡುಕುವಷ್ಟರಲ್ಲೇ ಅವಘಡ ಸಂಭಿವಿಸುವ ಸಾಧ್ಯತೆಗಳೇ ಜಾಸ್ತಿ. ಈ ಸಮಸ್ಯೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ವ್ಯಾಸರೇ ಹೇಳಬೇಕು.

ಒಟ್ಟಿನಲ್ಲಿ ನನಗನಿಸುವುದೇನಪ್ಪಾ ಅಂದರೆ, ಈ ಎಲ್ಲಾ ಕಾರಣಗಳಿಗೇ, ಕೌರವರಿಗೆ ವಿದ್ಯಾಭ್ಯಾಸಕ್ಕೆ, ಶಸ್ತ್ರಾಭ್ಯಾಸಕ್ಕೆ ಸಮಯವಿಲ್ಲದೆ ಎಲ್ಲರೂ ಕೆಲಸಕ್ಕೆ ಬಾರದವರಾಗಿ, ಪಾಂಡವರ ಎದುರು ಸೋಲಬೇಕಾಯಿತು! ಅದಕ್ಕೇ ಹಿರಿಯರು ಹೇಳಿದ್ದು.
ಚಿಕ್ಕ ಸಂಸಾರ... ಚೊಕ್ಕ ಸಂಸಾರ...
ಒಂದೇ ಪಾಯಖಾನೆಯಿದ್ದರೂ ಎಲ್ಲರಿಗೂ ಸಸಾರ!

Monday, July 1, 2013

ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೆಳಗಿನ ಪ್ಯಾರಾ "ಹೀಗೂ ಉಂಟೆ" ಸ್ಟೈಲ್ ಅಲ್ಲಿ...

ಎಂಟು ವರ್ಷ ಸಾಫ್ಟ್‌ವೇರಲ್ಲಿ ಕೆಲ್ಸಾ... ಕೈ ತುಂಬಾ ಸಂಬಳಾ... ಹೆಂಡ್ತಿ ಮತ್ತು ಮಗು... ಚಿಕ್ಕ ಚೊಕ್ಕ ಸಂಸಾರ... ಇಷ್ಟೆಲ್ಲಾ ಇದ್ರೂ ಯಾವುದೋ ಒಂದು ಕೊರತೆ! ಲೈಫಲ್ಲಿ ತೃಪ್ತಿ ಅನ್ನೋದೇ ಇಲ್ವಾ? ಸಂತೋಷ ಅನ್ನೋದು ಎಲ್ಲಿದೆ? ಎಲ್ಲಾ ಇದ್ರೂ ಏನೋ ಒಂದು ಕಮ್ಮಿ... ಅದೇನು? ಹುಡಕಿದ್ರೆ ಸಿಗುತ್ತಾ ಅಥ್ವಾ ಇಲ್ವಾ? ಅದೇನು ಅಂತಾ ಹುಡ್ಕಕ್ ಆಗ್ದೇ ಇರೋದಾದ್ರು ಯಾಕೆ? ಇದಕ್ಕೆ ಉತ್ತರಾ ಸಿಗತ್ತಾ ಅಥ್ವಾ ಇಲ್ವಾ..? ಹೀಗೆ ಯೋಚ್ಸಕ್ಕೆ ಶುರು ಮಾಡಿದ್ರೆ ನಮಗೆ ಕಾಡುವ ಕಟ್ಟಕಡೆಯ ಪ್ರಶ್ನೆ "ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?"

ಈ ಸಾಫ್ಟ್‌ವೇರ್ ಜೀವನದಲ್ಲಿ ಏನಿದೆ ಅಂತಾ ಜನಾ ಅಷ್ಟೊಂದು ಕ್ರೇಸ್ ಹುಟ್ಟುಹಾಕಿದ್ರು ನನಗಂತೂ ತಿಳೀತಾ ಇಲ್ಲಾ. ’ಕೈ ತುಂಬಾ ಸಂಬಳ’ ಅನ್ನೋದೊಂದೇ ಮಾನದಂಡವಾಗಿಟ್ಕೊಂಡು ಎಲ್ಲಾ ತಂದೆ ತಾಯಂದ್ರು ಮಕ್ಳನ್ನಾ ರಾತ್ರಿ ಕಂಡ ಬಾವೀಲಿ ದಬ್ಬಿಬಿಟ್ರಲ್ಲಾ ಅನ್ನಿಸ್ತಿದೆ. ಈಗೀಗ ಹುಡುಗರೇ ಬುದ್ಧಿವಂತರಾಗಿಬಿಟ್ಟಿದಾರೆ. ಅವರೇ ಹೋಗಿ ಬಾವೀಲಿ ಬೀಳ್ತಾರೆ. ಒಟ್ನಲ್ಲಿ ಹೇಳೋದಾದ್ರೆ ಮನಃಪೂರ್ವಕವಾಗಿ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ ಅಂತಾ ಹೇಳೋ ಸಾಫ್ಟ್‌ವೇರ್ ಇಂಜಿನೀಯರ್‌ಗಳು 20%-30% ಇರಬಹುದು ಅನ್ಸತ್ತೆ! ಹೀಗೆ ಯಾಕ್ ಆಗೋಯ್ತು ಅಂತಾ ತಲೆಮೇಲೆ ಕೈ ಆಡಸ್ತಾ ಒಂದು ರೀಮಿಕ್ಸ್ ...

