Tuesday, February 8, 2011

ನಾವು ಕನ್ನdigaru - ೫

ನನಗೇ ಇಂಥವರು ಕಾಣುತ್ತಾರೋ ಅಥವಾ ನಾನೇ ಇಂಥವರನ್ನು ಹುಡುಕುತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಘಟನೆಗಳು ಬೆಂಗಳೂರಿನಲ್ಲಂತೂ ಮಾಮೂಲು. ಹೊರಗಡೆ ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿಹೋಗಿಬಿಟ್ಟಿದೆ! ಅಂತಹ ಘಟನೆಗಳಲ್ಲಿ ವಿಶೇಷತೆ ಏನೂ ಉಳಿದಿಲ್ಲ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ! (ಎಂದು ನಾನೂ ಭಾವಿಸಿದ್ದೆ). ಅಂಗಡಿ-ಮುಂಗಟ್ಟುಗಳಲ್ಲೆಲ್ಲ ಕನ್ನಡ ಪುಸ್ತಕಗಳು, ಶುಭಾಶಯ ಪತ್ರಗಳು, ಕನ್ನಡ ಬರಹಗಳಿರುವ ಟೀ ಶರ್ಟ್‌ಗಳು ತುಂಬಿ ತುಳುಕುತ್ತಿತ್ತು. ಎಲ್ಲ ಕಡೆ ಕನ್ನಡದಲ್ಲೇ ಮಾತಾಡಿ ಎನ್ನುವ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಬೆಂಗಳೂರಿನಲ್ಲಿ ಇಷ್ಟೊಂದು ಜನ ಕನ್ನಡಾಭಿಮಾನಿಗಳು ಇದಾರಲ್ಲಾ ಎಂದು ಸಂತೋಷಪಡುತ್ತಿರುವಾಗಲೇ ನನ್ನ ಎದುರಿಗಿದ್ದ ಒಂದು ಹೆಣ್ಣು ಪಕ್ಕದಲ್ಲಿದ್ದ ತನ್ನ ಗೆಳತಿಗೆ ಹೇಳಿತು
"Hey.. I'll be just lookin at the T'shirts... ಆಯ್ತಾ..."

ಈ ಕೊನೆಯ "ಆಯ್ತಾ" ಬರದಿದ್ದರೆ, ನಾನು ಯಾರೋ ಉತ್ತರಭಾರತದವರು ಕನ್ನಡದಲ್ಲಿ ಆಸಕ್ತಿ ಹೊಂದಿ ಬಂದಿದ್ದಾರೆ ಎಂದೇ ಅಂದುಕೊಂಡುಬಿಡುತ್ತಿದ್ದೆ! ಈ ಭಾಷಾಪ್ರೇಮಿಯೂ ಕನ್ನಡದವಳೇ ಎಂದು ಗೊತ್ತಾಗಿದುದಕ್ಕೆ ಖೇದವಾಯಿತು.

ಕನ್ನಡ ರಕ್ಷಿಸಲು, ಪರಭಾಷಾ ಚಿತ್ರಗಳನ್ನು ವಿರೋಧಿಸಬೇಕಾಗಿಲ್ಲ. ತಮಿಳರಿಗೆ, ತೆಲುಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕನ್ನಡದಲ್ಲಿ ತಿದ್ದಬೇಕಾಗಿಲ್ಲ, ಇಂಗ್ಲೀಷ್ ಕಂಡರೆ ಅಸಹ್ಯಪಡಬೇಕಾಗಿಲ್ಲ. ಎಲ್ಲ ಕನ್ನಡಿಗರು ಕೊನೆಯಪಕ್ಷ ಕನ್ನಡಿಗರೊಂದಿಗಿದ್ದಾಗ ಕನ್ನಡದಲ್ಲೇ ಮಾತಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರೆ ಸಾಕು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Wednesday, January 12, 2011

ಗಲಿಬಿಲಿ ಇನ್ ಅಸ್ಸೆಂಬ್ಲಿ


ಪ್ರತೀ ಬಾರಿ ವಿಧಾನಸಭೆ ಕಲಾಪ ಏರ್ಪಡಿಸಿದಾಗಲೂ ನೆಡೆಯುವುದು ಈ ಕೆಳಗಿನ ಘಟನೆಗಳು ಮಾತ್ರ!
೧. ಪ್ರತಿಪಕ್ಷಗಳು ಆಡಳಿತ ಪಕ್ಷದ ಯಾವುದೋ ಒಂದು ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುವುದು.
೨. ಆಡಳಿತ ಪಕ್ಷ ಅದನ್ನು ಮಾಡದಿರುವುದು
೩. ಪ್ರತಿಪಕ್ಷಗಳ ಗಲಾಟೆ, ಕೂಗಾಟ, ರಂಪಾಟ, ಬೈಗುಳಗಳು (ಈಗೀಗ ಸೆಡ್ಡು ಹೊಡೆಯುವುದು, ಬಟ್ಟೆ ಹರಿದುಕೊಳ್ಳುವುದು)
೪. ಯಾವುದೇ ವಿಷಯ ಚರ್ಚೆ ಆಗದೆ ಸದನದ ಮುಂದೂಡಿಕೆಯಾಗುವುದು.

