Monday, April 7, 2008

ನಿಜಕ್ಕೂ ನಾವು ಮುಂದುವರಿಯುತ್ತಿದ್ದೇವೆಯೆ?


ಎಪ್ರಿಲ್ 6 ರಾತ್ರಿ 8:30ರ ಸಿರ್ಸಿಯಿಂದ ಬೆಂಗಳೂರಿಗೆ ಹೋಗುವ ಮೇಘದೂತ ಬುಕ್ ಮಾಡಿಸಿದ್ದೆ. ಅವತ್ತೇ ಸಿರ್ಸಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆರವಣಿಗೆ ಬೇರೆ ಇತ್ತು. ಹೇಗೋ ಸಂದಿ ಗೊಂದಿಗಳಲ್ಲಿ ಬೈಕ್ ತೂರಿಸಿಕೊಂಡು ಬಸ್ಟಾಂಡಿಗೆ ಹೋದಾಗಲೇ ಗೊತ್ತಾಗಿದ್ದು, ಆ ಬಸ್ ಕ್ಯಾನ್ಸಲ್ ಆಗಿದೆ. ಅದರ ಬದಲು ಇನ್ಯಾವುದೋ ಬಸ್ಸಿನಲ್ಲಿ ನಮ್ಮನ್ನೆಲ್ಲ ಕಳಿಸುತ್ತಾರೆ ಎಂದು. 9 ಗಂಟೆಗೆ ರಾಜಹಂಸ ಇತ್ತು. ಅದನ್ನ ಬಿಟ್ಟರೆ ಇನ್ನೊಂದು ಮೇಘದೂತ ಕುಮಟಾದಿಂದ ಬರಲು 10:30 ಆಗುತ್ತಿತ್ತು. ಆದ್ದರಿಂದ 100 ರೂಪಾಯಿಗಳ ಪಂಗನಾಮ ಆದರೂ ಪರವಾಗಿಲ್ಲ, ರಾಜಹಂಸಕ್ಕೇ ಹೋಗುವುದೆಂದು ನಿರ್ಧರಿಸಿ ಅಲ್ಲೇ ಯಾವುದೋ ಒಂದು ಸೀಟ್ ಅಡ್ಜಸ್ಟ್ ಮಾಡಿಕೊಂಡು ಕುಳಿತೆ. ಅವತ್ತು ಮಧ್ಯಾಹ್ನ ಮಲಗಲು ಆಗದೇ ಇದ್ದ ಕಾರಣಕ್ಕೋ ಏನೊ ಚೆನ್ನಾಗಿಯೇ ನಿದ್ರೆ ಬಂತು.

ಅರಬರೆ ಎಚ್ಚರವಾದಾಗ ಕಂಡಕ್ಟರ್ ’ಶಿವ್ಮೊಗ್ಗಾ... ಶಿವ್ಮೊಗ್ಗಾ’ ಅನ್ನುವುದು ಕೇಳಿಸುತ್ತಿತ್ತು. ಮತ್ತೆ ನಿದ್ರೆ. ಮುಂದೆ ತುಂಬಾನೇ ನಿದ್ದೆ ಬಂದುಬಿಟ್ಟಿತ್ತು ಎನಿಸುತ್ತದೆ. ಎಚ್ಚರವಾದಾಗ ವಾತಾವರಣ ಸಂಪೂರ್ಣ ಶಾಂತ. ಬಸ್ ಚಲಿಸುತ್ತಿಲ್ಲ. ಅಕ್ಕಪಕ್ಕದವರ ಗೊರಕೆ ಸದ್ದೊಂದು ಕೇಳಿಸುತ್ತಿದೆ. ಡ್ರೈವರ್ ಸಾಹೇಬ್ರು ಬಸ್ಸಿನ ಇಂಡಿಕೇಟರ್ ಆನ್ ಮಾಡಿಟ್ಟುದುದರಿಂದ ಅದೊಂದು ಟುಯ್ನ್ ಟುಯ್ನ್ ಎನ್ನುತ್ತಿತ್ತು. ಇಲ್ಲೇ ಎಲ್ಲೋ ಪ್ರಕೃತಿಕರೆಬಂದು ಹೋಗಿರಬೇಕೆಂದು ಹಾಗೇ ಮಗ್ಗುಲು ಬದಲಿಸಿದೆ. ಮತ್ತೊಂದು ರಾಜಹಂಸ ಬಸ್ ಬಂದು ನಮ್ಮೆದುರೇ ನಿಂತಿತು. ಆ ಬಸ್ಸಿನವನೂ ಇಂಡಿಕೇಟರ್ ಆನ್ ಮಾಡಿ ಗಾಡಿಯಿಂದಿಳಿದು ಗಡಬಡೆಯಿಂದ ಎತ್ತಲೋ ಓಡಿಹೋದ. ಇವ್ನಿಗ್ಯಾಕಪ್ಪಾ ಇಷ್ಟು ಅವಸರ ಅಂದುಕೊಂಡು ಸುಮ್ಮನಾದೆ. ದೂರದಲ್ಲಿ ಕೆಲವು ಶಬ್ದಗಳು ಕೇಳಿಬರತೊಡಗಿದವು. ಯಾರೋ ಜೋರಾಗಿ ನರಳುತ್ತಿರುವ ಶಬ್ದ. "ಅಮ್ಮಾ... ಅಯ್ಯೋ..." ಬರಬರುತ್ತ ಶಬ್ದ ಹೆಚ್ಚಾಗತೊಡಗಿತು. ಕರಳು ಕಿತ್ತುಬರುವಂತೆ ಯಾರೋ ಚೀರುತ್ತಿದ್ದ. ಅದರ ಜೊತೆಗೆ ಜನರ ಗುಜುಗುಜು ಕೇಳಿಬರುತ್ತಿತ್ತು.