'ಅಣ್ಣಾ ಬಾಂಡ್’ ಚಿತ್ರದ ’ಬೋಣಿ ಆಗದ ಹೃದಯಾನಾ’ ಧಾಟೀಲಿ...

ಇಂಟರ್ನೆಟ್ಟಿನ ಕೋಡನ್ನಾ ಕಾಪಿ ಪೇಸ್ಟು ಮಾಡ್ಕೊಂಡು
ಕಸ್ಟಮರ್ರಿಗೆ ಕಾಯುವ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ.., ಬೇಕಿತ್ತಾ...
ಮತ್ತೆ ಮತ್ತೆ ನನ್ನನ್ನೇ ನಾನೇ ಕ್ಷಮಿಸಿಕೊಳ್ಳುತ್ತಾ
ಮಾನಿಟರ್‌ನಾ ಪ್ರೀತ್ಸೋ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ...
ಹಾರಾಡ್ತಿರೋ ಮನಸಿಗೊಂದು ಕ್ಯೂಬು ಬೇಕಿತ್ತಾ
ಬಣ್ಣ ಕಾಣದಿರುವ ಬ್ಲಾಕ್ ಎಂಡ್ ವೈಟು ಸ್ಕ್ರೀನು ಬೇಕಿತ್ತಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೀಬೋರ್ಡನ್ನಾ ಕುಟ್ಕೊಂಡು, ಮೌಸನ್ನಾ ಹಿಡ್ಕೊಂಡು
ಸೊಂಟಾ ನೋವು ಮಾಡಿಕೊಂಡ ನಾನು ಲೂಸಾ
ನನಗೂ ಬೋರಿಂಗ್ ಲೈಫಿಗೂನು ಖಾಸಾ ಖಾಸಾ
ಲೈಫು ಒಂದು ಪೋಯಮ್ಮು, ಇರಲೇ ಬೇಕು ಫ್ರೀಡಮ್ಮು
ಕುಂತೂ ನೋಡ್ದೆ ನಿಂತೂ ನೋಡ್ದೆ ಯೂಸಾಗ್ತಾ ಇಲ್ಲಾ
ಎದ್ರೂ ಕೂತ್ರೂ ಕ್ಯೂಬು ಬಿಟ್ರೆ ಬೇರೆ ಇಲ್ಲಾ
ಕೀಬೋರ್ಡ್ ಕುಟ್ಟೋ ಸೌಂಡು ಕೇಳ್ದ್ರೆ ಎಂಥಾ ಸಂಗೀತಾ
ಬಣ್ಣಾ ಮಾಸಿದ ಸ್ಕ್ರೀನಿನಲ್ಲಿ ನೋಡ್ದೆ ಎಂಥಾ ಚಿತ್ತಾರಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇ ಬೇಕಿತ್ತಾ

ಟೆಕ್ಕಿಗಳಿಗೆ ಮಾತ್ರಾನೆ ಹೆಣ್ಣು ಕೊಟ್ರು ನಮ್ಮೋರು
ಹೆಣ್ಣು ಪಡ್ಯಕ್ ಹೋಗಿ ಜನ ಹಳ್ಳಕ್ಕೇ ಬಿದ್ರು
ಕೆಲವ್ರಂತೂ ಹೆಣ್ಣಿಲ್ದೇನೇ ಕೂದಲ್ ಕಳ್ಕಂಡ್ರು
ಆಟ ಪಾಠ ಮರ್ತೋಯ್ತು ಕುಟ್ಟೋ ಕೆಲ್ಸ ಗಟ್ಟಾಯ್ತು
ಹೆಂಡ್ತೀ ಜೊತೆಗೂ ಫೇಸ್‌ಬುಕ್ಕಲ್ಲಿ ಚಾಟು ಶುರುವಾಯ್ತು
ಮಕ್ಕಳನ್ ಅನ್‌ಲೈನ್ ಶಾಪಿಂಗ್ ಮಾಡೋ ಕಾಲ ಬಂದೋಯ್ತು
ಎಲ್ಲಾ ಇದ್ರೂ ಕೂಡಾ ನಮ್ದು ಒಂದೇ ಲಾಜಿಕ್ಕು
ಲೈಫಲಿ ಆಸ್ತಿ ಮಾಡಿ ತೀರಿಕೊಳ್ಳೋದಿಕ್ಕೇ ಲಾಯಕ್ಕು
ಅಪ್ಪಿ ತಪ್ಪಿ ಬದುಕೋ ಅರ್ಥ ಹೊಳದ್ರೇ ಮ್ಯಾಜಿಕ್ಕು

