Thursday, October 26, 2017

ಗೆಂಡೆತಿಮ್ಮನ ಕಾಳಗ

ಬುದ್ಧನಿಗೆ ಬೋಧೀವೃಕ್ಷದ ಕೆಳಗೆ ಜ್ಣಾನೋದಯವಾದರೆ, ನಮ್ಮ ತಿಮ್ಮನಿಗೆ ಬೆಂಗಳೂರು ರೋಡಿನಲ್ಲಿ ಬೈಕ್ ಓಡಿಸುತ್ತಾ
ಜ್ಞಾನೋದಯವಾಯಿತು. ಜ್ಞಾನೋದಯವಾದೊಡನೆಯೇ ಈ ಕೆಳಗಿನ ಮೂರು ಕಗ್ಗಗಳನ್ನು ಬರೆದು ಮುಗಿಸಿಬಿಟ್ಟ !


ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಆದುದರಿಂದ ತಿಮ್ಮನ ಸಲಹೆ,

ರೋಡೆಲ್ಲ ಬರಿ ಗುಂಡಿ ಕುಣಿಯುತ ಸಾಗಿದೆ ಬಂಡಿ
ವೇಗದೊಂದಿಗೆ ಕುಣಿತ ತಳುಕು ಹಾಕಿಹುದು ||
ಕತ್ತು ಮೈ ಕೈ ಸೊಂಟ ಉಳುಕೀತು ನಿಧಾನಿಸು
ಗುಂಡಿಯೊಳು ಜಗವಿಹುದು - ಗೆಂಡೆತಿಮ್ಮ - || ೧ ||


ವಿಧಿಲಿಖಿತವನ್ನು ತಪ್ಪಿಸುವವರಾರು ?

ತಿರುಗಿಸು ಮೋಟಾರನು ಗುಂಡಿ ಕಂಡರೆ ಮುಂದೆ
ತಿರುಗಿಸಿದೆಡೆ ಗುಂಡಿ ಇದ್ದೊಡೆ ನಿನ್ನ ಕರ್ಮ ||
ತಪ್ಪಿಸಲಾಗದು ಗುಂಡಿಯೆನ್ನುವುದೆ ವಿಧಿ ಬರಹ
ಬೀಳದಿರು ಗುಂಡಿಯೊಳು - ಗೆಂಡೆತಿಮ್ಮ || ೨ ||


ಇದಕ್ಕೆಲ್ಲಾ ಕಾರಣವಾದರೂ ಏನು ? ಕಲಿಯುಗದಲ್ಲಿ ಕಲ್ಕಿ ಅವತಾರದ ಬದಲು ಲಂಚಾವತಾರ !

ತಿನ್ನುವುದು ಸಹಜದ ಧರ್ಮ ತಿನಿಸುವುದು ಪರಧರ್ಮ
ಅವತಿಂದನೆನುತ ತಿನುವುದತಿಶಯದ ಧರ್ಮ ||
ತಿನಿಸ ತಿನಿಸುವ ತಿನಿಸಿ ತಿನುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ - ಗೆಂಡೆತಿಮ್ಮ || ೩ ||


ತಿಮ್ಮನೇನೋ ಕಷ್ಟಪಟ್ಟು ಮನೆ ಮುಟ್ಟಿದ. ಮನೆ ಮುಟ್ಟದವರು ಗುಂಡಿಯಲ್ಲೇ ಹೊದ್ದು ಮಲಗಬೇಕು...

Monday, June 15, 2015

ಭಾಗ್ಯದ ಸಿದ್ದ ರಾಮಣ್ಣ

ಭಾಗ್ಯ ಬಹಳ ಸುದ್ದಿ ಮಾಡ್ತಾ ಇದೆ. ಇದು ಜನರ ದೌರ್ಭಾಗ್ಯವೋ.. ಸರ್ಕಾರದ ದೌರ್ಭಾಗ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಚಿವರು ಒಂದು ಹೇಳುವುದು.. ಮುಖ್ಯಮಂತ್ರಿ ಇನ್ನೊಂದು ಹೇಳುವುದು,
ಇದರ ಮಧ್ಯೆ ಜನ, ಸಾಹಿತಿಗಳು ಭಾಗ್ಯಗಳ ಬಗ್ಗೆ ಮಗದೊಂದು ಹೇಳುವುದು ಮುಂದುವರೆದಿದೆ... ಈ ಎಲ್ಲಾ ಭಾಗ್ಯಗಳ ಮಧ್ಯದಲ್ಲಿ ನಿಮಗೊಂದು ರೀಮಿಕ್ಸ್ ಭಾಗ್ಯ !
’ಪುರಂದರ ದಾಸ’ರ ಕ್ಷಮೆ ಕೋರಿ... ಹಾಗೂ ಮಾನ್ಯ ಮುಖ್ಯಮಂತ್ರಿಗಳು ನಗೆಚಾಟಿಕೆಯನ್ನು ಹಾಗೇ ಸ್ವೀಕರಿಸಿ ನನ್ನನ್ನು arrest ಮಾಡಿಸುವುದಿಲ್ಲ ಎಂದು ಭಾವಿಸಿ... :P


ಭಾಗ್ಯದ ಸಿದ್ದ ರಾಮಣ್ಣ
ನಮ್ಮಪ್ಪ, ನೀ ಸೌಭಾಗ್ಯದ ಸಿದ್ದ ರಾಮಣ್ಣ

ಕೆಂಪು ದೀಪದ ವಾಹನವೇರುತ
ಜನರನು ಹೋಗದೆ ಬಿಡದೆಯೆ ನಿಲಿಸುತ
ಪ್ರಜೆಗಳು ಕೆಲಸಕೆ ಹೋಗುವ ವೇಳೆಗೆ
ಅಡ್ದಕೆ ಹಾಯುವ ಮಾರ್ಜಾಲದಂತೆ

ಕುಂತರೆ ನೀನು ಭಾಗ್ಯವ ಬಿಟ್ಟೆ
ನಿಂತರೆ ನೀನು ಭಾಗ್ಯವ ಬಿಟ್ಟೆ
ಭಾಗ್ಯದ ಮೇಲೆ ಭಾಗ್ಯವ ಬಿಡುವ
ಭರದಲಿ ರಾಜ್ಯಭಾರವ ಮರೆತೆ

ಕ್ಷೀರ ಭಾಗ್ಯದಿ ಹಾಲನು ಹರಿಸಿ
ಅನ್ನ ಭಾಗ್ಯದಿ ಅನ್ನವ ಉಣಿಸಿ
ಪಶು ಭಾಗ್ಯದಿ ಪಶುಗಳ ಬೆಳೆಸಿ
ಶಾದಿ ಭಾಗ್ಯದಿ ಮಲಗಿಸಿ ಬಿಟ್ಟೆ

ಮಾತು ಮಾತಿಗೆ ದಿಲ್ಲಿಗೋಡಿದೆ
ಸಭೆ ಸಮಾರಂಭದಿ ತೂಕಡಿಸಿದೆ
ಇಂದಿರೆ ಬದಲು ಸೋನಿಯಾ ಅಂದೆ
ಕಾಂಗ್ರೆಸ್ ರಾಣಿಗೆ ಸಲಾಮು ಹೊಡೆದೆ

Tuesday, April 14, 2015

ಹುಣ್ಣು

ಭವಿಷ್ಯದಲ್ಲಿ ಏನಾಗುಬಹುದು ಎಂದು ಸರಿಯಾಗಿ ಊಹಿಸುವವನು... ಅಥವಾ ಈಗಿನ ಸಮಸ್ಯೆಗೆ ಹೀಗೆ ಮಾಡಿದರೆ ಭವಿಷ್ಯದಲ್ಲಿ ಇದಕ್ಕೆ ಪರಿಹಾರ ಸಿಗಬಹುದು ಎಂದು ಸರಿಯಾದ ಹೆಜ್ಜೆ ಇಡುವವನು ದಾರ್ಶನಿಕ (visionary). ಯಾಕೋ ಇವತ್ತಿನ ಪರಿಸ್ಥಿತಿ ನೋಡಿದರೆ ನಿಮ್ಮ ಜನರನ್ನು ನೀವೇ ಅರ್ಥ ಮಾಡಿಕೊಂಡಿರಲಿಲ್ಲ ಎನಿಸುತ್ತಿದೆ! 

Anyway... ಡಾ. ಅಂಬೇಡ್ಕರರ ಜಯಂತಿಯ ಪ್ರಯುಕ್ತ .. ನಾಡಿನ ಸಮಸ್ತ ಬುದ್ಧಿಜೀವಿಗಳಿಗೆ ನನ್ನ ಒಂದು ಚಿಕ್ಕ ಕೊಡುಗೆ..

ವಿರೋಧಕ್ಕಾಗಿ ಹೋರಾಟ ಬೀದಿಗಳಲ್ಲಿ ಬಯಲಾಟ
ಪ್ರಚಾರಕ್ಕಾಗಿ ಹಾರಾಟ ಆದರ್ಶಗಳ ಮಾರಾಟ
ನಿಜವಾಗಿಯೂ ಏಳ್ಗೆಯ ಕನಸನ್ನು ಕಂಡೆಯಾ
ಅಥವಾ ಕಣ್ಣು ಮುಚ್ಚಿ ದನದ ಮಾಂಸ ತಿಂದೆಯಾ?


ಜ್ನಾನಕ್ಕೆ ಪೀಠವೇ ಪೀಠಕ್ಕೆ ಜಾತಿಯೇ
ಶಾರದೆಗೂ ಜಾತಿಯ ಮೇಲೆಯೇ ಪ್ರೀತಿಯೇ
ಆ ಜಾತಿ ಈ ಜಾತಿ ಎಲ್ಲಾ ಒಂದೇ ಜಾತಿ
ಹುಣ್ಣಾದರೆ ಕೆರೆದುಕೊಳ್ಳುವ ಜಾತಿ

ನೋಡಿದರು ಕೆಲವರು ಹುಣ್ಣಿಗೆ ಮುಲಾಮು ಹಚ್ಚಿ
ನೋಡಿದರು ಕೆಲವರು ತಮ್ಮ ಬಾಯಿ ಮುಚ್ಚಿ
ಮಾಸಿತೆಂದುಕೊಂಡರೆ ಹುಣ್ಣು ಹುಟ್ಟಿತೆಲೆ ಮತ್ತೊಂದು
ಕೆಲವರು ಸುಖಿಸಿದರು ಹುಣ್ಣನ್ನು ಪರರಿಗೆ ಹಚ್ಚಿ

- ಸಿದ್ಧಾರ್ಥ

Thursday, February 6, 2014

ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ...

ದೇಶದ ರಾಜಕಾರಣದಲ್ಲಿ ಕೇವಲ ಮಫ್ಲರ್ ಕಟ್ಟಿಕ್ಕೊಂಡು ಎಲ್ಲರ ಚಳಿ ಬಿಡಿಸುರುವ ಕೇಜ್ರಿವಾಲರ ಬಗ್ಗೆ ಬರೆದು, ಬಹುತೇಕ ಮುಚ್ಚೇ ಹೋಗಿರುವ ನನ್ನ ಬ್ಲಾಗನ್ನು ಮತ್ತೆ ಚಾಲ್ತಿಯಲ್ಲಿ ತರುವ ಪ್ರಯತ್ನ ಇದಲ್ಲ. ಬರೆಯದಿದ್ದರೆ ಕೇಜ್ರಿವಾಲರಿಗೆ ಅಪಮಾನ ಎಂದು ಬರೆಯುತ್ತಿದ್ದೇನೆ!

ಮೊದಲೆಲ್ಲಾ ’ವಾಲ’ ಎಂದು ಕೇಳಿದಾಗಲೆಲ್ಲ ಶಬ್ದವನ್ನು ಪೂರ್ತಿಗೊಳಿಸಲು ಬಹಳಷ್ಟು ಆಯ್ಕೆಗಳಿರುತ್ತಿದ್ದವು. ಡಬ್ಬಾವಾಲ, ಟೋಪಿವಾಲ, ಚಾಯ್ ವಾಲ ಇತ್ಯಾದಿ. ಈಗ "___ವಾಲ" ಇದನ್ನು ಪೂರ್ತಿಗೊಳಿಸಿ ಎಂದು ಯಾರಿಗೇ ಕೇಳಿದರೂ ನೂರಕ್ಕೆ ತೊಂಬತ್ತೊಂಬತ್ತು ಜನ ಕೇಜ್ರಿವಾಲ ಎಂದೇ ಹೇಳುವುದು! ಪೊರಕೆ ಹಿಡಿದು ಕಸಗುಡಿಸುವುದಷ್ಟೇ ಅಲ್ಲ ರಜ್ಯವನ್ನೂ ಆಳಬಹುದು ಎಂದು ಹೇಳಿಕೊಟ್ಟ ಪೊರಕೆಮಾನವ ನಮ್ಮ ಕೇಜ್ರಿ.

ಇವರ ಧ್ಯಾನದಲ್ಲೇ ಟೋಪಿವಾಲ ಹಾಡು ಕೇಳುತ್ತಿದ್ದಾಗ ಅನಾಯಾಸವಾಗಿ ಬಂದ ರೀಮಿಕ್ಸ್ ಇದು.


ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ತುಂಬಾ ಜುಜಬಿ ಮನ್‌ಷಾ ನಾನು ಕಾಮನ್ ಮ್ಯಾನು ನನ್ನ ಫ್ಯಾನು 
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ
ವಾಲ ವಾಲ ವಾಲ ವಾಲ ವಾಲ ವಾಲ ವಾಲ ಕೇಜ್ರಿ ವಾಲ ವಾಲ ವಾಲ ವಾಲ ವಾಲ ವಾಲ ವಾಲ ವಾಲ...

ನಾನು ತೊಟ್ಟ ಟೋಪಿಯನ್ನೇ ಜನರೆಲ್ರೂ ತೊಟ್ಟುಕೊಂಡ್ರು
ನಾನು ಕೂತ ಧರಣಿಗೇನೆ ಪೋಲೀಸ್ರು ರಜೆ ಹಾಕಿ ಬಿಟ್ರು
ನಾವ್ ಮಧ್ಯ ರಾತ್ರಿ ರೇಡ್ ಮಾಡ್ತಿವಿ... ಬೇರೆಯವ್ರಿಗ್ ಕ್ಯಾಕರ್ಸಿ ಉಗಿತಿವಿ
ನಮಗೆ ಮಿಷಿನ್ನು ಗನ್ನು ಬೇಡಾರೀ... ಧರಣಿ ಮಾಡೋಕ್ ಕೂತ್ರೆ ನಡುಗಿ ಸಾಯ್ತಾರ್ರೀ
ಗಾಂಧಿ ನೆಡೆದ ದಾರಿ ನಮ್ದು ಕೇಳಿರಿ... ಗಾಂಧಿ ವಿರುದ್ಧಾನೆ ಧರಣಿ ಮಾಡ್ತಿವಿ

ರೋಡಿನ್ ಮಧ್ಯ ಧರಣಿಯಲ್ಲಿ ಚಳೀಲಿ ಮಲ್ಗೋ ಕರ್ಮದಲ್ಲಿ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ಭ್ರಷ್ಟಿಗಳ ಊರಿನಲ್ಲಿ ಲಂಚಾಸುರನ ಜಾತ್ರೆಯಲ್ಲಿ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಅಣ್ಣ ತಮ್ಮ ಎಲ್ಲ ಬಿಟ್ಟೆ ನೀವೆ ಬಂಧು ಎಂದು ಭಾಷೆ ತೊಟ್ಟೆ
ಸರ್ಕಾರಿ ಬಂಗ್ಲೆ ಬಿಟ್ಟೆ ನನ್ನ ಕಾರಿನಲ್ಲೆ ನಾನು ಹೊರಟೆ ಬಿಟ್ಟೆ
ನಾವು ಕರೆಂಟ್ ಬಿಲ್ಲು ಅರ್ಧ ಮಾಡ್ತಿವಿ... ನಿಮ್ಮ ದುಡ್ಡಲ್ ಉಳಿದರ್ಧ ತುಂಬ್ತಿವಿ
ನಾವು ನೀರು ಎಲ್ಲರಿಗೂ ಕೊಡ್ತಿವಿ... ಜಾಸ್ತಿ ಕೊಟ್ರೆ ದುಡ್ಡು ಕೂಡಾ ತಗೊತಿವಿ
ತೊಂದ್ರೆ ಆದ್ರೆ ಒಂದು ರಿಂಗ್ ಮಾಡಿರಿ... ಸಾಕ್ಷಿ ಕೊಟ್ಟು ನೀವೆ ಜೈಲಿಗ್ ಹಾಕಿರಿ

ಮೊದ್ಲು ಸಾವ್ರ ಪ್ರೂಫು ಕೊಟ್ಟೆ ಈಗ ಎಲ್ಲ ಕಳ್ಕೊಂಡ್ ಬಿಟ್ಟೆ
ನಾನೊಬ್ಬನೇ ಕೇಜ್ರಿವಾಲ... ಪೊರ್ಕೆ ತಗೊಂಡ್ ಗುಡ್ಸೇಬಿಡ್ಲಾ
ನನ್ನ ಕೆಮ್ಮಿಗ್ ಮದ್ದೇ ಇಲ್ಲ ನನ್ನ ಮುಂದೆ ಕೆಮ್ಮಂಗಿಲ್ಲ
ನಾನೊಬ್ಬನೇ ಕೇಜ್ರಿವಾಲ... ಕೆಮ್ಮಿ ಕೆಮ್ಮಿ ಉಸ್ರು ಬಿಡ್ಲಾ

ಕೇಜ್ರಿ ಅವರ ಫ್ಯಾನ್ ಆಗಿರುವುದರಿಂದ ಹಾಗೂ ಕೇಜ್ರಿವಾಲರು ನನ್ನ ವಿರುದ್ಧ ದಾವೆ ಹಾಕಬಾರದೆಂದು ಕೊನೆಯ ಸಾಲು!
ಇದರಲ್ಲಿ ಹಾಕಿರುವ ಫೋಟೋ  "www.newsyaps.com" ದಿಂದ ಕದ್ದಿದ್ದು. 

Thursday, July 25, 2013

ಕೌರವರ ಮನೆಯ ಲಾಜಿಸ್ಟಿಕ್ ಪ್ರಾಬ್ಲಮ್ಸ್

ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ! ನೀವು ಯಾವುದಾದರೊಂದು ಸಿನೆಮಾ ನೋಡಿದಾಗ, ಕಥೆ/ಕಾದಂಬರಿ ಓದಿದಾಗ ಎಷ್ಟೊಂದು ಪ್ರಶ್ನೆಗಳು ಏಳುತ್ತವೆ. ಆದರೆ ಕೆಲವೊಂದನ್ನು ನಾವು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವನು ಯಾಕೆ ಹಾಗೆ ಮಾಡಿದಾ... ಇವಳು ಯಾಕೆ ಹೀಗೆ ಮಾಡಿದಳು..? ಮೆಗಾ ಸೀರಿಯಲ್‌ಗಳನ್ನು ನೋಡಬೇಕಾದರಂತೂ ಒಂದೇ ಪ್ರಶ್ನೆ! ’ಇವರು ಯಾವಾಗ ಕಥೆ ಮುಂದುವರಿಸುತ್ತಾರೆ ?’. ಆಶ್ಚರ್ಯ ಎಂದರೆ ಕಾಲೇಜಿನಲ್ಲಿ ಪಾಠ ಕೇಳುವಾಗ ಮಾತ್ರ ಇಂತಹ ಸಮಸ್ಯೆಗಳು ಬರಲೇ ಇಲ್ಲಾ. ನಮ್ಮ ಲಕ್ಚರರ್‌ಗಳಿಗೇ ಇದರ ಕ್ರೆಡಿಟ್ ಸಲ್ಲಬೇಕು. ಇಂಜಿನಿಯರಿಂಗ್‌ನಲ್ಲಂತೂ ಪ್ರಶ್ನೆಗಳು ಉಧ್ಬವಿಸುವುದು ಹೋಗಲಿ ಪರೀಕ್ಷೆಯಲ್ಲಿ ಕುಳಿತಾಗ ಪ್ರಶ್ನೆಗಳಿಗೆ ಉತ್ತರಗಳೂ ಉದ್ಭವಿಸುತ್ತಿರಲಿಲ್ಲ. ಇದಕ್ಕೂ ಕ್ರೆಡಿಟ್ ಲಕ್ಚರರ್‌ಗಳಿಗೇ ಹೋಗಬೇಕಾದರೂ ನಮ್ಮ ಪಾಲೂ ಕೊಂಚ ಇದೆ.

ಚಿಕ್ಕಂದಿನಿಂದಲೂ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮದಲ್ಲ. ಕೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಲೇ ಬೆಳೆದಿರುವುದು ನಾವು. ಆದರೂ ಇತ್ತೀಚೆಗೆ ಜೀವನದ ಕೆಲವು ಬಗೆಹರಿಸಲಾಗದ ಸಮಸ್ಯೆಗಳು ಕಣ್ಣೆದುರಿಗೆ ಬಂದು ನಿಂತಾಗ ಅದರ ಬಗೆಗೆ ಯೋಚಿಸತೊಡಗುತ್ತೇವೆ. ಪ್ರಶ್ನೆಗಳು ಮೂಡುತ್ತವೆ. ಬೆಂಗಳೂರಿನಲ್ಲಿ ಬಹು ಅಪರೂಪಕ್ಕೆ ಮಳೆಗಾಲದಲ್ಲಿ ಮಳೆ. ಮನೆ ಎನ್ನುವುದು ಧೋಬಿಘಾಟ್ ಆಗಿ ಹೋಗಿದೆ. ಬಟ್ಟೆ ಹೊರಗೆ ಒಣಗಿಸುವಂತಿಲ್ಲ. ಒಳಗೆ ಒಣಗಿಸಿದರೆ ನಾಲ್ಕು ದಿನವಾದರೂ ಒಣಗುವುದಿಲ್ಲ. ಪ್ಯಾಂಟು ಶರ್ಟು, ಮನೆಯಲ್ಲಿ ಬರ್ಮುಡಾ ಧರಿಸುತ್ತಿರುವ ನಮಗೇ ಇಷ್ಟು ಸಮಸ್ಯೆಯಾದರೆ ಮಹಾಭಾರತದ ಕಾಲದಲ್ಲಿ ಕೌರವರ ಮನೆಯಲ್ಲಿ, ಗಂಡ ಹೆಂಡತಿ ಹಾಗೂ ನೂರಾಒಂದು ಮಕ್ಕಳಿದ್ದ ಆ ಮನೆಯಲ್ಲಿ ಇನ್ನೆಷ್ಟು ಸಮಸ್ಯೆ ಆಗಿರಲಿಕ್ಕೆ ಸಾಕು? ಮನೆಯಲ್ಲಿ ಬಟ್ಟೆ ಒಣಗಿಸಲಿಕ್ಕೆ ಜಾಗ ಹುಡುಕುವವರೇ ಎರಡು ಜನರಿದ್ದಿರಬೇಕು! ಬಹುಷಃ ಪ್ರತಿಯೊಬ್ಬರ ರೂಮಿನಲ್ಲಿ, ಮಧ್ಯ ಕಾರಿಡಾರ್‌ನಲ್ಲಿ, ಕೊನೆಗೆ ರಾಜಸಭೆಯಲ್ಲೂ ಸೀರೆ, ಪಂಚೆ ಒಣಗಿಸುತ್ತಿದ್ದರೇನೋ... ವ್ಯಾಸರಿಗೇ ಗೊತ್ತು.