ಯಾರಿಗೇ ಆಗಲಿ ಒಂದೇ ಕೆಲಸ ಮಾಡಿ ಮಾಡಿ ಬೇಜಾರಾಗುವುದು ಸಹಜ. ಇದನ್ನೇ ಪ್ರತಿಸಲವೂ ಮಾಡಿ ನಮ್ಮ ರಾಜಕಾರಣಿಗಳಿಗೂ ಒಮ್ಮೆ ಬಹಳ ಬೇಜಾರಾಗಿಹೋಯಿತು. ಕೆಲವರಿಗಂತೂ ವಿಧಾನಸೌಧ ಕಂಡರೆ ವಾಕರಿಕೆ ಬರುವಷ್ಟು ಬೇಸರವಾಗಿಬಿಟ್ಟಿತ್ತು. ಕೆಲವರಂತೂ ಬೆಂಗಳೂರಿನಲ್ಲಿ ವಿಧಾನಸೌಧದ ಅಡ್ರೆಸ್ ಕೇಳಿಕೊಂಡು ಬರುವ ಸ್ಥಿತಿಗೆ ತಲುಪಿಬಿಟ್ಟಿದ್ದರು! ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರುವಾಗ ಮತ್ತೆ ಕಲಾಪಗಳಲ್ಲಿ ಆಸಕ್ತಿ ಮೂಡಿಸಲು ಏನಾದರು ಮಾಡಬೇಕೆಂದುಕೊಂಡು ಒಂದು ಕಮಿಟಿಯನ್ನು ರಚಿಸಲಾಯಿತು. "ವಿಧಾನ ಮಂಡಲ ಕಲಾಪಾಸಕ್ತಿ ಪುನರೋದ್ಧಾರಕ ಸಮಿತಿ" ಅಲಿಯಾಸ್ "ವಿಮಕಪುಸ"!!!

’ವಿಮಕಪುಸ’ ಕಾರ್ಯೋನ್ಮತ್ತವಾಯಿತು! ಮೂರ್ನಾಲಕ್ಕು ತಿಂಗಳು ಹಗಲೂ ರಾತ್ರಿ ಯೋಚಿಸಿದ ಮೇಲೆ ಸಮಿತಿಗೆ ಒಂದು ಉಪಾಯ ಹೊಳೆಯಿತು. ಕಲಾಪ ನೆಡೆಯುವುದಕ್ಕಿಂತ ಒಂದು ದಿನ ಮೊದಲು ಶಾಸಕರ ನಡುವೆ ಸಂಬಂಧಗಳನ್ನು ತಿಳಿಯಾಗಿಸಲು ಎಲ್ಲರನ್ನೂ ವಿಧಾನಸೌಧದಲ್ಲಿ ಸೇರಿಸಿ ಅವರ ನಡುವೆ "ಪ್ರತಿಭಾ ಪ್ರದರ್ಶನ" ಏರ್ಪಡಿಸುವುದು ಎಂದು! ಈ ವರದಿ ಬರುತ್ತಿದ್ದಂತೆಯೇ ಎಲ್ಲ ಶಾಸಕರೂ ತಮ್ಮ ತಮ್ಮ ಪ್ರತಿಭೆಗಳನ್ನು ಹುಡುಕಲು ಪ್ರಾರಂಭಿಸಿದರು. ಯಡಿಯೂರಪ್ಪನವರು ನನ್ನ ಜೊತೆ ಶೋಭೆಯೇ ಇರುವಾಗ ಪ್ರತಿಭೆ ಯಾಕೆ ಬೇಕು ಎಂದು ಅಂದುಕೊಂಡರೂ ಪ್ರತಿಭೆಯೂ ಎಲ್ಲೋ ಇರಬೇಕು ಎಂದು ಅದನ್ನು ಹುಡುಕಿ ಪ್ರದರ್ಶನಕ್ಕೆ ಸಜ್ಜಾದರು. ಮಾರನೆಯ ದಿನವೇ ಕಲಾಪ. "ಇವತ್ತಿನ ದಿನ ಪ್ರತಿಭಾ ಪ್ರದರ್ಶನ!" ಎಂದು ಸ್ಪೀಕರ್ ಘೋಷಿಸಿಬಿಟ್ಟರು.

ಮೊದಲನೆಯ ಅವಕಾಶ ಮಾನ್ಯ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರು ಹಾಡು ಹೇಳಿದರು! ಅವರಿಗೆ ಶೊಭಾ ಹಾಗು ಅವರ ಮಕ್ಕಳು ಸಾಥ್ ನೀಡಿದರು.