ಸೂರ್ಯ ಹುಟ್ಟೋ ಟೈಮಲ್ಲಿ ಕ್ಯಾಲೆಂಡರ್ ನೋಡುತ್ತಾ
ವೀಕೆಂಡಿಗೆ ಕಾಯುವ ಕ್ಯಾಮೆ ಬೇಕಿತ್ತಾ

ಎಲ್ಲಿ ನೋಡಿದರಲ್ಲಿ ಕ್ಯೂಬುಗಳು, ಮಧ್ಯದಲ್ಲಿ ಅರೆನೆರೆತ ಕೂದಲುದುರಿರುವ ತಲೆಗಳು, ಬೇಕೋ ಬೇಡವೋ ಅನ್ನುವ ನಗೆಗಳು, ಕಾಫೀ ಕಪ್‌ಗಳು, ಗಂಟೆಗೊಮ್ಮೆ ಟಾಯ್ಲೆಟ್ ವಿಸಿಟ್‌ಗಳು... ಕಟಪಟ ಸದ್ದುಗಳು, ಬಿಟ್ಟಿ ಮೆಸೇಜ್‌ಗಳು, ಪ್ರಾಣ ಉಳಿಸುವ ಲಂಚ್‌ಗಳು, ಟೈಂ ಪಾಸ್‌ಗಾಗಿ ಮೀಟಿಂಗ್‌ಗಳು, ಕಳೆದು ಹೋಗುತ್ತಿರುವ ಟೈಂಗಳು... ಇಷ್ಟರಲ್ಲೇ ನಮ್ಮ ಲೈಫ್‌ಗಳು...!

Tuesday, June 18, 2013

ಗುಟ್ಕಾ ನಿಷೇಧ ಹಾಗೂ ಸೈಡ್ ಇಫೆಕ್ಟ್ಸ್

ಯಾರು ಏನೇ ಹೇಳಿಕೊಳ್ಳಲಿ, ಸರ್ಕಾರವನ್ನು ತೆಗಳುವವರು ತೆಗಳುತ್ತಲೇ ಇರಲಿ. ಆದರೆ ಇವರು ಯಾರೂ ನಮ್ಮ ಘನ
ಸರ್ಕಾರದ ಸದುದ್ದೇಶವನ್ನು ತಿಳಿದುಕೊಳ್ಳುತ್ತಲೇ ಇಲ್ಲ! ನೇರವಾಗಿ ಹೇಳಿಕೊಳ್ಳಲಾಗದ ಕಾರಣಗಳು ’ಗುಟ್ಕಾ’ ನಿಷೇಧದ ಹಿಂದಿರುವುದು ಸ್ವಲ್ಪ ಯೋಚಿಸಿದವರಿಗೆಲ್ಲರಿಗೂ ಅರಿವಾಗುತ್ತದೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪ್ರತಿಫಲವಾಗಿ ಒಳಿತು ಕೆಡಕುಗಳೆರಡೂ ಆಗೇ ಆಗುತ್ತದೆ. ಈ ನಿರ್ಧಾರವೂ ಇದೇ ರೀತಿಯ ಮಿಶ್ರ ಪ್ರತಿಫಲಗಳನ್ನು ಹೊಂದಿದೆ. ಮೊದಲಿಗೆ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ಮರ್ಮ ತಿಳಿದುಕೊಳ್ಳೋಣ.

