Thursday, August 14, 2008

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು


ರಚನೆ: ಶ್ರೀಯುತ ಚಂದ್ರಶೇಖರ ಭಂಡಾರಿ


ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು
ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ ಮಹಿಮೆಯು
ಬಣ್ಣಿಸಲಸದಳವು ಬಣ್ಣಿಸಲಸದಳವು

ಧವಳ ಹಿಮಾಲಯ ಮಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು

ಕಾಶ್ಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂಫಲವು ನಮ್ಮೀ ತಾಯ್ನೆಲವು

ಪುಣ್ಯವಂತರಿಗೆ ಇದುವೇ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಅಭಯದಾಯಕ
ಯುಗಯುಗದೀ ನಿಲುವು ನಮ್ಮೀ ತಾಯ್ನೆಲವು

ಆಡಿಯೋ ಕೇಳಲು ಇಲ್ಲಿ ಕ್ಲಿಕ್ಕಿಸಿ

1 comment:

ದೀಪಕ said...

ನಮಸ್ಕಾರ/\:)

ಉತ್ತಮವಾದ ದೇಶಭಕ್ತಿ ಗೀತೆ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