ಯಡ್ಡಿ:
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್


ಯಡ್ಡಿ:
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್

ಯಡ್ಡಿ:
ಡಿನೋಟಿಫೈ ಮಾಡೇಬಟ್ಟೆ ರಾಜ್ಯವನ್ನೇ ಮಾರ್‌ಕಂಡ್‌ಬುಟ್ಟೆ
ರೆಡ್ಡಿಗ್ ಸೆಡ್ಡು ಹೊಡದೇಬುಟ್ಟೆ ಸಿದ್ದುಗ್ ಗುದ್ದು ಕೊಟ್ಟೇಬುಟ್ಟೆ
ಹಂಗೋ ಹಿಂಗೋ ಖುರ್ಚಿಯನ್ನು ಉಳಸ್ಕಂಡೇಬುಟ್ಟೆ
ನಾನು ಸೂಪರೋ ಗೌಡಾ..........

==============================================

ಅಷ್ಟರಲ್ಲಿ ರೇವಣ್ಣ ಎದ್ದುನಿಂತು ಇದು ಪ್ರತಿಭಾ ಪ್ರದರ್ಶನಕ್ಕೆ ಅವಮಾನ. ಇದಕ್ಕೋಸ್ಕರ ಯಡಿಯೂರಪ್ಪನವರು ರಾಜೀನಾಮೆ ಕೊಡ್ಬೇಕು ಎಂದು ವಾದಿಸಿ ತಮ್ಮ ಹಾಡನ್ನು ಶುರುಮಾಡಿದರು.

ರೇವಣ್ಣ:
ಹಗರಣ ಪೇಪರ್ ನನ್ನ ಕೈ ಒಳಗೆ
ಬಿಡು ಕುರ್ಚಿ ನೀನು ಈ ಘಳಿಗೆ
ಅಪ್ಪ ಮಗ ನಾವು ಯಾವುದಕ್ಕು ರೆಡಿ
ಕುರ್ಚಿ ಬಿಟ್ಟು ಮನೆಗೆ ನೆಡಿ

ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ ಕತ್ತೆ ಕೂಡಾ ಗೆಲ್ಲುವುದು
ಯಾರು ಕತ್ತೆ ಯಾರು ಕುದುರೆ ತೋರಿಸ್ತೀನಿ ನಾನು ಬಿಜೆಪಿ ಸರ್ವನಾಶ ಮಾಡುತೀನಿ

ಒಂದೆ ಮಾಟ ಒಂದೆ ಮಂತ್ರ
ಒಂದೆ ಮಾಟ ಒಂದೆ ಮಂತ್ರ ಎಂದು ಮಾಟ ಮಂತ್ರ ಮಾಡಿ
ಎಷ್ಟು ದಿನ ಇರುತ್ತೀಯಾ ನೊಡುತ್ತೀನಿ ನಾನು ನಿಂಬೆ ಹಣ್ಣು ಮಂತ್ರಿಸಿ ತರುತ್ತೀನಿ

ನಾನೇ ಮುಂದಿನ ಮುಖ್ಯಮಂತ್ರಿ ನೋಡುತಿರು, ಸುಮ್ನೆ ಕುರ್ಚಿ ಬಿಟ್ಟು ಕೊಡು
==============================================

ಬಂಗಾರಪ್ಪನವರು ಗೆಸ್ಟ್ ಅಪಿಯರನ್ಸ್ ನೀಡಿ ಹಾಡಲು ಪ್ರಾರಂಭಿಸಿದರು.

ಬಂಗಾರಪ್ಪ:
ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ
ಯಾರೂ ಕಿಮ್ಮತ್ ಕೊಡ್ತಿರ್‌ಲಿಲ್ಲಾ ಲೈಫಿನಲಿ
ಟಿಕೆಟ್ ಸಿಗೋದ್ ಡೌಟಾಗೋಯ್ತು ಪಾರ್ಟಿಯಲಿ
ಜೆಡಿಸ್ ಕಂಡ್ತು ಸೈಡಿನಲಿ

ಅಷ್ಟರಲ್ಲಿ ಸ್ಪೀಕರ್ ಸಾಹೇಬರು ಅವರ ಬಾಯಿ ಮುಚ್ಚಿಬಿಟ್ಟರು!
==============================================

ಕೊನೆಯಲ್ಲಿ ಕುಳಿತಿದ್ದ ಅಸ್ಪ್ರಶ್ಯರ ಸಾಲಿಗೆ ಸೇರಿದ 13 ಬಂಡಾಯ ಶಾಸಕರು ಒಟ್ಟಿಗೇ ರಾಗ ಶುರುಮಾಡಿಬಿಟ್ಟರು

ಮಂತ್ರಿಗಿರಿ ಬೇಕು ದುಡ್ಡು ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು
ಮಂತ್ರಿಗಿರಿ ಬೇಕು ಹಗರಣ ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು ಮಾನ ಹೋದರು ಖುರ್ಚಿಯು ಬೇಕು
ಕಚ್ಚೆಯು ಸಡಿಲವಾಗಿರಬೇಕು ಒಂದು ಸ್ಟೆಪ್ನಿ ಇಟ್ಟಿರಬೇಕು
ನಮ್ಗೆ ಮಾನ ಇಲ್ಲ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಊರನು ಖರೀದಿ ಮಾಡಲೆ ಬೇಕು
ನಾವು ಕೂಡಾ ಗುಂಡಾ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ


ನಾವು ಶಾಸಕರು ತಿನ್ನುವೆವು ಎಲ್ಲ ಹಣವನ್ನು
ಪೆದ್ದು ಜನರುಗಳೆ ಕೇಳಿರಿ
ನೀವ್ ಭಾರಿ ಬೊದ್ದು ಬಿಡ್ರಿ
ತುಂಬ ಶ್ರಮಿಸುವೆವು ಪಡೆಯುವೆವು ಒಳ್ಳೆ ಖಾತೆಯನು
ಕೆಲಸಕೆಂದು ಅಲೆದು ಸಾಯಿರಿ
ನ್ಯಾಯ ನೀತಿ ನೋಡೋದಿಲ್ರಿ
ಮಂತ್ರಿಗಿರಿ ಬೇಕು ಜನರು ಉಗಿದರು ನಗುತಿರಬೇಕು
ನಮ್ಗೆ ಅದು ತಾಗೊದಿಲ್ರಿ
ಮಂತ್ರಿಗಿರಿ ಬೇಕು ಮಿತ್ರನ ಮಡದಿಯ ಪ್ರೀತಿಸಬೇಕು
ಪೋಲಿತನ ರಕ್ತದಿ ಬೆರೆತಿರಬೇಕು ಡೀಸೆಂಟ್ ಪೋಸು ನೀಡಬೇಕು
ನಾವು ತುಂಬಾ ಸಾಚಾ ಕಣ್ರಿ
ನರ್ಸ್ ಜೊತೆ ಡ್ಯಾನ್ಸ್ ಮಾಡಲೆ ಬೇಕು
ಥಕ ಧಿಮಿ ಥಕ ಝಣು ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
==============================================

ಇದನ್ನೆಲ್ಲ ನೋಡಿ ತಲೆ ಚಚ್ಚಿಕೊಳ್ಳುತ್ತಾ ಸ್ಪೀಕರ್ ಸಾಹೀಬ್ರು, ಪ್ರತಿಭಾ ಪ್ರದರ್ಶನವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಬಿಟ್ಟರು!

ಇದನ್ನು ನೋಡುತ್ತಾ ಕುಳಿತ ಜನಸಾಮಾನ್ಯರು ತಮ್ಮಲ್ಲೇ ತಾವು ಹಾಡಿಕೊಂಡರು.

ತುಂಬಾ ಟೆನ್ಷನ್ ಮಾಡ್ಕೋ ಬೇಡಿ
ರಾಜಕೀಯ ಹಿಂಗೇ ನೋಡ್ರಿ
ಅವರಿಗ್ ಬುದ್ಧಿ ಬರೋದಿಲ್ರಿ
ಲೈಫು ಇಷ್ಟೇನೇ...

ದುಡ್ಡೇ ಉಣ್ಣೋ ನಮ್ಮ ಮುಖಂಡ
ಇವ್ನಿಗ್ ವೋಟ್ ಹಾಕೋದ್ ದಂಡ
ನಂಬಿ ಕೆಟ್ವಿ ಇವನಜ್ಜಿ ಪಿಂಡ
ಲೈಫು ಇಷ್ಟೇನೇ...

ಹಗರಣದ್ ಮೇಲೆ ಹಗರಣ ಬಂದು
ಜನಸಾಮಾನ್ಯ ಬೆಂದು ನೊಂದು
ಕೊನೆಯಲಿ ತನ್ನನು ತಾನೆ ಕೊಂದು
ಲೈಫು ಇಷ್ಟೇನೇ...

[ಸೂಚನೆ: ಇದು ಕೇವಲ ಕಾಲ್ಪನಿಕ. ನಮ್ಮ ವಿಧಾನಸೌಧದಲ್ಲಿ ಇಷ್ಟೇ ನೆಡೆದರೆ ನಮ್ಮ ಸೌಭಾಗ್ಯ!]

Wednesday, September 22, 2010

ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್...