ಭಾರತದ ಅತೀ ದೊಡ್ಡ ಸಮಸ್ಯೆ ಯಾವುದು? ಜನಸಂಖ್ಯೆ! ಈ ಜನಸಂಖ್ಯೆ ನಿವಾರಣೆಗೆ ಸರ್ಕಾರ ಎಷ್ಟೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.. ಎಷ್ಟೊಂದು ಖರ್ಚು ಮಾಡಿಲ್ಲ! ಸರ್ಕಾರಿ ಆಸ್ಪತ್ರೆಗಳಲ್ಲಿ ನಿರೋಧ್‌ಗಳನ್ನೂ ಪುಗ್ಸಟ್ಟೆಯಾಗಿ ಕೊಟ್ಟರು. ಜನ ಅದನ್ನು ಮಕ್ಕಳು ಆಡುವ ಬಲೂನ್ ಎಂದುಕೊಂಡರೇ ಹೊರತು ಉಪಯೋಗ ತೆಗೆದುಕೊಂಡಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟಿರುವ ಸರ್ಕಾರ ಈಗ ’ಗುಟ್ಕಾ’ ನಿಷೇಧಿಸಿದೆ! ಇದರ ಹಿಂದಿರುವ ಕಾರಣ ಸಿಂಪಲ್ಲು. ಗುಟ್ಕಾ ತಿಂದರೆ ಎಷ್ಟು ಜನ ಸಾಯಬಹುದು? ಕ್ಯಾನ್ಸರ್ ಆಗಿ ಹೆಚ್ಚು ಅಂದರೆ ಒಬ್ಬನೇ ಒಬ್ಬ ಸಾಯಬಹುದು. ಅದನ್ನೇ ನಿಷೇಧಿಸಿಬಿಟ್ಟರೆ? ಗುಟ್ಕಾ ಸೇವಿಸುವವನು ಚಟಕ್ಕಾಗಿ ಏನಾದರೂ ಮಾಡಲೇ ಬೇಕಲ್ಲಾ... ಅವನ ಮುಂದಿರುವ ನೇರವಾದ ಆಯ್ಕೆ ಸಿಗರೇಟ್. ಗುಟ್ಕಾ ಸೇವಿಸುವ ಎಲ್ಲಾ ಜನರು ಗುಟ್ಕಾ ತ್ಯಜಿಸಿ ಸಿಗರೇಟ್ ಸೇದುವುದನ್ನು ರೂಢಿಸಿಕೊಂಡರೆ, ಅವನೊಟ್ಟಿಗೆ ಅವನು ಬಿಟ್ಟ ಹೊಗೆಯಲ್ಲೇ ಬದುಕಬೇಕಾದ ಇನ್ನೂ ಮೂರ್ನಾಲ್ಕು ಜನರನ್ನು ಕರೆದುಕೊಂಡೇ ಪರಲೋಕಕ್ಕೆ ಧಾವಿಸುತ್ತಾನೆ! ಜನಸಂಖ್ಯೆ ಕಡಿಮೆಯಾಗುವ ಮಟ್ಟ ಮೂರ್ನಾಲಕ್ಕು ಪಟ್ಟು ಜಾಸ್ತಿಯಾಗುತ್ತದೆ! ಈ ದೇಶೋಧ್ಧಾರದ ಕೆಲಸವನ್ನು ಅರ್ಥ ಮಾಡಿಕೊಳ್ಳದ ಜನ ಈ ನಿಯಮ ದುರುದ್ದೇಶದ್ದು ಎನ್ನುತ್ತಿದ್ದಾರೆ. ದೇವರೇ ಅವರಿಗೆ ಬುದ್ಧಿ ಕೊಡಬೇಕು.

ಆದರೂ ಈ ನಿರ್ಧಾರದಿಂದ ಜನರಿಗೆ ತೊಂದರೆಗಳೇ ಇಲ್ಲಾ ಎಂದೇನಲ್ಲಾ. ಬಹಳಷ್ಟು ತೊಂದರೆಗಳುಂಟಾಗುತ್ತವೆ. ಈ ಕೆಳಗಿನವು ಪ್ರಮುಖವಾದವುಗಳು.

೧. ನಗರದ ಧೋಬಿಗಳಿಗೆ ಕೆಲಸ ಕಮ್ಮಿಯಾಗಲಿದೆ! ಜನ ಗುಟ್ಕಾ ಸೇವಿಸಿ, ಬಸ್‌ಸ್ಟಾಪ್ ಗಳಲ್ಲಿ, ಬಸ್ ಚಲಿಸುವಾಗ, ಅಥವಾ ಅವರೇ ಚಲಿಸುತ್ತಿರುವಾಗ ಅತ್ತ ಇತ್ತ ನೋಡದೆ ಉಗುಳಿ ಪಕ್ಕದವರ ಬಟ್ಟೆಗೆ ಕೆಂಪು ಬಣ್ಣ ಬಳಿಯುವುದು ಕಡಿಮೆಯಾಗುವುದರಿಂದ ನಗರದ ಧೋಬಿಗಳಿಗೆ ಇದರಿಂದ ಲಾಸ್ ಆಗಲಿದೆ!

೨. ಪೌರ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ! ಕಸಗುಡಿಸುವವರಿಗೆ ಕಡಿಮೆ ಕೆಲಸ ಬೀಳುವುದರಿಂದ ಅವರ ಸಂಖ್ಯೆ ತಗ್ಗಿಸಲು ಮುನಿಸಿಪಾಲಿಟಿಯವರು ನಿರ್ಧರಿಸಬಹುದು.