ನನ್ನನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಇದಲ್ಲಾ. ನಾನು, ಕೆಲವು ಸಲ ನನ್ನ ತಮ್ಮ, ಊರಿಗೆ ಹೋದಾಗ ಅಪ್ಪನನ್ನು ಸೇರಿಸಿ ಮನೆಯಲ್ಲಿರುವವರು ಮೂರೇ ಜನ ಗಂಡಸರು. ಆದರೂ ಎಷ್ಟೋ ಬಾರಿ ಒಳ ಉಡುಪುಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಾಗಿವೆ. ಈಗಂತೂ ನನ್ನ ಬ್ರಾಂಡ್ ಇದೇ ಕಾರಣಕ್ಕೋಸ್ಕರ ಬದಲಾಯಿಸಿಕೊಂಡುಬಿಟ್ಟಿದ್ದೇನೆ! ನಿಕ್ಕರ್ ಹೇಗೋ ಕಂಡುಹಿಡಿದುಬಿಡಬಹುದು. ಈ ಬನಿಯನ್‌ಗಳದ್ದೇ ತಾಪತ್ರಯ. ಎಷ್ಟು ಬಾರಿ ಬೇರೆಯವರದ್ದನ್ನು ಧರಿಸಿದ್ದೇನೋ ಗೊತ್ತಿಲ್ಲ. ಇದನ್ನು ನೆನೆದುಕೊಂಡಾಗೆಲ್ಲಾ ನನಗೆ ಕಾಡುವ ಪ್ರಶ್ನೆ, ಮಹಾಭಾರತದ ಕಾಲದಲ್ಲಿ, ಕೌರವರ ಮನೆಯಲ್ಲಿನ ಪರಿಸ್ಥಿತಿ ಹೀಗಿದ್ದೀತು? ಆಗ ಚಡ್ಡಿ ಬಳಸುತ್ತಿದ್ದರೋ ಅಥವಾ ಲಂಗೋಟಿಯೋ? ಏನೇ ಆಗಲಿ... ನೂರಾಒಂದು ಜನ! ಎಲ್ಲರ ಲಂಗೋಟಿಗಳನ್ನಂತೂ ದಿನನಿತ್ಯವೂ ತೊಳೆಯಲೇ ಬೇಕು. ನೂರಾಒಂದು ಲಂಗೋಟಿಗಳನ್ನು ಎಲ್ಲಿ ಒಣಗಿಸುತ್ತಿದ್ದರು? ಒಂದೇ ಕಡೆ ಒಣಗಿಸಿಬಿಟ್ಟರೆ ಮುಗಿಯಿತು. ದಿನನಿತ್ಯವೂ ಬೇರೆ ಬೇರೆಯವರದ್ದೇ ಲಂಗೋಟಿಗಳು. ಎಲ್ಲರೂ ತಮ್ಮ ತಮ್ಮ ಬಚ್ಚಲಿನಲ್ಲೇ ಒಣಗಿಸಿಕೊಳ್ಳುತ್ತಿದ್ದರೂ ಎಂದಿಟ್ಟುಕೊಂಡರೆ, ಮನೆಯಲ್ಲಿ ಕನಿಷ್ಟ ಎಂದರೂ ನೂರಾಒಂದು ರೂಮುಗಳು.. ವಿಥ್ ಅಟ್ಯಾಚಡ್ ಬಾಥ್! ನಮ್ಮ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆಯಂತೆ! ಬರಗೆಟ್ಟ ಸ್ಥಿತಿಯಲ್ಲೂ ರಾಷ್ಟ್ರಪತಿಗೆ ಇಷ್ಟೊಂದು ಐಶಾರಾಮೀ ಜೀವನ ಇರಬೇಕಾದರೆ, ರಾಜರ ಕಾಲದಲ್ಲಿ, ಕೌರವೇಶ್ವರನಿಗೆ ಇಷ್ಟೂ ಇಲ್ಲದಿದ್ದರೆ ಹೇಗೆ? ಆದರೂ ಕನ್‌ಫ್ಯೂಜನ್ ಬೇಡಾ ಎಂದು ಲಂಗೋಟಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ಹೊಲಿಸಿಬಿಡುತ್ತಿದ್ದರು ಎಂಬುದೇ ನನ್ನ ಊಹೆ.

ನೂರಾಒಂದನೆಯದು ಹೆಣ್ಣಾದುದರಿಂದ ಅವಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದಿಟ್ಟುಕೊಂಡರೆ, ಕೌರವರ ಈ ನೂರು ಮಕ್ಕಳು, ಅವರ ಹೆಂಡಿರುಗಳು, ಅವರ ಮಕ್ಕಳುಗಳು, ಒಟ್ಟಾಗಿ, ಕನಿಷ್ಟಪಕ್ಷ, ಒಂದು ನಾನೂರು ಐನೂರು ಜನರಾದರೂ ಇದ್ದಾರು. ಇವರೆಲ್ಲರೂ ಬೆಳಿಗ್ಗೆ ಶೌಚಕ್ಕೆ ಹೋಗಬೇಕು ಎಂದರೆ ಒಟ್ಟೂ ಎಷ್ಟು ಪಾಯಖಾನೆಗಳನ್ನು ಕಟ್ಟಿಸಿಯಾರು? ನಮ್ಮ ಮನೆಯಲ್ಲಿ ಎರಡು ಪಾಯಿಖಾನೆ ಇದ್ದು ಆರು ಜನರಿದ್ದಾಗಲೇ ಎಷ್ಟೋ ಬಾರಿ ಟೈಮಿಂಗ್ ಕ್ಲಾಷ್ ಆಗುತ್ತಿತ್ತು. ಕೌರವರ ಮನೆಯಲ್ಲಿ ಆಗದೇ ಇದ್ದೀತೇ? ಎಲ್ಲರ ರೂಮಿನಲ್ಲಿ ಕೊಮೋಡ್‌ ಅಂತೂ ಇರಲಿಕ್ಕೆ ಸಾಧ್ಯವಿಲ್ಲ. ಯಾಕಂದರೆ ಅದು ಈಗಿನ ಪದ್ಧತಿ. ಎಲ್ಲರೂ ಬಯಲಿಗೆ ಹೋಗುತ್ತಿದ್ದರು ಎನ್ನುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ರಾಜಮನೆತನದವರು. ಬಯಲಿಗೆ ಹೋದರೆ ಜನಸಾಮಾನ್ಯರು ಏನು ಮಾಡಬೇಕು. ಬೆಳಿಗ್ಗೆಯಿಂದ ಪಾಯಿಖಾನೆಗೆ ಕ್ಯೂ ನಿಲ್ಲುತ್ತಿದ್ದರು ಎಂದಿಟ್ಟುಕೊಂಡರೆ ಕೆಲವರ ಸರದಿ ಬರುವಷ್ಟರಲ್ಲಿ ಮಾರನೇ ದಿನವೇ ಆಗಿಹೋಗುತ್ತಿತ್ತೋ ಏನೊ. ಸಾಲಾಗಿ ನಾನೂರು ಪಾಯಖಾನೆ ಕಟ್ಟಿಸಿಟ್ಟಿದ್ದರು ಎಂದಿಟ್ಟುಕೊಂಡರೆ ಅದರಲ್ಲಿ ಖಾಲಿ ಯಾವುದಿದೆ ಎಂದು ಕಂಡುಹಿಡಿಯುವುದಕ್ಕೆ ಏನಾದರೂ ಉಪಾಯ ಮಾಡಿರಲೇ ಬೇಕು. ಇಲ್ಲದಿದ್ದರೆ ಹುಡುಕುವಷ್ಟರಲ್ಲೇ ಅವಘಡ ಸಂಭಿವಿಸುವ ಸಾಧ್ಯತೆಗಳೇ ಜಾಸ್ತಿ. ಈ ಸಮಸ್ಯೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ವ್ಯಾಸರೇ ಹೇಳಬೇಕು.

ಒಟ್ಟಿನಲ್ಲಿ ನನಗನಿಸುವುದೇನಪ್ಪಾ ಅಂದರೆ, ಈ ಎಲ್ಲಾ ಕಾರಣಗಳಿಗೇ, ಕೌರವರಿಗೆ ವಿದ್ಯಾಭ್ಯಾಸಕ್ಕೆ, ಶಸ್ತ್ರಾಭ್ಯಾಸಕ್ಕೆ ಸಮಯವಿಲ್ಲದೆ ಎಲ್ಲರೂ ಕೆಲಸಕ್ಕೆ ಬಾರದವರಾಗಿ, ಪಾಂಡವರ ಎದುರು ಸೋಲಬೇಕಾಯಿತು! ಅದಕ್ಕೇ ಹಿರಿಯರು ಹೇಳಿದ್ದು.
ಚಿಕ್ಕ ಸಂಸಾರ... ಚೊಕ್ಕ ಸಂಸಾರ...
ಒಂದೇ ಪಾಯಖಾನೆಯಿದ್ದರೂ ಎಲ್ಲರಿಗೂ ಸಸಾರ!

Monday, July 1, 2013

ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೆಳಗಿನ ಪ್ಯಾರಾ "ಹೀಗೂ ಉಂಟೆ" ಸ್ಟೈಲ್ ಅಲ್ಲಿ...

ಎಂಟು ವರ್ಷ ಸಾಫ್ಟ್‌ವೇರಲ್ಲಿ ಕೆಲ್ಸಾ... ಕೈ ತುಂಬಾ ಸಂಬಳಾ... ಹೆಂಡ್ತಿ ಮತ್ತು ಮಗು... ಚಿಕ್ಕ ಚೊಕ್ಕ ಸಂಸಾರ... ಇಷ್ಟೆಲ್ಲಾ ಇದ್ರೂ ಯಾವುದೋ ಒಂದು ಕೊರತೆ! ಲೈಫಲ್ಲಿ ತೃಪ್ತಿ ಅನ್ನೋದೇ ಇಲ್ವಾ? ಸಂತೋಷ ಅನ್ನೋದು ಎಲ್ಲಿದೆ? ಎಲ್ಲಾ ಇದ್ರೂ ಏನೋ ಒಂದು ಕಮ್ಮಿ... ಅದೇನು? ಹುಡಕಿದ್ರೆ ಸಿಗುತ್ತಾ ಅಥ್ವಾ ಇಲ್ವಾ? ಅದೇನು ಅಂತಾ ಹುಡ್ಕಕ್ ಆಗ್ದೇ ಇರೋದಾದ್ರು ಯಾಕೆ? ಇದಕ್ಕೆ ಉತ್ತರಾ ಸಿಗತ್ತಾ ಅಥ್ವಾ ಇಲ್ವಾ..? ಹೀಗೆ ಯೋಚ್ಸಕ್ಕೆ ಶುರು ಮಾಡಿದ್ರೆ ನಮಗೆ ಕಾಡುವ ಕಟ್ಟಕಡೆಯ ಪ್ರಶ್ನೆ "ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?"

ಈ ಸಾಫ್ಟ್‌ವೇರ್ ಜೀವನದಲ್ಲಿ ಏನಿದೆ ಅಂತಾ ಜನಾ ಅಷ್ಟೊಂದು ಕ್ರೇಸ್ ಹುಟ್ಟುಹಾಕಿದ್ರು ನನಗಂತೂ ತಿಳೀತಾ ಇಲ್ಲಾ. ’ಕೈ ತುಂಬಾ ಸಂಬಳ’ ಅನ್ನೋದೊಂದೇ ಮಾನದಂಡವಾಗಿಟ್ಕೊಂಡು ಎಲ್ಲಾ ತಂದೆ ತಾಯಂದ್ರು ಮಕ್ಳನ್ನಾ ರಾತ್ರಿ ಕಂಡ ಬಾವೀಲಿ ದಬ್ಬಿಬಿಟ್ರಲ್ಲಾ ಅನ್ನಿಸ್ತಿದೆ. ಈಗೀಗ ಹುಡುಗರೇ ಬುದ್ಧಿವಂತರಾಗಿಬಿಟ್ಟಿದಾರೆ. ಅವರೇ ಹೋಗಿ ಬಾವೀಲಿ ಬೀಳ್ತಾರೆ. ಒಟ್ನಲ್ಲಿ ಹೇಳೋದಾದ್ರೆ ಮನಃಪೂರ್ವಕವಾಗಿ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ ಅಂತಾ ಹೇಳೋ ಸಾಫ್ಟ್‌ವೇರ್ ಇಂಜಿನೀಯರ್‌ಗಳು 20%-30% ಇರಬಹುದು ಅನ್ಸತ್ತೆ! ಹೀಗೆ ಯಾಕ್ ಆಗೋಯ್ತು ಅಂತಾ ತಲೆಮೇಲೆ ಕೈ ಆಡಸ್ತಾ ಒಂದು ರೀಮಿಕ್ಸ್ ...

'ಅಣ್ಣಾ ಬಾಂಡ್’ ಚಿತ್ರದ ’ಬೋಣಿ ಆಗದ ಹೃದಯಾನಾ’ ಧಾಟೀಲಿ...

ಇಂಟರ್ನೆಟ್ಟಿನ ಕೋಡನ್ನಾ ಕಾಪಿ ಪೇಸ್ಟು ಮಾಡ್ಕೊಂಡು
ಕಸ್ಟಮರ್ರಿಗೆ ಕಾಯುವ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ.., ಬೇಕಿತ್ತಾ...
ಮತ್ತೆ ಮತ್ತೆ ನನ್ನನ್ನೇ ನಾನೇ ಕ್ಷಮಿಸಿಕೊಳ್ಳುತ್ತಾ
ಮಾನಿಟರ್‌ನಾ ಪ್ರೀತ್ಸೋ ಕ್ಯಾಮೆ ಬೇಕಿತ್ತಾ
ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ... ಬೇಕಿತ್ತಾ...
ಹಾರಾಡ್ತಿರೋ ಮನಸಿಗೊಂದು ಕ್ಯೂಬು ಬೇಕಿತ್ತಾ
ಬಣ್ಣ ಕಾಣದಿರುವ ಬ್ಲಾಕ್ ಎಂಡ್ ವೈಟು ಸ್ಕ್ರೀನು ಬೇಕಿತ್ತಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇಬೇಕಿತ್ತಾ?

ಕೀಬೋರ್ಡನ್ನಾ ಕುಟ್ಕೊಂಡು, ಮೌಸನ್ನಾ ಹಿಡ್ಕೊಂಡು
ಸೊಂಟಾ ನೋವು ಮಾಡಿಕೊಂಡ ನಾನು ಲೂಸಾ
ನನಗೂ ಬೋರಿಂಗ್ ಲೈಫಿಗೂನು ಖಾಸಾ ಖಾಸಾ
ಲೈಫು ಒಂದು ಪೋಯಮ್ಮು, ಇರಲೇ ಬೇಕು ಫ್ರೀಡಮ್ಮು
ಕುಂತೂ ನೋಡ್ದೆ ನಿಂತೂ ನೋಡ್ದೆ ಯೂಸಾಗ್ತಾ ಇಲ್ಲಾ
ಎದ್ರೂ ಕೂತ್ರೂ ಕ್ಯೂಬು ಬಿಟ್ರೆ ಬೇರೆ ಇಲ್ಲಾ
ಕೀಬೋರ್ಡ್ ಕುಟ್ಟೋ ಸೌಂಡು ಕೇಳ್ದ್ರೆ ಎಂಥಾ ಸಂಗೀತಾ
ಬಣ್ಣಾ ಮಾಸಿದ ಸ್ಕ್ರೀನಿನಲ್ಲಿ ನೋಡ್ದೆ ಎಂಥಾ ಚಿತ್ತಾರಾ
ಚೆನ್ನಾಗಿದ್ದೆ ನಾನು ಟೆಕ್ಕಿ ಆಗ್ಲೇ ಬೇಕಿತ್ತಾ

ಟೆಕ್ಕಿಗಳಿಗೆ ಮಾತ್ರಾನೆ ಹೆಣ್ಣು ಕೊಟ್ರು ನಮ್ಮೋರು
ಹೆಣ್ಣು ಪಡ್ಯಕ್ ಹೋಗಿ ಜನ ಹಳ್ಳಕ್ಕೇ ಬಿದ್ರು
ಕೆಲವ್ರಂತೂ ಹೆಣ್ಣಿಲ್ದೇನೇ ಕೂದಲ್ ಕಳ್ಕಂಡ್ರು
ಆಟ ಪಾಠ ಮರ್ತೋಯ್ತು ಕುಟ್ಟೋ ಕೆಲ್ಸ ಗಟ್ಟಾಯ್ತು
ಹೆಂಡ್ತೀ ಜೊತೆಗೂ ಫೇಸ್‌ಬುಕ್ಕಲ್ಲಿ ಚಾಟು ಶುರುವಾಯ್ತು
ಮಕ್ಕಳನ್ ಅನ್‌ಲೈನ್ ಶಾಪಿಂಗ್ ಮಾಡೋ ಕಾಲ ಬಂದೋಯ್ತು
ಎಲ್ಲಾ ಇದ್ರೂ ಕೂಡಾ ನಮ್ದು ಒಂದೇ ಲಾಜಿಕ್ಕು
ಲೈಫಲಿ ಆಸ್ತಿ ಮಾಡಿ ತೀರಿಕೊಳ್ಳೋದಿಕ್ಕೇ ಲಾಯಕ್ಕು
ಅಪ್ಪಿ ತಪ್ಪಿ ಬದುಕೋ ಅರ್ಥ ಹೊಳದ್ರೇ ಮ್ಯಾಜಿಕ್ಕು

ಸೂರ್ಯ ಹುಟ್ಟೋ ಟೈಮಲ್ಲಿ ಕ್ಯಾಲೆಂಡರ್ ನೋಡುತ್ತಾ
ವೀಕೆಂಡಿಗೆ ಕಾಯುವ ಕ್ಯಾಮೆ ಬೇಕಿತ್ತಾ

ಎಲ್ಲಿ ನೋಡಿದರಲ್ಲಿ ಕ್ಯೂಬುಗಳು, ಮಧ್ಯದಲ್ಲಿ ಅರೆನೆರೆತ ಕೂದಲುದುರಿರುವ ತಲೆಗಳು, ಬೇಕೋ ಬೇಡವೋ ಅನ್ನುವ ನಗೆಗಳು, ಕಾಫೀ ಕಪ್‌ಗಳು, ಗಂಟೆಗೊಮ್ಮೆ ಟಾಯ್ಲೆಟ್ ವಿಸಿಟ್‌ಗಳು... ಕಟಪಟ ಸದ್ದುಗಳು, ಬಿಟ್ಟಿ ಮೆಸೇಜ್‌ಗಳು, ಪ್ರಾಣ ಉಳಿಸುವ ಲಂಚ್‌ಗಳು, ಟೈಂ ಪಾಸ್‌ಗಾಗಿ ಮೀಟಿಂಗ್‌ಗಳು, ಕಳೆದು ಹೋಗುತ್ತಿರುವ ಟೈಂಗಳು... ಇಷ್ಟರಲ್ಲೇ ನಮ್ಮ ಲೈಫ್‌ಗಳು...!

Tuesday, June 18, 2013

ಗುಟ್ಕಾ ನಿಷೇಧ ಹಾಗೂ ಸೈಡ್ ಇಫೆಕ್ಟ್ಸ್

ಯಾರು ಏನೇ ಹೇಳಿಕೊಳ್ಳಲಿ, ಸರ್ಕಾರವನ್ನು ತೆಗಳುವವರು ತೆಗಳುತ್ತಲೇ ಇರಲಿ. ಆದರೆ ಇವರು ಯಾರೂ ನಮ್ಮ ಘನ
ಸರ್ಕಾರದ ಸದುದ್ದೇಶವನ್ನು ತಿಳಿದುಕೊಳ್ಳುತ್ತಲೇ ಇಲ್ಲ! ನೇರವಾಗಿ ಹೇಳಿಕೊಳ್ಳಲಾಗದ ಕಾರಣಗಳು ’ಗುಟ್ಕಾ’ ನಿಷೇಧದ ಹಿಂದಿರುವುದು ಸ್ವಲ್ಪ ಯೋಚಿಸಿದವರಿಗೆಲ್ಲರಿಗೂ ಅರಿವಾಗುತ್ತದೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪ್ರತಿಫಲವಾಗಿ ಒಳಿತು ಕೆಡಕುಗಳೆರಡೂ ಆಗೇ ಆಗುತ್ತದೆ. ಈ ನಿರ್ಧಾರವೂ ಇದೇ ರೀತಿಯ ಮಿಶ್ರ ಪ್ರತಿಫಲಗಳನ್ನು ಹೊಂದಿದೆ. ಮೊದಲಿಗೆ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ಮರ್ಮ ತಿಳಿದುಕೊಳ್ಳೋಣ.

ಭಾರತದ ಅತೀ ದೊಡ್ಡ ಸಮಸ್ಯೆ ಯಾವುದು? ಜನಸಂಖ್ಯೆ! ಈ ಜನಸಂಖ್ಯೆ ನಿವಾರಣೆಗೆ ಸರ್ಕಾರ ಎಷ್ಟೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.. ಎಷ್ಟೊಂದು ಖರ್ಚು ಮಾಡಿಲ್ಲ! ಸರ್ಕಾರಿ ಆಸ್ಪತ್ರೆಗಳಲ್ಲಿ ನಿರೋಧ್‌ಗಳನ್ನೂ ಪುಗ್ಸಟ್ಟೆಯಾಗಿ ಕೊಟ್ಟರು. ಜನ ಅದನ್ನು ಮಕ್ಕಳು ಆಡುವ ಬಲೂನ್ ಎಂದುಕೊಂಡರೇ ಹೊರತು ಉಪಯೋಗ ತೆಗೆದುಕೊಂಡಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟಿರುವ ಸರ್ಕಾರ ಈಗ ’ಗುಟ್ಕಾ’ ನಿಷೇಧಿಸಿದೆ! ಇದರ ಹಿಂದಿರುವ ಕಾರಣ ಸಿಂಪಲ್ಲು. ಗುಟ್ಕಾ ತಿಂದರೆ ಎಷ್ಟು ಜನ ಸಾಯಬಹುದು? ಕ್ಯಾನ್ಸರ್ ಆಗಿ ಹೆಚ್ಚು ಅಂದರೆ ಒಬ್ಬನೇ ಒಬ್ಬ ಸಾಯಬಹುದು. ಅದನ್ನೇ ನಿಷೇಧಿಸಿಬಿಟ್ಟರೆ? ಗುಟ್ಕಾ ಸೇವಿಸುವವನು ಚಟಕ್ಕಾಗಿ ಏನಾದರೂ ಮಾಡಲೇ ಬೇಕಲ್ಲಾ... ಅವನ ಮುಂದಿರುವ ನೇರವಾದ ಆಯ್ಕೆ ಸಿಗರೇಟ್. ಗುಟ್ಕಾ ಸೇವಿಸುವ ಎಲ್ಲಾ ಜನರು ಗುಟ್ಕಾ ತ್ಯಜಿಸಿ ಸಿಗರೇಟ್ ಸೇದುವುದನ್ನು ರೂಢಿಸಿಕೊಂಡರೆ, ಅವನೊಟ್ಟಿಗೆ ಅವನು ಬಿಟ್ಟ ಹೊಗೆಯಲ್ಲೇ ಬದುಕಬೇಕಾದ ಇನ್ನೂ ಮೂರ್ನಾಲ್ಕು ಜನರನ್ನು ಕರೆದುಕೊಂಡೇ ಪರಲೋಕಕ್ಕೆ ಧಾವಿಸುತ್ತಾನೆ! ಜನಸಂಖ್ಯೆ ಕಡಿಮೆಯಾಗುವ ಮಟ್ಟ ಮೂರ್ನಾಲಕ್ಕು ಪಟ್ಟು ಜಾಸ್ತಿಯಾಗುತ್ತದೆ! ಈ ದೇಶೋಧ್ಧಾರದ ಕೆಲಸವನ್ನು ಅರ್ಥ ಮಾಡಿಕೊಳ್ಳದ ಜನ ಈ ನಿಯಮ ದುರುದ್ದೇಶದ್ದು ಎನ್ನುತ್ತಿದ್ದಾರೆ. ದೇವರೇ ಅವರಿಗೆ ಬುದ್ಧಿ ಕೊಡಬೇಕು.