ಅಲ್ಲಾ... ಮೂವತ್ತು ವರ್ಷದ ತರುಣರಿಗೇ ಈ ಬೆಂಗಳೂರು ಬೇಜಾರು ಬರುತ್ತಿರಬೇಕಾದರೆ, ನಮಗೆ ಅರವತ್ತು ವರ್ಷ ಆದಾಗ ನಾವು ಇಲ್ಲಿ ಬದುಕಲಿಕ್ಕಾದರೂ ಸಾಧ್ಯ ಇದೆಯೇ? ಈ ಪ್ರಶ್ನೆ ನನ್ನನ್ನು ಬಹಳಷ್ಟು ಸಾರಿ ಕಾಡಿದೆ. ಇನ್ನೂ ಕಾಡುತ್ತಲೇ ಇದೆ. ಬೇಗ ಮನೆಗೆ ಹೋಗಬೇಕು ಎಂದು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಂತಾಗ, ಶಾಪಿಂಗ್ ಮಾಡಿದುದಕ್ಕಿಂತ ಹಚ್ಚು ಸಮಯ ಬಿಲ್ ಕೊಡಲು ಕ್ಯೂ ನಿಂತಾಗ, ನಮ್ಮ ಮನೆಯೆದುರು ಯಾರೋ ಕಾರು ನಿಲ್ಲಿಸಿ ನಮ್ಮ ಕಾರ್ ನಿಲ್ಲಿಸಲು ಜಾಗ ಹುಡುಕಬೇಕಾದಾಗ, ಮನಸ್ಸು ಭಾರವಾಗಿ ಒಂದೆರಡು ತಾಸು ಶಾಂತ ವಾತಾವರಣ ಅರಸಿ ಹೊರಟಾಗ ಅಥವಾ ಕೊನೇ ಪಕ್ಷ ಸಂಜೆ ತಂಪಾದ ಶುದ್ಧ ಗಾಳಿಯಲ್ಲಿ ಒಂದು ರೌಂಡ್ ವಾಕಿಂಗ್ ಮಾಡಬೇಕು ಎಂದೆನಿಸಿದಾಗೆಲ್ಲ ಬೆಂಗಳೂರಿನ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಶಿರಸಿ ಮತ್ತಷ್ಟು ಕೈ ಬೀಸಿ ಕರೆಯುತ್ತದೆ. ಆದರೆ ಅಲ್ಲಿಗೆ ಹೋಗಿ ಮಾಡುವುದಾದರೂ ಏನು? ಇಲ್ಲಿ ಬರುವ ಸಂಬಳ ಬಿಟ್ಟು ಅಲ್ಲಿಗೆ ಹೋದರೆ ಯಾವ ಕೆಲಸ ಸಿಗುತ್ತದೆ? ಇದರ ಅರ್ಧದಷ್ಟು ಬಂದರೂ ಸಾಕೆಂದುಕೊಂಡರೂ ಅದೂ ಸಾಧ್ಯವಿಲ್ಲದ ಮಾತು. ಒಟ್ಟಿನಲ್ಲಿ ನಮ್ಮ ಹಣೆಯಲ್ಲಿ ಈ ಕೊಂಪೆಯಲ್ಲೇ ಬಿದ್ದು ಸಾಯಿರಿ ಎಂದು ಬರೆದಿದೆಯೇ?

ನನ್ನ ಅಜ್ಜ ಕೃಷಿಕನಾಗಿದ್ದನಂತೆ. ಜೊತೆಗೆ ವೈದ್ಯ ಕೂಡಾ. ಕುಮಟಾದಲ್ಲಿ ಮೂರ್ನಾಲ್ಕು ಎಕರೆ ಗದ್ದೆ, ತೋಟ ಎಲ್ಲಾ ಇತ್ತಂತೆ. ಅಲ್ಲಿ ಹೆಚ್ಚು ಜನ ಬರುವುದಿಲ್ಲ ಎಂದಂದುಕೊಂಡು ಶಿರಸಿಗೆ ಬಂದು ನೆಲೆಸಿದ್ದರಂತೆ. ಅದರ ವಹಿವಾಟನ್ನು ಯಾರಿಗೋ ಕೊಟ್ಟು, ’ಊಳುವವನೇ ಒಡೆಯ’ ಕಾಯಿದೆಯನ್ವಯ ಆ ಆಸಾಮಿ ಅದನ್ನು ನುಂಗಿಬಿಟ್ಟನಂತೆ! ನನ್ನ ತಂದೆಯೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಲಲಿಲ್ಲ. ನಾವು ಕೆಡಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ. ಒಟ್ಟಿನಲ್ಲಿ ಕೃಷಿಕರಾಗಿದ್ದ ಒಂದು ಕುಟುಂಬ ಈಗ ಸಂಬಳದ ಜೀವನ ಮಾಡತೊಡಗಿದೆ! ಇದನ್ನು ಯೋಚಿಸಿದಾಗಲೆಲ್ಲ ಮತ್ತೆ ಯಾಕೆ ನಾವು ಕೃಷಿಕರಾಗಬಾರದು ಎಂದೆನಿಸುತ್ತದೆ. ಈ ಗದ್ದಲದ ಯಾಂತ್ರಿಕ ಜೀವನಕ್ಕಿಂತ ಅಲ್ಲಿಯ ಪ್ರಶಾಂತ ಜೀವನ ಎಷ್ಟು ಸುಂದರ ಎನಿಸುತ್ತದೆ. ಯಾವ ಮ್ಯಾನೇಜರ್ ಇಲ್ಲ. ಯಾವ ಡೆಡ್‌ಲೈನ್ ಇಲ್ಲ. ದಿವಸಕ್ಕೆ ಒಂಭತ್ತು ಗಂಟೆ ದುಡಿಯಲೇ ಬೇಕು ಎನ್ನುವ ನಿಯಮವಿಲ್ಲ. ವರ್ಷಕ್ಕೆರಡು ಅಪ್ರೇಸಲ್‌ಗಳಿಲ್ಲ. ಅವುಗಳಲ್ಲಿ ನಮಗೆ ಏನೂ ಸಿಕ್ಕಿಲ್ಲ ಎನ್ನುವ ನೋವಿಲ್ಲ. ಸುತ್ತ ಮುತ್ತಲಿನ ನಿರ್ಜೀವ ಜನರಿಲ್ಲ. ಅವರ ಕೃತಕ ನಗುವಿಲ್ಲ. ಎಷ್ಟು ಸುಂದರ ಆ ಬದುಕು!