೩. ಶಬ್ದ ಮಾಲಿನ್ಯ ಹೆಚ್ಚಲಿದೆ! ಗುಟ್ಕಾ ತಿಂದು ಮಾತನಾಡಲಾಗದೆ 10-15 ನಿಮಿಷ ಮೌನವೃತ ಆಚರಿಸುವ ಜನ ಗುಟ್ಕಾ ನಿಷೇಧದಿಂದಾಗಿ ಬಾಯಿಗೆ ಬೀಗ ಹಾಕುವ ಕೆಲಸವನ್ನು ಬಿಡುತ್ತಾರೆ. ಈಗಲೇ ಲಿಮಿಟ್ ಮೀರಿರುವ ಶಬ್ದಮಾಲಿನ್ಯ ಇನ್ನೆಷ್ಟು ತೊಂದರೆ ತಂದೊಡ್ಡಬೇಕೋ...

೪. ಕಲಾರಸಿಕರ ಕೊರತೆ ಎದ್ದುಕಾಣಲಿದೆ! ಯಾವುದೇ ಸಂಗೀತ ಕಚೇರಿಯಾಗಲಿ, ನಾಟಕವಾಗಲಿ, ನೃತ್ಯವಾಗಲಿ ನೆಡೆಯುತ್ತಿರುವಾಗ ಪ್ರೇಕ್ಷಕರಲ್ಲಿ ಆಸಕ್ತಿಯಿಂದ ಕೇಳುತ್ತಿರುವ/ನೋಡುತ್ತಿರುವ ಪ್ರೇಕ್ಷಕರಲ್ಲಿ ಗುಟ್ಕಾ ಸೇವಿಸಿದವರ ಸಂಖ್ಯೆಯೇ ಹೆಚ್ಚು. ಗುಟ್ಕಾ ಸೇವಿಸಿರುವುದರಿಂದ ಅಕ್ಕ ಪಕ್ಕದವರ ಹತ್ತಿರ ಮಾತನಾಡಲಾಗದೆ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ನಿರ್ಧಾರದ ನಂತರ, ಸಿಗರೇಟ್ ಸೇದಲು ಎದ್ದು ಹೋಗಬಹುದು. ಅಥವಾ ಪಕ್ಕದವರ ಜೊತೆ ಹರಟುತ್ತಾ ಕೂರಬಹುದು. ಕಲಾವಿದರಂತೂ ಈ ಗುಟ್ಕಾವನ್ನು ಮಿಸ್ ಮಾಡಿಕೊಳ್ಳುತ್ತಾರೆ.

೫. ದಾರಿ ತಪ್ಪಿಸಿಕೊಂಡವರಿಗೆ ದೇವರೇ ಗತಿ! ಗುಡ್ಡಗಾಡಿನಲ್ಲಿ ಓಡಾದಿದವರಿಗೆ ಈ ಪರಿಸ್ಥಿತಿಯ ಅರಿವು ಸಹಜವಾಗೇ ಆಗುತ್ತದೆ. ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ನಿರ್ಧಾರ ಮಾಡುವುದು ದಾರಿಯ ಪಕ್ಕದಲ್ಲಿ ಬಿದ್ದ ಗುಟ್ಕಾ ಚೀಟಿಗಳು. ಗುಟ್ಕಾ ನಿಷೇಧದಿಂದ ಎಲ್ಲಾ ದಾರಿಗಳೂ ಸುಡುಗಾಡಿಗೇ ಕೊಂಡೊಯ್ಯುತ್ತವೇನೋ ಎಂದು ಭಾಸವಾಗಬಹುದು.

ಇಷ್ಟೊಂದು ಅನಾನುಕೂಲತೆಗಳಿದ್ದರೂ ಭಾರತ ನಿರ್ಮಾಣಕ್ಕೋಸ್ಕರ ಜನ ಹಾಗೂ ಸರ್ಕಾರ ಬದ್ಧವಾಗಿ ನಿಂತು ಗುಟ್ಕಾವನ್ನು ನಿಷೇಧಿಸಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸರ್ಕಾರ ಮೇಲ್ಕಂಡ ಅನಾನುಕೂಲತೆಗಳಿಗೂ ಪರಿಹಾರ ಕಂಡುಹಿಡಿಯುತ್ತದೆ ಎನ್ನುವುದು ಒಬ್ಬ ಜನಸಾಮಾನ್ಯನ ವಿಶ್ವಾಸ!

Tuesday, February 19, 2013

ಸ್ವಾತಂತ್ರ್ಯ ಹೋರಾಟದ ಪ್ರಹಸನ!