ಆದರೂ ಈ ನಿರ್ಧಾರದಿಂದ ಜನರಿಗೆ ತೊಂದರೆಗಳೇ ಇಲ್ಲಾ ಎಂದೇನಲ್ಲಾ. ಬಹಳಷ್ಟು ತೊಂದರೆಗಳುಂಟಾಗುತ್ತವೆ. ಈ ಕೆಳಗಿನವು ಪ್ರಮುಖವಾದವುಗಳು.

೧. ನಗರದ ಧೋಬಿಗಳಿಗೆ ಕೆಲಸ ಕಮ್ಮಿಯಾಗಲಿದೆ! ಜನ ಗುಟ್ಕಾ ಸೇವಿಸಿ, ಬಸ್‌ಸ್ಟಾಪ್ ಗಳಲ್ಲಿ, ಬಸ್ ಚಲಿಸುವಾಗ, ಅಥವಾ ಅವರೇ ಚಲಿಸುತ್ತಿರುವಾಗ ಅತ್ತ ಇತ್ತ ನೋಡದೆ ಉಗುಳಿ ಪಕ್ಕದವರ ಬಟ್ಟೆಗೆ ಕೆಂಪು ಬಣ್ಣ ಬಳಿಯುವುದು ಕಡಿಮೆಯಾಗುವುದರಿಂದ ನಗರದ ಧೋಬಿಗಳಿಗೆ ಇದರಿಂದ ಲಾಸ್ ಆಗಲಿದೆ!

೨. ಪೌರ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ! ಕಸಗುಡಿಸುವವರಿಗೆ ಕಡಿಮೆ ಕೆಲಸ ಬೀಳುವುದರಿಂದ ಅವರ ಸಂಖ್ಯೆ ತಗ್ಗಿಸಲು ಮುನಿಸಿಪಾಲಿಟಿಯವರು ನಿರ್ಧರಿಸಬಹುದು.

೩. ಶಬ್ದ ಮಾಲಿನ್ಯ ಹೆಚ್ಚಲಿದೆ! ಗುಟ್ಕಾ ತಿಂದು ಮಾತನಾಡಲಾಗದೆ 10-15 ನಿಮಿಷ ಮೌನವೃತ ಆಚರಿಸುವ ಜನ ಗುಟ್ಕಾ ನಿಷೇಧದಿಂದಾಗಿ ಬಾಯಿಗೆ ಬೀಗ ಹಾಕುವ ಕೆಲಸವನ್ನು ಬಿಡುತ್ತಾರೆ. ಈಗಲೇ ಲಿಮಿಟ್ ಮೀರಿರುವ ಶಬ್ದಮಾಲಿನ್ಯ ಇನ್ನೆಷ್ಟು ತೊಂದರೆ ತಂದೊಡ್ಡಬೇಕೋ...

೪. ಕಲಾರಸಿಕರ ಕೊರತೆ ಎದ್ದುಕಾಣಲಿದೆ! ಯಾವುದೇ ಸಂಗೀತ ಕಚೇರಿಯಾಗಲಿ, ನಾಟಕವಾಗಲಿ, ನೃತ್ಯವಾಗಲಿ ನೆಡೆಯುತ್ತಿರುವಾಗ ಪ್ರೇಕ್ಷಕರಲ್ಲಿ ಆಸಕ್ತಿಯಿಂದ ಕೇಳುತ್ತಿರುವ/ನೋಡುತ್ತಿರುವ ಪ್ರೇಕ್ಷಕರಲ್ಲಿ ಗುಟ್ಕಾ ಸೇವಿಸಿದವರ ಸಂಖ್ಯೆಯೇ ಹೆಚ್ಚು. ಗುಟ್ಕಾ ಸೇವಿಸಿರುವುದರಿಂದ ಅಕ್ಕ ಪಕ್ಕದವರ ಹತ್ತಿರ ಮಾತನಾಡಲಾಗದೆ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ನಿರ್ಧಾರದ ನಂತರ, ಸಿಗರೇಟ್ ಸೇದಲು ಎದ್ದು ಹೋಗಬಹುದು. ಅಥವಾ ಪಕ್ಕದವರ ಜೊತೆ ಹರಟುತ್ತಾ ಕೂರಬಹುದು. ಕಲಾವಿದರಂತೂ ಈ ಗುಟ್ಕಾವನ್ನು ಮಿಸ್ ಮಾಡಿಕೊಳ್ಳುತ್ತಾರೆ.

೫. ದಾರಿ ತಪ್ಪಿಸಿಕೊಂಡವರಿಗೆ ದೇವರೇ ಗತಿ! ಗುಡ್ಡಗಾಡಿನಲ್ಲಿ ಓಡಾದಿದವರಿಗೆ ಈ ಪರಿಸ್ಥಿತಿಯ ಅರಿವು ಸಹಜವಾಗೇ ಆಗುತ್ತದೆ. ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ನಿರ್ಧಾರ ಮಾಡುವುದು ದಾರಿಯ ಪಕ್ಕದಲ್ಲಿ ಬಿದ್ದ ಗುಟ್ಕಾ ಚೀಟಿಗಳು. ಗುಟ್ಕಾ ನಿಷೇಧದಿಂದ ಎಲ್ಲಾ ದಾರಿಗಳೂ ಸುಡುಗಾಡಿಗೇ ಕೊಂಡೊಯ್ಯುತ್ತವೇನೋ ಎಂದು ಭಾಸವಾಗಬಹುದು.

ಇಷ್ಟೊಂದು ಅನಾನುಕೂಲತೆಗಳಿದ್ದರೂ ಭಾರತ ನಿರ್ಮಾಣಕ್ಕೋಸ್ಕರ ಜನ ಹಾಗೂ ಸರ್ಕಾರ ಬದ್ಧವಾಗಿ ನಿಂತು ಗುಟ್ಕಾವನ್ನು ನಿಷೇಧಿಸಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸರ್ಕಾರ ಮೇಲ್ಕಂಡ ಅನಾನುಕೂಲತೆಗಳಿಗೂ ಪರಿಹಾರ ಕಂಡುಹಿಡಿಯುತ್ತದೆ ಎನ್ನುವುದು ಒಬ್ಬ ಜನಸಾಮಾನ್ಯನ ವಿಶ್ವಾಸ!

Tuesday, February 19, 2013

ಸ್ವಾತಂತ್ರ್ಯ ಹೋರಾಟದ ಪ್ರಹಸನ!

ಅಗಸ್ಟ್ 15ರಂದು ಹೈಸ್ಕೂಲಿನಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಅವಕಾಶ ಒದಗಿಬಂದಿತ್ತು. ಸ್ವತಂತ್ರ  ದಿನಾಚರಣೆಯಂದು ಏನಾದರು ಮಾಡಿದರೆ ಅದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೇ ಆಗಿರಬೇಕು ಎಂಬುದು ಎಲ್ಲರ ಅಭಿಮತ. ನೃತ್ಯರೂಪಕ ಮಾಡಲಂತೂ ಸಾಧ್ಯವಿರಲಿಲ್ಲ. ನಮ್ಮಲ್ಲಿ ನೃತ್ಯಮಾಡುವವರಿರಲಿ... ಹಾಡು ಹಾಡಲೂ ಯಾರೂ ಇರಲಿಲ್ಲ. ಹೆಣ್ಣು ಮಕ್ಕಳನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವುದು ಎಲ್ಲರಿಗೂ ಇಷ್ಟವಿದ್ದರೂ, "ಹೆಣ್ ಮಕ್ಳನ್ನಾ ಮಾತ್ರ ಹಾಕ್ಕೊಂಡು ಮಾಡುದ್ ಬೇಡಾ.. ಹಾಂ..." ಎಂದೇ ಎಲ್ಲರೂ ಹೇಳುತ್ತಿದ್ದರು. ಇನ್ನು ಉಳಿದಿರುವುದು ಒಂದೇ. ನಾಟಕ ಮಾಡಬೇಕು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ನಾಟಕ ಬರೆದು ಕೊಡುವವರ ಕೊರತೆ. ಕೊನೆಗೆ ನಮ್ಮದೇ ಪಠ್ಯದಲ್ಲಿದ್ದ ಒಂದು ಪಾಠವನ್ನೇ ಆಯ್ದುಕೊಂಡು ಅದನ್ನೇ ನಾಟಕ ಮಾಡುವುದು ಎಂದು ನಿರ್ಧರಿಸಿಬಿಟ್ಟೆವು.

ಕಾನ್ಸೆಪ್ಟು ಬಹಳ ಸಿಂಪಲ್ಲು. ಕೆಲವು ಹೋರಾಟಗಾರರು ಹಾಡು ಹಾಡುತ್ತಾ, ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುವ ದೃಶ್ಯ. ಪಾಠದಲ್ಲಿ ಬಂದಿರುವ ಹಾಡು, ಮಾತುಗಳನ್ನೇ ಒಬ್ಬೊಬ್ಬರಾಗಿ ಹೇಳುವುದು. ಸ್ವಲ್ಪ ಸಮಯದ ನಂತರ ಪೋಲೀಸರು ಬಂದು ಇದನ್ನೆಲ್ಲ ಮಾಡಬೇಡಿ ಎಂದು ಹೇಳುವುದು. ಹೋರಾಟಗಾರರು ಕದಲದೇ ಹಾಗೇ ನಿಲ್ಲುವುದು. ಪೋಲೀಸರು ಲಾಠಿ ಚಾರ್ಜ್ ಮಾಡುವುದು. ಹೋರಾಟಗರರು ವಂದೇ ಮಾತರಂ ಘೋಷಣೆ ಕೂಗುತ್ತಾ ಅಲ್ಲೇ ಕುಸಿದು ಬೀಳುವುದು. ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಜನರ ಮುಂದೆ ತೋರಿಸುತ್ತಿರುವುದರ ಗಾಂಭೀರ್ಯದ ಅರಿವು ನಮಗೆ ಯಾರಿಗೂ ಇಲ್ಲದಿದ್ದರೂ, ಎಲ್ಲರಿಗೂ ಅಭಿನಯ ಮಾಡಿ ಕ್ಲಾಸಿನ ಎಲ್ಲ ಹೆಣ್ಣುಮಕ್ಕಳ ಮುಂದೆ ಹೀರೋ ಆಗುವ ಆಸೆಯಂತೂ ಉತ್ಕಟವಾಗಿತ್ತು. ಸ್ಕ್ರಿಪ್ಟ್ ಫೈನಲೈಸ್ ಆಗಿಹೋಯಿತು. ಪಾತ್ರಗಳನ್ನೂ ಹಂಚಿ ಆಯಿತು. ಎಲ್ಲರೂ ಅವರವರ ಮಾತುಗಳನ್ನು ಕಂಠಪಾಠ ಮಾಡಿಕೊಳ್ಳಲು ಪ್ರಾರಂಭಿಸಿದರು.

ಎರಡು ಮುಖ್ಯ ಪಾತ್ರಗಳು. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವನೇ ಮೆರವಣಿಗೆಯನ್ನು ಮುನ್ನಡೆಸುತ್ತಿರುವವ. ಇನ್ನೊಬ್ಬ ಪೋಲೀಸ್ ಅಧಿಕಾರಿ. ಇನ್ನು ಒಂದಿಷ್ಟು ಹೋರಾಟಗಾರರು ಮತ್ತೆ ಒಂದಿಷ್ಟು ಪೋಲೀಸ್ ಪೇದೆಗಳು. ಕೇವಲ 8-10 ನಿಮಿಷಗಳ ಪ್ರದರ್ಶನವಾದುದರಿಂದ ಎಲ್ಲರಿಗೂ ಓವರ್ ಕಾನ್ಫಿಡೆನ್ಸ್. ತಕ್ಕಮಟ್ಟಿಗೆ ರೆಹರ್ಸಲ್ ಮಾಡಿಕೊಂಡು, ಎಲ್ಲರೂ ತಮ್ಮ ತಮ್ಮ ಕಾಸ್ಟೂಮ್ಸ್ ಹೊಂದಿಸಿಕೊಂಡು ಅಗಸ್ಟ್ 15ರಂದು ಪ್ರದರ್ಶನಕ್ಕೆ ಸಿದ್ಧರಾದೆವು. ಖಾಕಿ ಚಡ್ಡಿ ಹಾಕಲು ವಿರೋಧ ವ್ಯಕ್ತಪಡಿಸಿದ್ದ ಪೋಲೀಸ್ ಅಧಿಕಾರಿ ಮಾರುತಿ, ಕೊನೆಗೂ ಒಂದು ಖಾಕಿ ಪ್ಯಾಂಟನ್ನು ಹೊಂದಿಸಿಕೊಂಡು ಬಂದಿದ್ದ. ಪೇದೆಗಳಿಗೆ ಚಡ್ಡಿಯೇ ಗತಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಜುಬ್ಬ, ಪಂಚೆ ಮತ್ತು ಗಾಂಧೀ ಟೋಪಿ. ದ್ವ್ಹಜಾರೋಹಣ ಎಲ್ಲಾ ನೆರವೇರಿಸಿದ ಮೇಲೆ ಕಾರ್ಯಕ್ರಮಗಳು ಪ್ರಾರಂಭವಾದವು. ಒಂದೆರಡು ಪ್ರವಚನಕಾರರು ಅದೇ ಗಾಂಧಿ ನೆಹರು ಪುರಾಣಗಳನ್ನು ಪಠಿಸಿದ ಮೇಲೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು.

ಮೊದಲಿಗೆ ದೇಶಭಕ್ತಿಗೀತೆ ಅದು ಇದು ಎಲ್ಲಾ ಕಾರ್ಯಕ್ರಮಗಳು. ಕೊನೆಯಲ್ಲಿ ನಮ್ಮ ನಾಟಕ! ಎಲ್ಲರಿಗೂ ಪುಕು ಪುಕು ಶುರುವಾಗಿತ್ತು. ಎಲ್ಲರೂ ಇದೀರೇನಪ್ಪಾ ಎಂದು ಹುಡುಕಿದರೆ ನಮ್ಮ ಪೋಲೀಸ್ ಪಾತ್ರಧಾರಿ ಮಾರುತಿಯೇ ಮಂಗಮಾಯ. ಕೊನೆಗೆ ಇನ್ನೇನು ನಮ್ಮ ನಾಟಕದ ಘೋಷಣೆಯಾಗಿಯೇ ಬಿಡುತ್ತದೆ ಎನ್ನುವಾಗ ಪ್ರತ್ಯಕ್ಷನಾದ. ಪೋಲೀಸ್ ಲಾಠಿ ತರುವುದು ಮರೆತು ಇಲ್ಲೇ ಎಲ್ಲೋ ಹೋಗಿ ಕೊನೆಗೂ ಒಂದು ಲಾಠಿಯ ವ್ಯವಸ್ಠೆ ಮಾಡಿಕೊಂಡು ಬಂದಿದ್ದ.

ಪ್ರದರ್ಶನ ಪ್ರಾರಂಭವಾಯಿತು. ನಾವು ಸ್ವಾತಂತ್ರ್ಯಹೋರಾಟಗಾರರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಹಾಡು ಹಾಡುತ್ತಾ ಜನರ ಮಧ್ಯದಲ್ಲೆಲ್ಲಾ ಓಡಾಡಿ ನಾಟಕಕ್ಕೆ ಭರ್ಜರಿ ಪ್ರಾರಂಭ ಒದಗಿಸಿಬಿಟ್ಟೆವು. ಇನ್ನು ಪೋಲೀಸರ ಎಂಟ್ರಿ. ಮಾರುತಿ ಮತ್ತು ಇಬ್ಬರು ಪೇದೆಗಳು ಗತ್ತಿನಿಂದ ಬರುತ್ತಿದ್ದಂತೆ ಜನರೆಲ್ಲಾ ಗುಸುಗುಸು ಶುರುಮಾಡಿದರು. ಲಾಠಿ ತಿರಿಗಿಸುತ್ತಾ ಬಂದ ಪೋಲೀಸ್ ಇನ್‌ಸ್ಪೆಕ್ಟರ್‌ನ   ಸ್ಟೈಲ್ ನೋಡಿ ಜನ ದಂಗಾಗಿ ಹೋಗಿದ್ದರು. ತನ್ನ ಬಗ್ಗೆ ಜನ ಗಮನ ಕೊಡುತ್ತಿದ್ದಾರೆ ಎಂದು ಹುರುಪಿನಿಂದಲೋ ಏನೋ ಮಾರುತಿ ತಾನು ಹಿಡಿದಿದ್ದ ಲಾಠಿಯನ್ನು ಇನ್ನೋ ಜೋರಾಗಿ ತಿರುಗಿಸತೊಡಗಿದ. ಇವನು ತಿರುಗಿಸಿದ ರಭಸಕ್ಕೆ ಆ ಲಾಠಿ ಅವನ ಕೈ ಜಾರಿ ಮೇಲಕ್ಕೆ ಹಾರಿ ಎದುರು ಕೂತಿದ್ದ ಜನರ ಮಧ್ಯೆ ಹೋಗಿ ಬಿದ್ದುಬಿಟ್ಟಿತು. ಜನ ಹೋ.. ಎಂದು ಚೀರಲು ಶುರುಮಾಡಿಬಿಟ್ಟರು. ಲಾಠಿ ಕೈ ತಪ್ಪಿತಲ್ಲಾ ಎಂದು ತರಲು ಹೊರಟ ಮಾರುತಿ ಜನರ ಚೀರಾಟ ಕೇಳಿ ಮಧ್ಯದಲ್ಲೇ ನಿಂತು ಬಿಟ್ಟ. ಜನ ಹುಚ್ಚಾಪಟ್ಟೆ ನಗಲು ಶುರುಮಾಡಿಬಿಟ್ಟರು. ಏನು ಮಾಡುವುದು ಎಂದೇ ತೊಚದೆ ಪೋಲಿಸ್ ಇನ್‌ಸ್ಪೆಕ್ಟರ್ ಕೈಯಲ್ಲಿ ಲಾಠಿಯೇ ಇಲ್ಲದೆ ಲಾಠಿ ಚಾರ್ಜ್ ಘೋಷಿಸಿಬಿಟ್ಟ. ಪೇದೆಗಳು ಮತ್ತು ಇನ್‌ಸ್ಪೆಕ್ಟರ್ ಮಾರುತಿ ಕೈಯಿಂದಲೇ ಹೋರಾಟಗಾರರಿಗೆ ಗುದ್ದಲು ಶುರುಮಾಡಿದರು. ಜನರ ನಗು ಚೀರಾಟ ಇನ್ನೋ ಜೋರಾಯಿತು. ಸ್ವಾತಂತ್ಯ್ರ ಹೋರಾಟಗಾರರೋ ಅಲ್ಲೇ ಘೋಷಣೆ ಕೂಗುತ್ತಾ ಕುಸಿಯುವ ಬದಲು, ಈ ಪೋಲೀಸರ ಗುದ್ದು ತಪ್ಪಿಸಿಕೊಳ್ಳಲು ಓಡಲು ಶುರುಮಾಡಿಬಿಟ್ಟರು. ಒಂದಿಬ್ಬರು ಗುದ್ದು ತಿಂದ ಸಿಟ್ಟಿಗೆ ಅಲ್ಲೇ ಪೋಲೀಸರಿಗೆ ವಾಪಸ್ ಗುದ್ದಿ ದಿಕ್ಕಾಪಾಲಾಗಿ ಓಡಿಹೋದರು. ಪೋಲೀಸರು ಅವರ ಹಿಂದೆ ಅಟ್ಟಿಸಿಕೊಂಡು ಹೋದರು. ರಂಗಸ್ಥಳ ಒಮ್ಮೆಯೇ ಖಾಲಿಯಾಗಿಹೋಯಿತು. ನಾಟಕ ಮುಗಿಯಿತು ಎಂದು ಹೇಳಲೂ ಯಾರೂ ಇಲ್ಲದೆ,  ಜನರೇ ಅರ್ಥಮಾಡಿಕೊಂಡು ನಗುವನ್ನು ತಡೆದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಸಿದ್ಧರಾದರು.

ಸ್ವಾತಂತ್ಯ್ರ ಹೋರಾಟ ಒಂದು ಪ್ರಹಸನವಾಗಿ ಕೊನೆಗೊಂಡಿತು. ಈಗ ನಮ್ಮನ್ನು ನಾವೇ ನೋಡಿಕೊಂಡರೆ, ನಿಜಕ್ಕೂ ನಮ್ಮ ಹಿಂದಿನವರು ಹೋರಾಡಿದ್ದು ಪ್ರಹಸನದಂತೆಯೇ ಭಾಸವಾಗುತ್ತದೆ!

Wednesday, November 14, 2012

ಪುರುಸೊತ್ತಿಲ್ಲಾ ಯಾಕೆ?

ಅರ್ಧ ವರ್ಷದಿಂದ ಯಾವುದೇ ಬ್ಲಾಗ್ ಅಪ್‌ಡೇಟ್ಸ್ ಇಲ್ಲ. ಒಂದು ಕಾಲದಲ್ಲಿ ನಾನೂ ಬ್ಲಾಗ್ ಬರೆಯುತ್ತಿದ್ದೆ ಎನ್ನುವುದೇ ಮರೆತುಹೋದಂತಾಗಿದೆ! ಕಾಲೇಜ್ ಫ್ರೆಂಡ್ಸ್‌ಗಳನ್ನು ಭೇಟಿ ಮಾಡಿ ವರ್ಷಗಟ್ಟಲೆ ಆಗಿಹೋಗಿದೆ. ಹಳೆಯ ಕಲೀಗ್‌ಗಳನ್ನು ಫೇಸ್‌ಬುಕ್‌ನಲ್ಲಿ ನೋಡಿಯೇ ಖುಷಿಪಡಬೇಕಿದೆ! ಕಥೆ ಕಾದಂಬರಿಗಳನ್ನು ಓದುವುದು ಮರೆತೇ ಹೋಗಿದೆ. ಅವೆಲ್ಲಾ ಮುಂದಿನ ಮಾತು... ಬೆಳಿಗ್ಗೆ ಎದ್ದು ಪೇಪರ್ ತಿರುಗಿಸಲೂ ಟೈಮ್ ಇಲ್ಲಾ! ಒಟ್ಟಿನಲ್ಲಿ ಯಾವುದಕ್ಕೂ ಪುರುಸೊತ್ತಿಲ್ಲ! ಹೀಗೆಲ್ಲಾ ಏಕೆ ಆಗುತ್ತಿದೆ? ನಿಜವಾಗಿಯೂ ಜೀವನದಲ್ಲಿ ಅಷ್ಟೊಂದು ಬ್ಯುಸಿ ಆಗಿಬಿಟ್ಟಿದ್ದೇನೆಯೇ? ಗೊತ್ತಿಲ್ಲ...