ಒಂದು ದಿನ ನಿರ್ಧರಿಸಿಬಿಟ್ಟೆ. ಏನೇ ಆಗಲಿ. ಹೋದರೆ ಪ್ರಾಣವಂತೂ ಹೋಗುವುದಿಲ್ಲ. ಸ್ವಲ್ಪ ದುಡ್ಡು ಹೋಗಬಹುದು. ಇದನ್ನು ಕಾರ್ಯರೂಪಕ್ಕೆ ತರಲೇಬೇಕೆಂದು. ಊರ ಹತ್ತಿರ ಒಂದು ಕೃಷಿಭೂಮಿಯನ್ನೂ ಕೊಂಡುಕೊಂಡೆ! ಮಾರನೇ ವರ್ಷವೇ ಅಲ್ಲಿ ಮಾವಿನ ಸಸಿಗಳನ್ನು ನೆಡಿಸಿದೆ. ಅಲ್ಲೇ ಒಂದು ಪುಟ್ಟ ಮನೆ ಕಟ್ಟಿಸಿದೆ. ಒಂದು ಚಿಕ್ಕ ಗೋಡೋನ್. ಮನೆಗೆ ಹೋಗಲು ಒಂದು ಚಿಕ್ಕ ಹಾದಿ. ಒಂದು ಕಾರ್ ಹೋಗುವಷ್ಟು. ಸುತ್ತಲೂ ಮಾವಿನ ಸಸಿಗಳು. ಮಧ್ಯದಲ್ಲಿ ಎತ್ತರದಲ್ಲಿ ಮನೆ. ಮನೆಯ ಮೇಲೊಂದು ಸುಂದರ ಬಾಲ್ಕನಿ. ಅಲ್ಲಿ ಆರಾಮು ಖುರ್ಚಿ ಹಾಕಿ ಕುಳಿತುಕೊಂಡರೆ ಸುತ್ತಲೂ ನಾನೇ ನೆಡಿಸಿದ ಮಾವಿನ ಗಿಡಗಳು! ಯಾರ ಗದ್ದಲವಿಲ್ಲ. ಯಾರ ತಂಟೆಯಿಲ್ಲ.

ಸಸಿಗಳು ಗಡವಾಗಿವೆ. ಮರವಾಗುತ್ತಿವೆ. ಐದೇ ಐದು ವರ್ಷಗಳಲ್ಲಿ ಫಲ ನೀಡುತ್ತಿವೆ. ಇದುವರೆಗೆ ನಾನು ತೋರಿದ ಪ್ರೀತಿಗೆ ಪ್ರತ್ಯುತ್ತರವಾಗಿ ಸಿಹಿ ಹಣ್ಣುಗಳನ್ನು ಸಾಕು ಸಾಕೆನಿಸುವಷ್ಟು ಕೊಡುತ್ತಿವೆ. ಇನ್ಯಾವ ಕೆಲಸ ಬೇಕು ನನಗೆ. ಈ ಗಿಡಗಳ ಜೊತೆಗೆ ಇಲ್ಲೇ ಇದ್ದುಬಿಡಬೇಕು ಎಂದೆನಿಸುತ್ತಿದೆ. ಗಿಡಗಳು ಚಲಿಸದೇ ಇದ್ದರೇನಾಯಿತು? ಮನದಲ್ಲಿ ಸಂಚಲನವನ್ನೇ ಉಂಟುಮಾಡುತ್ತಿವೆ. ಪ್ರೀತಿಸಲು ಮನುಷ್ಯರೇ ಆಗಬೇಕೆ? ನಿಸ್ವಾರ್ಥ ಪ್ರೀತಿಗೆ ಈ ಮರಗಳೇ ನಿದರ್ಶನ! ನನಗೂ ವಯಸ್ಸಾಗುತ್ತಾ ಬಂದಿದೆ. ಎಷ್ಟು ಎಂದು ದುಡಿಯುವುದು? ಇನ್ನು ನಾವಾಯಿತು ನಮ್ಮ ಶಾಂತ ಸುಂದರ ಪರಿಸರವಾಯಿತು ಎಂದುಕೊಂಡು ಬೆಂಗಳೂರು ಬಿಟ್ಟು ಶಿರಸಿಗೆ ಹೋಗಿ ನೆಲೆಸಿಬಿಡುವ ನಿರ್ಧಾರ ತೆಗೆದುಕೊಂಡು ಹೊರಡುವ ದಿನಾಂಕ ನಿರ್ಧರಿಸಿ ಆಯಿತು. ಶಿರಸಿಯಲ್ಲಿ ಇದು ಸುದ್ದಿಯಾಗಿ ಅಲ್ಲಿಯ ದಿನಪತ್ರಿಕೆಯೊಂದರಲ್ಲಿ ಚಿತ್ರದ ಸಹಿತ ಒಂದು ಲೇಖನ ನಮ್ಮ ಬಗ್ಗೆಯೇ ಬಂದಿದೆ! ಮನೆಯಿಂದ ಫೋನ್ ಮಾಡಿ ಹೇಳಿದ್ದಾರೆ. ಇಂಟರ್ನೆಟ್ ಅಲ್ಲಿ ಆ ಪೇಪರ್ ನೋಡುತ್ತಿದ್ದೇನೆ. ಹೌದು ನಮ್ಮದೇ ಸುದ್ದಿ! "ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್"!!!