ಅಗಸ್ಟ್ 15ರಂದು ಹೈಸ್ಕೂಲಿನಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಅವಕಾಶ ಒದಗಿಬಂದಿತ್ತು. ಸ್ವತಂತ್ರ  ದಿನಾಚರಣೆಯಂದು ಏನಾದರು ಮಾಡಿದರೆ ಅದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೇ ಆಗಿರಬೇಕು ಎಂಬುದು ಎಲ್ಲರ ಅಭಿಮತ. ನೃತ್ಯರೂಪಕ ಮಾಡಲಂತೂ ಸಾಧ್ಯವಿರಲಿಲ್ಲ. ನಮ್ಮಲ್ಲಿ ನೃತ್ಯಮಾಡುವವರಿರಲಿ... ಹಾಡು ಹಾಡಲೂ ಯಾರೂ ಇರಲಿಲ್ಲ. ಹೆಣ್ಣು ಮಕ್ಕಳನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವುದು ಎಲ್ಲರಿಗೂ ಇಷ್ಟವಿದ್ದರೂ, "ಹೆಣ್ ಮಕ್ಳನ್ನಾ ಮಾತ್ರ ಹಾಕ್ಕೊಂಡು ಮಾಡುದ್ ಬೇಡಾ.. ಹಾಂ..." ಎಂದೇ ಎಲ್ಲರೂ ಹೇಳುತ್ತಿದ್ದರು. ಇನ್ನು ಉಳಿದಿರುವುದು ಒಂದೇ. ನಾಟಕ ಮಾಡಬೇಕು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ನಾಟಕ ಬರೆದು ಕೊಡುವವರ ಕೊರತೆ. ಕೊನೆಗೆ ನಮ್ಮದೇ ಪಠ್ಯದಲ್ಲಿದ್ದ ಒಂದು ಪಾಠವನ್ನೇ ಆಯ್ದುಕೊಂಡು ಅದನ್ನೇ ನಾಟಕ ಮಾಡುವುದು ಎಂದು ನಿರ್ಧರಿಸಿಬಿಟ್ಟೆವು.

ಕಾನ್ಸೆಪ್ಟು ಬಹಳ ಸಿಂಪಲ್ಲು. ಕೆಲವು ಹೋರಾಟಗಾರರು ಹಾಡು ಹಾಡುತ್ತಾ, ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುವ ದೃಶ್ಯ. ಪಾಠದಲ್ಲಿ ಬಂದಿರುವ ಹಾಡು, ಮಾತುಗಳನ್ನೇ ಒಬ್ಬೊಬ್ಬರಾಗಿ ಹೇಳುವುದು. ಸ್ವಲ್ಪ ಸಮಯದ ನಂತರ ಪೋಲೀಸರು ಬಂದು ಇದನ್ನೆಲ್ಲ ಮಾಡಬೇಡಿ ಎಂದು ಹೇಳುವುದು. ಹೋರಾಟಗಾರರು ಕದಲದೇ ಹಾಗೇ ನಿಲ್ಲುವುದು. ಪೋಲೀಸರು ಲಾಠಿ ಚಾರ್ಜ್ ಮಾಡುವುದು. ಹೋರಾಟಗರರು ವಂದೇ ಮಾತರಂ ಘೋಷಣೆ ಕೂಗುತ್ತಾ ಅಲ್ಲೇ ಕುಸಿದು ಬೀಳುವುದು. ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಜನರ ಮುಂದೆ ತೋರಿಸುತ್ತಿರುವುದರ ಗಾಂಭೀರ್ಯದ ಅರಿವು ನಮಗೆ ಯಾರಿಗೂ ಇಲ್ಲದಿದ್ದರೂ, ಎಲ್ಲರಿಗೂ ಅಭಿನಯ ಮಾಡಿ ಕ್ಲಾಸಿನ ಎಲ್ಲ ಹೆಣ್ಣುಮಕ್ಕಳ ಮುಂದೆ ಹೀರೋ ಆಗುವ ಆಸೆಯಂತೂ ಉತ್ಕಟವಾಗಿತ್ತು. ಸ್ಕ್ರಿಪ್ಟ್ ಫೈನಲೈಸ್ ಆಗಿಹೋಯಿತು. ಪಾತ್ರಗಳನ್ನೂ ಹಂಚಿ ಆಯಿತು. ಎಲ್ಲರೂ ಅವರವರ ಮಾತುಗಳನ್ನು ಕಂಠಪಾಠ ಮಾಡಿಕೊಳ್ಳಲು ಪ್ರಾರಂಭಿಸಿದರು.