ಬ್ಯುಸಿ ಆಗಿಬಿಟ್ಟಿದ್ದೇನೆ ಎನ್ನುವುದು ಕೆಲವು ಸಲ ನಿಜ ಎಂದು ಕಂಡರೂ ಬಹಳಷ್ಟು ಸಲ ನಮ್ಮ ಆಲಸ್ಯವನ್ನು ಮರೆಮಾಚುವ ನೆಪಮಾತ್ರ ಎನಿಸುತ್ತದೆ. ಫೋನ್ ಮಾಡಿ ಹೇಗಿದ್ದೀಯಾ ಗುರು... ಅರಾಮಾ? ಎಂದು ಕೇಳಲಿಕ್ಕೂ ಪುರುಸೊತ್ತಿಲ್ಲದಷ್ಟು ಬ್ಯುಸಿ ಬಹುಷಃ ನಮ್ಮ ಮನ್‌ಮೋಹನ್ ಸಿಂಗರೂ ಇರಲಿಕ್ಕಿಲ್ಲ. ಅವರಿಗೆ ಬಹುಷಃ ಕೆಲಸವೇ ಇಲ್ಲವೇನೊ.. ಅದು ಬೇರೇ ವಿಷಯ. ಆದರೂ ನಾವು ಬ್ಯುಸಿ. ಒಂದು ವಸ್ತುವನ್ನು ಕಳೆದುಕೊಳ್ಳಲು ನಾವು ಏನೂ ಮಾಡಬೇಕಾಗಿಲ್ಲ. ಅದೇ ಅದನ್ನ ಪಡೆದುಕೊಳ್ಳಲು ಹೆಣಗಬೇಕಾಗುತ್ತದೆ. ಅದನ್ನು ಉಳಿಸಿಕೊಳ್ಳಲು ಅದಕ್ಕೂ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ಸಂಬಂಧಗಳೂ ಹಾಗೆ. ಹೈಸ್ಕೂಲು, ಕಾಲೇಜುಗಳಲ್ಲಿ ಚಡ್ಡಿ ದೋಸ್ತ್ ಗಳಾಗಿದ್ದವರು, ಇವತ್ತು ಇಲ್ಲೇ ಬೆಂಗಳೂರಿನಲ್ಲೇ ಇದ್ದಾರೆ ಎಂದರೂ, ಅವರ ಫೋನ್ ನಂಬರ್ ಸಿಕ್ಕಿದ್ದರೂ ಯಾಕೋ ಮಾತನಾಡಲಾಗದಷ್ಟು ಬ್ಯುಸಿ ನಾವು!

ಮನುಷ್ಯ ಬೆಳೆದು ದೊಡ್ಡವನಾದಂತೆಲ್ಲಾ ಸಾಮಾಜಿಕವಾಗಿ ಅವನ ವಲಯ ಹೆಚ್ಚಾಗುತ್ತಾ ಹೋದರೂ ಆಂತರಿಕವಾಗಿ ಅವನು ಸಂಕುಚಿತಗೊಳ್ಳುತ್ತಾ ಹೋಗುತ್ತಾನೆ! ಚಿಕ್ಕವರಾಗಿದ್ದಾಗ ಮನೆಯವರಿಗಿಂತ ಹೆಚ್ಚಾಗಿದ್ದ ಗೆಳೆಯರು ದೊಡ್ಡವರಾಗುತ್ತಾ ಗೆಳೆಯರಷ್ಟೇ ಆಗಿ ಉಳಿಯುತ್ತಾರೆ. ಮತ್ತೊಂದು ದಿನ ಹಾಯ್ ಬಾಯ್ ಫ್ರೆಂಡ್ಸ್ ಆಗುತ್ತಾರೆ. ಒಂದು ದಿನ ’ನನ್ನ ಹೊಸಾ ನಂಬರ್’ ಎಂದು ಮೆಸೇಜ್ ಬಂದರೂ ಅದನ್ನು ಫೋನ್ ಬುಕ್‌ನಲ್ಲಿ ಅಪ್‌ಡೇಟ್ ಮಾಡಲು ನಮಗೆ ಪುರುಸೊತ್ತಿಲ್ಲದಷ್ಟು ದೂರಾಗುತ್ತಾರೆ.  ದೂರಾಗುತ್ತಲೇ ಹೋಗುತ್ತಾರೆ! ತಾನು ತನ್ನ ಮನೆ, ತನ್ನ ಹೆಂಡತಿ ಮಕ್ಕಳು, ಸಂಬಂಧಿಕರು ಹಾಗು ಕೆಲವೇ ಕೆಲವು ಸ್ನೇಹಿತರೊಂದಿಗೆ ತನ್ನ ವ್ಯವಹಾರಗಳನ್ನು ಮೊಟಕುಗೊಳಿಸಿಬಿಡುತ್ತಾನೆ! ಇದರಲ್ಲಿ ತಪ್ಪು ಹುಡುಕಬೇಕೋ, ಅಥವಾ ಮನುಷ್ಯನ ಸ್ವಭಾವವೇ ಹೀಗೋ, ಅಥವಾ ಇದೇ ಸರಿಯೋ ಅರ್ಥವಾಗುತ್ತಿಲ್ಲ.

ಇತ್ತೀಚೆಗೆ ಹೊಸದೊಂದನ್ನ ನನ್ನ ದಿನಚರ್ಯೆಗೆ   ಕೂಡಿಸಿದ್ದೇನೆ. ಮಾರ್ನಿಂಗ್ ವಾಕ್!!! ಬೆಳಿಗ್ಗೆ ಎದ್ದು ವಾಕಿಂಗ್ ಮಾಡಬೇಕು ಎಂದುಕೊಂಡಿದ್ದು ಹೊಸತೇನಲ್ಲ. ಪ್ರಾರಂಭಿಸಿದ್ದೂ ಹೊಸತಲ್ಲ. ಆದರೆ ಎರಡು ತಿಂಗಳಾದರೂ ಅದನ್ನ ಬಿಡದಿರುವುದು ಹೊಸತು. ಬಹಳ ಹೇಳಿಕೊಂಡರೆ ನಾಳೆಯೇ ಬಿಟ್ಟುಬಿಟ್ಟರೆ ಕಷ್ಟ! ಈಗ ಜೊತೆಗೆ ಗೆಳೆಯನಿರುವುದರಿಂದ ಬೆಳಿಗ್ಗೆ ಒಂದಿಷ್ಟು ಬ್ಯಾಡ್ಮಿಂಟನ್ ಆಡಿ ಆಮೇಲೆ ಸ್ವಲ್ಪ ಸಮಯ ವಾಕ್ ಮಾಡಲು ಒಂದು ರೀತಿಯ ಹುಮ್ಮಸ್ಸಿದೆ. ಹಾಗೆ ಮಾಡುತ್ತಿರುವಾಗ ಅಕ್ಕಪಕ್ಕದಲ್ಲಿ ಬರೀ ಮುದುಕರು, ಇಲ್ಲಾ  ಪಾರ್ಕಿನ ನೆಲಕ್ಕೆ ಹಾಕಿದ ಸಿಮೆಂಟುಕಲ್ಲುಗಳನ್ನು ಭದ್ರವಾಗಿ ನೆಲಕ್ಕೇ ಕೂರಿಸುವಂತಹ ಭರ್ಜರಿ ಕಾಯದವರು. ವಯಸ್ಸಾದವರು ಒಬ್ಬೊಬ್ಬರೇ ಬಂದು ವಾಕ್ ಮಾಡುವವರು ಕಮ್ಮಿ. ಒಬ್ಬರೇ ಬಂದರೂ ಇಲ್ಲಿ ಪರಿಚಯದವರ ಜೊತೆ ಎರಡು ಸುತ್ತು ಸುತ್ತಿ, ಗಂಟೆಗಟ್ಟಲೆ ಹರಟುತ್ತಾ ಕೂರುತ್ತಾರೆ! ಈ ವಯಸ್ಸಿನಲ್ಲಿ ಇವರುಗಳಿಗೆ ಹೇಗೆ ಜೊತೆಗಾರರು ಸಿಗುತ್ತಾರೆ ಎಂದು ನನಗೆ ಆಶ್ಚರ್ಯ!

ಯಾವಾಗಲೂ ಸಂಪರ್ಕದಲ್ಲಿರಲು ಬಹುಷಃ ಇಬ್ಬರಲ್ಲಿ ಒಂದೇ ವಿಷಯದ ಬಗ್ಗೆ ಆಸಕ್ತಿ ಇರಲೇಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ ಅಥವಾ ಸಂಶೋಧನೆ! ನನಗೆ ಗೊತ್ತಿಲ್ಲದಿದ್ದುದು ಹೊಳೆದಾಗ ಬೇರೆಯವರಿಗೆ ಅದು ಹೊಸತೋ ಅಲ್ಲವೋ ನನಗೆ ಸಂಬಂಧವಿಲ್ಲ. ನನ್ನ ಮಟ್ಟಿಗಂತೂ ಅದು ಹೊಸ ಸಂಶೋಧನೆಯೇ. ಇಬ್ಬರ ನಡುವೆ ಯಾವುದೇ ಸಂಗತಿಗಳು ಕಾಮನ್ ಇಲ್ಲದಿದ್ದರೆ ಅವರಿಬ್ಬರು ಹೇಗೆ ಸಂಪರ್ಕದಲ್ಲಿರಲು ಸಾಧ್ಯ? ಹಾಗೆ ಇರುವುದು ಗಂಡ ಹೆಂಡತಿ ಅಷ್ಟೇ. ಈಗೀಗ ಅದೂ ಕಡಿಮೆಯಾಗುತ್ತಿದೆ. ಈ ಪಾರ್ಕಿನಲ್ಲಿ ಕೂತು ಹರಟುವ ಮುದುಕ ಮುದುಕಿಯರೆಲ್ಲರಿಗೂ ಒಂದೇ ಕಾಮನ್ ಇಂಟರೆಸ್ಟ್! ಆ ಮನೆ ಈ ಮನೆ ವಿಚಾರ. ಗಂಡಸರದ್ದು ಅಲ್ಲಿ ಇಲ್ಲಿ ಕೆಲಸಕಾರ್ಯಗಳ ಬಗ್ಗೆ, ದೇಶದ ದುಸ್ಥಿತಿಯ ಬಗ್ಗೆ, ಮಕ್ಕಳ ಜೀವನದ ಬಗ್ಗೆ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾತುಕತೆಗಳಾದರೆ, ಹೆಂಗಸರದ್ದು ಅವರ ಮನೆಯಲ್ಲಿ ನೆಡೆದ ಫಂಕ್ಷನ್ನು, ಅಲ್ಲಿ ಅವರು ಉಟ್ಟಿದ್ದ ಸೀರೆ, ಒಡವೆ... ಇವರ ಮನೆಯಲ್ಲಿ ಸೊಸೆಯ ಕಾಟ... ಅಡಿಗೆ ವಿಷಯಗಳು, ಅಂತೆ ಕಂತೆಗಳು ಇತ್ಯಾದಿ ಇತ್ಯಾದಿ.

ನಿಂತ ನೀರು ಕೆಡುವುದು ಬೇಗ. ಬತ್ತಿ ಹೋಗುವುದೂ ಬೇಗ. ಜೀವನ ಹರಿಯುವ ನೀರಾದರೆ ಸ್ವಲ್ಪ ವಾಸಿ. ಹೀಗೇ ಸಾಗಬೇಕು ಅಂದುಕೊಂಡರೂ ಸಾಗುವುದು ಮಾತ್ರ ಇಳಿಜಾರಿನಲ್ಲೇ. ಸಾಗುತ್ತಲಿದ್ದರಾಯಿತು... ಬತ್ತಿಹೋಗುವವರೆಗೆ ಅಥವಾ ಸಾಗರ ಸೇರುವವರೆಗೆ!

Monday, December 26, 2011

ಯಾವನಿಗ್ ಗೊತ್ತು...


ನಮ್ಮ ಮಾಜಿ ಮುಖ್ಯಮಂತ್ರಿಗಳನ್ನ ಟಿವಿಲಿ ನೋಡದಾಗಲೆಲ್ಲ ನನಗೆ ಅಯ್ಯೋ ಅನ್ಸತ್ತೆ. ಯಾಕೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ಮನುಷ್ಯ, ಹೋರಾಟಗಾರನಾಗಿ, ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ, ಮಾಡಬಾರದ್ದನ್ನೆಲ್ಲ ಮಾಡಿ, ಲೋಕಾಯುಕ್ತರ ಬಲೆಗೆ ಬಿದ್ದು, ಹೈ ಕಮಾಂಡ್‌ನಿಂದ ಬೈಸಿಕೊಂಡು, ಅಧಿಕಾರ ಬಿಟ್ಟು, ಜೈಲಿಗೂ ಹೋಗಿ, ಅಸ್ಪತ್ರೆಗೂ ತಿರುಗಿ, ಜಾಮೀನು ತೆಗೆದುಕೊಂಡು ಮತ್ತೆ ಅಧಿಕಾರ ಬೇಕು ಎಂದು ಹಂಬಲಿಸುತ್ತಿರುವುದನ್ನು ನೋಡಿದರೆ, ಒಬ್ಬ ಮನುಷ್ಯನ ಕಾಲಚಕ್ರ ಓಳ್ಳೆ ಸೈನ್ ವೇವ್ ಥರಾ ಆಗೋಯ್ತಲ್ಲಾ ಅಂತ ಪಾಪ ಅನ್ಸತ್ತೆ! ಮುಂದೇನಾಗ್ಬಹುದು ಅಂತೀರಿ? ಯಾವನಿಗ್ ಗೊತ್ತು ಅಲ್ವಾ? ಅವ್ರಿಗೂ ಗೊತ್ತಿಲ್ಲ. ಬಹುಷಃ ಅವ್ರು ಮನೆಲ್ ಕೂತು, ಟಿವಿ ನೋಡ್ತಾ, ಹೀಗ್ ಹಾಡ್ತಿರ್‌ಬಹುದು...

ಏನು ಮಾಡೋದು ಜುಜಬಿ ಕೇಸೊಂದು
ತಗ್ಲಾಕ್ಕೊಂಡ್ ಬಿಡ್ತು
ತಗ್ಲಾಕ್ಕೊಂಡ್ ಬಿಡ್ತು

ಮಂತ್ರಿ ಆಗ್ತೀನಾ ಚೊಂಬೇ ಗತಿನಾ
ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಖುರ್ಚಿಯ ಮೇಲೇ ಕುಂತಾಗ ಹಿಂದೆ ಮುಳ್ಳು ಒಂದು
ಚುಚ್‌ದಾಂಗ್ ಆಯ್ತು
ಮುಳ್ಳು ನನ್ನನ್ನೇ ಯಾಕೆ ಚುಚ್‌ಬಿಡ್ತೋ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮತ್ತೆ ಕೂರ್ತೀನಾ ನಿಂತೇ ಇರ್ತೀನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಅದು ಯಾವ್ದೋ ಒಂದು ಲ್ಯಾಂಡು ಪೇಪರ್‌ನಾ
ಕಣ್ ಮುಚ್ಕೊಂಡ್ ಮಾಡಿ ಬಿಟ್ಟೆ ಸೈನನ್ನಾ
ಎಣಿಸುತ್ತಾ ಕೂತೆ ಕೋಟಿ ಕೋಟಿ ನಾ
ಲೋಕಾಯುಕ್ತಾ ಮಾಡ್ತು ರೇಡನ್ನಾ
ಮತ್ತೇ ಮತ್ತೇ ಹೇಳ್ದೆ ನಾನ್ ನಿರ್ದೋಷಿ ಕಣ್ರೀ
ಆದ್ರೇ ಮೇಲಿನ್ ದಡ್ರು ನನ್ ನಂಬ್ಲಿಲ್ಲಾ ಕಣ್ರೀ
ನನ್ನನ್ನಾ ನೋಡಿ ಉರ್‌ಕೊಳ್ಳೋ ಜನರು
ಮಾಟ ಮಂತ್ರಾ ಮಾಡಿಸ್‌ಬಿಟ್ರು

ಇಂಥಾ ಟೈಮಲ್ಲಿ ಜಿದ್ದು ಬೇಕಿತ್ತಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂಜುನಾಥಾನೇ ಕೋಪಿಸ್ಕೊಂಡ್ ಬಿಟ್ಟಿದ್ನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

ಪರಪ್ಪನ್ ಅಗ್ರಹಾರ ಸರಿ ಇಲ್ಲಾ
ಎದೆ ನೋವು ಯಾಕೋ ಜಾಸ್ತಿ ಆಯ್ತಲ್ಲಾ
ಆಸ್ಪತ್ರೆಗೂ ಹೋಗಿ ಕುಂತ್ನಲ್ಲಾ
ನಾನೇನಂದ್ರು ಜಡ್ಜು ನಂಬ್ತಿಲ್ಲಾ
ಶೋಭಕ್ಕಂಗೆ ಹೇಳಿ ಪೂಜೇ ಮಾಡ್‌ಸ್ದೆ ಕಣ್ರೀ
ತುಂಬಾ ಒಳ್ಳೆ ರೆಸಲ್ಟ್ ಬಂದೇ ಬಿಡ್ತು ನೋಡ್ರಿ
ಜಡ್ಜು ನನ್ನನ್ನಾ ನೋಡಿದ ಕೂಡ್ಲೇ
ಜಾಮೀನು ಕೊಟ್ಟು ಕಳ್ಸೇ ಬಿಟ್ರು

ಮುಂದೆ ಬೆಂಗ್ಳೂರಾ ಇಲ್ಲಾ ದಿಲ್ಲಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂತ್ರಿ ಆಗ್ತೀನಾ ಚೊಂಬೇ ಗತಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು

Thursday, May 19, 2011

ಕುಣಿದು ಕುಣಿದು ಬನ್ನಿ


ನಾನು ಮದುವೆ ಆಗಬೇಕಾದರೆ ಇವಳ ಮನೆಗೆ ಹೋಗಿದ್ದು. ಆಗ ಸಾಲ್ಕಣಿಗೆ ಹೋಗುವ ದಾರಿಯಿಂದ ಬಲಕ್ಕೆ ತಿರುಗಿ, ಅರ್ಧ ಕಿಲೋಮೀಟರ್ ಸ್ವಲ್ಪ ಡಾಂಬರ್ ಕಂಡಿರುವ ರಸ್ತೆ ಮತ್ತರ್ಧ ಮಣ್ಣುರಸ್ತೆಯಲ್ಲಿ ಹಕ್ರೆಮನೆಗೆ ಹೋಗಬೇಕಾಗಿತ್ತು. ಈ ಮಣ್ಣುರಸ್ತೆಯನ್ನು ಡಂಬರೀಕರಣ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಮ್ಮ ಮದುವೆ ಆಗಿ, ಮೂರು ವರ್ಷಗಳೇ ಕಳೆದು ನಮಗೆ ಪ್ರಮೋಷನ್ ಬೇರೇ ಸಿಕ್ಕು, ಇವಳ ಬಾಳಂತನಕ್ಕೆ ಊರಿಗೆ ಕಳಿಸಿಯೂ ಆಯಿತು. ಮಗರಾಯನ ಮುಖ ನೋಡಲು ಆಗಾಗ ಅಲ್ಲಿಗೆ ಹೋಗಬೇಕಾದುದರಿಂದ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡುತ್ತಿದೆ! ಸುಮ್ಮನೇ ಮಣ್ಣುರಸ್ತೆಯನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರೇ ಚೆನ್ನಾಗಿತ್ತೋ ಏನೋ. ಡಾಂಬರ್ ಹಾಕ್ತೀವಿ ಎಂದು ಹೇಳಿ ಊರಿನ ಜನರ ಕಿವಿಯಮೇಲೆ ದಾಸವಾಳವನ್ನು ಕೂರಿಸುವ ಕೆಲಸ ಮಾಡಿಬಿಟ್ಟಿದ್ದಾರೆ! ಈ ಡಾಂಬರ್ ಹಾಕುವ ಸಂಭ್ರಮ ಬಹುಷಃ ನಮ್ಮ ಜೀವಮಾನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ.

ಕಲ್ಲು ತಂದು ಹಾಕಿ ಒಂದು ವಾರ ಮತ್ತೆ ತಲೆ ಹಾಕದೇ ಇರುವುದು. ಜನ ಕಷ್ಟಪಟ್ಟು ಸರ್ಕಸ್ ಮಾಡುತ್ತಾ ಓಡಾಡುವುದು. ಕಲ್ಲುಗಳಲ್ಲಿ ಅರ್ಧ ಗಟಾರಕ್ಕೆ ಸೇರಿ ಗಟಾರ ಯಾವುದು, ರಸ್ತೆ ಯಾವುದು ಎಂದು ಪತ್ತೆಯೇ ಆಗದಿರುವುದು. ಮತ್ತೆ ಇವರು ಬಂದು ಮತ್ತೆ ಕಲ್ಲು ಹಾಕಿ ಹೋಗುವುದು. ಇದೇ ಆಗಿಹೊಗಿದೆ! ಕಳೆದಸಲ ಅದರ ಮೇಲೆ ಒಂದಿಷ್ಟು ಮಣ್ಣನ್ನೂ ಸುರಿದು ಹೋಗಿಬಿಟ್ಟರು. ಊರಿಗೆ ಬಂದವರೆಲ್ಲಾ ಕೆಂಪು ಕೆಂಪು! ದಾರಿಯ ಪಕ್ಕದಲ್ಲಿರುವುದೆಲ್ಲಾ ಕೆಂಪು ಎಲೆಗಳ ಗಿಡಗಳು! ನಾನು ಮನೆಯಿಂದ ಕಾರು ತೆಗೆದುಕೊಂಡು ಅಲ್ಲಿಗೆ ಹೋದರೆ, ಮನೆಗೆ ಬರುವಾಗ ನನ್ನ ತಂದೆ ಒಂದು ಬಕೆಟ್ ನೀರು ಹಿಡಿದುಕೊಂಡು ಬಾಗಿಲಲ್ಲೇ ಕಾಯುತ್ತಿರುತ್ತಾರೆ!

ಒಂದು ರಸ್ತೆ ಡಾಂಬರೀಕರಣಕ್ಕೆ ನಮ್ಮ ಸರಕಾರಕ್ಕೆ ಎಷ್ಟು ಸಮಯ ಬೇಕು? ಒಂದು ವರ್ಷ? ಎರಡು ವರ್ಷ? ಮೂರು ವರ್ಷ? ಅಲ್ಲಾ ಸ್ವಾಮಿ ನೀವು ಐದು ವರ್ಷ ಬರೀ ಜಲ್ಲಿ ಕಲ್ಲು ಹಾಕಿಸಿ ಹೋದರೆ, ಮುಂದಿನ ಸರಕಾರ ಮತ್ತೆ ಇದನ್ನೇ ಮಾಡುವುದಿಲ್ಲವೆ? ಒಟ್ಟಿನಲ್ಲಿ ತಮ್ಮ ಖುರ್ಚಿ ಭದ್ರ ಮಾಡಿಕೊಳ್ಳುವುದೇ ಸರಕಾರದ ಸಾಧನೆಯಾಗುತ್ತಿರುವ ಈ ಕಾಲದಲ್ಲಿ ಎಲ್ಲಿ ಡಾಂಬರ್ ಹಾಕಬೇಕು ಎನ್ನುವುದೆಲ್ಲಾ ಯಾರಿಗೆ ಬೇಕಾಗಿದೆ? ಇಂಥಹದೇ ಸರಕಾರಗಳು ಮತ್ತೆ ಮತ್ತೆ ಬರುತ್ತಿದ್ದರೆ ಬಹುಷಃ ನನ್ನ ಮುಪ್ಪಿನಕಾಲದಲ್ಲಿ ನಾನು ನಕ್ಸಲೈಟ್ ಆದರೆ ಆಶ್ಚರ್ಯವಿಲ್ಲ.