ಇದೇನಾಯ್ತಪ್ಪಾ ಎಂದುಕೊಂಡು ಬಸ್ಸಿನಿಂದ ಕೆಳಗಿಳಿಯಲು ಹೋದರೆ, ನಮ್ಮ ಡ್ರೈವರ್ ಬಸ್ಸಿನ ಬಾಗಿಲು ತೆರೆಯದೆಯೇ ಇಳಿದು ಹೋಗಿಬಿಟ್ಟಿದ್ದ. ಅದರ ಬಟನ್ ಯಾವುದೆಂದು ತಿಳಿಯಲಿಲ್ಲ. ನಾನೂ ಡ್ರೈವರ್ ಸೀಟಿನ ಪಕ್ಕದಲ್ಲಿದ್ದ ಬಾಗಿಲಿನಿಂದಲೇ ಇಳಿದು ಹೋಗಿ ನೋಡಿದೆ. ಶಿರಸಿ-ಶಿವಮೊಗ್ಗ-ಬೆಂಗಳೂರು ಆರ್ಡಿನರಿ ಬಸ್ಸೊಂದು ಒಂದು ಮರಕ್ಕೆ ನೇರವಾಗಿ ಢಿಕ್ಕಿ ಹೊಡೆದು ನಿಂತುಬಿಟ್ಟಿದೆ. ಅದರ ಸುತ್ತಲೂ ಐವತ್ತರವತ್ತು ಜನ ಸುತ್ತುವರಿದೂ ಏನೇನೋ ಮಾಡುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿ ಹದಿನೈದಿಪ್ಪತ್ತು ಜನ ಮಲಗಿ ನರಳುತ್ತಿದ್ದಾರೆ. ಅವರ ಸುತ್ತಲೂ ಕೆಲವು ಜನ ಅವರಿಗೆ ನೀರನ್ನು ನೀಡುತ್ತಾ ಸಮಾಧಾನಪಡಿಸುತ್ತಿದ್ದಾರೆ. ಇದರ ಮಧ್ಯ ಬಸ್ಸಿನಲ್ಲೇ ಸಿಕ್ಕಿಕೊಂಡು ನೋವು ಅನುಭವಿಸುತ್ತಿದ್ದ ಆ ಬಸ್ಸಿನ ಡ್ರೈವರ್ ನೋವು ತಾಳಲಾರದೆ ಚೀರುತ್ತಿದ್ದಾನೆ. ಜನ ಅವನನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಇದಿಷ್ಟು ಕೇವಲ 10 ನಿಮಿಷದಲ್ಲಿ ಸಂಭವಿಸಿಬಿಟ್ಟಿದೆ. ನಮ್ಮ ಬಸ್ಸಿನ ಹಿಂದೆ ಉತ್ತರ ಕನ್ನಡದಿಂದ ಹೊರಟಿದ್ದ ಎಲ್ಲ KSRTC ಬಸ್ಸುಗಳು ಸಾಲಾಗಿ ನಿಂತುಬಿಟ್ಟಿದ್ದವು. ಎಲ್ಲ ಸಿಬ್ಬಂದಿಗಳೂ ಅಲ್ಲಿ ಸಿಲುಕಿಕೊಂಡಿದ್ದ ಡ್ರೈವರ್‌ನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು. ಇದರೊಟ್ಟಿಗೆ ಅದೇ ದಾರಿಯಲ್ಲಿ ಹೊರಟಿದ್ದ ಐದಾರು ಟ್ರಕ್ಕುಗಳೂ ನಿಂತಿದ್ದವು. ಇದು ನೆಡೆದಿದ್ದು ತುಮಕೂರಿಗೆ ಒಂದು ಹತ್ತು ಕಿಲೋಮೀಟರ್ ಅಂತರದಲ್ಲಿ. ಸುತ್ತಲು ವಾಸಿಸುತ್ತಿದ್ದ ರೈತರೆಲ್ಲರೂ ಅವನನ್ನು ಬಿಡಿಸುವ ಪ್ರಯತ್ನದಲ್ಲಿದ್ದರು.