ಎರಡು ಮುಖ್ಯ ಪಾತ್ರಗಳು. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವನೇ ಮೆರವಣಿಗೆಯನ್ನು ಮುನ್ನಡೆಸುತ್ತಿರುವವ. ಇನ್ನೊಬ್ಬ ಪೋಲೀಸ್ ಅಧಿಕಾರಿ. ಇನ್ನು ಒಂದಿಷ್ಟು ಹೋರಾಟಗಾರರು ಮತ್ತೆ ಒಂದಿಷ್ಟು ಪೋಲೀಸ್ ಪೇದೆಗಳು. ಕೇವಲ 8-10 ನಿಮಿಷಗಳ ಪ್ರದರ್ಶನವಾದುದರಿಂದ ಎಲ್ಲರಿಗೂ ಓವರ್ ಕಾನ್ಫಿಡೆನ್ಸ್. ತಕ್ಕಮಟ್ಟಿಗೆ ರೆಹರ್ಸಲ್ ಮಾಡಿಕೊಂಡು, ಎಲ್ಲರೂ ತಮ್ಮ ತಮ್ಮ ಕಾಸ್ಟೂಮ್ಸ್ ಹೊಂದಿಸಿಕೊಂಡು ಅಗಸ್ಟ್ 15ರಂದು ಪ್ರದರ್ಶನಕ್ಕೆ ಸಿದ್ಧರಾದೆವು. ಖಾಕಿ ಚಡ್ಡಿ ಹಾಕಲು ವಿರೋಧ ವ್ಯಕ್ತಪಡಿಸಿದ್ದ ಪೋಲೀಸ್ ಅಧಿಕಾರಿ ಮಾರುತಿ, ಕೊನೆಗೂ ಒಂದು ಖಾಕಿ ಪ್ಯಾಂಟನ್ನು ಹೊಂದಿಸಿಕೊಂಡು ಬಂದಿದ್ದ. ಪೇದೆಗಳಿಗೆ ಚಡ್ಡಿಯೇ ಗತಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಜುಬ್ಬ, ಪಂಚೆ ಮತ್ತು ಗಾಂಧೀ ಟೋಪಿ. ದ್ವ್ಹಜಾರೋಹಣ ಎಲ್ಲಾ ನೆರವೇರಿಸಿದ ಮೇಲೆ ಕಾರ್ಯಕ್ರಮಗಳು ಪ್ರಾರಂಭವಾದವು. ಒಂದೆರಡು ಪ್ರವಚನಕಾರರು ಅದೇ ಗಾಂಧಿ ನೆಹರು ಪುರಾಣಗಳನ್ನು ಪಠಿಸಿದ ಮೇಲೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು.

ಮೊದಲಿಗೆ ದೇಶಭಕ್ತಿಗೀತೆ ಅದು ಇದು ಎಲ್ಲಾ ಕಾರ್ಯಕ್ರಮಗಳು. ಕೊನೆಯಲ್ಲಿ ನಮ್ಮ ನಾಟಕ! ಎಲ್ಲರಿಗೂ ಪುಕು ಪುಕು ಶುರುವಾಗಿತ್ತು. ಎಲ್ಲರೂ ಇದೀರೇನಪ್ಪಾ ಎಂದು ಹುಡುಕಿದರೆ ನಮ್ಮ ಪೋಲೀಸ್ ಪಾತ್ರಧಾರಿ ಮಾರುತಿಯೇ ಮಂಗಮಾಯ. ಕೊನೆಗೆ ಇನ್ನೇನು ನಮ್ಮ ನಾಟಕದ ಘೋಷಣೆಯಾಗಿಯೇ ಬಿಡುತ್ತದೆ ಎನ್ನುವಾಗ ಪ್ರತ್ಯಕ್ಷನಾದ. ಪೋಲೀಸ್ ಲಾಠಿ ತರುವುದು ಮರೆತು ಇಲ್ಲೇ ಎಲ್ಲೋ ಹೋಗಿ ಕೊನೆಗೂ ಒಂದು ಲಾಠಿಯ ವ್ಯವಸ್ಠೆ ಮಾಡಿಕೊಂಡು ಬಂದಿದ್ದ.