ಈ ಹೊಂಡ ಹಾರುವಿಕೆಯಿಂದ ಬೇಸತ್ತು, ಈ ಬಾರಿ ಹೋಗುವಾಗ ಹಾಡುತ್ತಾ ಹೋಗಬೇಕು ಎಂದು ಒಂದು ರೀಮಿಕ್ಸ್ ರಚಿಸಿದ್ದೇನೆ. ಮುಂಗಾರು ಮಳೆಯ "ಕುಣಿದು ಕುಣಿದು ಬಾರೆ" ಇಂದ ಸ್ಫೂರ್ತಿಗೊಂಡು!


ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಕುಣಿದು ಕುಣಿದು ಬನ್ನಿ
ಜಿಗಿದು ಜಿಗಿದು ಬನ್ನಿ
ಬರುವಾ ನಿಮ್ಮ ಜೊತೆಗೆ
ಅಮೃತಾಂಜನ್ ತನ್ನಿ
ರೋಡಲಿ ಹೊಂಡಾ ಕಂಡವರೇ
ಗಟಾರದಲ್ಲಿ ಇಳ್ಕೊಂಡ್ ಬನ್ನಿ
ರೋಡೇ ಮಾಯ
ನಮ್ಮೂರ್ ರೋಡೇ ಮಾಯ
ರೋಡಲಿ ಬೈಕು ಹೊಡೆಯಲು ಹೋಗಿ
ಮೈ ಕೈ ಗಾಯ

ಜಲ್ಲಿ ಕಲ್ಲು ಹಾಕಿ
ಮೇಲೆ ಮಣ್ಣು ಹಾಕಿ
ಡಾಂಬರ್‌ಗಾಗಿ ಕಾಯುತ ಕುಳಿತು
ಮಳೆಯಲಿ ಎಲ್ಲಾ ಕೊಚ್ಕೊಂಡ್ ಹೋಯ್ತು
ರೋಡೇ ಮಾಯ!

ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ

ಈ ಸಲ ಹಾಡಿಕೊಂಡು ಹೋಗುವಾಗ ದಾರಿ ಚಿಕ್ಕದಾಗುತ್ತದೋ ನೋಡಬೇಕು!

Friday, March 4, 2011

ಹೊಸಚೇತನ


ಭಾವನೆಗಳಿಗೆ ರೂಪ ಹೇಗೆ ನೀಡಲಿ
ಪದಗಳು ಅಡಗಿವೆ ಮರೆಯಲಿ
ಸಂತಸವ ಜನರೊಳು ಹೇಗೆ ಹಂಚಲಿ
ಮಿಂಚು ಹೊಮ್ಮಿದೆ ಮನದಲಿ

ಅರಿಯದ ಅನೇಕ ಭಾವ ಹೊಮ್ಮಿದೆ
ನಿನ್ನ ನಗೆಯ ಮಾಟದಿ
ಕಾಣದ ಲೋಕವ ಕಂಡು ಸುಖಿಸಿದೆ
ನಿನ್ನ ಕಂಗಳ ನೋಟದಿ

ಮುದ್ದು ಕೃಷ್ಣನೆ ಹಿಗ್ಗು ತಂದಿಹೆ
ನಮ್ಮ ಬಾಳನು ಬೆಳಗುತಾ
ಮೌನ ಗೀತೆಯ ಮನದಿ ತುಂಬಿದೆ
ನವ ಚೈತನ್ಯವ ಬೀರುತಾ

23-02-2011 ಬುಧವಾರ, ಮಾಘ ಬಹುಳ ಪಂಚಮಿಯಂದು ನನಗೆ ಅಪ್ಪನ ಸ್ಥಾನಕ್ಕೆ ಬಡ್ತಿ ಸಿಕ್ಕಿದೆ! ಕುಮಾರ ಕಂಠೀರವ ಧರೆಗೆ ಕಾಲಿಟ್ಟಿದ್ದಾನೆ.

Tuesday, February 8, 2011

ನಾವು ಕನ್ನdigaru - ೫

ನನಗೇ ಇಂಥವರು ಕಾಣುತ್ತಾರೋ ಅಥವಾ ನಾನೇ ಇಂಥವರನ್ನು ಹುಡುಕುತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಘಟನೆಗಳು ಬೆಂಗಳೂರಿನಲ್ಲಂತೂ ಮಾಮೂಲು. ಹೊರಗಡೆ ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿಹೋಗಿಬಿಟ್ಟಿದೆ! ಅಂತಹ ಘಟನೆಗಳಲ್ಲಿ ವಿಶೇಷತೆ ಏನೂ ಉಳಿದಿಲ್ಲ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ! (ಎಂದು ನಾನೂ ಭಾವಿಸಿದ್ದೆ). ಅಂಗಡಿ-ಮುಂಗಟ್ಟುಗಳಲ್ಲೆಲ್ಲ ಕನ್ನಡ ಪುಸ್ತಕಗಳು, ಶುಭಾಶಯ ಪತ್ರಗಳು, ಕನ್ನಡ ಬರಹಗಳಿರುವ ಟೀ ಶರ್ಟ್‌ಗಳು ತುಂಬಿ ತುಳುಕುತ್ತಿತ್ತು. ಎಲ್ಲ ಕಡೆ ಕನ್ನಡದಲ್ಲೇ ಮಾತಾಡಿ ಎನ್ನುವ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಬೆಂಗಳೂರಿನಲ್ಲಿ ಇಷ್ಟೊಂದು ಜನ ಕನ್ನಡಾಭಿಮಾನಿಗಳು ಇದಾರಲ್ಲಾ ಎಂದು ಸಂತೋಷಪಡುತ್ತಿರುವಾಗಲೇ ನನ್ನ ಎದುರಿಗಿದ್ದ ಒಂದು ಹೆಣ್ಣು ಪಕ್ಕದಲ್ಲಿದ್ದ ತನ್ನ ಗೆಳತಿಗೆ ಹೇಳಿತು
"Hey.. I'll be just lookin at the T'shirts... ಆಯ್ತಾ..."

ಈ ಕೊನೆಯ "ಆಯ್ತಾ" ಬರದಿದ್ದರೆ, ನಾನು ಯಾರೋ ಉತ್ತರಭಾರತದವರು ಕನ್ನಡದಲ್ಲಿ ಆಸಕ್ತಿ ಹೊಂದಿ ಬಂದಿದ್ದಾರೆ ಎಂದೇ ಅಂದುಕೊಂಡುಬಿಡುತ್ತಿದ್ದೆ! ಈ ಭಾಷಾಪ್ರೇಮಿಯೂ ಕನ್ನಡದವಳೇ ಎಂದು ಗೊತ್ತಾಗಿದುದಕ್ಕೆ ಖೇದವಾಯಿತು.

ಕನ್ನಡ ರಕ್ಷಿಸಲು, ಪರಭಾಷಾ ಚಿತ್ರಗಳನ್ನು ವಿರೋಧಿಸಬೇಕಾಗಿಲ್ಲ. ತಮಿಳರಿಗೆ, ತೆಲುಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕನ್ನಡದಲ್ಲಿ ತಿದ್ದಬೇಕಾಗಿಲ್ಲ, ಇಂಗ್ಲೀಷ್ ಕಂಡರೆ ಅಸಹ್ಯಪಡಬೇಕಾಗಿಲ್ಲ. ಎಲ್ಲ ಕನ್ನಡಿಗರು ಕೊನೆಯಪಕ್ಷ ಕನ್ನಡಿಗರೊಂದಿಗಿದ್ದಾಗ ಕನ್ನಡದಲ್ಲೇ ಮಾತಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರೆ ಸಾಕು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Wednesday, January 12, 2011

ಗಲಿಬಿಲಿ ಇನ್ ಅಸ್ಸೆಂಬ್ಲಿ


ಪ್ರತೀ ಬಾರಿ ವಿಧಾನಸಭೆ ಕಲಾಪ ಏರ್ಪಡಿಸಿದಾಗಲೂ ನೆಡೆಯುವುದು ಈ ಕೆಳಗಿನ ಘಟನೆಗಳು ಮಾತ್ರ!
೧. ಪ್ರತಿಪಕ್ಷಗಳು ಆಡಳಿತ ಪಕ್ಷದ ಯಾವುದೋ ಒಂದು ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುವುದು.
೨. ಆಡಳಿತ ಪಕ್ಷ ಅದನ್ನು ಮಾಡದಿರುವುದು
೩. ಪ್ರತಿಪಕ್ಷಗಳ ಗಲಾಟೆ, ಕೂಗಾಟ, ರಂಪಾಟ, ಬೈಗುಳಗಳು (ಈಗೀಗ ಸೆಡ್ಡು ಹೊಡೆಯುವುದು, ಬಟ್ಟೆ ಹರಿದುಕೊಳ್ಳುವುದು)
೪. ಯಾವುದೇ ವಿಷಯ ಚರ್ಚೆ ಆಗದೆ ಸದನದ ಮುಂದೂಡಿಕೆಯಾಗುವುದು.

ಯಾರಿಗೇ ಆಗಲಿ ಒಂದೇ ಕೆಲಸ ಮಾಡಿ ಮಾಡಿ ಬೇಜಾರಾಗುವುದು ಸಹಜ. ಇದನ್ನೇ ಪ್ರತಿಸಲವೂ ಮಾಡಿ ನಮ್ಮ ರಾಜಕಾರಣಿಗಳಿಗೂ ಒಮ್ಮೆ ಬಹಳ ಬೇಜಾರಾಗಿಹೋಯಿತು. ಕೆಲವರಿಗಂತೂ ವಿಧಾನಸೌಧ ಕಂಡರೆ ವಾಕರಿಕೆ ಬರುವಷ್ಟು ಬೇಸರವಾಗಿಬಿಟ್ಟಿತ್ತು. ಕೆಲವರಂತೂ ಬೆಂಗಳೂರಿನಲ್ಲಿ ವಿಧಾನಸೌಧದ ಅಡ್ರೆಸ್ ಕೇಳಿಕೊಂಡು ಬರುವ ಸ್ಥಿತಿಗೆ ತಲುಪಿಬಿಟ್ಟಿದ್ದರು! ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರುವಾಗ ಮತ್ತೆ ಕಲಾಪಗಳಲ್ಲಿ ಆಸಕ್ತಿ ಮೂಡಿಸಲು ಏನಾದರು ಮಾಡಬೇಕೆಂದುಕೊಂಡು ಒಂದು ಕಮಿಟಿಯನ್ನು ರಚಿಸಲಾಯಿತು. "ವಿಧಾನ ಮಂಡಲ ಕಲಾಪಾಸಕ್ತಿ ಪುನರೋದ್ಧಾರಕ ಸಮಿತಿ" ಅಲಿಯಾಸ್ "ವಿಮಕಪುಸ"!!!

’ವಿಮಕಪುಸ’ ಕಾರ್ಯೋನ್ಮತ್ತವಾಯಿತು! ಮೂರ್ನಾಲಕ್ಕು ತಿಂಗಳು ಹಗಲೂ ರಾತ್ರಿ ಯೋಚಿಸಿದ ಮೇಲೆ ಸಮಿತಿಗೆ ಒಂದು ಉಪಾಯ ಹೊಳೆಯಿತು. ಕಲಾಪ ನೆಡೆಯುವುದಕ್ಕಿಂತ ಒಂದು ದಿನ ಮೊದಲು ಶಾಸಕರ ನಡುವೆ ಸಂಬಂಧಗಳನ್ನು ತಿಳಿಯಾಗಿಸಲು ಎಲ್ಲರನ್ನೂ ವಿಧಾನಸೌಧದಲ್ಲಿ ಸೇರಿಸಿ ಅವರ ನಡುವೆ "ಪ್ರತಿಭಾ ಪ್ರದರ್ಶನ" ಏರ್ಪಡಿಸುವುದು ಎಂದು! ಈ ವರದಿ ಬರುತ್ತಿದ್ದಂತೆಯೇ ಎಲ್ಲ ಶಾಸಕರೂ ತಮ್ಮ ತಮ್ಮ ಪ್ರತಿಭೆಗಳನ್ನು ಹುಡುಕಲು ಪ್ರಾರಂಭಿಸಿದರು. ಯಡಿಯೂರಪ್ಪನವರು ನನ್ನ ಜೊತೆ ಶೋಭೆಯೇ ಇರುವಾಗ ಪ್ರತಿಭೆ ಯಾಕೆ ಬೇಕು ಎಂದು ಅಂದುಕೊಂಡರೂ ಪ್ರತಿಭೆಯೂ ಎಲ್ಲೋ ಇರಬೇಕು ಎಂದು ಅದನ್ನು ಹುಡುಕಿ ಪ್ರದರ್ಶನಕ್ಕೆ ಸಜ್ಜಾದರು. ಮಾರನೆಯ ದಿನವೇ ಕಲಾಪ. "ಇವತ್ತಿನ ದಿನ ಪ್ರತಿಭಾ ಪ್ರದರ್ಶನ!" ಎಂದು ಸ್ಪೀಕರ್ ಘೋಷಿಸಿಬಿಟ್ಟರು.

ಮೊದಲನೆಯ ಅವಕಾಶ ಮಾನ್ಯ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರು ಹಾಡು ಹೇಳಿದರು! ಅವರಿಗೆ ಶೊಭಾ ಹಾಗು ಅವರ ಮಕ್ಕಳು ಸಾಥ್ ನೀಡಿದರು.

ಯಡ್ಡಿ:
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್


ಯಡ್ಡಿ:
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್

ಯಡ್ಡಿ:
ಡಿನೋಟಿಫೈ ಮಾಡೇಬಟ್ಟೆ ರಾಜ್ಯವನ್ನೇ ಮಾರ್‌ಕಂಡ್‌ಬುಟ್ಟೆ
ರೆಡ್ಡಿಗ್ ಸೆಡ್ಡು ಹೊಡದೇಬುಟ್ಟೆ ಸಿದ್ದುಗ್ ಗುದ್ದು ಕೊಟ್ಟೇಬುಟ್ಟೆ
ಹಂಗೋ ಹಿಂಗೋ ಖುರ್ಚಿಯನ್ನು ಉಳಸ್ಕಂಡೇಬುಟ್ಟೆ
ನಾನು ಸೂಪರೋ ಗೌಡಾ..........

==============================================

ಅಷ್ಟರಲ್ಲಿ ರೇವಣ್ಣ ಎದ್ದುನಿಂತು ಇದು ಪ್ರತಿಭಾ ಪ್ರದರ್ಶನಕ್ಕೆ ಅವಮಾನ. ಇದಕ್ಕೋಸ್ಕರ ಯಡಿಯೂರಪ್ಪನವರು ರಾಜೀನಾಮೆ ಕೊಡ್ಬೇಕು ಎಂದು ವಾದಿಸಿ ತಮ್ಮ ಹಾಡನ್ನು ಶುರುಮಾಡಿದರು.

ರೇವಣ್ಣ:
ಹಗರಣ ಪೇಪರ್ ನನ್ನ ಕೈ ಒಳಗೆ
ಬಿಡು ಕುರ್ಚಿ ನೀನು ಈ ಘಳಿಗೆ
ಅಪ್ಪ ಮಗ ನಾವು ಯಾವುದಕ್ಕು ರೆಡಿ
ಕುರ್ಚಿ ಬಿಟ್ಟು ಮನೆಗೆ ನೆಡಿ

ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ ಕತ್ತೆ ಕೂಡಾ ಗೆಲ್ಲುವುದು
ಯಾರು ಕತ್ತೆ ಯಾರು ಕುದುರೆ ತೋರಿಸ್ತೀನಿ ನಾನು ಬಿಜೆಪಿ ಸರ್ವನಾಶ ಮಾಡುತೀನಿ

ಒಂದೆ ಮಾಟ ಒಂದೆ ಮಂತ್ರ
ಒಂದೆ ಮಾಟ ಒಂದೆ ಮಂತ್ರ ಎಂದು ಮಾಟ ಮಂತ್ರ ಮಾಡಿ
ಎಷ್ಟು ದಿನ ಇರುತ್ತೀಯಾ ನೊಡುತ್ತೀನಿ ನಾನು ನಿಂಬೆ ಹಣ್ಣು ಮಂತ್ರಿಸಿ ತರುತ್ತೀನಿ

ನಾನೇ ಮುಂದಿನ ಮುಖ್ಯಮಂತ್ರಿ ನೋಡುತಿರು, ಸುಮ್ನೆ ಕುರ್ಚಿ ಬಿಟ್ಟು ಕೊಡು
==============================================

ಬಂಗಾರಪ್ಪನವರು ಗೆಸ್ಟ್ ಅಪಿಯರನ್ಸ್ ನೀಡಿ ಹಾಡಲು ಪ್ರಾರಂಭಿಸಿದರು.

ಬಂಗಾರಪ್ಪ:
ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ
ಯಾರೂ ಕಿಮ್ಮತ್ ಕೊಡ್ತಿರ್‌ಲಿಲ್ಲಾ ಲೈಫಿನಲಿ
ಟಿಕೆಟ್ ಸಿಗೋದ್ ಡೌಟಾಗೋಯ್ತು ಪಾರ್ಟಿಯಲಿ
ಜೆಡಿಸ್ ಕಂಡ್ತು ಸೈಡಿನಲಿ

ಅಷ್ಟರಲ್ಲಿ ಸ್ಪೀಕರ್ ಸಾಹೇಬರು ಅವರ ಬಾಯಿ ಮುಚ್ಚಿಬಿಟ್ಟರು!
==============================================

ಕೊನೆಯಲ್ಲಿ ಕುಳಿತಿದ್ದ ಅಸ್ಪ್ರಶ್ಯರ ಸಾಲಿಗೆ ಸೇರಿದ 13 ಬಂಡಾಯ ಶಾಸಕರು ಒಟ್ಟಿಗೇ ರಾಗ ಶುರುಮಾಡಿಬಿಟ್ಟರು

ಮಂತ್ರಿಗಿರಿ ಬೇಕು ದುಡ್ಡು ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು
ಮಂತ್ರಿಗಿರಿ ಬೇಕು ಹಗರಣ ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು ಮಾನ ಹೋದರು ಖುರ್ಚಿಯು ಬೇಕು
ಕಚ್ಚೆಯು ಸಡಿಲವಾಗಿರಬೇಕು ಒಂದು ಸ್ಟೆಪ್ನಿ ಇಟ್ಟಿರಬೇಕು
ನಮ್ಗೆ ಮಾನ ಇಲ್ಲ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಊರನು ಖರೀದಿ ಮಾಡಲೆ ಬೇಕು
ನಾವು ಕೂಡಾ ಗುಂಡಾ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ


ನಾವು ಶಾಸಕರು ತಿನ್ನುವೆವು ಎಲ್ಲ ಹಣವನ್ನು
ಪೆದ್ದು ಜನರುಗಳೆ ಕೇಳಿರಿ
ನೀವ್ ಭಾರಿ ಬೊದ್ದು ಬಿಡ್ರಿ
ತುಂಬ ಶ್ರಮಿಸುವೆವು ಪಡೆಯುವೆವು ಒಳ್ಳೆ ಖಾತೆಯನು
ಕೆಲಸಕೆಂದು ಅಲೆದು ಸಾಯಿರಿ
ನ್ಯಾಯ ನೀತಿ ನೋಡೋದಿಲ್ರಿ
ಮಂತ್ರಿಗಿರಿ ಬೇಕು ಜನರು ಉಗಿದರು ನಗುತಿರಬೇಕು
ನಮ್ಗೆ ಅದು ತಾಗೊದಿಲ್ರಿ
ಮಂತ್ರಿಗಿರಿ ಬೇಕು ಮಿತ್ರನ ಮಡದಿಯ ಪ್ರೀತಿಸಬೇಕು
ಪೋಲಿತನ ರಕ್ತದಿ ಬೆರೆತಿರಬೇಕು ಡೀಸೆಂಟ್ ಪೋಸು ನೀಡಬೇಕು
ನಾವು ತುಂಬಾ ಸಾಚಾ ಕಣ್ರಿ
ನರ್ಸ್ ಜೊತೆ ಡ್ಯಾನ್ಸ್ ಮಾಡಲೆ ಬೇಕು
ಥಕ ಧಿಮಿ ಥಕ ಝಣು ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
==============================================

ಇದನ್ನೆಲ್ಲ ನೋಡಿ ತಲೆ ಚಚ್ಚಿಕೊಳ್ಳುತ್ತಾ ಸ್ಪೀಕರ್ ಸಾಹೀಬ್ರು, ಪ್ರತಿಭಾ ಪ್ರದರ್ಶನವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಬಿಟ್ಟರು!

ಇದನ್ನು ನೋಡುತ್ತಾ ಕುಳಿತ ಜನಸಾಮಾನ್ಯರು ತಮ್ಮಲ್ಲೇ ತಾವು ಹಾಡಿಕೊಂಡರು.

ತುಂಬಾ ಟೆನ್ಷನ್ ಮಾಡ್ಕೋ ಬೇಡಿ
ರಾಜಕೀಯ ಹಿಂಗೇ ನೋಡ್ರಿ
ಅವರಿಗ್ ಬುದ್ಧಿ ಬರೋದಿಲ್ರಿ
ಲೈಫು ಇಷ್ಟೇನೇ...

ದುಡ್ಡೇ ಉಣ್ಣೋ ನಮ್ಮ ಮುಖಂಡ
ಇವ್ನಿಗ್ ವೋಟ್ ಹಾಕೋದ್ ದಂಡ
ನಂಬಿ ಕೆಟ್ವಿ ಇವನಜ್ಜಿ ಪಿಂಡ
ಲೈಫು ಇಷ್ಟೇನೇ...

ಹಗರಣದ್ ಮೇಲೆ ಹಗರಣ ಬಂದು
ಜನಸಾಮಾನ್ಯ ಬೆಂದು ನೊಂದು
ಕೊನೆಯಲಿ ತನ್ನನು ತಾನೆ ಕೊಂದು
ಲೈಫು ಇಷ್ಟೇನೇ...

[ಸೂಚನೆ: ಇದು ಕೇವಲ ಕಾಲ್ಪನಿಕ. ನಮ್ಮ ವಿಧಾನಸೌಧದಲ್ಲಿ ಇಷ್ಟೇ ನೆಡೆದರೆ ನಮ್ಮ ಸೌಭಾಗ್ಯ!]

Wednesday, September 22, 2010

ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್...