"ಏಳ್ರೀ... ಎಷ್ಟು ಹೊತ್ತು ಮಲಗ್ತ್ರಿ? ಆಗ್ಲೇ ಪೇಪರ್ ಹಾಕಿಕ್ ಹೋದಾ... ಇವತ್ತು ಆಫೀಸಿಗ್ ಹೋಗ್ತ್ರಿಲ್ಯಾ???" ಹೆಂಡತಿ ಎಬ್ಬಿಸಿದಾಗಲೇ ನನಗೆ ಎಚ್ಚರವಾಗಿದ್ದು. ಥತ್... ಇಷ್ಟು ಹೊತ್ತು ಬಿದ್ದಿದ್ದು ಕನಸಾ? ಛೇ... ಎಂದುಕೊಂಡು ಬಚ್ಚಲಿನ ಕಡೆಗೆ ಹೊರಟೆ. ಹಲ್ಲು ತಿಕ್ಕುತ್ತಾ ಯೋಚಿಸಿದೆ. ಏನೇ ಆದರೂ ಬಿದ್ದ ಕನಸಂತೂ ಸುಂದರವಾಗಿತ್ತು ಎಂದು.

ಮತ್ತೆ ಗೊಂದಲ ಶುರುವಾಯಿತು. ಇದು ನನಗೆ ಬಿದ್ದ ಕನಸಾ ಅಥವಾ ನನ್ನ ಕನಸಾ !

Thursday, August 12, 2010

ನಿತ್ಯಾನಂದರ ಕನಸು



ಶ್ರಾವಣ ಶುರುವಾಯಿತು. ನಿತ್ಯಾನಂದರು ಪಂಚಾಗ್ನಿ ಹೋಮ ಮಾಡಿ ಪವಿತ್ರರಾಗಿದ್ದಾರೆ. ಬಹಳ ದಿನಗಳ ವಿರಹ ಬೇಗೆಯಿಂದ ಬಳಲಿದ್ದಾರೆ. ಇತ್ತಕಡೆ ಅವರ ಸೇವಕಿ ರಂಜಿತೆಯೂ ವಿರಹಿಯಾಗಿ ನೊಂದಿದ್ದಾಳೆ. ಅಹಲ್ಯೆಯದ್ದು ಭಾರತದ ಮೊದಲ ಸೆಕ್ಸ್ ಕಾಂಡ ಎಂದು ಹೇಳಿ ತಮ್ಮ ಬುದ್ಧಿಮತ್ತೆಯನ್ನು ತೋರಿರುವ ಸ್ವಾಮಿಗಳು, ರಂಜಿತೆ ಅತ್ಯಂತ ಒಳ್ಳೆಯ ಸೇವಕಿ ಎನ್ನುವುದರ ಮೂಲಕ ತಾವು ನೊಂದವರ ಕೈ ಬಿಡುವಂಥವರಲ್ಲ ಎಂದು ಸಾರಿದ್ದಾರೆ. ಮೊನ್ನೆ ಉಪನ್ಯಾಸ ಮಾಡುತ್ತಿದ್ದಾಗ ರಂಜಿತೆಯ ನೆನಪಾದಾಗ ಹಾಗೇ ಕನಸಿನಲ್ಲಿ ಮುಳುಗಿದರು...

ಲೊಕೇಷನ್ ಛೇಂಜ್...