ಪ್ರದರ್ಶನ ಪ್ರಾರಂಭವಾಯಿತು. ನಾವು ಸ್ವಾತಂತ್ರ್ಯಹೋರಾಟಗಾರರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಹಾಡು ಹಾಡುತ್ತಾ ಜನರ ಮಧ್ಯದಲ್ಲೆಲ್ಲಾ ಓಡಾಡಿ ನಾಟಕಕ್ಕೆ ಭರ್ಜರಿ ಪ್ರಾರಂಭ ಒದಗಿಸಿಬಿಟ್ಟೆವು. ಇನ್ನು ಪೋಲೀಸರ ಎಂಟ್ರಿ. ಮಾರುತಿ ಮತ್ತು ಇಬ್ಬರು ಪೇದೆಗಳು ಗತ್ತಿನಿಂದ ಬರುತ್ತಿದ್ದಂತೆ ಜನರೆಲ್ಲಾ ಗುಸುಗುಸು ಶುರುಮಾಡಿದರು. ಲಾಠಿ ತಿರಿಗಿಸುತ್ತಾ ಬಂದ ಪೋಲೀಸ್ ಇನ್‌ಸ್ಪೆಕ್ಟರ್‌ನ   ಸ್ಟೈಲ್ ನೋಡಿ ಜನ ದಂಗಾಗಿ ಹೋಗಿದ್ದರು. ತನ್ನ ಬಗ್ಗೆ ಜನ ಗಮನ ಕೊಡುತ್ತಿದ್ದಾರೆ ಎಂದು ಹುರುಪಿನಿಂದಲೋ ಏನೋ ಮಾರುತಿ ತಾನು ಹಿಡಿದಿದ್ದ ಲಾಠಿಯನ್ನು ಇನ್ನೋ ಜೋರಾಗಿ ತಿರುಗಿಸತೊಡಗಿದ. ಇವನು ತಿರುಗಿಸಿದ ರಭಸಕ್ಕೆ ಆ ಲಾಠಿ ಅವನ ಕೈ ಜಾರಿ ಮೇಲಕ್ಕೆ ಹಾರಿ ಎದುರು ಕೂತಿದ್ದ ಜನರ ಮಧ್ಯೆ ಹೋಗಿ ಬಿದ್ದುಬಿಟ್ಟಿತು. ಜನ ಹೋ.. ಎಂದು ಚೀರಲು ಶುರುಮಾಡಿಬಿಟ್ಟರು. ಲಾಠಿ ಕೈ ತಪ್ಪಿತಲ್ಲಾ ಎಂದು ತರಲು ಹೊರಟ ಮಾರುತಿ ಜನರ ಚೀರಾಟ ಕೇಳಿ ಮಧ್ಯದಲ್ಲೇ ನಿಂತು ಬಿಟ್ಟ. ಜನ ಹುಚ್ಚಾಪಟ್ಟೆ ನಗಲು ಶುರುಮಾಡಿಬಿಟ್ಟರು. ಏನು ಮಾಡುವುದು ಎಂದೇ ತೊಚದೆ ಪೋಲಿಸ್ ಇನ್‌ಸ್ಪೆಕ್ಟರ್ ಕೈಯಲ್ಲಿ ಲಾಠಿಯೇ ಇಲ್ಲದೆ ಲಾಠಿ ಚಾರ್ಜ್ ಘೋಷಿಸಿಬಿಟ್ಟ. ಪೇದೆಗಳು ಮತ್ತು ಇನ್‌ಸ್ಪೆಕ್ಟರ್ ಮಾರುತಿ ಕೈಯಿಂದಲೇ ಹೋರಾಟಗಾರರಿಗೆ ಗುದ್ದಲು ಶುರುಮಾಡಿದರು. ಜನರ ನಗು ಚೀರಾಟ ಇನ್ನೋ ಜೋರಾಯಿತು. ಸ್ವಾತಂತ್ಯ್ರ ಹೋರಾಟಗಾರರೋ ಅಲ್ಲೇ ಘೋಷಣೆ ಕೂಗುತ್ತಾ ಕುಸಿಯುವ ಬದಲು, ಈ ಪೋಲೀಸರ ಗುದ್ದು ತಪ್ಪಿಸಿಕೊಳ್ಳಲು ಓಡಲು ಶುರುಮಾಡಿಬಿಟ್ಟರು. ಒಂದಿಬ್ಬರು ಗುದ್ದು ತಿಂದ ಸಿಟ್ಟಿಗೆ ಅಲ್ಲೇ ಪೋಲೀಸರಿಗೆ ವಾಪಸ್ ಗುದ್ದಿ ದಿಕ್ಕಾಪಾಲಾಗಿ ಓಡಿಹೋದರು. ಪೋಲೀಸರು ಅವರ ಹಿಂದೆ ಅಟ್ಟಿಸಿಕೊಂಡು ಹೋದರು. ರಂಗಸ್ಥಳ ಒಮ್ಮೆಯೇ ಖಾಲಿಯಾಗಿಹೋಯಿತು. ನಾಟಕ ಮುಗಿಯಿತು ಎಂದು ಹೇಳಲೂ ಯಾರೂ ಇಲ್ಲದೆ,  ಜನರೇ ಅರ್ಥಮಾಡಿಕೊಂಡು ನಗುವನ್ನು ತಡೆದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಸಿದ್ಧರಾದರು.

ಸ್ವಾತಂತ್ಯ್ರ ಹೋರಾಟ ಒಂದು ಪ್ರಹಸನವಾಗಿ ಕೊನೆಗೊಂಡಿತು. ಈಗ ನಮ್ಮನ್ನು ನಾವೇ ನೋಡಿಕೊಂಡರೆ, ನಿಜಕ್ಕೂ ನಮ್ಮ ಹಿಂದಿನವರು ಹೋರಾಡಿದ್ದು ಪ್ರಹಸನದಂತೆಯೇ ಭಾಸವಾಗುತ್ತದೆ!