ಅಲ್ಲಾ... ಮೂವತ್ತು ವರ್ಷದ ತರುಣರಿಗೇ ಈ ಬೆಂಗಳೂರು ಬೇಜಾರು ಬರುತ್ತಿರಬೇಕಾದರೆ, ನಮಗೆ ಅರವತ್ತು ವರ್ಷ ಆದಾಗ ನಾವು ಇಲ್ಲಿ ಬದುಕಲಿಕ್ಕಾದರೂ ಸಾಧ್ಯ ಇದೆಯೇ? ಈ ಪ್ರಶ್ನೆ ನನ್ನನ್ನು ಬಹಳಷ್ಟು ಸಾರಿ ಕಾಡಿದೆ. ಇನ್ನೂ ಕಾಡುತ್ತಲೇ ಇದೆ. ಬೇಗ ಮನೆಗೆ ಹೋಗಬೇಕು ಎಂದು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಂತಾಗ, ಶಾಪಿಂಗ್ ಮಾಡಿದುದಕ್ಕಿಂತ ಹಚ್ಚು ಸಮಯ ಬಿಲ್ ಕೊಡಲು ಕ್ಯೂ ನಿಂತಾಗ, ನಮ್ಮ ಮನೆಯೆದುರು ಯಾರೋ ಕಾರು ನಿಲ್ಲಿಸಿ ನಮ್ಮ ಕಾರ್ ನಿಲ್ಲಿಸಲು ಜಾಗ ಹುಡುಕಬೇಕಾದಾಗ, ಮನಸ್ಸು ಭಾರವಾಗಿ ಒಂದೆರಡು ತಾಸು ಶಾಂತ ವಾತಾವರಣ ಅರಸಿ ಹೊರಟಾಗ ಅಥವಾ ಕೊನೇ ಪಕ್ಷ ಸಂಜೆ ತಂಪಾದ ಶುದ್ಧ ಗಾಳಿಯಲ್ಲಿ ಒಂದು ರೌಂಡ್ ವಾಕಿಂಗ್ ಮಾಡಬೇಕು ಎಂದೆನಿಸಿದಾಗೆಲ್ಲ ಬೆಂಗಳೂರಿನ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಶಿರಸಿ ಮತ್ತಷ್ಟು ಕೈ ಬೀಸಿ ಕರೆಯುತ್ತದೆ. ಆದರೆ ಅಲ್ಲಿಗೆ ಹೋಗಿ ಮಾಡುವುದಾದರೂ ಏನು? ಇಲ್ಲಿ ಬರುವ ಸಂಬಳ ಬಿಟ್ಟು ಅಲ್ಲಿಗೆ ಹೋದರೆ ಯಾವ ಕೆಲಸ ಸಿಗುತ್ತದೆ? ಇದರ ಅರ್ಧದಷ್ಟು ಬಂದರೂ ಸಾಕೆಂದುಕೊಂಡರೂ ಅದೂ ಸಾಧ್ಯವಿಲ್ಲದ ಮಾತು. ಒಟ್ಟಿನಲ್ಲಿ ನಮ್ಮ ಹಣೆಯಲ್ಲಿ ಈ ಕೊಂಪೆಯಲ್ಲೇ ಬಿದ್ದು ಸಾಯಿರಿ ಎಂದು ಬರೆದಿದೆಯೇ?

ನನ್ನ ಅಜ್ಜ ಕೃಷಿಕನಾಗಿದ್ದನಂತೆ. ಜೊತೆಗೆ ವೈದ್ಯ ಕೂಡಾ. ಕುಮಟಾದಲ್ಲಿ ಮೂರ್ನಾಲ್ಕು ಎಕರೆ ಗದ್ದೆ, ತೋಟ ಎಲ್ಲಾ ಇತ್ತಂತೆ. ಅಲ್ಲಿ ಹೆಚ್ಚು ಜನ ಬರುವುದಿಲ್ಲ ಎಂದಂದುಕೊಂಡು ಶಿರಸಿಗೆ ಬಂದು ನೆಲೆಸಿದ್ದರಂತೆ. ಅದರ ವಹಿವಾಟನ್ನು ಯಾರಿಗೋ ಕೊಟ್ಟು, ’ಊಳುವವನೇ ಒಡೆಯ’ ಕಾಯಿದೆಯನ್ವಯ ಆ ಆಸಾಮಿ ಅದನ್ನು ನುಂಗಿಬಿಟ್ಟನಂತೆ! ನನ್ನ ತಂದೆಯೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಲಲಿಲ್ಲ. ನಾವು ಕೆಡಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ. ಒಟ್ಟಿನಲ್ಲಿ ಕೃಷಿಕರಾಗಿದ್ದ ಒಂದು ಕುಟುಂಬ ಈಗ ಸಂಬಳದ ಜೀವನ ಮಾಡತೊಡಗಿದೆ! ಇದನ್ನು ಯೋಚಿಸಿದಾಗಲೆಲ್ಲ ಮತ್ತೆ ಯಾಕೆ ನಾವು ಕೃಷಿಕರಾಗಬಾರದು ಎಂದೆನಿಸುತ್ತದೆ. ಈ ಗದ್ದಲದ ಯಾಂತ್ರಿಕ ಜೀವನಕ್ಕಿಂತ ಅಲ್ಲಿಯ ಪ್ರಶಾಂತ ಜೀವನ ಎಷ್ಟು ಸುಂದರ ಎನಿಸುತ್ತದೆ. ಯಾವ ಮ್ಯಾನೇಜರ್ ಇಲ್ಲ. ಯಾವ ಡೆಡ್‌ಲೈನ್ ಇಲ್ಲ. ದಿವಸಕ್ಕೆ ಒಂಭತ್ತು ಗಂಟೆ ದುಡಿಯಲೇ ಬೇಕು ಎನ್ನುವ ನಿಯಮವಿಲ್ಲ. ವರ್ಷಕ್ಕೆರಡು ಅಪ್ರೇಸಲ್‌ಗಳಿಲ್ಲ. ಅವುಗಳಲ್ಲಿ ನಮಗೆ ಏನೂ ಸಿಕ್ಕಿಲ್ಲ ಎನ್ನುವ ನೋವಿಲ್ಲ. ಸುತ್ತ ಮುತ್ತಲಿನ ನಿರ್ಜೀವ ಜನರಿಲ್ಲ. ಅವರ ಕೃತಕ ನಗುವಿಲ್ಲ. ಎಷ್ಟು ಸುಂದರ ಆ ಬದುಕು!

ಒಂದು ದಿನ ನಿರ್ಧರಿಸಿಬಿಟ್ಟೆ. ಏನೇ ಆಗಲಿ. ಹೋದರೆ ಪ್ರಾಣವಂತೂ ಹೋಗುವುದಿಲ್ಲ. ಸ್ವಲ್ಪ ದುಡ್ಡು ಹೋಗಬಹುದು. ಇದನ್ನು ಕಾರ್ಯರೂಪಕ್ಕೆ ತರಲೇಬೇಕೆಂದು. ಊರ ಹತ್ತಿರ ಒಂದು ಕೃಷಿಭೂಮಿಯನ್ನೂ ಕೊಂಡುಕೊಂಡೆ! ಮಾರನೇ ವರ್ಷವೇ ಅಲ್ಲಿ ಮಾವಿನ ಸಸಿಗಳನ್ನು ನೆಡಿಸಿದೆ. ಅಲ್ಲೇ ಒಂದು ಪುಟ್ಟ ಮನೆ ಕಟ್ಟಿಸಿದೆ. ಒಂದು ಚಿಕ್ಕ ಗೋಡೋನ್. ಮನೆಗೆ ಹೋಗಲು ಒಂದು ಚಿಕ್ಕ ಹಾದಿ. ಒಂದು ಕಾರ್ ಹೋಗುವಷ್ಟು. ಸುತ್ತಲೂ ಮಾವಿನ ಸಸಿಗಳು. ಮಧ್ಯದಲ್ಲಿ ಎತ್ತರದಲ್ಲಿ ಮನೆ. ಮನೆಯ ಮೇಲೊಂದು ಸುಂದರ ಬಾಲ್ಕನಿ. ಅಲ್ಲಿ ಆರಾಮು ಖುರ್ಚಿ ಹಾಕಿ ಕುಳಿತುಕೊಂಡರೆ ಸುತ್ತಲೂ ನಾನೇ ನೆಡಿಸಿದ ಮಾವಿನ ಗಿಡಗಳು! ಯಾರ ಗದ್ದಲವಿಲ್ಲ. ಯಾರ ತಂಟೆಯಿಲ್ಲ.

ಸಸಿಗಳು ಗಡವಾಗಿವೆ. ಮರವಾಗುತ್ತಿವೆ. ಐದೇ ಐದು ವರ್ಷಗಳಲ್ಲಿ ಫಲ ನೀಡುತ್ತಿವೆ. ಇದುವರೆಗೆ ನಾನು ತೋರಿದ ಪ್ರೀತಿಗೆ ಪ್ರತ್ಯುತ್ತರವಾಗಿ ಸಿಹಿ ಹಣ್ಣುಗಳನ್ನು ಸಾಕು ಸಾಕೆನಿಸುವಷ್ಟು ಕೊಡುತ್ತಿವೆ. ಇನ್ಯಾವ ಕೆಲಸ ಬೇಕು ನನಗೆ. ಈ ಗಿಡಗಳ ಜೊತೆಗೆ ಇಲ್ಲೇ ಇದ್ದುಬಿಡಬೇಕು ಎಂದೆನಿಸುತ್ತಿದೆ. ಗಿಡಗಳು ಚಲಿಸದೇ ಇದ್ದರೇನಾಯಿತು? ಮನದಲ್ಲಿ ಸಂಚಲನವನ್ನೇ ಉಂಟುಮಾಡುತ್ತಿವೆ. ಪ್ರೀತಿಸಲು ಮನುಷ್ಯರೇ ಆಗಬೇಕೆ? ನಿಸ್ವಾರ್ಥ ಪ್ರೀತಿಗೆ ಈ ಮರಗಳೇ ನಿದರ್ಶನ! ನನಗೂ ವಯಸ್ಸಾಗುತ್ತಾ ಬಂದಿದೆ. ಎಷ್ಟು ಎಂದು ದುಡಿಯುವುದು? ಇನ್ನು ನಾವಾಯಿತು ನಮ್ಮ ಶಾಂತ ಸುಂದರ ಪರಿಸರವಾಯಿತು ಎಂದುಕೊಂಡು ಬೆಂಗಳೂರು ಬಿಟ್ಟು ಶಿರಸಿಗೆ ಹೋಗಿ ನೆಲೆಸಿಬಿಡುವ ನಿರ್ಧಾರ ತೆಗೆದುಕೊಂಡು ಹೊರಡುವ ದಿನಾಂಕ ನಿರ್ಧರಿಸಿ ಆಯಿತು. ಶಿರಸಿಯಲ್ಲಿ ಇದು ಸುದ್ದಿಯಾಗಿ ಅಲ್ಲಿಯ ದಿನಪತ್ರಿಕೆಯೊಂದರಲ್ಲಿ ಚಿತ್ರದ ಸಹಿತ ಒಂದು ಲೇಖನ ನಮ್ಮ ಬಗ್ಗೆಯೇ ಬಂದಿದೆ! ಮನೆಯಿಂದ ಫೋನ್ ಮಾಡಿ ಹೇಳಿದ್ದಾರೆ. ಇಂಟರ್ನೆಟ್ ಅಲ್ಲಿ ಆ ಪೇಪರ್ ನೋಡುತ್ತಿದ್ದೇನೆ. ಹೌದು ನಮ್ಮದೇ ಸುದ್ದಿ! "ಕೃಷಿಕನಾದ ಸಾಫ್ಟ್‌ವೇರ್ ಇಂಜಿನಿಯರ್"!!!

"ಏಳ್ರೀ... ಎಷ್ಟು ಹೊತ್ತು ಮಲಗ್ತ್ರಿ? ಆಗ್ಲೇ ಪೇಪರ್ ಹಾಕಿಕ್ ಹೋದಾ... ಇವತ್ತು ಆಫೀಸಿಗ್ ಹೋಗ್ತ್ರಿಲ್ಯಾ???" ಹೆಂಡತಿ ಎಬ್ಬಿಸಿದಾಗಲೇ ನನಗೆ ಎಚ್ಚರವಾಗಿದ್ದು. ಥತ್... ಇಷ್ಟು ಹೊತ್ತು ಬಿದ್ದಿದ್ದು ಕನಸಾ? ಛೇ... ಎಂದುಕೊಂಡು ಬಚ್ಚಲಿನ ಕಡೆಗೆ ಹೊರಟೆ. ಹಲ್ಲು ತಿಕ್ಕುತ್ತಾ ಯೋಚಿಸಿದೆ. ಏನೇ ಆದರೂ ಬಿದ್ದ ಕನಸಂತೂ ಸುಂದರವಾಗಿತ್ತು ಎಂದು.

ಮತ್ತೆ ಗೊಂದಲ ಶುರುವಾಯಿತು. ಇದು ನನಗೆ ಬಿದ್ದ ಕನಸಾ ಅಥವಾ ನನ್ನ ಕನಸಾ !

Thursday, August 12, 2010

ನಿತ್ಯಾನಂದರ ಕನಸು



ಶ್ರಾವಣ ಶುರುವಾಯಿತು. ನಿತ್ಯಾನಂದರು ಪಂಚಾಗ್ನಿ ಹೋಮ ಮಾಡಿ ಪವಿತ್ರರಾಗಿದ್ದಾರೆ. ಬಹಳ ದಿನಗಳ ವಿರಹ ಬೇಗೆಯಿಂದ ಬಳಲಿದ್ದಾರೆ. ಇತ್ತಕಡೆ ಅವರ ಸೇವಕಿ ರಂಜಿತೆಯೂ ವಿರಹಿಯಾಗಿ ನೊಂದಿದ್ದಾಳೆ. ಅಹಲ್ಯೆಯದ್ದು ಭಾರತದ ಮೊದಲ ಸೆಕ್ಸ್ ಕಾಂಡ ಎಂದು ಹೇಳಿ ತಮ್ಮ ಬುದ್ಧಿಮತ್ತೆಯನ್ನು ತೋರಿರುವ ಸ್ವಾಮಿಗಳು, ರಂಜಿತೆ ಅತ್ಯಂತ ಒಳ್ಳೆಯ ಸೇವಕಿ ಎನ್ನುವುದರ ಮೂಲಕ ತಾವು ನೊಂದವರ ಕೈ ಬಿಡುವಂಥವರಲ್ಲ ಎಂದು ಸಾರಿದ್ದಾರೆ. ಮೊನ್ನೆ ಉಪನ್ಯಾಸ ಮಾಡುತ್ತಿದ್ದಾಗ ರಂಜಿತೆಯ ನೆನಪಾದಾಗ ಹಾಗೇ ಕನಸಿನಲ್ಲಿ ಮುಳುಗಿದರು...

ಲೊಕೇಷನ್ ಛೇಂಜ್...

ಒಂದು ಗುಡ್ಡ. ಅದರ ಮೇಲೆ ಒಂದೇ ಒಂದು ಮರ. ಮರದ ತುಂಬಾ ಹೂವು. ಕೆಳಗೆ ಧ್ಯಾನಸ್ಥರಾಗಿ ನಿತ್ಯಾನಂದರು. ಒದೊಂದೇ ಹೂವಿನ ಪೂಜೆ ಇವರಿಗೆ ಸಾಲದೆಂದು ಇಡೀ ಮರವನ್ನೇ ಅಲುಗಾಡಿಸಿ ಹೂವಿನ ಮಳೆಗರೆಯುತ್ತಿರುವ ರಂಜಿತೆ! ಹೂವಿನ ಮಳೆಗೆ ನಿತ್ಯಾನಂದರಿಗೆ ಎಚ್ಚರವಾಗಿ ಸುತ್ತಲೂ ನೋಡಿದಾಗ ಕಂಡವಳು, ಬಿಳಿಯ ಸೀರೆಯನುಟ್ಟ ಸುಂದರ ಸೇವಕಿ ರಂಜಿತೆ! ಮನದೊಳಗಿನಿಂದ ಹಾಡೊಂದು ಹುಟ್ಟಿದೆ!

ಎಂದೆಂದೂ ರಂಜಿತೆ ನಿನ್ನ ಕೈ ಬಿಡಲಾರೆ
ಸ್ವಾಮಿಯೆ ನಿಮ್ಮ ಮೊಗದಲಿ ಕಂಡೆ ನಗುವಿನ ಧಾರೆ
ದೇವರಾಣೆ ಮನವನು ಗೆದ್ದ ಸೇವಕಿಯು ನೀನೆ
ನೀವೆ ನನ್ನ ದೇವತೆ ಎಂದೂ ಬೇರೇನನು ಕಾಣೆ

ರಂಜಿತೆ ಧ್ಯಾನದ ವೇಳೆ ಮುಗಿಯಿತು ಬಾರೆ
ಮೈ ಕೈ ನೋವಿಗೆ ಮದ್ದು ನೀಡೆಲೆ ತಾರೆ
ನೀ ಗುರುವಾಗಿರೆ ಮನವದು ನಲಿದಿರೆ
ನಾ ನಿಮ್ಮ ಸೇವೆಯನ್ನು ಎಂದು ಮಾಡುವೆ ಮಾಡುವೆ ಮಾಡುವೆ

ಸ್ವಾಮಿಯೆ ನಿಮ್ಮಯ ಮೈಗೆ ಎಣ್ಣೆಯ ಹಚ್ಚಿ
ಸೇವೆಯ ಮಾಡುವೆ ಬನ್ನಿ ಕದವನು ಮುಚ್ಚಿ
ಈ ಜನರ ಮೋಸವ ನಾನರಿಯದಾದೆನು
ಮರೆಯದೆ ಸುತ್ತ ನೋಡಿ ಕ್ಯಾಮರಾ ಹುಡುಕುವೆ ಹುಡುಕುವೆ ಹುಡುಕುವೆ

ಸಾವಿರ ಜನುಮವೆ ಬರಲಿ ಬೇಡುವುದೊಂದೇ
ಬೆಡ್‌ರೂಮಲ್ಲಿ ಕ್ಯಾಮರಾ ಇಡದಿರು ತಂದೆ
ಹೇಗೊ ಅಡ್ಜಸ್ಟ್ ಮಾಡಿಹೆ ಜನಕೆ ಟೋಪಿ ಹಾಕಿಹೆ
ಮುಂದೆಯೂ ಜನರು ಮರುಳು ಆದರೆ ಕಿರಿಯುವೆ ಹಲ್ ಕಿರಿಯುವೆ ಹಲ್ ಕಿರಿಯುವೆ

ಪಕ್ಕದಲ್ಲಿರುವವರು "ಸ್ವಾಮೀಜಿ ಸಮಾಧಿಸ್ತರಾಗಿಬಿಟ್ಟಿದ್ದಾರೆ! ಎಲ್ಲರೂ ದೇವರ ನಾಮ ಹೇಳಿರಿ." ಎಂದಾಗಲೇ ನಿತ್ಯಾನಂದರಿಗೆ ಎಚ್ಚರವಾದದ್ದು.
"ದೇವರನ್ನು ಸುಲಭವಾಗಿ ಹುಡುಕಿಬಿಡಬಹುದು... ಹಿಡನ್ ಕ್ಯಾಮರಾಗಳನ್ನು ಹುಡುಕುವುದು ಮಾತ್ರ ಬಲು ಕಷ್ಟ!" ಎಂದು ಪ್ರವಚನ ಮುಗಿಸಿದರು.

ಎಲ್ಲರೂ ನಿತ್ಯ ಆನಂದವನ್ನು ಹೊಂದಿರಿ.
ಹರಿಃ ಓಂ ತತ್ ಸತ್. ನಿತ್ಯಾರ್ಪಣಮಸ್ತು!

[ವಿ.ಸೂ.: ಇದು ಕೇವಲ ಕಾಲ್ಪನಿಕ! ಈ ಘಟನಗೆ ಅಥವಾ ವ್ಯಕ್ತಿಗೆ ಯಾವುದೇ ಹೋಲಿಕೆಯಾದರೆ ಅದು ನಮ್ಮ ದುರ್ದೈವ!]

Thursday, July 15, 2010

ಮುಗಿಯದ ಮುಕ್ತ


[ವಿ.ಸೂ.: ಇದು ಒಬ್ಬ ನಾಡಾಡಿಯ ವಿಮರ್ಶೆಯಾಗಿದ್ದು ಕೇವಲ ನನ್ನ ವಯಕ್ತಿಕ ಅಭಿಪ್ರಾಯವಾಗಿರುತ್ತದೆ. ಬೇರೆಯವರ ವಿಚಾರಗಳು ಇದಕ್ಕೆ ತದ್ವಿರುದ್ಧವೂ ಆಗಿರಬಹುದು. ಇದನ್ನು ಇಲ್ಲಿ ಪ್ರಕಟಿಸುತ್ತಿರುವ ಉದ್ದೇಶ ಯಾರನ್ನೂ ನಿಂದಿಸುವುದಕ್ಕಾಗಿಯೋ ಬೇಸರಪಡಿಸುವುದಕ್ಕಾಗಿಯೋ ಸರ್ವಥಾ ಅಲ್ಲ.]


ಒಂದು ಮನೆ. ಗಂಡಸರಿದ್ದೂ ಇಲ್ಲದಂತಿರುವ ಮನೆ. ಮನೆಯ ಯಜಮಾನನಿಗೆ ತಿಕ್ಕಲು. ದುಡಿಮೆಯಿಲ್ಲ. ಹಿರಿಯ ಮಗಳಿಗೆ ಡೇಟ್ ಬಾರ್ ಆದಮೇಲೆ ಮದುವೆ. ಆದರೂ ಅವಳೇ ಈ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಮನೆಯಲ್ಲಿ ಉಳಿದವರೆಲ್ಲಾ ಕೆಲಸಕ್ಕೆ ಬಾರದವರು. ಒಬ್ಬ ತಮ್ಮನಿಗೆ ಯಾವಾಗಲೂ ಕೆಲಸ ಹೋಗಿರುತ್ತದೆ. ಇನ್ನೊಬ್ಬ ತಮ್ಮ ಉಣ್ಣುವುದನ್ನಷ್ಟೇ ಕಲಿತಿದ್ದಾನೆ. ಅದಷ್ಟೇ ಅಲ್ಲದೆ ಇನ್ನೊಂದಿಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತಾನೆ.
ಇನ್ನೊಂದು ಮನೆ. ಇಲ್ಲೂ ಯಜಮಾನನಿಗೆ ತಿಕ್ಕಲು. ಹೆಂಡತಿ ದುಡಿಯುತ್ತಾಳೆ. ಮಗಳು ಸಮಾಜ ಸೇವಕಿ. ಮಗನಿಗೆ ಸ್ವಂತ ಬುದ್ಧಿ ಇಲ್ಲ. ಅಮ್ಮ, ತಂಗಿ ಹೇಳುವುದನ್ನು ಕೇಳುತ್ತಾನೆ.
ಇನ್ನೊಂದು ರಾಜಕೀಯ ಕುಟುಂಬ. ಮುಖ್ಯಮಂತ್ರಿಯ ಮನೆ. ಒಬ್ಬ ಹೆಂಗಸು. ಮುಖ್ಯಮಂತ್ರಿಯ ಹೆಂಡತಿ. ಒಬ್ಬ ಮಗ ಆದರ್ಶವಾದಿ ಆದರೆ ಪುಕ್ಕಲ. ಸ್ವಂತಬುದ್ಧಿ ಇಲ್ಲ. ಸ್ನೇಹಿತೆ (ಈಗಿನ ಹೆಂಡತಿ)ಯ ಮಾತೇ ಆತನಿಗೆ ಸರ್ವಸ್ವ. ಮುಖ್ಯಮಂತ್ರಿ ಮತ್ತು ಇನ್ನೊಬ್ಬ ಮಗ ಕಟುಕರು.
ಮತ್ತೆ ಕೆಲವು ಪಾತ್ರಗಳು. ಗಂಡು ಪಾತ್ರಗಳು ಎಲ್ಲಾ ಕಟುಕರು ಇಲ್ಲಾ ಬುದ್ಧಿ ಒಂದು ಸುತ್ತು ಕಮ್ಮಿ ಇರುವವರು. ಹೆಣ್ಣು ಪಾತ್ರಗಳು ಎಲ್ಲಾ ಸಮಾಜೋದ್ಧಾರಕರು.
ಇವೆಲ್ಲವುಗಳ ನಡುವೆ ಒಬ್ಬನೇ ಒಬ್ಬ ಬುದ್ಧಿವಂತ ಆದರ್ಶವಾದಿ ಗಂಡಸು. ಅನ್ಯಾಯ ಮಾಡುವವರಿಗೆ ಸಿಂಹಸ್ವಪ್ನ! ಬಡವರ ಬಂಧು. ದೊಡ್ಡ ದೊಡ್ಡ ಲಾಯರ್‍ಗಳನ್ನು ಮಣ್ಣುಮುಕ್ಕಿಸುವ ಮೇಧಾವಿ. ಕ್ಲೈಂಟ್‍ಗಳ ಹತ್ತಿರ ಫೀಸನ್ನೇ ಕೇಳದ ಕರುಣಾಮಯಿ. ಅವರೇ ಸಿ.ಎಸ್.ಪಿ. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರೂ ಕೂಡಾ!