ಬಸ್ಸು ಎಷ್ಟು ವೇಗವಾಗಿ ಬಂದು ಮರಕ್ಕೆ ಗುದ್ದಿತ್ತೆಂದರೆ, ಮರ ಅರ್ಧ ಕೊರೆದುಹೋಗಿತ್ತು. ನೂರಾರು ಜನ ಕೈಗೂಡಿಸಿ ಬಸ್ಸನ್ನು ದೂಕಿದರೂ ಬಸ್ಸು ಒಂದಿಂಚೂ ಕದಲಲಿಲ್ಲ. ಇದು ನೆಡೆದಿದ್ದು ರಾತ್ರಿ ಮೂರರಿಂದ ಮೂರೂವರೆಯ ಒಳಗೆ. ಅಲ್ಲಿದ್ದ ಜನರು ಹತ್ತಿರವಿದ್ದ ಪೋಲೀಸ್ ಸ್ಟೇಷನ್, ಹಾಸ್ಪಿಟಲ್‌ಗೆಲ್ಲಾ ಕರೆಮಾಡಿ ಆಗಿತ್ತು. ಸಧ್ಯದಲ್ಲೇ ಅಂಬ್ಯುಲೆನ್ಸ್ ಬರಬಹುದೆಂದು ಕಾಯುತ್ತಿದ್ದರು. ಆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರನ್ನು ಇನ್ನೊಂದು ಬಸ್ಸಿನಲ್ಲಿ ಕೂರಿಸಿ ಕಳಿಸಲಾಯಿತು. ಹೆಚ್ಚು ಪೆಟ್ಟಾಗಿದ್ದ ಕೆಲ ಪ್ರಯಾಣಿಕರಿಗೆ ಅಂಬ್ಯುಲೆನ್ಸ್ ಬರುತ್ತದೆ ಎನ್ನುತ್ತಿದ್ದರು. ಆದರೂ ಯಾರೂ ಕಾಯದೆ ಬೇರೆ ಬಸ್ಸಿನಲ್ಲಿ ಕುಳಿತು ಹೊರಟುಬಿಟ್ಟರು. ಸುತ್ತಲಿದ್ದ ನಾಗರಿಕರ ಪ್ರಯತ್ನವಂತೂ ನೆಡೇದೇ ಇತ್ತು. ಐದು ಗಂಟೆಯಸುಮಾರಿಗೆ ಇಬ್ಬರು ಪೋಲೀಸರು ಟಿವಿಎಸ್ ಎಕ್ಸೆಲ್ ಸೂಪರ್‌ನಲ್ಲಿ ಬಂದರು. ಅವರು ಬಂದು ಮೂಕಪ್ರೇಕ್ಷಕರ ಸಂಖ್ಯೆ ಹೆಚ್ಚು ಮಾಡಿದರೇ ವಿನಃ ಬೇರೇನೂ ಅವರಿಂದ ಸಾಧ್ಯವಾಗಲಿಲ್ಲ. ಐದೂವರೆ ಗಂಟೆಯ ಹೊತ್ತಿಗೆ ಒಂದು ಅಗ್ನಿಶಾಮಕ ಟ್ರಕ್ ಬಂದು ನಿಂತಿತು. ಅದು ಯಾಕೆ ಬೇಕಿತ್ತೋ ದೇವರಿಗೇ ಗೊತ್ತು. ಅದರಲ್ಲಿದ್ದ ಮೂರ್ನಾಲಕು ಜನ ಇಳಿದು ಬ್ಯಾಟರಿ ಹಿಡಿದುಕೊಂಡು ನಿಂತರು. ಅಂಬ್ಯುಲೆನ್ಸಿನ ಪತ್ತೆಯೇ ಇಲ್ಲ. ಬೆಳಕಾಯಿತು. ಆರು ಗಂಟೆಯಾಯಿತು. ಇನ್ನೂ ಆ ಬಸ್ಸಿನ ಡ್ರೈವರ್‌ನನ್ನು ಹೊರತೆಗೆಯಲು ಆಗಲೇ ಇಲ್ಲ. 3 ಗಂಟೆಯಿಂದ ಅವನು ನೋವಿನಿಂದ ನರಳುತ್ತಲೇ ಇದ್ದ. ನಮ್ಮ ಕಂಡಕ್ಟರ್ "ಇದು ಇನ್ನೂ ಬಹಳ ತಡಾ ಆಗ್ತದೆ ಅಂತ ಕಾಣ್ತದೆ... ಈಗ ನಾವೂ ಇವ್ನನ್ನ ಬಿಟ್ಟು ಹೋಗ್ಬಿಟ್ರೆ ಸರಿ ಬರುದಿಲ್ಲ... ನೀವೆಲ್ಲಾ ಬೇರೆ ಬಸ್ಸಿಗೆ ಹೋಗ್ಬಿಡಿ." ಎಂದು ಹೇಳಿ ನಮ್ಮನ್ನು ಯಲ್ಲಾಪುರ-ಬೆಂಗಳೂರು ರಾಜಹಂಸ ಬಸ್ಸಿಗೆ ಹತ್ತಿಸಿ ಕಳುಹಿಸಿದ. ಡ್ರೈವರ್‌ನ ಆರ್ತನಾದ ಕೇಳುತ್ತಲೇ ಇತ್ತು.