ಒಂದು ಗುಡ್ಡ. ಅದರ ಮೇಲೆ ಒಂದೇ ಒಂದು ಮರ. ಮರದ ತುಂಬಾ ಹೂವು. ಕೆಳಗೆ ಧ್ಯಾನಸ್ಥರಾಗಿ ನಿತ್ಯಾನಂದರು. ಒದೊಂದೇ ಹೂವಿನ ಪೂಜೆ ಇವರಿಗೆ ಸಾಲದೆಂದು ಇಡೀ ಮರವನ್ನೇ ಅಲುಗಾಡಿಸಿ ಹೂವಿನ ಮಳೆಗರೆಯುತ್ತಿರುವ ರಂಜಿತೆ! ಹೂವಿನ ಮಳೆಗೆ ನಿತ್ಯಾನಂದರಿಗೆ ಎಚ್ಚರವಾಗಿ ಸುತ್ತಲೂ ನೋಡಿದಾಗ ಕಂಡವಳು, ಬಿಳಿಯ ಸೀರೆಯನುಟ್ಟ ಸುಂದರ ಸೇವಕಿ ರಂಜಿತೆ! ಮನದೊಳಗಿನಿಂದ ಹಾಡೊಂದು ಹುಟ್ಟಿದೆ!

ಎಂದೆಂದೂ ರಂಜಿತೆ ನಿನ್ನ ಕೈ ಬಿಡಲಾರೆ
ಸ್ವಾಮಿಯೆ ನಿಮ್ಮ ಮೊಗದಲಿ ಕಂಡೆ ನಗುವಿನ ಧಾರೆ
ದೇವರಾಣೆ ಮನವನು ಗೆದ್ದ ಸೇವಕಿಯು ನೀನೆ
ನೀವೆ ನನ್ನ ದೇವತೆ ಎಂದೂ ಬೇರೇನನು ಕಾಣೆ

ರಂಜಿತೆ ಧ್ಯಾನದ ವೇಳೆ ಮುಗಿಯಿತು ಬಾರೆ
ಮೈ ಕೈ ನೋವಿಗೆ ಮದ್ದು ನೀಡೆಲೆ ತಾರೆ
ನೀ ಗುರುವಾಗಿರೆ ಮನವದು ನಲಿದಿರೆ
ನಾ ನಿಮ್ಮ ಸೇವೆಯನ್ನು ಎಂದು ಮಾಡುವೆ ಮಾಡುವೆ ಮಾಡುವೆ

ಸ್ವಾಮಿಯೆ ನಿಮ್ಮಯ ಮೈಗೆ ಎಣ್ಣೆಯ ಹಚ್ಚಿ
ಸೇವೆಯ ಮಾಡುವೆ ಬನ್ನಿ ಕದವನು ಮುಚ್ಚಿ
ಈ ಜನರ ಮೋಸವ ನಾನರಿಯದಾದೆನು
ಮರೆಯದೆ ಸುತ್ತ ನೋಡಿ ಕ್ಯಾಮರಾ ಹುಡುಕುವೆ ಹುಡುಕುವೆ ಹುಡುಕುವೆ

ಸಾವಿರ ಜನುಮವೆ ಬರಲಿ ಬೇಡುವುದೊಂದೇ
ಬೆಡ್‌ರೂಮಲ್ಲಿ ಕ್ಯಾಮರಾ ಇಡದಿರು ತಂದೆ
ಹೇಗೊ ಅಡ್ಜಸ್ಟ್ ಮಾಡಿಹೆ ಜನಕೆ ಟೋಪಿ ಹಾಕಿಹೆ
ಮುಂದೆಯೂ ಜನರು ಮರುಳು ಆದರೆ ಕಿರಿಯುವೆ ಹಲ್ ಕಿರಿಯುವೆ ಹಲ್ ಕಿರಿಯುವೆ

ಪಕ್ಕದಲ್ಲಿರುವವರು "ಸ್ವಾಮೀಜಿ ಸಮಾಧಿಸ್ತರಾಗಿಬಿಟ್ಟಿದ್ದಾರೆ! ಎಲ್ಲರೂ ದೇವರ ನಾಮ ಹೇಳಿರಿ." ಎಂದಾಗಲೇ ನಿತ್ಯಾನಂದರಿಗೆ ಎಚ್ಚರವಾದದ್ದು.
"ದೇವರನ್ನು ಸುಲಭವಾಗಿ ಹುಡುಕಿಬಿಡಬಹುದು... ಹಿಡನ್ ಕ್ಯಾಮರಾಗಳನ್ನು ಹುಡುಕುವುದು ಮಾತ್ರ ಬಲು ಕಷ್ಟ!" ಎಂದು ಪ್ರವಚನ ಮುಗಿಸಿದರು.

ಎಲ್ಲರೂ ನಿತ್ಯ ಆನಂದವನ್ನು ಹೊಂದಿರಿ.
ಹರಿಃ ಓಂ ತತ್ ಸತ್. ನಿತ್ಯಾರ್ಪಣಮಸ್ತು!

[ವಿ.ಸೂ.: ಇದು ಕೇವಲ ಕಾಲ್ಪನಿಕ! ಈ ಘಟನಗೆ ಅಥವಾ ವ್ಯಕ್ತಿಗೆ ಯಾವುದೇ ಹೋಲಿಕೆಯಾದರೆ ಅದು ನಮ್ಮ ದುರ್ದೈವ!]