ಹೌದು. ನಾನು ಹೇಳುತ್ತಿರುವುದು "ಮುಕ್ತ ಮುಕ್ತ" ಎಂಬ ಮುಗಿಯದ ಧಾರಾವಾಹಿಯ ಬಗ್ಗೆ. ಬಹುಷಃ ಇದು ಮುಗಿದರೂ "ಮುಕ್ತ ಮುಕ್ತ ಮುಕ್ತ" ಬರಬಹುದೇನೊ. ಅವರ ಹಿಂದಿನ ಧಾರಾವಾಹಿಗಳು ಹೇಗಿದ್ದವು ಎಂಬುದು ನನಗೆ ನೆನಪಿನಲ್ಲಿ ಉಳಿದಿಲ್ಲ. ಆದರೆ ಸಧ್ಯದ ಧಾರಾವಾಹಿಯಂತೂ ಸ್ತ್ರೀ ಸಾಮ್ರಾಜ್ಯದಲ್ಲಿ ಪುರುಷ ಶೋಷಣೆ! ನೋಡುಗರ ತಾಳ್ಮೆ ಪರೀಕ್ಷೆ. ಹಾಸಿಗೆ ಹಿಡಿದವರಿಗೆ ತೋರಿಸಿಬಿಟ್ಟರೆ ಬೇಗನೆ ಶಿವನ ಪಾದ ಸೇರಿಬಿಡುತ್ತಾರೆ. ಖೈದಿಗಳಿಗೆ ಇದನ್ನು ತೋರಿಸುವುದು ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ಎನಿಸಿಕೊಂಡಿದೆ. ಗರ್ಭಿಣಿಯರು ಇದನ್ನು ನೋಡಿದರೆ ನೂರಕ್ಕೆ ನೂರರಷ್ಟು ಹೆಣ್ಣಾಗುತ್ತದೆ. ಗಂಡಾದರೂ ಅದು ಹೆಣ್ಣಿನಂತೆಯೇ ಇರುತ್ತದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬುದ್ಧಿ ಭ್ರಮಣೆಯಾದವರು ಹೆಚ್ಚು ಗಲಾಟೆ ಮಾಡಿದರೆ, "ಮುಕ್ತ ಮುಕ್ತ" ತೋರಿಸುತ್ತೇನೆ ಎಂದು ಹೆದರಿಸುತ್ತಾರಂತೆ!

ನಮ್ಮನೆಯಲ್ಲಿ ಒಂದು ವರ್ಷದಿಂದ ಈ ಧಾರಾವಾಹಿಯನ್ನು ನೋಡುತ್ತಾ ಬಂದಿದ್ದಾರೆ. ಮೊನ್ನೆ ಊರಿಗೆ ಹೋದಾಗ ನಮ್ಮಪ್ಪನನ್ನು ಕೇಳಿದೆ.
"ಅಲ್ಲಾ ಅಪ್ಪಾ... ನೀವು ಒಂದು ವರ್ಷದಿಂದ ನೋಡ್ತಾ ಇದೀರಲ್ಲಾ... ಏನಾಯ್ತು"
"ಎಲ್ಲಾ ಪಾತ್ರಧಾರಿಗಳ ತೂಕ ಎರಡು ಕಿಲೋ ಜಾಸ್ತಿ ಆಯ್ತು! ಅಷ್ಟು ಬಿಟ್ಟರೆ no other development!"
"ಹೋಗ್ಲಿ ಬಿಡು... ಏನೋ ಒಂದು develop ಆಯ್ತಲ್ಲಾ..."

ಧಾರಾವಾಹಿಯಲ್ಲಿ ಒಬ್ಬನ ಜೊತೆ ಏನೋ ಒಂದು ಚಿಕ್ಕ ಘಟನೆ ನಡೆಯುತ್ತದೆ. ಅದನ್ನು ತೋರಿಸುತ್ತಾರೆ. ಇನ್ನೊಬ್ಬ ಬಂದು ಏನಾಯ್ತು ಎನ್ನುತ್ತಾನೆ. ಅವನು ಹೇಳುತ್ತಾನೆ. ಇನ್ನೊಬ್ಬಳು ಬಂದು ಏನಾಯ್ತೋ ಎನ್ನುತ್ತಾಳೆ. ಅವನು ಮತ್ತೆ ಹೇಳುತ್ತಾನೆ. ಅವಳು ಅದನ್ನೇ ಮತ್ತೆ ಹೇಳಿ, ಹೀಗಾಯ್ತಾ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಇನ್ನೊಬ್ಬ ಬರುತ್ತಾನೆ ಅವನಿಗೂ ಮತ್ತೆ ಹೇಳುತ್ತಾರೆ! ಇವೆಲ್ಲವನ್ನು ನೋಡಿ ಪ್ರೇಕ್ಷಕ ಮೂರ್ಛೆ ಹೋಗುತ್ತಾನೆ. ಇದು ದಿನನಿತ್ಯದ ಕಥೆ.

ಶಾಂಭವಿ ಟೀಚರ್ ಮನೆ ಒಂದು ರೀತಿಯ ವಿಶಿಷ್ಟ ಜಾತಿಯ ದೈಹಿಕವಾಗಿ ಕೊಬ್ಬಿದ ಮಂಗಗಳನ್ನು ಸಾಕಿದ zoo ಇದ್ದಂತೆ. ಯಾರಾದರು ಮನೆಗೆ ಬಂದರೆ ಒಂದು ಮಂಗ ಇನ್ನೊಂದಕ್ಕೆ ನೋಡಲು ಹೇಳುತ್ತದೆ. ಅದು ಹೋಗಿ ನೋಡುತ್ತದೆ. ವಾಪಸ್ ಬಂದು ಯಾರು ಎಂದು ಹೇಳುತ್ತದೆ. ಈಗ ಎಲ್ಲ ಮಂಗಗಳೂ ಒಂದರ ಹಿಂದೆ ಒಂದರಂತೆ ಹೊರಗೆ ಓಡುತ್ತವೆ. ಮಿಕ ಮಿಕ ನಡುತ್ತಾ ನಿಲ್ಲುತ್ತವೆ. ಸಂಬಂಧವಿಲ್ಲದಿದ್ದರೂ ಮಧ್ಯ ಬಾಯಿ ಹಾಕುತ್ತವೆ. ಯಾರೇ ಬರಲಿ ಗೂಂಡಾಗಳು, ರಾಜಕಾರಣಿಗಳು, ಪೋಲೀಸರು, ಪರಿಚಯದವರು, ಟೈಮ್ ಪಾಸ್‌ಗೆ ಬಂದವರು, ಯಾರೇ ಬಂದರೂ ಹೆಣ್ಣು ಮಂಗಗಳು ಮುಂದೆ ಬಂದು ಮಾತಾಡುತ್ತವೆ. ಗಂಡು ಮಂಗಗಳು ಹೌದು ಹೌದು ಎನ್ನುತ್ತವೆ!

ಪಾತ್ರಗಳಲ್ಲಿ ಹಿಡಿತ ಇಲ್ಲ. ಇವತ್ತು ಒಂದು ರೀತಿ ಇದ್ದ ಪಾತ್ರ ನಾಳೆ ಇನ್ನೊಂದು ರೀತಿ ವರ್ತಿಸುತ್ತದೆ. ಒಬ್ಬ ಸಾಫ್ಟ್‌ವೇರ್ ಇಂಜಿನೀಯರ್ ನಾಡಿದ್ದು ಸೈಂಟಿಸ್ಟ್ ಆಗಿಬಿಟ್ಟಿರುತ್ತಾನೆ. ಕೆಲವರ ಅತೀ ಮೃದು ಧೋರಣೆ, ಕೆಲವರ ಹುಂಬತನ, ಕೆಲವರ ಮಕ್ಕಳ ಬುದ್ಧಿ ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ. ಶೀರ್ಷಿಕೆ ಹಾಡೊಂದನ್ನು ಬಿಟ್ಟರೆ ಹೇಳಿಕೊಳ್ಳುವಂತ ಯಾವ ವಿಷಯಗಳೂ ಇಲ್ಲಲ್ಲ. ಬಹುಷ: ಇವತ್ತು ಶೂಟಿಂಗಿಗೆ ಯಾರು ಬಂದಿದ್ದಾರೋ ಅವರನ್ನು ಬಳಸಿಕೊಂಡು ಕಥೆ ಬೆಳೆಸಿದಂತಿದೆ. ಗಟ್ಟಿಯಿಲ್ಲದ ಪಾತ್ರಗಳು, ಬಾಲಿಶ ಸಂಭಾಷಣೆ, ದುರ್ಬಲ ಕಥಾಹಂದರ, ಅನವಷ್ಯಕವಾಗಿ ಆದರ್ಶಗಳ ತುರುಕುವಿಕೆ ಈ ಧಾರಾವಾಹಿಯನ್ನು ಅಸಹಜ ಹಾಗೂ ಅಪ್ರಸ್ತುತವಾಗಿಸಿವೆ. ಈ ಧಾರಾವಾಹಿ ರಾತ್ರಿ ಮರುಪ್ರಸಾರಗೊಳ್ಳುವುದು ಮತ್ತು ಇದರ ಸಂವಾದ ಏರ್ಪಡಿಸುತ್ತಿರುವುದು ಹಾಸ್ಯಾಸ್ಪದ.

ಕೆಲವು ಅನಿವಾರ್ಯ ಕಾರಣಗಳಿಂದ ಅಪರೂಪಕ್ಕಾದರೂ ಇದನ್ನು ನೋಡಲೇಬೇಕಾದಾಗ ಆದ ಯಾತನೆಯ ಹಾಗೂ ತಡೆದುಕೊಂಡ ಕೋಪದ ಪ್ರತಿಫಲ ಈ ವಿಮರ್ಶೆ. ಸೀತಾರಾಮ್ ಅವರೇ ದಯವಿಟ್ಟು "ಮುಕ್ತ ಮುಕ್ತ ಮುಕ್ತ" ದಲ್ಲಾದರೂ ಈ ರೀತಿಯ ನಿರ್ಲಕ್ಷ ತೋರಬೇಡಿ. ಅಲ್ಲಾದರೂ ಒಳ್ಳೆಯ ಗಂಡಸರಿಗೆ 33% ಮೀಸಲಾತಿ ಕೊಡಿ.

Wednesday, July 14, 2010

ಆರಾಮಾಗಿ... ಇದ್ದೆ ನಾನು...


ಬೆಳಿಗ್ಗೆ ಅಲಾರ್ಮ್ ಬಾರಿಸಿದಕೂಡಲೇ ಎದ್ದುಬಿಡುವವರು ಯಾರಾದರು ಇದ್ದರೆ ನಿಮ್ಮ ಪಾದದ ಜೆರಾಕ್ಸ್ ಕಾಪಿ ನನ್ನ ಅಡ್ರೆಸ್ಸಿಗೆ ದಯವಿಟ್ಟು ಕಳುಹಿಸಿಕೊಡಿ. ಅದನ್ನು ನೋಡಿಯಾದರೂ ನನಗೆ ಬೆಳಿಗ್ಗೆ ಬೇಗ ಏಳುವ ಸ್ಪೂರ್ತಿ ಬರಬಹುದೇನೋ. ಏಷ್ಟೋ ಸಲ ಪ್ರಯತ್ನಿಸಿದ್ದೇನೆ. ಅಷ್ಟೇ ಏಕೆ, ಪ್ರತಿದಿನವೂ ಮಲಗುವಾಗ ಮಾರನೇ ದಿನ ಬೇಗ ಏಳಬೇಕು ಎಂದೇ ಅಂದುಕೊಂಡು ಮಲಗುವುದು. ಆದರೂ ಇನ್ನೂ ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಹಾಗೆ ಅಂದುಕೊಂಡಿದ್ದು ಬೆಳಿಗ್ಗೆ ಮರೆತು ಹೋಗಿರುತ್ತದಲ್ಲಾ! ಅದು ಬೆಳಿಗ್ಗೆಯೂ ನೆನಪಾಗಿದ್ದರೆ ಆಗ ಸಾಧ್ಯವಾಗುತ್ತಿತ್ತೇನೊ. ಆದರೆ ವಿವೇಕಾನಂದರು ಹೇಳಿಲ್ಲವೇ? Try and try until you succeed ಅಂತ. ನಾನೂ ನನ್ನ ಪ್ರಯತ್ನ ಮುಂದುವರಿಸುತ್ತೇನೆ.

ಮೊನ್ನೆ ಹೀಗೇ ನಿದ್ದೆಗಣ್ಣಿನಲ್ಲಿ ಆಫೀಸಿಗೆ ಹೊರಟಾಗ ಫಿವರ್ ಎಫ್ ಎಮ್ ನಲ್ಲಿ ಜಯಂತ್ ಕಾಯ್ಕಿಣಿಯವರ "ಆರಾಮಾಗಿ ಇದ್ದೆ ನಾನು" ಹಾಡು ಹಾಕಿದ್ದರು. ಅವರು ತಾಸಿಗೆ ಮೂರು ಬಾರಿ ಇದನ್ನೇ ಹಾಕುತ್ತಾರೆ ಅದು ಬೇರೆ ವಿಷಯ. ಆದರೆ ಆಗ ನಾನಗೂ ಹಾಗೇ ಅನ್ನಿಸಿತು. ಆರಾಮಾಗೇ ಇದ್ನಲ್ಲಪ್ಪಾ... ಸುಮ್ನೆ ಕಷ್ಟ ಪಡ್ತಿದೀನಿ ಎಂದು. ಅದೇ ಸಂದರ್ಭಕ್ಕೆ ಅದೇ ಹಾಡಿನ ರೀಮಿಕ್ಸ್:

ಆರಾಮಾಗಿ ಇದ್ದೆ ನಾನು ಒಂದೇ ಸಮನೆ ಅದು ಏನಾಯಿತು
ಅರೆ ಏನಾಯತು ಸದ್ದು ಜೋರಾಯಿತು ಬಲು ಕಹಿಯಾದ ಅನುಭವವಾಯಿತು
ಕೈ ಅಲುಗಾಡಿತು ಸದ್ದು ಮರೆಯಾಯಿತು ಮತ್ತೊಮ್ಮೆ ಆರಾಮು ಆಯಿತು

ಮಲಗಿದೆ ಪುನಃ ಮಲಗಿದೆ ಮನ ಇನ್ನೂನು ಸಂತಸಗೊಂಡಿತು
ಹೊಡೆಯುತ ಗೊರಕೆ ಹೊಡೆಯುತ ಕ್ಷಣ ಒಂದೊಂದು ಘರ್ಜನೆಯಾಯಿತು

ಮ್ಯಾನೇಜರ್ರು ನನ್ನ ಹಿಂದೆ ಬಂದು ನಿಂತ ಹಾಗೆ ಕನಸಾಗಿ ಈಗ
ದಿಗಿಲಾಯಿತು ಮತ್ತೆ ಎಚ್ಚರಾಯಿತು ಮನಸೀಗ ಬೇಸರಗೊಂಡಿತು

ಹೊರಟೆನು ಈಗ ಕೆಲಸಕೆ ಈ ನಿರ್ದಯಿ ದಿನವನು ಶಪಿಸುತಾ
ಹೊರಟಿತು ಹೃದಯ ಹೊರಟಿತು ಮತ್ತೊಮ್ಮೆ ಹಾಸಿಗೆ ನೆನೆಯುತಾ

ಕಾಣದಂತೆ ಸ್ವೈಪು ಮಾಡಿ ಈಗ ಓಡಿಹೋಗಿ ಮತ್ತೆ ಮಲುಗಲೇನು
ಹಾಳಾಯಿತು ಲೈಫು ಹಾಳಾಯಿತು ಈ ಬಡಜೀವ ಮತ್ತೆ ಬಡವಾಯಿತು

Wednesday, July 7, 2010

ಜೇನು ಕೊಂದ ವೀರ


ಅವತ್ತು ಬಾಗಲಕೋಟ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನೇತಾಜಿ ಬ್ಲಾಕ್‌ನ ಹುಡುಗರಲ್ಲೆಲ್ಲ ಭಾರೀ ಸುದ್ದಿ. ಅಲ್ಲೇ ಒಂದು ರೂಮಿನ ಕಿಟಕಿಗೆ ಕಟ್ಟಿದ್ದ ದೊಡ್ಡದಾದ ಒಂದು ಹೆಜ್ಜೇನಿನ ಗೂಡನ್ನು ಇವತ್ತು ರಾತ್ರಿ ಓಡಿಸುತ್ತಾರಂತೆ. ಅದಕ್ಕಾಗಿ ಒಂದು ಘಂಟೆ ಕರೆಂಟ್ ತೆಗೆಯುತ್ತಾರಂತೆ... ಆಗ ಎಲ್ಲರೂ ರೂಮಿನಲ್ಲಿ ಕೂತಿರಬೇಕಂತೆ... ಹಾಗಂತೆ ಹೀಗಂತೆ... ಕೆಲವರಿಗೆ ಯಾಕೆ ಎಂದು ಗೊತ್ತಿಲ್ಲದೆಯೇ ಉತ್ಸಾಹ ತುಂಬಿ ತುಳುಕುತ್ತಿತ್ತು. ಜೇನು ತೆಗೆದರೆ ಆ ರೂಮಿನವರು ನಿರ್ಭಯವಾಗಿರಬಹುದು ಎಂಬ ಉದಾತ್ತ ಧೋರಣೆಯಿಂದಲ್ಲ. ಒಂದು ಘಂಟೆ ಕರೆಂಟ್ ಹೋಗುತ್ತದಲ್ಲಾ ಎನ್ನುವ ಖುಷಿ. ಛೆ ಪಾಪ ಅದು ಅದರ ಪಾಡಿಗೆ ಗೂಡು ಕಟ್ಟಿಕೊಂಡಿದೆ. ಅದನ್ಯಾಕೆ ಓಡಿಸಬೇಕು? ಕೆಲಸ ಮುಗಿದ ಮೇಲೆ ಅದೇ ತಾನಾಗಿ ಹಾರಿ ಹೋಗುತ್ತದೆ ಎಂದು ಈ ಕಾರ್ಯಕ್ರಮಕ್ಕೆ ಕಪ್ಪು ಧ್ವಜ ತೋರಿಸುತ್ತಿದ್ದ ಜೇನುಪ್ರೇಮಿಗಳೂ ಇದ್ದರು. ಒಟ್ಟಿನಲ್ಲಿ ಅವತ್ತು ರಾತ್ರಿ ಎಲ್ಲರಿಗೂ ಭರ್ಜರಿ ಮೋಜಂತೂ ಕಾದಿತ್ತು. ಕರೆಂಟು ಹೋಗುತ್ತದೆ ಎಂದು ಮೊದಲೇ ತಿಳಿಸಿದರೆ ಎಲ್ಲರ ತಲೆಯಲ್ಲೂ ಒಂದೊಂದು ಕಾರ್ಯಕ್ರಮಗಳು ಮೂಡಿಬಂದಿರುತ್ತದೆ. ಬಹಳಷ್ಟು ಮಂದಿಯ ತಲೆಯಲ್ಲಿ ನಿದ್ರೆ ಮಾಡುವ ಕಾರ್ಯಕ್ರಮ ಬಂದರೆ ಅದು ನಮ್ಮ ಶೈಕ್ಷಣಿಕ ಪದ್ಧತಿಯ ಸೋಲು ಎಂದೇ ಎನ್ನಬೇಕು. ನಾವೂ ಬೇರೆ ಏನೂ ತೋಚದೆ ಸುಮ್ಮನೆ ಮಲಗಿದರಾಯಿತು ಎಂದುಕೊಂಡಿದ್ದೆವು.

61ನೇ ರೂಮಿನವರೆಲ್ಲರೂ ಅವತ್ತು ಸಂಜೆ 62ರಲ್ಲೇ ಠಿಕಾಣಿ ಹೂಡಿದ್ದರು. ಊಟ ಮುಗಿಸಿದ ಕೂಡಲೇ ಅಧ್ಯಯನಕ್ಕೆ ಯಾರಿಗಾದರೂ ಮನಸ್ಸು ಬರುತ್ತದೆಯೇ? ಆ ಲಕ್ಚರರ್ ಹೀಗೆ. ಈ ಲಕ್ಚರರ್ ಹಾಗೆ ಎನ್ನುವ ಮಾತುಗಳು ಬರತೊಡಗಿದ್ದವು. ಅವರು ನಮ್ಮನ್ನು ಅಳೆದು ಇಂಟರ್ನಲ್ ಪರೀಕ್ಷೆಯಲ್ಲಿ 25ಕ್ಕೆ ಒಂದಂಕಿ ಕೊಟ್ಟ ತಪ್ಪಿಗೆ ನಾವು ಅವರಿಗೆ ಶಿಕ್ಷೆ ವಿಧಿಸುತ್ತಿದ್ದೆವು. ಅಷ್ಟರಲ್ಲಿ ಶುರುವಾಯಿತು ಗದ್ದಲ. "ಇನ್ ಸೊಲ್ಪ್ ಹೊತ್ನ್ಯಾಗ ಲೈಟ್ ಆರಿಸ್ತಾರಂತ್ರಲೇ... ಎಲ್ಲರೂ ರೂಮ್‌ನಾಗ ಬಾಗ್ಲಾ ಹಾಕ್ಕೊಂಡ್ ಕೂತ್ಗೋರಿ..." ಯಾರೋ ಒಬ್ಬ ಸಮಾಜ ಸೇವಕ ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದ್ದ. ಜೇನು ಕಟ್ಟಿದ್ದ ಜಾಗ ನಮ್ಮ ರೂಮಿನಿಂದ ಬಹಳ ಹತ್ತಿರದಲ್ಲೇ ಇತ್ತು. 61ಕ್ಕೆ ಇನ್ನೂ ಹತ್ತಿರವಾಗುತ್ತಿದ್ದುದರಿಂದ, ಆ ರೂಮಿನ ಎಲ್ಲರೂ ನಮ್ಮ ರೂಮಿಗೇ ಬಂದು ಕುಳಿತಿದ್ದರು. ಎಲ್ಲರೂ ರೂಮಿನಲ್ಲೇ ಕುಳಿತುಕೊಳ್ಳಿ ಎನ್ನುವ ಕೂಗು ಕೇಳಿದೊಡನೆಯೇ ಎಲ್ಲರೂ ಹೊರಗೆ ಬಂದು ನೋಡತೊಡಗಿದರು. ಎಷ್ಟೆಂದರೂ ಈಗಿನ ಕಾಲದ ಯುವಕರಲ್ಲವೇ! ಮಾಡಬೇಡಿ ಎಂದಿದ್ದನ್ನು ಮಾಡಿಯೇ ತೀರುವವರು. ಆಕಡೆ ಈಕಡೆ ಎಲ್ಲರ ಮುಖ ಮುಖ ನೋಡಿಕೊಂಡು ಸುಮ್ಮನಾದರು. ಜೇನು ಬಿಡಿಸುವವರ ಸುಳಿವೇ ಇಲ್ಲ.