ಕೊನೆಗೂ ಅಂಬ್ಯುಲೆನ್ಸ್ ಬಂದಿತೋ ಬಿಟ್ಟಿತೋ ಯಾರಿಗೆ ಗೊತ್ತು? ಆ ಡ್ರೈವರನ ಕಾಲಿಗೆ ಬಸ್ಸಿನ ಕೆಲವು ಕಬ್ಬಿಣದ ತುಂಡುಗಳು ತೂರಿಕೊಂಡುಬಿಟ್ಟಿದುದರಿಂದ ಗ್ಯಾಸ್ ವೆಲ್ಡರ್ಸ್‌ಗಳ ಬರುವಿಕೆಯನ್ನೂ ಜನ ಕಾಯುತ್ತಿದ್ದರು. ಅವರೆಲ್ಲರೂ ಬಂದು ಆ ಡ್ರೈವರ್‌ನನ್ನು ಆ ಮೃತ್ಯುಕೂಪದಿಂದ ಬಿಡಿಸುವವರೆಗೂ ಆತನಿಗೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಿದನೆಂದೇ ನಂಬಿದ್ದೇನೆ.

5 comments:

ದೀಪಕ said...

ನಮಸ್ಕಾರ/\:)

ನಿಜವಾಗಿಯೂ ಈ ಲೇಖನ ಆ ಚಾಲಕನ ಆರ್ತನಾದವನ್ನು ಓದುಗನಿಗೆ ತಲುಪಿಸಿದೆ. ಕಣ್ಣಿಗೆ ಕಟ್ಟಿದ ಹಾಗಿತ್ತು ಈ ಸತ್ಯ ಘಟನೆಯ ವಿವರಣೆ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Vijayalakshmi said...

I felt as though everything is happening in front of me. Hope the ambulance reached before it was too late and the driver is fine. Thanks for sharing.

ಸಿದ್ಧಾರ್ಥ said...

ನಿನ್ನೆ FM Rainbow ಸುದ್ದೀಲಿ ಹೇಳ್ತಾ ಇದ್ರು. ಆ ಆಕ್ಸಿಡೆಂಟ್‌ನಲ್ಲಿ ಒರ್ವ ಮಹಿಳೆ ಮೃತಪಟ್ಟಿದ್ದಾಳೆ ಅಂತ. ಒಬ್ಳಿಗೆ ಉಸ್ರಾಡಕ್ಕೆ ಬಹಳ ತೊಂದ್ರೆ ಆಗ್ತಾ ಇತ್ತು. ಬಹುಶಃ ಅವ್ಳೇ ಇರ್ಬೇಕು ಅಂತ ಮಾಡಿದೀನಿ. ಡ್ರೈವರ್‌ನ ಬಗ್ಗೆ ಹೇಳ್ಲಿಲ್ಲ.

ravikumar.a said...

namaste,
baduku ennodu eege
jeevava eddare jeevana
elladiddare marana.
aadare,
namannu kaaduva dwandva
" saavinanchinalli errorge bari maathalli kanikara thorusthive horathu kainalli sahaaya maadllikke aglillavallava? "

danyavadagalu inthi nimma-
ravikumar.a

ಸಿದ್ಧಾರ್ಥ said...

@ravikumar
ನಿಜ ಕಣ್ರೀ ನೀವು ಹೇಳಿದ್ದು. ಮನುಷ್ಯ ಎಷ್ಟೇ ಮುಂದುವರದ್ರೂ ಪ್ರಕೃತಿಯ ಆಗುಹೋಗುಗಳ ಮುಂದೆ ಎಷ್ಟು ಕ್ಷುದ್ರಜೀವಿ ಅನ್ಸತ್ತೆ...