ಕರೆಂಟ್ ಹೋಯಿತು. ಗಾಢಾಂಧಕಾರ! ಈಗ ಎಲ್ಲರಿಗೂ ಗಡಿಬಿಡಿ ಶುರುವಾಯಿತು. ಆಗ ರೂಮಿನಿಂದ ಹೊರಗಡೆ ಧೈರ್ಯವಾಗಿ ಓಡಾಡುತ್ತಿದ್ದ ವೀರರು ಈಗ ಹಾಸ್ಟೆಲ್ಲಿನ ಗೋಡೆಯನ್ನೆಲ್ಲಾ ಸವರುತ್ತಾ ಬಾಗಿಲು ಎಲ್ಲಿದೆ ಎಂದು ಹುಡುಕಾಡತೊಡಗಿದರು. "ಥೂ ಇವನಾಪ್ನ... ಬಾಗ್ಲಾ ಎಲ್ಲೋತೋ?" ಎನ್ನುವ ಕೂಗೂ ಕೇಳಿಸತೊಡಗಿತ್ತು. ನಮ್ಮ ರೂಮಿನ ಬುದ್ಧಿವಂತರೆಲ್ಲರೂ ಹೊರಗೆ ಹೋಗದೆ ಬಾಗಿಲ ಸಂದಿಯಿಂದಲೇ ಹೊರಗಡೆ ನೋಡುತ್ತಿದ್ದುದರಿಂದ ಯಾವುದೇ ತೊಂದರೆಯಾಗದೆ ಒಳಗೆ ಬಂದು ಸೇರಿಕೊಂಡು ಬಾಗಿಲು ಹಾಕಿಕೊಂಡೆವು. ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಶಾಂತವಾಯಿತು. ಬಾಗಿಲ ಸಂದಿಯಿಂದ ಒಂದು ಟಾರ್ಚ್ ಬೆಳಕು ಇಣುಕುತ್ತಿತ್ತು. ಹಾಸ್ಟೆಲ್ ಮ್ಯಾನೇಜರ್ ಕೆಲವು ಜನರೊಟ್ಟಿಗೆ ಬರುತ್ತಿರಬೇಕು ಎಂದುಕೊಂಡೆವು. ಅಂತೂ ಆ ಜೇನುಗೂಡು ಕಟ್ಟಿದ್ದ ರೂಮಿನ ಕಡೆ ಆ ಜನರ ಕಾಲಿನ ಸದ್ದು ಹೊರಟಿತ್ತು. ಹತ್ತು ನಿಮಿಷ ಏನೋ ಸಣ್ಣ ಪುಟ್ಟ ಶಬ್ದಗಳು ಕೇಳಿಬಂದವು. ಮತ್ತೆ ಸ್ಮಶಾನ ಮೌನ. ನಮಗಂತೂ ಏನು ನೆಡೆಯುತ್ತಿದೆ ಎಂದು ಊಹಿಸುವುದೇ ಕಷ್ಟವಾಯಿತು. ಅತ್ತಕಡೆ ಜೇನುಗಳನ್ನು ಓಡಿಸಿಯಾಯಿತು ಎಂದೂ ತಿಳಿದುಕೊಳ್ಳುವಂತಿಲ್ಲ, ಇತ್ತಕಡೆ ಇನ್ನೂ ಎಷ್ಟು ಹೊತ್ತು ಹೀಗಿರಬೇಕು ಎನ್ನುವ ಚಿಂತೆ. ಸ್ವಲ್ಪ ಹೊತ್ತಿನಲ್ಲೇ ಜೇನುಗಳ ಗುಂಯ್‌ಗುಡುವ ಶಬ್ದ ಕೇಳಲು ಶುರುವಾಯಿತು. ನಮ್ಮಲ್ಲಿ ಯಾರೂ ಅಷ್ಟೊಂದು ಜೇನಿನ ಶಬ್ದವನ್ನು ಕೇಳೇ ಇರಲಿಲ್ಲ. ಮೊದಲು ಇದು ಎಂತಹ ಶಬ್ದ ಎಂಬುದೇ ತಿಳಿಯಲಿಲ್ಲ. ಆದರೆ ಅಲ್ಲಿದ್ದುದು ಒಂದೇ ಸಾಧ್ಯತೆ. ಆದ್ದರಿಂದ ಇದು ಅದೇ ಎಂದು ನಿಶ್ಚಯಿಸಿದೆವು.
ಸ್ವಲ್ಪ ಹೊತ್ತಿನ ನಂತರ ಮತ್ತೆ ಮೌನ.

ಈಗ ನಮ್ಮ ಕುತೂಹಲ ಮತ್ತೂ ಎರಡುಪಟ್ಟಾಯಿತು. ಜೇನೆಲ್ಲಾ ಓಡಿಹೋದವೇ ಅಥವಾ ಒಮ್ಮೆ ಆಕಡೆ ಈಕಡೆ ಹಾರಿ ಪುನಃ ಹೋಗಿ ಅಲ್ಲೇ ಕುಳಿತವೇ ಎಂದು. ಜಗತ್ತಿನಲ್ಲಿ ದೇವರು ಎಷ್ಟು ಜನ ಬುದ್ಧಿವಂತರನ್ನು ಸೃಷ್ಟಿಸಿದ್ದಾನೋ ಅಷ್ಟೇ ಜನ ಅತೀಬುದ್ಧಿವಂತರನ್ನೂ ಸೃಷ್ಟಿಸಿದ್ದಾನೆ. ಮತ್ತು ಅಷ್ಟೇ ಆತುರಗಾರರನ್ನೂ ಸೃಷ್ಟಿಸಿದ್ದಾನೆ. ಆದರೆ ಈ ಅಮಿತ್ ಇವೆರಡರದರ ಸಮ್ಮಿಶ್ರಣ! ಅತೀ ಆತುರದ ಅತೀ ಬುದ್ಧಿವಂತ! ರೂಮಿನ ವೆಂಟಿಲೇಷನ್ ಇಂದ ಜೇನು ಒಳಗೆಬಂದುಬಿಡಬಹುದು ಎಂದು ಗ್ರಹಿಸಿದ್ದ ಆತ, ಆಗಲೇ ಅದಕ್ಕೆ ರಟ್ಟನ್ನು ಮುಚ್ಚಿ ಗಮ್ ಟೇಪ್ ಹಚ್ಚಿಬಿಟ್ಟಿದ್ದ! ಆದರೆ ಈ ಸ್ಮಶಾನ ಮೌನ ಅವನಿಗೆ ಬಹಳಹೊತ್ತು ಸಹಿಸಲಸಾಧ್ಯವಾಗಿತ್ತು. ಅಲ್ಲೇ ಎಲ್ಲೋ ಕೈಹಾಕಿ ಮೇಣದಬತ್ತಿ ಹುಡುಕಿ, ಹೊತ್ತಿಸಿಬಿಟ್ಟ. ಸಿಗರೇಟ್ ಸೇದದಿದ್ದರೂ ಲೈಟರ್ ಇಟ್ಟುಕೊಳ್ಳುವ ಅಪರೂಪದ ಅಭ್ಯಾಸ ಆತನದು. ಎಲ್ಲರೂ ಮುಖ ನೋಡಿಕೊಂಡೆವು. ಮುಖ ಒಂದನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಎಲ್ಲರೂ ಚಾದರವನ್ನು ಮೇಲಿನಿಂದ ಸಂಪೂರ್ಣವಾಗಿ ಹೊದ್ದುಕೊಂಡು ಗ್ರೀಕ್ ಕಾಲದವರಂತೆ ತೋರುತ್ತಿದ್ದೆವು. ಒಂದೆರಡು ನಿಮಿಷ ಕಳೆದರೂ ನಮ್ಮ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ!

ಅಷ್ಟರಲ್ಲಿ ಕೆಲವು ಜೇನು ಹುಳುಗಳ ಶಬ್ದ. ಎಲ್ಲಿ ಎಂದು ಹುಡುಕುತ್ತಿರುವಾಗಲೇ ಇಲ್ಲೇ ಎಲ್ಲೋ ನಮ್ಮ ಮುಂದೆ ಹಾರಾಡುತ್ತಿರುವಂತೆ ಕಂಡಿತು. ಮೊದಲೇ ಹೆದರಿದ್ದ ಸಂತ್ಯಾ "ಅಯ್ಯೋ... ಈ ಮ್ಯಾಣದ್ ಬತ್ತಿಂದಾಲೇ ಅವು ಬರಾಕತ್ತಾವ್ ಲೇ..." ಎಂದು ಚೀರುತ್ತಾ ಟೇಬಲ್ ಮೇಲಿಟ್ಟಿದ್ದ ಮೇಣದಬತ್ತಿಯನ್ನು ಕೈಯಿಂದ ಜಾಡಿಸಿಬಿಟ್ಟ. ಈಗ ಬೆಳಕೂ ಇಲ್ಲ, ಮೇಣದಬತ್ತಿಯೋ ಎಲ್ಲಿ ಹೋಯಿತೋ ಯಾರಿಗೂ ಗೊತ್ತಿಲ್ಲ. ಜೇನು ಹುಳುಗಳ ಹಾರಾಟ ಮಾತ್ರ ಕೇಳುತ್ತಿದೆ! ಎಲ್ಲರಿಗೂ ಹೆದರಿಕೆ ಪ್ರಾರಂಭವಾಯಿತು. ಮುಖವನ್ನೂ ಬಿಡದೆ ಮುಸುಕು ಹಾಕಿಕೊಂಡು ಮಲಗೇ ಬಿಟ್ಟರು. ಅಷ್ಟರಲ್ಲಿ ಬುದ್ಧಿವಂತ ಮಿರ್ಜಿ "ಮೊದಲು ಕ್ಯಾಂಡಲ್ ಹುಡಕ್ರಲೇ... ಒಂದೋ ಎರಡೋ ಬಂದಾವು ಅಷ್ಟೇ... ಹೊಡದು ಬಿಡೂಣು.." ಎಂದ. ಅಮಿತ್ ತನ್ನಲ್ಲಿದ್ದ ಲೈಟರ್ ಹಚ್ಚಿದ. ಎಲ್ಲರೂ ತಮ್ಮ ತಮ್ಮ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಸಜ್ಜಾದರು. ಎದುರಿಗೇ ಹಾರಾಡುತ್ತಿದ್ದ ಒಂದು ಜೇನು ಅಮಿತನ ಕಣ್ಣಿಗೆ ಬಿತ್ತು. ಚಪ್ಪಲಿಯಿಂದ ಅದಕ್ಕೆ ಹೊಡೆದ. ಅದರ ರಭಸಕ್ಕೆ ಅವನ ಕೈಲಿದ್ದ ಲೈಟರ್ ಕೂಡಾ ಕೈಜಾರಿ ಎಲ್ಲೋ ಹೋಗಿ ಬಿತ್ತು. ಮತ್ತೆ ಗಾಡಾಂಧಕಾರ. ಕತ್ತಲಿನಲ್ಲೇ ಮಾತುಗಳು ತೇಲಿಬಂದವು.
"ಸಾಯ್ಸಿದಿಯೇನ್ಲೇ..?"
"ಹೊಡದ್ನಿ... ಆದ್ರ ಸತ್ತೋ ಇಲ್ಲೋ ಗೊತ್ತಿಲ್ಲ...!"
"ಥೂ ನಿಮ್ಮವ್ನ್... ಒಂದ್ ಕೆಲ್ಸಾನೂ ನೆಟ್ಟಗ್ ಮಾಡಾಂಗಿಲ್ಲಲೋ..."
ನಮ್ಮೆಲ್ಲರಿಗೂ ನಡುಕ ಶುರುವಾಗುವುದೊಂದು ಬಾಕಿ! ಈ ಅಮಿತ ಹೀರೋ ಆಗಲಿಕ್ಕೆ ಹೋಗಿ, ಎಲ್ಲರನ್ನೂ ಆಪತ್ತಿಗೆ ಸಿಕ್ಕಿಸಿದ್ನಲ್ಲಪ್ಪಾ ಅಂದುಕೊಂಡು ಮತ್ತೆ ಮುಸುಕು ಹಾಕಿಕೊಂಡು ಮೂಲೆ ಹಿಡಿದು ಕೂತುಬಿಟ್ಟೆವು.

ಹಾಸ್ಟೆಲ್‍ನವರು ಕರೆಂಟು ಕೊಡುವಹೊತ್ತಿಗೆ ಇಪ್ಪತ್ತು ನಿಮಿಷಗಳೇ ಕಳೆದುಹೋಗಿದ್ದವು. ಕೋಣೆಯತುಂಬಾ ಹುಡುಕಿದ ಮೇಲೆ ಒಂದು ಮೂಲೆಯಲ್ಲಿ ಪೆಟ್ಟುತಿಂದು ದಾರಿಕಾಣದೆ ಬಿದ್ದಿದ್ದ ಒಂದು ಜೇನು ಕಣ್ಣಿಗೆ ಬಿತ್ತು. ಹೊರಗಡೆ ಪರಿಸ್ಥಿತಿ ಏನಾಗಿದೆ ಎಂದು ನೋಡಿದರೆ, ಗೂಡಿನ ಕೆಳಗೆ ಹೊಗೆ ಹಾಕಿ ಜೇನನ್ನು ಓಡಿಸುವ ಬದಲು, ಪೂರ್ತಿ ಜೇನುಗೂಡಿಗೇ ಯಾವುದೋ ಪೌಡರ್ ಎರಚಿಬಿಟ್ಟಿದ್ದರು. ಬೋರಿಕ್ ಪೌಡರ್ ಇರಬೇಕೆಂದು ಊಹಿಸಿದೆವು. ಬಹಳಷ್ಟು ಜೇನುಗಳು ಸತ್ತೇ ಹೋಗಿದ್ದವು. ಇನ್ನುಳಿದಷ್ಟು ಹಾರಿ ಹೋಗಿದ್ದವು. ಕೆಲವು ಅಲ್ಲೇ ಕೆಳಗೆ ಬಿದ್ದು ಒದ್ದಾಡುತ್ತಿದ್ದವು. ಅದನ್ನೇ ನೋಡಲು ಬಂದ ಒಬ್ಬ "ಅಯ್ಯೋ ಇವು ಕಚ್ಚಾಂಗಿಲ್ಲಲೇ.. ಸುಮ್ನ ಸಾಯ್ಸಿದ್ರು ನೋಡು..." ಎಂದನ್ನುತ್ತಾ ಹೊರನೆಡೆದ. ತುಂಬಾ ಬೇಸರವಾಯಿತು. ಅವು ಇದುವರೆಗೆ ಒಬ್ಬನಿಗೂ ಕಚ್ಚಿರಲಿಲ್ಲ. ಅವುಗಳ ಪಾಡಿಗೆ ಗೂಡುಕಟ್ಟಿಕೊಂಡಿದ್ದವು. ಓಡಿಸಲೇ ಬೇಕು ಎಂದು ನಿರ್ಧಾರ ಮಾಡಿದರೂ ಓಡಿಸುವ ವಿಧಾನ ಗೊತ್ತಿರುವವರನ್ನು ಕರೆತಂದು ಪ್ರಾಣಹಾನಿಯಾಗದಂತೆ ಓಡಿಸಬಹುದಿತ್ತು. ಹೀಗೆ ಎಲ್ಲ ಹುಳುಗಳನ್ನು ಸಾಯಿಸುವ ಅಗತ್ಯವಿರಲಿಲ್ಲ. ಒಂದು ಮಾತಂತು ನಿಜ, ಮನುಷ್ಯನಿದ್ದಲ್ಲಿ ಬೇರೆಯವುಗಳಿಗೆ ಅವಕಾಶವಿಲ್ಲ! ಹತ್ತಾರು ಜನರ ಕಾರಣವಿಲ್ಲದ ಹೆದರಿಕೆಗೆ ನೂರಾರು ಜೇನುಗಳ ಮಾರಣಹೋಮ ನೆಡೆದುಹೋಗಿತ್ತು.

Tuesday, December 29, 2009

ಗಾನ ಗಾರುಡಿಗನಿಗೊಂದು ನುಡಿ ನಮನ


ಹೈ ಸ್ಕೂಲ್ ಓದುತ್ತಿದ್ದಾಗ ಮೊದಲಬಾರಿ ಕೇಳಿದ್ದು. ಒಂದನೇ ಬಾರಿ ಕೇಳಿದಾಗಲೇ ಎಂದೂ ಮರೆಯಲಾಗದಷ್ಟು ಸಂತಸ ನೀಡಿದ ಹಾಡಾಗಿತ್ತು ಅದು. "ಕೋಡಗನ ಕೋಳಿ ನುಂಗಿತ್ತಾ...". ಆ ವಯಸ್ಸಿಗೆ ಸಾಹಿತ್ಯ ನಿಲುಕದಾಗಿತ್ತು. ಕೇವಲ ಹಾಡುಗಾರಿಕೆಯಿಂದಲೇ ಆ ಪದ್ಯ ಮನಸ್ಸಿಗೆ ಅಷ್ಟೊಂದು ಹತ್ತಿರವಾಗಿಬಿಟ್ಟಿತ್ತು. ನಂತರದ ದಿನಗಳಲ್ಲಿ ನನ್ನ ಜೀವನದಲ್ಲಿ ಆ ಗಾರುಡಿಗನ ಮೋಡಿ ನಿಲ್ಲದೇ ಸಾಗತೊಡಗಿತ್ತು. ಸುಗಮ ಸಂಗೀತದ ಬಹುದೊಡ್ಡ ಪ್ರಪಂಚಕ್ಕೆ ನನ್ನ ಕೈ ಹಿಡಿದು ಕೊಂಡೊಯ್ದಿತ್ತು. ಶಿಶುನಾಳರ ಬೇಂದ್ರೆಯವರ ಗೀತೆಗಳ ಅಧ್ಯಾತ್ಮವಾದ, ಕುವೆಂಪುರವರ ಕಾವ್ಯಸೊಗಡು, ಕೆ. ಎಸ್. ಎನ್. ರ ಪ್ರೇಮಮಯಿ ಸಂವೇದನೆ, ಲಕ್ಷ್ಮಣ್ ರಾವ್ ಅವರ ಹಾಸ್ಯಭರಿತ ಗೀತೆಗಳು ಎಲ್ಲವುದರ ಹಿಂದೆ ಆ ಮೋಡಿಗಾರನೇ ಕುಳಿತಿದ್ದ. ಇನ್ನೂ ಎಷ್ಟೋ. ಲೆಕ್ಕಕ್ಕೆ ಸಿಗದಷ್ಟು ಕೊಡುಗೆಗಳು, ಕನ್ನಡಕ್ಕೆ, ಆ ಗಂಧರ್ವ ಕಂಠದಿಂದ ಹೊರಹೊಮ್ಮಿತ್ತು. ಆದರೆ ಈ ಪಯಣದಲ್ಲಿ ಇನ್ನು ನಮ್ಮ ಕೈ ಹಿಡಿದು ಮುನ್ನೆಡೆಸುವವರಾರು? ಎಲ್ಲವೂ ಒಮ್ಮೆಯೇ ಇಲ್ಲವಾಯಿತೇ? ಈ ಪಯಣ ನಿಂತುಹೋಯಿತೇ? ನಮ್ಮ ಕಿವಿಗಳಿಗೆ ಆ ಮಧುರ ದನಿಯ ಆಸ್ವಾದನೆಯ ಯೋಗ ತೀರಿಹೋಯಿತೇ?

ಅಶ್ವಥ್‌ರನ್ನು ನೋಡುವ ಭಾಗ್ಯ ನನಗೆ ಒಮ್ಮೆಯೇ ಸಿಕ್ಕಿತ್ತು. ಅದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಯಾವುದೋ ಸಿನೆಮಾದ ಆಡಿಯೋ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಇವರೂ ಬಂದಿದ್ದರು. ನಾವು ನಮ್ಮ ನಾಟಕದ ರಿಹರ್ಸಲ್ ಎಲ್ಲಾ ಮುಗಿಸಿ ಹಾಗೆಯೇ ಕುತೂಹಲಕ್ಕೆ ಕಾರ್ಯಕ್ರಮಕ್ಕೆ ಇಣುಕಿದೆವು. ಕರ್ಯಕ್ರಮ ಕೊನೆಯ ಹಂತದಲ್ಲಿತ್ತು. ಬಂದವರೆಲ್ಲರದೂ ಒಂದೇ ಕೋರಿಕೆ. ಆಶ್ವಥ್ ಹಾಡಬೇಕು. ಎಲ್ಲರ ಕೋರಿಕೆಯನ್ನು ಆಶ್ವಥ್ ಈಡೇರಿಸದೆ ಇರಲಿಲ್ಲ. ಸಭೆಯಲ್ಲಿ ನಿಶ್ಶಬ್ಧ. ಕೇವಲ ಅಶ್ವಥ್‌ರವರ ಧ್ವನಿ ಕಾಲೇಜಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಪ್ರೇಕ್ಷಕರೆಲ್ಲರಿಗೂ ರೋಮಾಂಚನಗೊಳಿಸುವ ಸಂಗೀತದ ರಸದೌತಣ. ನಾನವರನ್ನು ಮುಖತಃ ಕಂಡಿದ್ದು ಅದೇ ಮೊದಲು ಅದೇ ಕೊನೆ. ಆದರೆ ಅವರನ್ನು ನೆನೆಯದ ದಿನ ಬಹುಷಃ ಒಂದೂ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಭಾವನೆಗಳೇ ಇಲ್ಲದ ದಿನವೊಂದನ್ನು ಊಹಿಸಲಾದರೂ ಸಾಧ್ಯವೆ? ಅದು ಇಲ್ಲವೆಂದಮೇಲೆ ಅಶ್ವಥ್‌ರನ್ನು ನೆನೆಯದ ದಿನವೂ ಒಂದೂ ಇಲ್ಲವೆನ್ನಬೇಕು. ಬೇಸರವಾದರೆ ಅವರ ಭಾವಗೀತೆ, ಸಂತಸವಾದರೂ ಅವರದೇ ಭಾವಗೀತೆ. ಉತ್ಸಾಹಗೊಂಡರೂ ಆಲಸ್ಯಗೊಂಡರೂ ಎಲ್ಲ ಭಾವಗಳಿಗೂ ಅವರದೇ ಭಾವಗೀತೆಗಳನ್ನು ಕೇಳುವ ಹವ್ಯಾಸ ನನ್ನದಾಗಿಬಿಟ್ಟಿದೆ. ಅವರು ನಮ್ಮನ್ನಗಲಿದ ಸುದ್ದಿ ಕೇಳಿದಾಗಲೂ ನಾನು ಕೇಳುತ್ತಲಿದ್ದುದು ಅವರದೇ ಗೀತೆ "ಮೌನ ತಬ್ಬಿತು ನೆಲವ ಚುಂಬಿನಿ ಪುಳಕಗೊಂಡಿತು ಧಾಮಿನಿ". ದೈಹಿಕವಾಗಿ ನಮ್ಮನ್ನಗಲಿದರೂ ನಮ್ಮೆಲ್ಲರ ಮನಗಳಲ್ಲಿ ನಿಮ್ಮ ಪ್ರತಿಷ್ಠಾಪನೆ ಎಂದೋ ಆಗಿಹೋಗದೆ. ನಿಮ್ಮ ಧ್ವನಿ ನಿಮ್ಮ ಗೀತೆಗಳು ಅಜರಾಮರ. ಶಿಶುನಾಳರ ಗೀತೆಗಳನ್ನು ಜನರಿಗೆ ತಲುಪಿಸಲೆಂದೇ ಅವರತಿರಿಸಿದ್ದಿರೆಂದೆನಿಸುವ ನಿಮಗೆ ನಾವು ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ನಮ್ಮ ಇನ್ನೊಂದೇ ಒಂದು ಕೋರಿಕೆಯನ್ನು ಈಡೇರಿಸಿಕೊಡಿ. ಮತ್ತೆ ಹುಟ್ಟಿ ಬನ್ನಿ.